ಕಾಯಕಲ್ಪಕ್ಕಾಗಿ ಕಾಯುತ್ತಿದೆ ಶತಮಾನೋತ್ಸವ ಸಂಭ್ರಮದಲ್ಲಿರುವ ಚೆನ್ನೈತ್ತೋಡಿ ಸರಕಾರಿ ಶಾಲೆ!

Update: 2018-10-09 05:43 GMT

► ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.22ರಂದು ಶಾಲಾ ಶತಮಾನೋತ್ಸವ

ಬಂಟ್ವಾಳ, ಅ.8: ಇದೀಗ ಶತಮಾನೋತ್ಸವ ಸಂಭ್ರಮದಲ್ಲಿರುವ ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಮೂಲ ಸೌಕರ್ಯ ಹಾಗೂ ಕಾಯಕಲ್ಪಕ್ಕಾಗಿ ಕಾಯುತ್ತಿದೆ.

ಬಂಟ್ವಾಳ ತಾಲೂಕಿನ ವಾಮದಪದವು ಪೇಟೆಯ ಹೃದಯಭಾಗದಲ್ಲಿರುವ ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 1918ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡು, ನಂತರ ದಾನಿಗಳು, ಶಿಕ್ಷಕರು, ವಿದ್ಯಾಭಿಮಾನಿಗಳ ಸಹಕಾರದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು.

ನಂತರ ಹಂತವಾಗಿ ಬೆಳೆಯುತ್ತಾ ಬಂದ ಈ ಶಾಲೆಯು ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ವ್ಯಕ್ತಿತ್ವದ ಸಮಗ್ರ ವಿಕಸನಕ್ಕೆ ಪೂರಕವಾದ ಕ್ರೀಡೆ, ಸಾಂಸ್ಕತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಅತ್ಯುತ್ತಮ ಶಾಲೆಯಾಗಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿತು. ಪರಿಸರದ ಹಲವು ಗ್ರಾಮಗಳ ಮಕ್ಕಳ ಪಾಲಿಗೆ ಈ ಶಾಲೆಯು ಆಶಾಕಿರಣವಾಗಿದ್ದು, ಇಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅದೆಷ್ಟೋ ಮಂದಿ ಇಂದು ರಾಜ್ಯ, ದೇಶ ವಿದೇಶಗಳಲ್ಲಿ ಉನ್ನತ ಸಾಧನೆಗೈಯುತ್ತಿದ್ದಾರೆ. ಇಂತಹ ಶಾಲೆಯಲ್ಲಿ ಇದೀಗ ಪ್ರತಿಭಾನ್ವಿತ ಮಕ್ಕಳಿಗೆ ಮೂಲ ಸೌಕರ್ಯ ಸಿಗುತ್ತಿಲ್ಲ ಅನ್ನುವುದು ನಿಜಕ್ಕೂ ವಿಪರ್ಯಾಸ.

ಇಲ್ಲಿ ಮುಖ್ಯ ಶಿಕ್ಷಕರೇ ಇಲ್ಲ:

ಮುಖ್ಯವಾಗಿ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರೇ ಇಲ್ಲದಿದ್ದು, ಪ್ರಸಕ್ತ ಶಿಕ್ಷಕಿ ಜಾನೆಟ್ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉನ್ನತೀಕರಿಸಿದ ಮಾದರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಂದರಿಂದ 8ನೇ ತರಗತಿವರೆಗೆ 294 ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈಯ್ಯುತ್ತಿದ್ದಾರೆ. 12 ಮಂದಿ ಶಿಕ್ಷಕರಿದ್ದು, ಈ ಪೈಕಿ 8 ಮಂದಿ ಶಿಕ್ಷಕರು ಪೂರ್ಣಕಾಲಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೂರ್ಣಕಾಲಿಕ ಮುಖ್ಯ ಶಿಕ್ಷಕರನ್ನು ನೇಮಿಸಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಶಾಲಾ ದೈಹಿಕ ಶಿಕ್ಷಕ ಸಂತೋಷ್ ಮಾಹಿತಿ ನೀಡಿದ್ದಾರೆ.

ಶತಮಾನ ಸಂಭ್ರಮ:

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಕ್ರೀಡಾಕೂಟಗಳು, ಸಾಂಸ್ಕತಿಕ ಪ್ರದರ್ಶನಗಳು, ಸಾಹಿತ್ಯಿಕ ಕಮ್ಮಟಗಳು, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಗುರುವಂದನೆ ಮೊದಲಾದ ಕಾರ್ಯಕ್ರಮಗಳೊಂದಿಗೆ ಶಾಲೆಯ ಶತಮಾನೋತ್ಸವವನ್ನು ಮಾದರಿಯಾಗಿ ನಡೆಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ವಿದ್ಯಾಭಿಮಾನಿಗಳು ಶತಮಾನೋತ್ಸವದ ಯಶಸ್ವಿಗಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ ಈ ಶಾಲೆಯ ಶತಮಾನ ಸಂಭ್ರಮವು ಊರಿನ ಹಬ್ಬವಾಗಿ ಆಚರಿಸಲ್ಪಡಬೇಕೆನ್ನುವುದು ಊರ ವಿದ್ಯಾಭಿಮಾನಿಗಳ ಅಪೇಕ್ಷೆಯಾಗಿದೆ. ಈಗಾಗಲೇ ಗೌರವಾಧ್ಯಕ್ಷರಾಗಿ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಅಧ್ಯಕ್ಷರಾಗಿ ಹಂಝ ಎ.ಬಸ್ತಿಕೋಡಿ, ಸಂಚಾಲಕರಾಗಿ ನಾರಾಯಣ ಶೆಟ್ಟಿ ಪರಾರಿ, ಪ್ರ.ಕಾರ್ಯದರ್ಶಿಯಾಗಿ ಡೆನಿಸ್ ಫೆರ್ನಾಂಡಿಸ್ ದೇರೊಟ್ಟು, ಕೋಶಾಧಿಕಾರಿಯಾಗಿ ಅನಂತ ಪೈ ವಾಮದಪದವು, ಉಪಾಧ್ಯಕ್ಷರಾಗಿ ನವೀನಚಂದ್ರ ಶೆಟ್ಟಿ, ಶ್ರೀಧರ ಪೈ, ರಾಮರಾಯ ನಾಯಕ್, ಚಂದ್ರಶೇಖರ ಶೆಟ್ಟಿ, ಕಮಲ್ ಶೆಟ್ಟಿ ಬೊಳ್ಳಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಮೋಹನದಾಸ ಗಟ್ಟಿ ಮತ್ತು ಗೋಪಾಲ ಅಂಚನ್, ಜೊತೆ ಕಾರ್ಯದರ್ಶಿಗಳಾಗಿ ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಮಾಧವ ಕುಲಾಲು ಹಾಗೂ ಸೌಕತಾಲಿ ಅವರನ್ನೊಳಗೊಂಡ ಶತಮಾನೋತ್ಸವ ಸಮಿತಿಯನ್ನು ರಚಿಸಲಾಗಿದೆ. ಇದರೊಂದಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಆಚಾರ್ಯ ಹರ್ಕಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಪ್ರಭಾರ ಮುಖ್ಯ ಶಿಕ್ಷಕರಾಗಿರುವ ಜಾನೆಟ್, ಶಿಕ್ಷಕವೃಂದ ಮತ್ತು ವಿದ್ಯಾರ್ಥಿವೃಂದ ಶತಮಾನೋತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ.

ನೆರವಿನ ನಿರೀಕ್ಷೆಯಲ್ಲಿ

ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮಕ್ಕಳ ಸಾಹಿತ್ಯಕ, ಶೈಕ್ಷಣಿಕ ಹಾಗೂ ಸಾಂಸ್ಕತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ರಂಗಮಂದಿರ, 10 ಲಕ್ಷ ರೂ. ವೆಚ್ಚದಲ್ಲಿ ಅನ್ನದಾಸೋಹ ಭೋಜನ ಶಾಲೆ, ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ಸುಸಜ್ಜಿತ ಆಟದ ಮೈದಾನ, ಶಾಲಾ ಆವರಣ ಗೋಡೆ, ಸುಸಜ್ಜಿತ ಶೌಚಾಲಯ, ವಾಚನಾಲಯ, ಕ್ರೀಡಾ ಸಾಮಾಗ್ರಿಗಳ ದಾಸ್ತಾನು ಕೊಠಡಿ ನಿರ್ಮಾಣ ಸಹಿತ ಗುಣಮಟ್ಟದ ಕಲಿಕೆಗೆ ಪೂರಕವಾದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಶತಮಾನೋತ್ಸವದ ಕೊಡುಗೆಯಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಈ ಯೋಜನೆಗಳು ಯಶಸ್ವಿಯಾಗಿ ನೆರವೇರಿಸಲು ಸರಕಾರ, ಸ್ಥಳೀಯಾಡಳಿತಗಳು, ಜನಪ್ರತಿನಿಧಿಗಳು, ದಾನಿಗಳು, ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಶಾಲಾಭಿವೃದ್ಧಿ ಸಮಿತಿ ತಿಳಿಸಿದೆ.

ಡಿ.22ರಂದು ಶಾಲಾ ಶತಮಾನೋತ್ಸವ

ಶಾಲಾಭಿವೃದ್ಧಿಗೆ ಪೂರಕವಾದ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನ, ಹಳೆ ವಿದ್ಯಾರ್ಥಿ ಗಳು-ಪೋಷಕರು-ಶಿಕ್ಷಕರು ಹಾಗೂ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಡಿ. 22ರಂದು ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ವ್ಯಾಪಕ ಪೂರ್ವಭಾವಿ ಸಿದ್ಧತೆ ನಡೆಯುತ್ತಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಂಝ ಎ. ಬಸ್ತಿಕೋಡಿ ತಿಳಿಸಿದ್ದಾರೆ.

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News