ಅಸಮಾನತೆಯ ಪ್ರತೀಕವಾಗಲಿರುವ ಸರ್ದಾರ್ ಪಟೇಲರ ಪ್ರತಿಮೆ

Update: 2018-10-31 18:42 GMT

ಸರ್ದಾರ್ ವಲ್ಲಭಭಾಯ್ ಪಟೇಲ್‌ರ ಬೃಹತ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಅಕ್ಟೋಬರ್ 31) ಲೋಕಾರ್ಪಣೆಗೊಳಿಸಿದ್ದಾರೆ. ಬಿಜೆಪಿಯ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್‌ನ ಸರ್ದಾರ್ ವಲ್ಲಭಭಾಯ್ ಪಟೇಲರ ಬಗ್ಗೆ ಯಾಕಿಷ್ಟು ಮೋಹ? ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಖಂಡಿತ ಕಾಡದಿರದು. ಈ ನಿಟ್ಟಿನಲ್ಲಿ ಸರ್ದಾರ್ ಪಟೇಲರ ವ್ಯಕ್ತಿತ್ವದ ಮತ್ತೊಂದು ಮುಖವನ್ನು, ಮೋದಿಯವರ ಇಂತಹ ಸರ್ದಾರ್ ಪಟೇಲ್ ಪ್ರೇಮದ ಹಿನ್ನೆಲೆಯಲ್ಲಿ ಪರಿಚಯ ಮಾಡಿಕೊಡಲೇಬೇಕಾಗುತ್ತದೆ. ಖಂಡಿತ, ಅದು ಸರ್ದಾರ್ ಪಟೇಲರು ತಳ ಸಮುದಾಯಗಳ ವಿರೋಧಿಯಾಗಿದ್ದರು ಎಂಬುದು. ಹಾಗೆಯೇ ಯಾಕೆ ಮನುವಾದಿಗಳಿಗೆ ಹಾಗೂ ಮೋದಿವಾದಿಗಳಿಗೆ ಸರ್ದಾರ್ ಪಟೇಲರ ಬಗ್ಗೆ ಇನ್ನಿಲ್ಲದ ಮೋಹ ಎನ್ನುವುದನ್ನೂ ಕೂಡ ಈ ಹಿನ್ನೆಲೆಯಲ್ಲಿ ಮನಗಾಣಬಹುದು! ಇದಕ್ಕೆ ಸಾಕ್ಷಿಯನ್ನು ನಾವು ತುಂಬಾ ದೂರ ಹುಡುಕಬೇಕಿಲ್ಲ. ಸ್ವತಃ ಡಾ. ಅಂಬೇಡ್ಕರ್‌ರವರೇ ತಮ್ಮ What congress and Gandhi have done to untouchables? ಕೃತಿಯಲ್ಲಿ ಸರ್ದಾರ್ ಪಟೇಲರ ಇಂತಹ ಗುಣವನ್ನು ವಿವರಿಸಿದ್ದಾರೆ.

ಅದನ್ನು ದಾಖಲಿಸುವುದಾದರೆ, 1942ರಲ್ಲಿ ಲಾರ್ಡ್ ಲೆನ್‌ಲಿತ್‌ಗೋರವರು 2ನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಭಾರತೀಯರ ಸಹಕಾರ ಗಳಿಸಲು ಹಾಗೂ ಕೇಂದ್ರ ಸರಕಾರವನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ 52 ಪ್ರಮುಖ ಭಾರತೀಯರನ್ನು ಆಹ್ವಾನಿಸುತ್ತಾರೆ. ಹಾಗೆ ಆಹ್ವಾನಿತಗೊಂಡವರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರೂ ಇದ್ದರು. ಆದರೆ ಇಂತಹ ‘ಕೀಳು’ ವ್ಯಕ್ತಿಗಳ ಗುಂಪನ್ನು ಕರೆಯುವ ವೈಸರಾಯರ ಯೋಜನೆ ಬಗ್ಗೆ ವಲ್ಲಭಭಾಯ್ ಪಟೇಲರಿಗೆ ತಡೆದುಕೊಳ್ಳಲಾಗಲಿಲ್ಲ. ಈ ಸಂದರ್ಭದಲ್ಲಿ ಇದರ ಬಗ್ಗೆ ಅಹಮದಾಬಾದಿನಲ್ಲಿ ಮಾತನಾಡುತ್ತಾ ವಲ್ಲಭಭಾಯ್ ಪಟೇಲರು ಹೇಳುವುದು, ‘‘ವೈಸರಾಯ್‌ರವರು ಹಿಂದೂ ಮಹಾಸಭೆಯ ನಾಯಕ ರನ್ನು ಆಹ್ವಾನಿಸಿದರು, ಮುಸ್ಲಿಂಲೀಗ್‌ನ ನಾಯಕರನ್ನು ಆಹ್ವಾನಿಸಿದರು, ಅಲ್ಲದೆ ಅವರು ಗಣಚಿಗಳು, ಮೋಚಿಗಳು (ಚಮ್ಮಾರರು) ಮತ್ತು ಇತರರನ್ನು ಕೂಡ ಆಹ್ವಾನಿಸಿದರು’’ ಎಂದು! (ಅಂಬೇಡ್ಕರರ ಕೃತಿ, ಪು.20). ಈ ನಿಟ್ಟಿನಲ್ಲಿ ಸರ್ದಾರ್ ಪಟೇಲರ ಈ ಮಾತಿನ ಬಗ್ಗೆ ಅಂಬೇಡ್ಕರರು ‘‘ಖಂಡಿತ, ತಮ್ಮ ಈ ದುರುದ್ದೇಶಪೂರಿತ, ವಿನಾಶಕಾರಿ ಮತ್ತು ಚುಚ್ಚುವ ಪದಗಳಲ್ಲಿ ವಲ್ಲಭಭಾಯ್ ಪಟೇಲರು ಗಣಚಿಗಳು ಮತ್ತು ಮೋಚಿಗಳನ್ನು ಪ್ರಸ್ತಾಪಿಸಿದರಾದರೂ ಒಟ್ಟಾರೆ ಆ ಮಾತಿನಲ್ಲಿ ಈ ದೇಶದ ಶೋಷಿತ ವರ್ಗಗಳ ಬಗೆಗಿನ ಅವರ ಅಸಹನೆ ಬಿಂಬಿತಗೊಂಡಿತ್ತು’’ ಎನ್ನುತ್ತಾರೆ.

ಈ ನಿಟ್ಟಿನಲ್ಲಿ ಅಂಬೇಡ್ಕರರ ಆ ಕೃತಿಯಲ್ಲಿ ಪಟೇಲರ ಇದಿಷ್ಟೆ ಗುಣ ಉಲ್ಲೇಖವಲ್ಲ ಮತ್ತೂ ಬೇಕಾದಷ್ಟಿದೆ. ಅಂತಹ ಮತ್ತೊಂದಷ್ಟನ್ನು ಉಲ್ಲೇಖಿಸುವುದಾದರೆ, 1932ರಲ್ಲಿ ಸ್ವಾಮಿ ಶ್ರದ್ಧಾನಂದ ಸನ್ಯಾಸಿ ಎಂಬವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯಲ್ಲಿ ಅಸ್ಪೃಶ್ಯರ ಉದ್ಧಾರಕ್ಕಾಗಿ ಪ್ರತ್ಯೇಕ ಸಮಿತಿ ಒಳಗೊಂಡಂತೆ, 5 ಲಕ್ಷ ರೂ. ನೀಡುವಂತೆ ಒತ್ತಾಯಿಸಿ ಹಲವಾರು ಯೋಜನೆ ಹಾಕಿಕೊಂಡು ಅದರ ಅನುಮೋದನೆಗೆ ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸರ್ದಾರ್ ಪಟೇಲರಿಗೆ ಪತ್ರ ಬರೆಯುತ್ತಾರೆ. ಶ್ರದ್ಧಾನಂದ ಸನ್ಯಾಸಿಗಳ ಅಂತಹ 5 ಲಕ್ಷದ ಬೇಡಿಕೆಗೆ ಪಟೇಲರು ನೀಡುವುದು ಅರ್ಥಾತ್ ಅಂದಿನ ಸಮಸ್ತ ಭಾರತದ 6 ಕೋಟಿ ಅಸ್ಪೃಶ್ಯರಿಗೆ ನೀಡಲು ಒಪ್ಪುವುದು ಕೇವಲ 2 ಲಕ್ಷ! ಅಸ್ಪೃಶ್ಯರ ಏಳಿಗೆಗಾಗಿ ಪ್ರಾಯೋಗಿಕ ರೂಪುರೇಷೆಗಳನ್ನು ಹೊಂದಿದ್ದ ಅಂತಹ ಮಹತ್ವದ ಸಮಿತಿಗೆ ಅಸ್ಪೃಶ್ಯರ ಬಗ್ಗೆ ಸ್ವತಃ ಕಾಳಜಿಯುಳ್ಳ ಶ್ರದ್ಧಾನಂದ ಸನ್ಯಾಸಿಗಳು ಸಂಚಾಲಕರಾಗಲು ಬಯಸುತ್ತಾರೆ ಮತ್ತು ಆ ಸಮಿತಿಯಲ್ಲಿ ಶ್ರದ್ಧಾನಂದ ಸನ್ಯಾಸಿಗಳಲ್ಲದೆ ಸರೋಜಿನಿ ನಾಯ್ಡು, ಜಿ.ಬಿ.ದೇಶಪಾಂಡೆ ಮತ್ತು ವೈ.ಕೆ.ಯಾಜ್ಞಿಕ್‌ರವರು ಕೂಡ ಸದಸ್ಯರಾಗಿರುತ್ತಾರೆ.

ಸಮಿತಿಯ ಎಲ್ಲಾ ಸದಸ್ಯರು ಅಸ್ಪೃಶ್ಯರ ಬಗ್ಗೆ ಕಾಳಜಿಯುಳ್ಳ ಶ್ರದ್ಧಾನಂದ ಸನ್ಯಾಸಿಗಳನ್ನೇ ಆ ಸಮಿತಿಯ ಸಂಚಾಲಕರಾಗಿ ನೇಮಿಸಿ ನಿರ್ಣಯಕೈಗೊಳ್ಳುವಂತೆ ಪಟೇಲರನ್ನು ಒತ್ತಾಯಿಸುತ್ತಾರೆ. ಇಂತಹ ಒತ್ತಾಯದ ಹಿನ್ನೆಲೆಯಲ್ಲಿ ಸರ್ದಾರ್ ಪಟೇಲರಿಗೆ ನಿಜಕ್ಕೂ ಅಸ್ಪೃಶ್ಯರ ಬಗ್ಗೆ ಕಾಳಜಿ ಇದ್ದದ್ದೇ ಆದರೆ ಶ್ರದ್ಧಾನಂದರನ್ನು ಅದರ ಸಂಚಾಲಕರಾಗಿ ನಿಯುಕ್ತಿಗೊಳಿಸಿ ಅಸ್ಪಶ್ಯೋದ್ಧಾರದ ಅಂತಹ ಮಹತ್ವದ ಕೆಲಸಕ್ಕೆ ಅವರು ಚಾಲನೆ ನೀಡಬಹುದಿತ್ತು. ಆದರೆ ಕಾಳಜಿ ಇಲ್ಲದ ಪಟೇಲರು ಪ್ರತಿಕ್ರಿಯಿಸುವುದು ‘‘ಸಮಿತಿಯಲ್ಲಿ ಸ್ವಾಮಿ ಶ್ರದ್ಧಾನಂದರ ಹೆಸರೇ ಮೊದಲಿರುವುದರಿಂದ ಸ್ವಾಭಾವಿಕವಾಗಿ ಅವರೇ ಅದರ ಸಂಚಾಲಕರಾಗುತ್ತಾರೆ. ಆದ್ದರಿಂದ ಪ್ರತ್ಯೇಕ ನಿರ್ಣಯ ಮಂಡಿಸುವ ಅಗತ್ಯವಿಲ್ಲ’’ ಎಂದು.

ಅರ್ಥಾತ್ ಪಟೇಲರಿಗೆ ಸ್ವಾಮಿ ಶ್ರದ್ಧಾನಂದರನ್ನು ಆ ಸಮಿತಿಯಿಂದ ದೂರ ಇಡುವ ಇಚ್ಛೆಯಿತ್ತು. ಹಾಗೆಯೇ ಅದು ನೆರವೇರಿತು ಕೂಡ. ಹೇಗೆಂದರೆ ಅದರ ನಂತರದ ಬೆಳವಣಿಗೆಗಳಿಂದ ತಿಳಿದು ಬರುವುದು ಅಸ್ಪೃಶ್ಯರ ಕುರಿತಾದ ಆ ಮಹತ್ವದ ಸಮಿತಿಗೆ ಸ್ವಾಮಿ ಶ್ರದ್ಧಾನಂದ ಸನ್ಯಾಸಿಗಳ ಬದಲು ಜಿ. ಬಿ. ದೇಶಪಾಂಡೆಯವರನ್ನು ಸಂಚಾಲಕರನ್ನಾಗಿ ನೇಮಿಸಲಾಗುತ್ತದೆ. ತನ್ಮೂಲಕ ಅಸ್ಪೃಶ್ಯೋದ್ಧಾರದ ಕಾಳಜಿಯ ಶ್ರದ್ಧಾನಂದರನ್ನು ಸರ್ದಾರ್ ಪಟೇಲರು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಾರೆ. ಅಲ್ಲದೆ ಯಾವ ಅಸ್ಪೃಶ್ಯರ ಉದ್ಧಾರಕ್ಕಾಗಿ ಶ್ರದ್ಧಾನಂದರು 5 ಲಕ್ಷ ರೂ. ಕೇಳಿದ್ದರೋ ಅಂತಹ ಮಹತ್ವದ ಕಾರ್ಯಕ್ಕೆ ಪಟೇಲರು ಅಂದು ಮಂಜೂರು ಮಾಡುವುದು ಕೇವಲ ಹತ್ತು ಸಾವಿರ ಅಷ್ಟೇ! ಕಡೆಗೆ ಇದೆಲ್ಲದರಿಂದ ಬೇಸತ್ತ ಸ್ವಾಮಿ ಶ್ರದ್ಧಾನಂದ ಸನ್ಯಾಸಿಗಳು ಅಸ್ಪೃಶ್ಯರ ಏಳಿಗೆಗಾಗಿನ ಎಐಸಿಸಿಯ ಆ ಮಹತ್ವದ ಸಮಿತಿಯಿಂದಲೇ ರಾಜೀನಾಮೆ ಇತ್ತು ಹೊರಬರುತ್ತಾರೆ. ಈ ನಿಟ್ಟಿನಲ್ಲಿ ಸ್ವಾಮಿ ಶ್ರದ್ಧಾನಂದ ಸನ್ಯಾಸಿಗಳ ಪ್ರಕರಣದ ಇಂತಹ ವಿವರಣೆಯನ್ನು ನಾವು ಅಂಬೇಡ್ಕರ್‌ರ ಆ ಕೃತಿಯ ಪುಟ 298ರಿಂದ 303ರ ನಡುವೆ ಕಾಣಬಹುದು ಮತ್ತು ಆ ಪ್ರಕರಣದ ಹಿನ್ನೆಲೆಯಲ್ಲಿ ಕಣ್ಣಿಗೆ ರಾಚುವುದು ಸರ್ದಾರ್ ವಲ್ಲಭಭಾಯ್ ಪಟೇಲ್ರ ಶೋಷಿತ ಸಮುದಾಯಗಳ ಬಗೆಗಿನ ವಿರುದ್ಧದ ನಡೆ.

ಎಸ್ಸಿ/ಎಸ್ಟಿ ಮೀಸಲಾತಿ ರದ್ದುಗೊಳಿಸಿದ್ದ ಪಟೇಲ್!:
ಇನ್ನು 1947 ಜನವರಿ ತಿಂಗಳಲ್ಲಿ ಒಮ್ಮೆ ಸಂವಿಧಾನ ಸಭಾ (Constituent assembly) ಸಭೆ ಸೇರುತ್ತದೆ. ಸಭೆಯ ಸದಸ್ಯರಾಗಿದ್ದರೂ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಅಂದು ಅನಿವಾರ್ಯ ಕಾರಣಗಳಿಗಾಗಿ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಭೆಯ ಅಲ್ಪಸಂಖ್ಯಾತರ ಆ ಉಪಸಮಿತಿಯ ಅಧ್ಯಕ್ಷರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಆ ದಿನ ಒಂದು ತಂತ್ರಗೈದು ಆಚಾರ್ಯ ಕೃಪಲಾನಿಯವರನ್ನು ಆ ದಿನದ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಮಾಡಿದರು. ಹಾಗೆಯೇ ಸರ್ದಾರ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರಿಗೆ ರಾಜ್ಯಪಾಲ, ಮುಖ್ಯಮಂತ್ರಿ... ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಕೂಡ ಒಡ್ಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಆ ಸಭೆ ತೆಗೆದುಕೊಂಡ ಏಕ ಸಾಲಿನ ನಿರ್ಣಯವೆಂದರೆ ಎಸ್ಸಿ/ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ರದ್ದುಗೊಳಿಸುವ ನಿರ್ಣಯ! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುತ್ತಿದ್ದಂತೆ ಮಾರನೇ ದಿನದ ‘ಹಿಂದೂಸ್ಥಾನ್ ಟೈಮ್ಸ್’ ಮತ್ತು ‘ಸ್ಟೇಟ್ಸ್ ಮನ್’ ಪತ್ರಿಕೆಗಳು ಇದಕ್ಕೆ ನೀಡಿದ ಹೆಡ್‌ಲೈನ್ಸ್ ಇಂದು ""Red letter day'' (ಕೆಂಪಕ್ಷರಗಳಲ್ಲಿ ಬರೆದಿಡುವ ದಿನ) ಎಂದು! ದುರಂತವೆಂದರೆ ಇಂತಹ ಒಂದು ಅಪಾಯಕಾರಿ ಪ್ರಕ್ರಿಯೆಯ ನೇತೃತ್ವ ವಹಿಸಿದ್ದವರು ಅದೇ ಸರ್ದಾರ್ ವಲ್ಲಭಭಾಯ್ ಪಟೇಲ್ರವರು!

ಈ ನಿಟ್ಟಿನಲ್ಲಿ ಪತ್ರಿಕೆಗಳ ಈ ಹೆಡ್‌ಲೈನ್‌ಗಳಿಗೆ ಅಂಬೇಡ್ಕರರು ಪ್ರತಿಕ್ರಿಯಿಸಿದ್ದು ‘‘ಈ ದಿನ ಕೆಂಪು ಅಕ್ಷರಗಳಲ್ಲಿ ಬರೆದಿಡುವ ದಿನವಲ್ಲ, ಬದಲಿಗೆ ಸತ್ತ ಅಕ್ಷರಗಳಲ್ಲಿ ಬರೆದಿಡುವ ದಿನ’’ (Dead letter day) ಎಂದು. (ಆಧಾರ: My memories and Experiences of Babasaheb Ambedkar by Shankarananda shastri, Pp.134).

 ಒಟ್ಟಾರೆ ಐತಿಹಾಸಿಕ ಮಹತ್ವದ ಅಂಬೇಡ್ಕರರ ಈ ಕೃತಿಗಳ ಆ ವಿವರಣೆ ಒದಗಿಸುವುದು ಸರ್ದಾರ್ ವಲ್ಲಭಭಾಯ್ ಪಟೇಲರು ಈ ದೇಶದ ತಳ ಸಮುದಾಯಗಳ ವಿರೋಧಿಯಾಗಿದ್ದರು ಎಂಬುದನ್ನು. ಹೀಗಿರುವಾಗ ಪ್ರಧಾನಿ ನರೇಂದ್ರಮೋದಿ ಇಂತಹ ಪಟೇಲರ ಅತಿ ಎತ್ತರದ ಪ್ರತಿಮೆ ನಿರ್ಮಿಸಿರುವುದು? ಹಾಗೆಯೇ ಸಂಘಪರಿವಾರದ ಸಮಸ್ತ ಮಂದಿ ಇಂತಹ ತಳ ಸಮುದಾಯಗಳ ವಿರೋಧಿ ಪಟೇಲರ ಪ್ರತಿಮೆಯ ತುತ್ತೂರಿಗೆ ನಿಂತಿರುವುದು?. ಈ ನಿಟ್ಟಿನಲ್ಲಿ ಪಟೇಲರ ಈ ಪ್ರತಿಮೆಯಿಂದ ಯಾವುದರ ಮೇಲುಗೈಯಾಗುತ್ತದೆ? ಖಂಡಿತ, ಅಸಮಾನತೆಯದ್ದು. ಯಾಕೆಂದರೆ ಪ್ರಪಂಚದಲ್ಲೇ ಅತಿ ಎತ್ತರದ ಪ್ರತಿಮೆಗಳಿರುವುದು ಭಗವಾನ್ ಬುದ್ಧನದ್ದು. ಬುದ್ಧನ ಬೃಹತ್ ಪ್ರತಿಮೆಗಳಲ್ಲಿ ಹೆಚ್ಚಿನವುಗಳು ಚೀನಾ, ಭಾರತ ಜಪಾನ್ ಮತ್ತು ತೈವಾನ್‌ನಲ್ಲಿವೆೆ. ಎಲ್ಲರಿಗೂ ತಿಳಿದಿರುವಂತೆ ಬುದ್ಧ ಸಮಾನತೆಯ ಪ್ರತೀಕ. ಆತನ ಪ್ರತಿಮೆ ಅದೆಷ್ಟೇ ಎತ್ತರವಿರಲಿ ಅದು ಸಮಾನತೆಯನ್ನು ಎತ್ತರೆತ್ತರಕ್ಕೆ ಕೊಂಡೊಯ್ಯುತ್ತದೆ. ಆದರೆ ತಳ ಸಮುದಾಯಗಳ ಮೀಸಲಾತಿ ವಿರೋಧಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್? ಅವರು ಅಕ್ಷರಶಃ ಅಸಮಾನತೆಯ ಪ್ರತೀಕ. ಈ ನಿಟ್ಟಿನಲ್ಲಿ ಹಾಗೆ ನಿರ್ಮಾಣಗೊಂಡಿರುವ ಅವರ ಪ್ರತಿಮೆ? ಅದೆಷ್ಟೇ ಎತ್ತರವಾಗಿರಲಿ ಅದು ಅಸಮಾನತೆಯ ಶಾಶ್ವತ ಪ್ರತೀಕವಾಗುತ್ತದಷ್ಟೆ 

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News