ನವೆಂಬರ್ 15ರಂದು ಕೇರಳಾದ್ಯಂತ ಬಸ್ ಮುಷ್ಕರ

Update: 2018-10-22 10:54 GMT

ಕಾಸರಗೋಡು, ಅ.22: ಪ್ರಯಾಣ ದರ ಏರಿಕೆ ಮಾಡುವಂತೆ ಒತ್ತಾಯಿಸಿ ನವಂಬರ್ 15ರಂದು ಕೇರಳ ರಾಜ್ಯವ್ಯಾಪಿ ಮುಷ್ಕರ ನಡೆಸಲು ಖಾಸಗಿ ಬಸ್ಸು ಮಾಲಕರ ರಾಜ್ಯ ಸಮಿತಿ ತೀರ್ಮಾನಿಸಿದೆ.

ಡೀಸೆಲ್ ಬೆಲೆ ಏರಿಕೆಯಿಂದ ಖಾಸಗಿ ಬಸ್ಸು ಗಳು ಸಂಚಾರ ನಡೆಸದ ಸ್ಥಿತಿ ಉಂಟಾಗಿದೆ. ಈಗಾಗಲೇ ಹಲವಾರು ಬಸ್ಸುಗಳು ನಷ್ಟದ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಳಿಸಿವೆ. ಆದ್ದರಿಂದ ಬಸ್ ಪ್ರಯಾಣ ದರ ಏರಿಕೆಗೆ ಸರಕಾರ ಮುಂದಾಗಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳಿಗೆ ನೀಡುತ್ತಿರುವ ರಿಯಾಯಿತಿ ಪ್ರಯಾಣ ದರವನ್ನು ಹೆಚ್ಚಿಸಬೇಕು, ಎಲ್ಲ ಉಚಿತ ಪ್ರಯಾಣ ರದ್ದುಗೊಳಿಸಬೇಕು, ಬಸ್ಸುಗಳ ಸಂಚಾರ ಕಾಲಾವಧಿ 20 ವರ್ಷಗಳಿಗೆ ಹೆಚ್ಚಿಸಬೇಕು, ಸಬ್ಸಿಡಿ ದರದಲ್ಲಿ ಡೀಸೆಲ್ ನೀಡಬೇಕು ಮೊದಲಾದ ಹಲವು ಬೇಡಿಕೆಗಳನ್ನು ಸಂಘವು ಸರಕಾರದ ಮುಂದಿಟ್ಟಿದೆ.

ನವಂಬರ್ 15ರಂದು ಒಂದು ದಿನ ಮುಷ್ಕರ ನಡೆಸಲಾಗುವುದು. ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ನವಂಬರ್ 17ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘ ಮುನ್ನೆಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News