ಸರಗಳ್ಳತನಕ್ಕೆ ಯತ್ನ; ಆರೋಪಿ ಸೆರೆ

Update: 2018-10-29 17:08 GMT

ಬೆಂಗಳೂರು, ಅ.29: ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರ ಕಳವು ಮಾಡಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಇಲ್ಲಿನ ಚಾಮರಾಜಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಮಣಿಕಂಠ(36) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಚಾಮರಾಜಪೇಟೆಯ 2ನೆ ಮುಖ್ಯರಸ್ತೆಯಲ್ಲಿನ ನಿವಾಸಿ ಭರತ್ ಎಂಬವರು ತನ್ನ ಪತ್ನಿ ರಮ್ಯಾ ಅವರೊಂದಿಗೆ ಕಟ್ಟಡದ ಮೊದಲನೆ ಮಹಡಿಯಲ್ಲಿ ನೆಲೆಸಿದ್ದಾರೆ. ನೆಲಮಹಡಿಯಲ್ಲಿ ಅವರ ತಂದೆ-ತಾಯಿ ವಾಸವಾಗಿದ್ದು, ಭರತ್ ರವಿವಾರ ರಾತ್ರಿ ತಮ್ಮ ಪೋಷಕರ ಮನೆಗೆ ಬಂದಿದ್ದಾರೆ ಎನ್ನಲಾಗಿದೆ.

ರವಿವಾರ ರಾತ್ರಿ 11:30ರ ಸುಮಾರಿಗೆ ಪತ್ನಿ ರಮ್ಯಾ ಮನೆಯ ಬಾಗಿಲಿನ ಚಿಲಕ ಹಾಕದೆ ನಿದ್ರೆಗೆ ಜಾರಿದ್ದು, ಈ ವೇಳೆ ಮನೆಗೆ ನುಗ್ಗಿದ ಮಣಿಕಂಠ ಆಕೆಯ ಕೊರಳಿಗೆ ಕೈ ಹಾಕಿ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ್ದಾನೆ. ಕೂಡಲೇ ಎಚ್ಚರಗೊಂಡ ರಮ್ಯಾ ಕೂಗಿಕೊಂಡಿದ್ದರಿಂದ ನೆಲಮಹಡಿಯಲ್ಲಿದ್ದ ಪತಿ ಭರತ್ ತಕ್ಷಣ ಅಲ್ಲಿಗೆ ಧಾವಿಸಿದ್ದಾರೆ. ಈ ವೇಳೆ ಮಣಿಕಂಠ ಮಹಡಿ ಇಳಿದು ಓಡುತ್ತಿರುವುದನ್ನು ಕಂಡು ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News