ಬಣ್ಣ ಹಚ್ಚುವ ಮುನ್ನ...

Update: 2018-10-09 18:32 GMT

  ಆಷಾಢ ಕಳೆದು ಶ್ರಾವಣ ಮಾಸವೂ ಮುಗಿದಿದೆ. ಹಬ್ಬ ಹರಿದಿನಗಳು ಸಾಲು ಸಾಲಾಗಿ ಬರುತ್ತಿವೆ. ಕೃಷ್ಣಾಷ್ಟಮಿ, ಗಣೇಶ ಚೌತಿ ಮುಗಿಯಿತು. ಇನ್ನು ನವರಾತ್ರಿ ಈ ವಾರದಲ್ಲಿ ಆರಂಭವಾಗಿದೆ. ಎಲ್ಲರಿಗೂ ಸಂಭ್ರಮ ಮತ್ತು ಸಡಗರ. ನೀರಸ ಯಾಂತ್ರಿಕ ಬದುಕಿಗೆ ಹಬ್ಬಗಳು ಅನಿವಾರ್ಯ. ಜಡ್ಡು ಹಿಡಿದ, ನೊಂದ, ಬೆಂದ ಮತ್ತು ಬಳಲಿದ ದೇಹಕ್ಕೆ ಮತ್ತು ಮನಸ್ಸಿಗೆ ಹಬ್ಬ ಹರಿದಿನಗಳು ಅಮೃತ ಸಿಂಚನವನ್ನೇ ನೀಡುತ್ತದೆ. ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಹಬ್ಬ ಹರಿದಿನಗಳೆಂದರೆ ಬಣ್ಣ ಬಣ್ಣದ ವೇಷಗಳು ಇರಲೇಬೇಕು. ಮಕ್ಕಳು, ಹದಿಹರೆಯದವರು, ಮುದುಕರು ಹೀಗೆ ಎಲ್ಲರೂ ಬಣ್ಣ ಹಚ್ಚುವವರೇ. ಬಣ್ಣವಿಲ್ಲದೆ ಬದುಕೇ ಇಲ್ಲ. ವಯಸ್ಸಿನ ಭೆೇದವಿಲ್ಲ, ಜಾತಿಯ ಅಂತರವಿಲ್ಲ, ಧರ್ಮದ ಪ್ರಶ್ನೆಯೇ ಇಲ್ಲ. ಎಲ್ಲರೂ ಬಣ್ಣ ಹಚ್ಚುವವರೇ. ಊರುಕೇರಿ, ಜನ ಜಂಗುಳಿ ಎಲ್ಲರೂ ಬಣ್ಣದಿಂದ ಮುಳುಗಿ ಏಳುತ್ತಿರುತ್ತದೆೆ. ಅಷ್ಟಮಿಯ ಸಮಯದಲ್ಲಿ ಅಂಬೆಗಾಲಿಡುವ ಚಿಕ್ಕ ಮಗುವಿನಿದ ಹಿಡಿದು ಎಲ್ಲರೂ ಬಗೆ ಬಗೆಯ ಬಣ್ಣಗಳಿಂದ ಕೃಷ್ಣನ ಅವತಾರದಲ್ಲಿ ಧನ್ಯರಾಗುತ್ತಾರೆ. ಒಂದು ಅಂಕಿಅಂಶಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕನಿಷ್ಠ ಹತ್ತು ಸಾವಿರ ಮಕ್ಕಳು ಕೃಷ್ಣಾಷ್ಟಮಿಯ ಸಮಯದಲ್ಲಿ ಮುದ್ದು ಕೃಷ್ಣರಾಗಿ ಬಣ್ಣ ಹಚ್ಚುತ್ತಾರೆ, ಕಂಗೊಳಿಸುತ್ತಾರೆ. ಹೆತ್ತವರು ಕಣ್ ಮನ ತುಂಬಿಕೊಂಡು ಧನ್ಯರಾಗುತ್ತಾರೆ, ಪುನೀತರಾಗುತ್ತಾರೆ. ವಾರ್ತಾಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಫೇಸ್‌ಬುಕ್‌ನಲ್ಲಿ ವಾಟ್ಸ್‌ಆ್ಯಪ್‌ಗಳಲ್ಲಿ ಎಲ್ಲೆಲ್ಲೂ ಮುದ್ದು ಕೃಷ್ಣ ರಾರಾಜಿಸಿರುತ್ತಾನೆ. ಅಷ್ಟಮಿ ಕಳೆದು ಗಣೇಶ ಬರುತ್ತಾನೆ. ಮನೆ ಮಠಗಳಲ್ಲಿ, ಊರು ಕೇರಿಗಳಲ್ಲಿ ದೇಗುಲಗಳಲ್ಲಿ ಸಂಭ್ರಮದ ವಾತಾವರಣ. ಎಲ್ಲೆಲ್ಲೂ ಗಣಪ ರಾರಾಜಿಸಿರುತ್ತಾನೆ. ಬಣ್ಣ ಬಣ್ಣದ ವಿವಿಧ ವೇಷದ, ವಿವಿಧ ಭಂಗಿಯ ಗಣಪ. ಜನಮನಗಳಿಗೆ ಸಡಗರವೇ ಸಡಗರ ಏನಿಲ್ಲವೆಂದರೂ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ 20 ಸಾವಿರ ಗಣಪ ಪ್ರತಿಷ್ಟಾಪನೆಯಾಗುತ್ತಾನೆ. ಬಗೆ ಬಗೆಯ ಬಣ್ಣಗಳಿಂದ ಗಣಪ ವಿಜೃಂಭಿಸುತ್ತಾನೆ. ಜನ ಮಾನಸ ಭಕ್ತಿಯ ಪರಕಾಷ್ಟೆಯಲ್ಲಿ ಮಿಂದೇಳುತ್ತಾರೆ. ಊರಿನ ಕೆರೆ, ತೊರೆಗಳೆಲ್ಲಾ ಬಣ್ಣಮಯವಾಗಿರುತ್ತವೆ. ಗಣೇಶ ಚೌತಿ ಮುಗಿದು ಇದೀಗ ನವರಾತ್ರಿ ಬಂದಿದೆ. ನವರಾತ್ರಿ ಎಂದರೆ ನಮ್ಮೂರಿನಲ್ಲಿ ಹುಲಿಗಳದ್ದೇ ಕಾರುಬಾರು. ಮಂಗಳೂರಿನ ಹುಲಿವೇಷ ಜಗತ್ ಪ್ರಸಿದ್ಧ. ಸಣ್ಣ ಮಕ್ಕಳು ಕೂಡಾ ಮರಿಹುಲಿಗಳಾಗಿ ರಂಜಿಸುತ್ತಾರೆ. ಇದರ ಜೊತೆಗೆ ಹತ್ತಾರು ಬಗೆಯ ಇತರ ವೇಷಧಾರಿಗಳೂ ಇರುತ್ತಾರೆ. ಇಲ್ಲಿಯೂ ಬಣ್ಣಗಳದ್ದೇ ಕಾರುಬಾರು. ಊರಿಡೀ ಬಣ್ಣದ ಲೋಕದಲ್ಲಿ ಮುಳುಗುತ್ತದೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೇ, ಎಲ್ಲರೂ ವೇಷಧಾರಿಗಳಾಗಿ ಬಣ್ಣ ಬಣ್ಣದ ವೇಷಗಳಲ್ಲಿ ವಿಜೃಂಭಿಸುತ್ತಾರೆ. ಊರಿನ ಸಾಮರಸ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಭ್ರಾತೃತ್ವ, ಪ್ರೀತಿ, ಪ್ರೇಮದ ವಿಶ್ವ ಶಾಂತಿಯ ಸಂದೇಶವನ್ನು ಸಾರುತ್ತದೆ ಇವೆಲ್ಲವೂ ನಿಜ. ಆದರೆ ಈ ಬಣ್ಣಗಳ ಬಗ್ಗೆಯೂ ಎಚ್ಚರಿಕೆ ವಹಿಸದಿದ್ದರೆ ಬಣ್ಣಗಳೂ ವೇಷಾರಿಗಳ ಬದುಕಿಗೆ ಮಾರಕವಾದೀತು

ಯಾಕೆ ಜಾಗೃತರಾಗಬೇಕು?

 ಮೊದಲೆಲ್ಲಾ ರಾಸಾಯನಿಕ ಬಣ್ಣಗಳ ಬಳಕೆ ಕಡಿಮೆ ಪ್ರಮಾಣದಲ್ಲಿತ್ತು ಮತ್ತು ನೈಸರ್ಗಿಕವಾದ ಅರಶಿನ, ಕುಂಕುಮ ಇತ್ಯಾದಿಗಳಿಂದ ಬಣ್ಣ ಹಾಕಲಾಗುತ್ತಿತ್ತು. ಆದರೆ ಈಗ ಎಲ್ಲವೂ ಭಿನ್ನವಾಗಿದೆ. ಬಣ್ಣಗಳಿಗೆ ಬಹಳ ಬೇಡಿಕೆ ಇದೆ. ಬಣ್ಣದ ವ್ಯಾಪಾರವೇ ಹಲವರಿಗೆ ಬದುಕನ್ನು ನೀಡಿದೆ. ಈಗ ಬಳಸುವ ಬಣ್ಣಗಳು ಕೃತಕವಾಗಿ ತಯಾರಿಸಿದ ಬಣ್ಣಗಳು. ಇದರಲ್ಲಿ ಬಹಳಷ್ಟು ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಇವು ದೇಹಕ್ಕೆ ಹಾನಿಕಾರಕ ಉದಾ: ಕೆಂಪು ಬಣ್ಣ ಬರಲು ಪಾದರಸ ಸಲ್ಫೇಟ್, ಬಿಳಿ ಬಣ್ಣ ಬರಲು ಅಲ್ಯುಮಿನಿಯಂ ಬ್ರೋಮೈಡ್, ಕಪ್ಪುಬಣ್ಣ ಬರಲು ಸೀಸದ ದ್ರಾವಣ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಚರ್ಮಕ್ಕೆ ಮಾರಕ. ಹಾಗೆಯೇ ಬಣ್ಣದ ಪೇಸ್ಟ್‌ಗಳಲ್ಲಿ ಇಂಜಿನ್ ಆಯಿಲ್ ಮತ್ತು ಹೈಡ್ರೊಕಾರ್ಬನ್ ಆಯಿಲ್‌ಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ನಮ್ಮ ಚರ್ಮದ ಆರೋಗ್ಯಕ್ಕೆ ಮಾರಕ. ಕೃತಕ ಬಣ್ಣಗಳಲ್ಲಿ ಆಯಿಲ್ ಮಿಶ್ರಿತ ಮತ್ತು ನೀರು ಮಿಶ್ರಿತ ಎಂದು ಎರಡು ವಿಧಗಳಿವೆ. ನೀರು ಮಿಶ್ರಿತ ಬಣ್ಣಗಳು ಹೆಚ್ಚು ಮಾರಕವಲ್ಲ. ಆಯಿಲ್ ಮಿಶ್ರಿತ ಬಣ್ಣಗಳಲ್ಲಿ ಹೈಡ್ರೊಕಾರ್ಬನ್ ದ್ರಾವಣದ ರೂಪದಲ್ಲಿದ್ದು ಹೆಚ್ಚಿನ ಅನಾರೋಗ್ಯಕ್ಕೆ ಕಾರಣವಾಗಬಹುದು.

ಏನೇನು ತೊಂದರೆ?
1. ಅಲ್ಪಕಾಲದ ತೊಂದರೆಗಳು:
ಚರ್ಮದಲ್ಲಿ ತುರಿಕೆ, ಕೆರೆತ ಮತ್ತು ಗುಳ್ಳೆಗಳು, ಕಣ್ಣಿನಲ್ಲಿ ಉರಿತ, ಗಂಟಲು ಕೆರೆತ, ಕೆಮ್ಮ, ದಮ್ಮು, ಮೂಗಿನಲ್ಲಿ ಅಲರ್ಜಿ, ತಲೆನೋವು, ವಾಂತಿ, ತಲೆಸುತ್ತುವಿಕೆ, ಆಯಾಸಗೊಳ್ಳುವಿಕೆ, ಕಣ್ಣು ಮಂಜಾಗುವುದು ಇತ್ಯಾದಿ.
2.ದೀರ್ಘಕಾಲದ ತೊಂದರೆಗಳು
ಯಕೃತ್ ವೈಫಲ್ಯ, ಮೂತ್ರ ಪಿಂಡದ ವೈಕಲ್ಯ, ಅಸ್ತಮ, ಕ್ಯಾನ್ಸರ್, ನರಮಂಡಲದ ದೌರ್ಬಲ್ಯ, ಕಿವಿ ಕೇಳದಿರುವುದು, ಕಣ್ಣು ಕಾಣದಿರುವುದು, ಕೈ ನಡುಗುವಿಕೆ, ತೊದಲುವಿಕೆ, ನರಗಳ ಮೇಲಿನ ಪದರವಾದ ಮೈಯಲಿನ್ ಕರಗಿ ಹೋಗಿ ನರವುಂಡಲದ ರೋಗಗಳು ಇತ್ಯಾದಿಗಳು.
ಮುಂಜಾಗರೂಕತೆ ಹೇಗೆ?
1. ಅತೀ ಅನಿವಾರ್ಯವಿದ್ದಲ್ಲಿ ಮಾತ್ರ ಬಣ್ಣ ಹಚ್ಚಬೇಕು. ಬಣ್ಣ ಹಚ್ಚದೆ, ಬೇರೆ ಬೇರೆ ರೀತಿಯ ವಸ್ತ್ರ ವಿನ್ಯಾಸ ಬಳಸಿ ವೇಷ ಹಾಕಿದರೆ ಉತ್ತಮ. ಮಕ್ಕಳಿಗೆ ಬಣ್ಣ ಹಚ್ಚಲೇ ಬಾರದು. ಮಕ್ಕಳ ಚರ್ಮ ಬಹಳ ನಾಜೂಕಾಗಿರುತ್ತದೆ.
2. ಬಣ್ಣ ಬಳಸಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಅತೀ ಕಡಿಮೆ ಬಳಸಿ. ನೈಸರ್ಗಿಕ ಬಣ್ಣವನ್ನೇ ಬಳಸಿ, ಕೃತಕ ಬಣ್ಣಗಳನ್ನು ಬಳಸಲೇ ಬೇಡಿ.
3. ಅಸ್ತಮಾ, ತುರಿಕೆ, ಅಲರ್ಜಿ ಮತ್ತು ಚರ್ಮ ರೋಗವಿರುವ ಮಕ್ಕಳು, ವಯಸ್ಕರು ಬಣ್ಣ ಹಚ್ಚ ಬಾರದು. ಬಣ್ಣ ಹಚ್ಚುವ ಮೊದಲು ಚರ್ಮ ವೈದ್ಯರ ಸಲಹೆ ಪಡೆಯಿರಿ. ಚರ್ಮ ನಮ್ಮ ದೇಹದ ರಕ್ಷಣಾ ಕವಚ ಇದ್ದಂತೆ. ಅದಕ್ಕೆ ಗೌರವ ನೀಡಬೇಕು.
4. ಬಣ್ಣ ಹಚ್ಚಿರುವ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರಿ. ದೇಹದ ನೀರಿನ ಸಾಂದ್ರತೆ ಕಡಿಮೆಯಾಗದಂತೆ ಎಚ್ಚರ ವಹಿಸಿ. ನೀರಿನ ಅಂಶ ಕಡಿಮೆಯಾದಲ್ಲಿ, ಚರ್ಮ ಒಣಗಿಕೊಂಡಲ್ಲಿ ಚರ್ಮಗಳ ನಡುವಿನ ಚಿಕ್ಕ ಚಿಕ್ಕ ರಂಧ್ರಗಳ ಮುಖಾಂತರ ರಾಸಾಯನಿಕಗಳು ದೇಹದ ಒಳಗೆ ಸೇರುವ ಅಪಾಯವಿದೆ.
5. ಬಣ್ಣ ಹಚ್ಚುವ ಮೊದಲು ದೇಹಕ್ಕೆ ವ್ಯಾಸಲೀನ್ ಹಚ್ಚಬೇಕು. ಚರ್ಮವನ್ನು ತೇವವಾಗಿರಿಸುವ ದ್ರವ್ಯಗಳನ್ನು ಬಳಸಬೇಕು. ಚರ್ಮದ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
6. ಕೂದಲಿಗೆ ಬಣ್ಣ ಹಚ್ಚುವ ಮೊದಲು ತೆಂಗಿನೆಣ್ಣೆ ಬಳಸಿ. ಕೂದಲಿನ ಬಣ್ಣ ತೆಗೆಯುವ ಸಮಯದಲ್ಲಿ ಹಿತ ಮಿತವಾಗಿ ಶ್ಯಾಂಪು ಬಳಸಿ.
7. ದೇಹಕ್ಕೆ ಹಚ್ಚಿದ ಬಣ್ಣ ತೆಗೆಯುವ ಧಾವಂತದಲ್ಲಿ ವಿಪರೀತ ಸೋಪ್ (ನೊರೆಕಾರಕ) ದ್ರಾವಣವನ್ನು ಬಳಸಬೇಡಿ. ಪದೇ ಪದೇ ನೀರು ಬಳಸಿ, ಜೋರಾಗಿ ಉಜ್ಜುವುದರಿಂದ ಚರ್ಮಕ್ಕೆ ಗಾಯವಾಗಿ ಸೋಂಕು ತಗಲುವ ಸಾಧ್ಯತೆ ಇದೆ. ಬಣ್ಣ ತೆಗೆಯಲು ಸೀಮೆ ಎಣ್ಣೆ, ಸ್ಪಿರಿಟ್, ಆಲ್ಕೋಹಾಲ್, ಪೆಟೆ್ರಿಲ್‌ಗಳನ್ನು ಬಳಸಲೇ ಬಾರದು.
8. ಬಿಸಿ ನೀರಿನಲ್ಲಿ ಬಣ್ಣ ತೆಗೆಯಲೇ ಬಾರದು. ಬಿಸಿ ನೀರು ಬಳಸಿದಲ್ಲಿ ರಾಸಾಯನಿಕ ದ್ರಾವಣ ಕರಗಿ ಚರ್ಮಕ್ಕೆ ಹಾನಿಯಾಗಬಹುದು. ತಣ್ಣೀರನ್ನು ಬಳಸಿ, ನೈಸರ್ಗಿಕ ನೊರೆಕಾರಕ ದ್ರಾವಣ ಅಥವಾ ಬೇಬಿ ಆಯಿಲ್ ಬಳಸಿ ದೇಹಕ್ಕೆ ಅಂಟಿದ ಬಣ್ಣವನ್ನು ತೆಗೆಯಬೇಕು.
9. ಬಣ್ಣ ತೆಗೆದು ಒಂದು ವಾರದವರೆಗೆ ಪ್ರಖರವಾದ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಬೇಡಿ. ಈ ಅವಧಿಯಲ್ಲಿ ಮುಖ ಸೌಂದರ್ಯವರ್ಧಕ ಚಿಕಿತ್ಸೆ ಮತ್ತು ಬ್ಲೀಚಿಂಗ್‌ಗಳನ್ನು ಮಾಡಿಸಲೇ ಬಾರದು. ಚರ್ಮ ತುರಿಕೆ, ಕೆರೆತ, ಅಲರ್ಜಿ, ಗುಳ್ಳೆಗಳು ಕಂಡಲ್ಲಿ ತಕ್ಷಣ ಚರ್ಮ ತಜ್ಞರನ್ನು ಸಂಪರ್ಕಿಸಿ.
ಕೊನೆ ಮಾತು
 ಅಮ್ಮ್ಮಂದಿರೇ ನಿಮ್ಮ ಮುದ್ದು ಮಕ್ಕಳು ಹೇಗಿದ್ದರೂ ಚೆನ್ನ. ಹಬ್ಬದ ಸಮಯದಲ್ಲಿ ಮಕ್ಕಳಿಗೆ ವೇಷ ಧರಿಸಿ ಶೃಂಗಾರ ಮಾಡಿ. ಆದರೆ ರಾಸಾಯನಿಕ ಬಣ್ಣ ಬಳಸಬೇಡಿ. ನೈಸರ್ಗಿಕ ಬಣ್ಣವನ್ನು ಹಿತಮಿತವಾಗಿ ಬಳಸಿ. ವೇಷ ಹಾಕುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಬಣ್ಣ ವಿಲ್ಲದೆ ಬದುಕೇ ಇಲ್ಲ. ಬದುಕು ವರ್ಣಮಯವಾಗಿದ್ದರೆ ಮಾತ್ರ ಹೊಸತನವಿರುತ್ತದೆ. ಜೀವಕಳೆ ಬರುತ್ತದೆ. ಆದರೆ ಅತಿಯಾದ ಬಣ್ಣ ನಮ್ಮ ಜೀವನದ ಉತ್ಸಾಹದ ಬುಗ್ಗೆಯನ್ನೇ ಬತ್ತಿಸದಂತೆ ಎಚ್ಚರ ವಹಿಸಿ.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News

ಜಗದಗಲ
ಜಗ ದಗಲ