ಹರೇನ್ ಪಾಂಡ್ಯಾರನ್ನು ಹತ್ಯೆಗೈದವರು ಯಾರು?

Update: 2018-11-15 18:44 GMT

ಗುಜರಾತ್ ಬಿಜೆಪಿಯ ಹಿರಿಯ ನಾಯಕ ಮತ್ತು 1990 ಮತ್ತು 2000ದ ಆರಂಭಿಕ ವರ್ಷಗಳಲ್ಲಿ ಗುಜರಾತ್‌ನ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಹರೇನ್ ಪಾಂಡ್ಯಾ ಅವರನ್ನು ಯಾರು ಹತ್ಯೆ ಮಾಡಿದರು ಎಂಬ ಸತ್ಯವು ನಮಗೆ ಎಂದಾದರೂ ತಿಳಿಯಲಿದೆಯೇ? ಅಥವಾ ಪೊಲೀಸರ ಭಾಷೆಯಲ್ಲಿ ಹೇಳುವಂತೆ, ಸಂತ್ರಸ್ತ, ಸಂಚುಗಾರ ಅಥವಾ ಅಪರಾಧ ನಡೆಸಿದಾತನ ಮಧ್ಯೆ ಕೊಂಡಿಯನ್ನು ಸಾಬೀತುಪಡಿಸಲು ಸಾಧ್ಯವಾಗದ ಅತ್ಯಂತ ಚಾತುರ್ಯದಿಂದ ನಡೆಸಲಾಗಿರುವ ಹತ್ಯೆಯಾಗಿಯೇ ಉಳಿಯಲಿದೆಯೇ?

ಮ್ಯಾಕ್‌ಬೆತ್ ಕತೆಯ ನಾಲ್ಕನೇ ದೃಶ್ಯದಲ್ಲಿ ತನ್ನ ಕೋಟೆಯ ಸಂಭ್ರಮಾಚರಣಾ ಗೃಹದಲ್ಲಿ ಮ್ಯಾಕ್‌ಬೆತ್ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ ಪರಿಣಾಮ ನೆರೆದಿದ್ದ ಜನರೆಲ್ಲರೂ ಗೊಂದಲಕ್ಕೀಡಾಗುತ್ತಾರೆ. ಎಲ್ಲವೂ ಉತ್ತಮವಾಗಿಯೇ ಆರಂಭವಾಗಿರುತ್ತದೆ. ಅತಿಥಿಗಳನ್ನು ಸ್ವಾಗತಿಸಲಾಗುತ್ತದೆ ಮತ್ತು ಅವರೆಲ್ಲರೂ ಭೋಜನ ಸೇವಿಸಲು ಕುಳಿತಿರುತ್ತಾರೆ. ಒಬ್ಬ ವ್ಯಕ್ತಿ ಅಲ್ಲಿ ಹಾಜರಿರುವುದಿಲ್ಲ. ಆತ ಮ್ಯಾಕ್‌ಬೆತ್‌ನ ಹಳೆಗೆಳೆಯ ಬಂಕೊ. ಆತ ಅಲ್ಲಿ ಗೈರಾಗಿರುವ ಕಾರಣ ಬಹಳ ಸರಳ-ಮ್ಯಾಕ್‌ಬೆತ್ ಆಗತಾನೇ ಆತನನ್ನು ಹತ್ಯೆ ಮಾಡಿರುತ್ತಾನೆ. ಈಗ ಬಂಕೊ ಕುಳಿತುಕೊಳ್ಳಬೇಕಿದ್ದ ಸ್ಥಾನದಲ್ಲಿ ಮ್ಯಾಕ್‌ಬೆತ್‌ಗೆ ಆತನ ಆತ್ಮ ಕಾಣಿಸುತ್ತದೆ....
ಗುಜರಾತ್ ಬಿಜೆಪಿಯ ಹಿರಿಯ ನಾಯಕ ಮತ್ತು 1990 ಮತ್ತು 2000ದ ಆರಂಭಿಕ ವರ್ಷಗಳಲ್ಲಿ ಗುಜರಾತ್‌ನ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಹರೇನ್ ಪಾಂಡ್ಯಾ ಅವರನ್ನು ಯಾರು ಹತ್ಯೆ ಮಾಡಿದರು ಎಂಬ ಸತ್ಯವು ನಮಗೆ ಎಂದಾದರೂ ತಿಳಿಯಲಿದೆಯೇ? ಅಥವಾ ಪೊಲೀಸರ ಭಾಷೆಯಲ್ಲಿ ಹೇಳುವಂತೆ, ಸಂತ್ರಸ್ತ, ಸಂಚುಗಾರ ಅಥವಾ ಅಪರಾಧ ನಡೆಸಿದಾತನ ಮಧ್ಯೆ ಕೊಂಡಿಯನ್ನು ಸಾಬೀತುಪಡಿಸಲು ಸಾಧ್ಯವಾಗದ ಅತ್ಯಂತ ಚಾತುರ್ಯದಿಂದ ನಡೆಸಲಾಗಿರುವ ಹತ್ಯೆಯಾಗಿಯೇ ಉಳಿಯಲಿದೆಯೇ?
ಸದ್ಯ ಉದಯ್‌ಪುರ ಜೈಲಿನಲ್ಲಿ ಬಂಧಿಯಾಗಿರುವ ಗ್ಯಾಂಗ್‌ಸ್ಟರ್ ಅಝಮ್ ಖಾನ್, ಸೊಹ್ರಾಬುದ್ದೀನ್ ಶೇಕ್ ಮತ್ತು ತುಲಸಿರಾಮ್ ಪ್ರಜಾಪತಿಯ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯಿಂದ ಪಾಂಡ್ಯಾ ಪ್ರಕರಣವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖಾನ್ ಪ್ರಕಾರ, ಪಾಂಡ್ಯಾರನ್ನು ಹತ್ಯೆ ಮಾಡುವ ಗುತ್ತಿಗೆಯನ್ನು ಗುಜರಾತ್‌ನ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಡಿ.ಜಿ.ವಂಝಾರ, ಸೊಹ್ರಾಬುದ್ದೀನ್ ಮತ್ತು ಇತರ ಇಬ್ಬರಿಗೆ ನೀಡಿದ್ದರು.
ಈ ವಿಷಯವನ್ನು ನಾನು 2010ರಲ್ಲೇ ಸಿಬಿಐ ತನಿಖಾಧಿಕಾರಿಗೆ ತಿಳಿಸಿದ್ದರೂ ಅವರು ಅದನ್ನು ನನ್ನ ಹೇಳಿಕೆಯ ಭಾಗವಾಗಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿಯ ಒಂದು ಕಾಲದ ಸಹಚರ ಅಝಮ್ ಖಾನ್ ತಿಳಿಸಿದ್ದ. ಆಸಕ್ತಿದಾಯಕವೆಂದರೆ, ರಾಜ್ಯ ಪೊಲೀಸ್ ಮೂಲಗಳಿಂದ ಇದೇ ಮಾದರಿಯ ಹೇಳಿಕೆಗಳು ಪ್ರಕಟವಾಗಿರುವುದನ್ನು ನಾವು ಅಂದಿನ ಸುದ್ದಿ ಪತ್ರಿೆಗಳ ಪುಟಗಳಲ್ಲೂ ಕಾಣಬಹುದಾಗಿದೆ.
ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಯಾಗಿದ್ದು ಆಡಳಿತಾರೂಢ ಪಕ್ಷಕ್ಕೆ ಸಾಮಿಪ್ಯ ಹೊಂದಿದ್ದ ಮತ್ತು ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಹತ್ಯೆ ಆರೋಪದಲ್ಲಿ ಕೆಲವು ವರ್ಷ ಜೈಲಿನಲ್ಲಿ ಕಳೆದು ಕಳೆದ ವರ್ಷವಷ್ಟೇ ಪ್ರಕರಣದಿಂದ ದೋಷಮುಕ್ತಗೊಂಡಿರುವ ವ್ಯಕ್ತಿಯತ್ತಲೇ ಖಾನ್ ಮತ್ತೆ ಬೆರಳು ತೋರಿಸಿರುವುದು ಆತನ ಆರೋಪದ ತೀವ್ರತೆಯನ್ನು ಬಿಂಬಿಸುತ್ತದೆ. ಈ ಪ್ರಕರಣದಲ್ಲಿ ಇಂದಿಗೂ ಪೊಲೀಸ್ ಇಲಾಖೆಯ ಕೆಳಹಂತದ ಅನೇಕ ಅಧಿಕಾರಿಗಳು ಜೈಲಿನಲ್ಲಿ ದಿನಕಳೆಯುತ್ತಿದ್ದಾರೆ.

ಖಾನ್ ಮಾಡಿರುವ ಆರೋಪವನ್ನು ನಿರಾಕರಿಸುವುದು ದೂರದ ಮಾತು, ಕೆಲವು ಹಿಂದಿ ಮತ್ತು ಆಂಗ್ಲ ಪತ್ರಿಕೆಗಳಲ್ಲಿ ಹದಿನೈದು ವರ್ಷಗಳಷ್ಟು ಹಳೆಯ ಈ ಹತ್ಯಾ ಪ್ರಕರಣದ ಆಳವಾದ ವಿಶ್ಲೇಷಣೆಗಳು ಪ್ರಕಟವಾಗಿದ್ದು ಹತ್ಯೆಯ ಸಂಚುಗಾರನ ಬಗ್ಗೆ ಸಾಕ್ಟು ಸುಳಿವುಗಳನ್ನು ನೀಡುತ್ತವೆ.
ಈಗ ಹೊಸದಾಗಿ ಮಾಡಲಾಗಿರುವ ಆರೋಪವು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ತನ್ನ ಸಾಮಾಜಿಕ-ರಾಜಕೀಯ ಜೀವನವನ್ನು ಆರಂಭಿಸಿದ್ದ ಹಿರಿಯ ರಾಜಕಾರಣಿಯ ಹತ್ಯೆಯ ಹಿಂದಿರುವ ರಹಸ್ಯವನ್ನು ಭೇದಿಸಲು ಸದ್ಯ ಸಿಕ್ಕಿರುವ ಕೆಲವೊಂದು ಮಾಹಿತಿಗಳ ಬಗ್ಗೆ ತನಿಖೆ ನಡೆಸಲು ಅಧಿಕಾರದಲ್ಲಿರುವ ಜನರಿಗೆ ಪ್ರೇರಣೆ ನೀಡಲಿದೆ ಎಂದು ನಾವು ಭಾವಿಸಬಹುದೇ?
ಪಾಂಡ್ಯಾ ಹತ್ಯೆ ಪ್ರಕರಣ ಕಂಡಿರುವ ಏರಿಳಿತಗಳನ್ನು ಗಮನಿಸಿದಾಗ ಇಂಥ ಭವಿಷ್ಯ ನುಡಿಯುವುದು ಅಸಾಧ್ಯ ಎಂದು ಸ್ಪಷ್ಟವಾಗುತ್ತದೆ. ಆದರೆ ಕನಿಷ್ಠ ಪಕ್ಷ ನಾವು ನಡೆದ ಘಟನೆಳನ್ನು ಮರುಸೃಷ್ಟಿಬಹುದಲ್ಲವೇ?
ಮೊದಲನೆಯದಾಗಿ, 2002ರ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿ.ಕೆ. ಕೃಷ್ಣ ಅವರ ನೇತೃತ್ವದ ನಾಗರಿಕ ಪೀಠದ ಮುಂದೆ ಪಾಂಡ್ಯಾ ಹೇಳಿಕೆಯನ್ನು ನೀಡಿದ್ದರು ಮತ್ತು ಇದರ ವಿವರಗಳು ಆಡಳಿತ ಪಕ್ಷಕ್ಕೆ ಅಷ್ಟೊಂದು ಹಿತಕಾರಿಯಾಗಿರಲಿಲ್ಲ. ದಂಗೆಗಳು ನಡೆದ ಮೂರು ತಿಂಗಳ ನಂತರ ಪಾಂಡ್ಯಾ ಪ್ರಮುಖ ಸುದ್ದಿ ಪಾಕ್ಷಿಕ ‘ಔಟ್‌ಲುಕ್’ನಲ್ಲಿ ಇದೇ ಹೇಳಿಕೆಯನ್ನು ನೀಡಿದ್ದರು ಮತ್ತು ಕೆಲವು ತಿಂಗಳ ನಂತರವೂ ಈ ಹೇಳಿಕೆಯನ್ನು ಪುನರಾವರ್ತಿಸಿದ್ದರು. ವಿಚಿತ್ರವೆಂದರೆ, ತನ್ನ ಗುರುತನ್ನು ಬಹಿರಂಗಪಡಿಸಿದರೆ ತನ್ನ ಜೀವಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಅವರು ಭಯಪಟ್ಟಿದ್ದರು.
ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ರಾಜ್ಯದ ಆಡಳಿತ ಪಕ್ಷದ ಓರ್ವ ಹಿರಿಯ ಮುಖಂಡ ಇಂಥ ಭಯವನ್ನು ವ್ಯಕ್ತಪಡಿಸಲು ಕಾರಣವೇನು? ಮತ್ತು ಈ ಭಯ ವ್ಯಕ್ತಪಡಿಸಿದ ಆರು ತಿಂಗಳ ಒಳೆ ಅವರನ್ನು ಹತ್ಯೆ ಮಾಡಲಾಗಿತ್ತು.
ಎರಡನೆಯದಾಗಿ, ಪಾಂಡ್ಯಾರನ್ನು (ಮಾರ್ಚ್ 2003) ಅವರು ಬೆಳಗ್ಗಿನ ವಾಕಿಂಗ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹತ್ಯೆ ಮಾಡಲಾಗಿತ್ತು ಮತ್ತು ಅವರ ದೇಹವು ಅವರ ಕಾರಿನ ಒಳಗೆ ಎರಡು ಗಂಟೆಗಳ ಕಾಲ ಬಿದ್ದಿತ್ತು. ಪ್ರಕರಣದ ಆರೋಪಿಗಳನ್ನು ಗುಜರಾತ್ ಉಚ್ಚ ನ್ಯಾಯಾಲಯ ಬಿಡುಗಡೆಗೊಳಿಸಿತ್ತು ಮತ್ತು ತನಿಖೆಯನ್ನು ಸರಿಯಾಗಿ ನಡೆಸದೆ ಇದ್ದ ಕಾರಣಕ್ಕೆ ಪೊಲೀಸ್ ಮತ್ತು ತನಿಖಾ ತಂಡವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಸದ್ಯ, ಈ ಬಿಡುಗಡೆಯನ್ನು ಪ್ರಶ್ನಿಸಿ ಹಾಕಲಾಗಿರುವ ಮೇಲ್ಮನವಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.
ಮೂರನೆಯದಾಗಿ, ಪಾಂಡ್ಯಾರ ತಂದೆ ವಿಠಲ್‌ಬಾಯಿ ಪಾಂಡ್ಯಾ ಈ ಕೃತ್ಯ ಒಳಗಿನವರದ್ದೇ ಕೆಲಸ ಎಂದು ಯಾವಾಗಲೂ ಹೇಳುತ್ತಿದ್ದರು. ಪಾಂಡ್ಯಾರ ಪತ್ನಿ ಜಾಗೃತಿ ಕೂಡಾ ಇದೊಂದು ರಾಜಕೀಯ ಹತ್ಯೆಯಾಗಿದೆ ಎಂದು ಅಭಿಪ್ರಾಯಿಸಿದ್ದರು. ಈ ಪ್ರಕರಣದ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಯಾಗಬೇಕೆಂದು ಕೋರಿ ಸದ್ಯ ಮೃತಹೊಂದಿರುವ ವಿಠಲ್ ಪಾಂಡ್ಯಾ ಯಾವ ರೀತಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ದಂಬಾಲು ಬೀಳುತ್ತಿದ್ದರು ಎಂಬುದರ ಸವಿವರವನ್ನು ನಾಗರಿಕ ಸ್ವಾತಂತ್ರ ಹೋರಾಟಗಾರ ಮತ್ತು ಕೀಲ ಮುಕುಲ್ ಸಿನ್ಹಾ ಒದಗಿಸಿದ್ದಾರೆ.
ಖುದ್ದು ಬಿಜೆಪಿ ಸದಸ್ಯರಾದರೂ ವಿಠಲ್ ಪಾಂಡ್ಯಾ ಸಿಬಿಐ ತನಿಖೆಯ ಮೇಲೆ ಸಂಪೂರ್ಣವಾಗಿ ವಿಶ್ವಾಸ ಹೊಂದಿರಲಿಲ್ಲ. ಆ ಕಾಲದಲ್ಲಿ ಸಿಬಿಐ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಅಡಿಯಲ್ಲಿತ್ತು. 2006ರಲ್ಲಿ ಪಾಂಡ್ಯಾ ತನ್ನ ಮಗನ ಹತ್ಯೆಯ ಪ್ರಕರಣವನ್ನು ಪೊಟಾ ನ್ಯಾಯಾಲಯದಲ್ಲಿ ನಡೆಸುವಂತೆ ಬೇಡಿಕೊಂಡಿದ್ದರು. ಆದರೆ ಅವರ ಈ ಬೇಡಿಕೆಗೆ ಮನ್ನಣೆ ದೊರೆಯಲಿಲ್ಲ. ಪಾಂಡ್ಯಾರ ಪತ್ನಿ, ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅದಾಗಲೇ ಸಿಬಿಐ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಕಾರಣ ಅವರ ಮನವಿಯನ್ನು ತಳ್ಳಿಹಾಕಲಾಗಿತ್ತು.


ಇಲ್ಲಿ ಗಮನಿಸಬೇಕಾದುದು ಏನೆಂದರೆ, ಹರೇನ್ ಪಾಂಡ್ಯಾರ ಪತ್ನಿ ಜಾಗೃತಿ ಪಾಂಡ್ಯಾ ನಂತರ ಬಿಜೆಪಿಯನ್ನು ಸೇರಿದ್ದರು ಮತ್ತು ಸದ್ಯ ಮಕ್ಕಳ ಹಕ್ಕುಳ ಆಯೋಗದ ಮುಖ್ಯಸ್ಥೆಯಾಗಿದ್ದಾರೆ.
ಖಾನ್ ಹೇಳಿಕೆಯನ್ನು ಮತ್ತೆ ತಳ್ಳಿಹಾಕಲಾಗುವುದೇ ಅಥವಾ ಪಾಂಡ್ಯಾರ ಸ್ವಂತ ಪಕ್ಷದ ಸೂಚನೆಯಂತೆ ಈ ಪ್ರಕರಣದ ಮರು ತನಿಖೆ ನಡೆಸಲಾಗುವುದೇ-ಒಟ್ಟಾರೆ ಏನೇ ಆದರೂ ನಾವು ಕನಿಷ್ಠ 2002ರ ದಂಗೆಯ ನಂತರದ ಅವಧಿಯನ್ನೊಮ್ಮೆ ಮರುಸೃಷ್ಟಿಸಬಹುದು. ಈ ಅವಧಿಯುದ್ದಕ್ಕೂ, ಪಾಂಡ್ಯಾ ಹತ್ಯೆ, ಎನ್‌ಕೌಂಟರ್ ಹತ್ಯೆಗಳ ಸರಮಾಲೆ, ಹಿರಿಯ ಮತ್ತು ಕಿರಿಯ ಮಟ್ಟದ ಪೊಲೀಸ್ ಅಧಿಕಾರಿಗಳ ಬಂಧನ (ಒಂದು ಹಂತದಲ್ಲಿ 32 ಅಧಿಕಾರಿಗಳನ್ನು ಬಂಧಿಸಲಾಗಿತ್ತು), ಈ ನಕಲಿ ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದ ನೆರೆರಾಜ್ಯದ ಇಬ್ಬರು ರಾಜಕಾರಣಿಗಳ ಬಂಧನ, ಮುಖ್ಯವಾಗಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಭಯೋತ್ಪಾದನಾ ನಿಗ್ರಹ ಯೋಜನೆಯ ರಚನೆ ಇತ್ಯಾದಿಯಾಗಿ ಹಲವು ಆಘಾತಕಾರಿ ಬೆಳವಣಿಗೆಗಳು ಡೆದವು.
ಸದ್ಯ ಮತ್ತೊಮ್ಮೆ ಸುದ್ದಿಯಲ್ಲಿರುವ ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿ (ಈಗ ನಿವೃತ್ತ) ವಂಝಾರ, ಗುಜರಾತ್ ಪೊಲೀಸ್ ಇಲಾಖೆಯಲ್ಲಿ ಡಿಐಜಿ ಆಗಿದ್ದರು ಮತ್ತು ಅದರ ಭಯೋತ್ಪಾದನೆ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದರು. ಅವರನ್ನು ಬಂಧಿಸುವವರೆಗೂ, ಕ್ರೈಂ ಬ್ರಾಂಚ್ ನಿಭಾಯಿಸುತ್ತಿದ್ದ 2002 ದಂಗೆಗಳ ತನಿಖೆ, ಪಾಂಡ್ಯಾ ಹತ್ಯಾ ಪ್ರಕರಣ ಮತ್ತು ಅಕ್ಷರಧಾಮ ದಾಳಿ ಸೇರಿದಂತೆ 2002ರಿಂದ ಗುಜರಾತ್‌ನಲ್ಲಿ ನಡೆದ ಎಲ್ಲ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂಬುದನ್ನು ಗುಜರಾತ್ ಪೊಲೀಸ್ ಇಲಾಖೆಯನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿದೆ.
ಇದೇ ಸಮಯದಲ್ಲಿ ಗುಜರಾತ್‌ನಲ್ಲಿ ನಕಲಿ ಎನ್‌ಕೌಂಟರ್‌ಗಳ ಸರಣಿಗಳು ನಡೆದು ಹದಿನೈದು ಜನರು ಪೊಲೀಸರಿಂದ ಕೊಲೆಗೈಯಲ್ಪಟ್ಟರು. ಈ ಎಲ್ಲ ಹತ್ಯೆಗಳು ಒಂದೇ ರೀತಿ ನಡೆದಿದ್ದವು. ಅದು ಇಶ್ರತ್ ಜಹಾನ್ ಆಗಿರಲಿ ಅಥವಾ ಸಮೀರ್ ಖಾನ್ ಪಠಾಣ್ ಅಥವಾ ಸೊಹ್ರಾಬುದ್ದೀನ್ ಪ್ರಕರಣ ಆಗಿರಲಿ. ಈ ಎಲ್ಲ ಎನ್‌ಕೌಂಟರ್‌ಗಳು ರಾತ್ರಿ ವೇಳೆಯೇ ನಡೆದಿದ್ದು ಉಗ್ರರು ಅತ್ಯಾಧುನಿಕ ಆಟೊಮ್ಯಾಟಿಕ್ ಶಸ್ತ್ರಾಸ್ತ್ರಗಳಿದ್ದರೂ ಒಂದೇ ಒಂದು ಪ್ರಕರಣದಲ್ಲಿಯೂ ಯಾವುದೇ ಪೊಲೀಸ್‌ಗೆ ಗಾಯಗಳಾಗಿರಲಿಲ್ಲ. ಎಲ್ಲ ಹತ್ಯೆಗಳಿಗೆ ಪೊಲೀಸರು ನೀಡಿದ್ದ ಸಮರ್ಥನೆಯೆಂದರೆ, ಅವರೆಲ್ಲರೂ ಮೋದಿ ಮತ್ತು ಅವರ ಸಹೋದ್ಯೋಗಿಗಳನ್ನು ಹತ್ಯೆ ಮಾಡಲೆಂದು ಬಂದಿದ್ದರು ಮತ್ತು ಅವರಿಗೆ ಪಾಕಿಸ್ತಾನದ ಜೊತೆ ಸಂಪರ್ಕವಿತ್ತು.
2003ರ ಜನವರಿಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಸಾದಿಕ್ ಜಮಾಲ್ ಮೆಹ್ತರ್ ಪ್ರಕರಣದಲ್ಲಿ ಮುಕುಲ್ ಸಿನ್ಹಾ ಇಡೀ ಪ್ರಕರಣ ರೂಪುಗೊಂಡ ರೀತಿಯನ್ನು ಬಯಲು ಮಾಡಿದ್ದರು:
ಸಾದಿಕ್ ಓರ್ವ ಭಯೋತ್ಪಾದಕ ಹೇಗಾದ? ಈ ಕತೆಯನ್ನು ಪತ್ರಕರ್ತ ಕೇತನ್ ತಿರೋಡ್ಕರ್ ಚೆನ್ನಾಗಿ ಹೇಳಬಲ್ಲರು. ಕೇತನ್ ಅವರೇ ಒಪ್ಪಿರುವಂತೆ, ಎನ್‌ಕೌಂಟರ್ ಸ್ಪೆಶಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ದಯಾ ನಾಯಕ್ ಸೂಚನೆಯ ಮೇರೆಗೆ ಕೇತನ್, ಸಾದಿಕ್‌ಗೆ ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಿದ್ದರು. ಆ ಸಮಯದಲ್ಲಿ ದಯಾ ನಾಯಕ್ ಮುಂಬೈಯ ಅಂಧೇರಿಯಲ್ಲಿರುವ ಅಪರಾಧ ತನಿಖಾ ವಿಭಾಗದ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿ ದ್ದರು. ಸಾದಿಕ್ ಎನ್‌ಕೌಂಟರ್ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಶಬ್ಬೀರ್ ನ್ಯಾಯಾಲಯದಲ್ಲಿ ಹಾಕಿದ್ದ ರಿಟ್ ಅರ್ಜಿಯಲ್ಲಿ ದಯಾ ನಾಯಕ್‌ರ ಸಮೀಪವರ್ತಿಯಾಗಿದ್ದ ಕೇತನ್ ತನ್ನ ಅಫಿದಾವಿತ್ ಸಲ್ಲಿಸಿದ್ದರು. ಅವರು ಖುದ್ದಾಗಿ ದಾಖಲಿಸಿರುವ ಅಫಿದಾವಿತ್‌ನ 3 ಮತ್ತು 4ನೇ ಪ್ಯಾರಗ್ರಾಫನ್ನು ಇಲ್ಲಿ ನೀಡಲಾಗಿದೆ:
 3. ನಾನು ಮತ್ತು ದಯಾ ನಾಯಕ್ ಯಾವ ರೀತಿ ಸಾದಿಕ್ ಜಮಾಲ್ ಮೆಹ್ತರ್‌ರಿಗೆ ದಾವೂದ್ ಇಬ್ರಾಹೀಂ ತಂಡದ ಸದಸ್ಯ ಎಂದು ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳ ಮೂಲಕ ಹಣೆಪಟ್ಟಿ ಕಟ್ಟಿದ್ದೆವು. ಮತ್ತು ಆತ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಹತ್ಯೆ ಮಾಡಲು ಲಷ್ಕರೆ ತಯ್ಯಿಬದ ಗುತ್ತಿಗೆ ಕೊಲೆಗಾರನಾಗಿ ಗುಜರಾತ್‌ಗೆ ಆಗಮಿಸಬೇಕಿತ್ತು ಎಂಬುದಾಗಿ ನಾವು ಕತೆಕಟ್ಟಿದ್ದೆವು ಎಂಬುದನ್ನು ನಾನು ಮೇಲೆ ತಿಳಿಸಿದ ದೂರಿನ ಪ್ಯಾರಗ್ರಾಫ್ 7 ಮತ್ತು 8ರಲ್ಲಿ ತಿಳಿಸಿದ್ದೇನೆ ಮತ್ತು ಒಪ್ಪಿದ್ದೇನೆ.
ವಂಝಾರ ಅವರೇ ಹಂಚಿಕೊಂಡಿರುವ ಗುಜರಾತ್ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ಯೋಜನೆಯನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. (ರೆಡಿಫ್ ವಿಶೇಷ, ಅಹ್ಮದಾಬಾದ್‌ನಲ್ಲಿ ಶೀಲಾ ಭಟ್, ಯಾವ ರೀತಿ ಗುಜರಾತ್ ಉಗ್ರವಾದವನ್ನು ಎದುರಿಸಲಿದೆ, ಜುಲೈ 15,2004). ಇದು ರಾಜ್ಯದಲ್ಲಿ ನಕಲಿ ಎನ್‌ಕೌಂಟರ್‌ಗಳ ಸರಮಾಲೆ ನಡೆಯುತ್ತಿದ್ದ ಅವಧಿಯಾಗಿತ್ತು.
ಈ ಯೋಜನೆಯ ಹಿಂದಿದ್ದ ಸೂಚ್ಯವಾದ ಅರ್ಥ ಎಂದರೆ (ಗುಜರಾತ್ ಸರಕಾರದ ಪ್ರಕಾರ), ರಾಜ್ಯವು ಉಗ್ರರ ಸ್ವರ್ಗವಾಗಿ ಬದಲಾಗಿದೆ (ಇಸ್ಲಾಮಿಕ್ ಉಗ್ರರು ಎಂದು ಓದಿ). ಅಹ್ಮದಾಬಾದ್‌ನ ಹೆಚ್ಚುವರಿ ಸಿಪಿಯಾಗಿದ್ದ ವಂಝಾರ ರೆಡಿಫ್‌ಗೆ ನೀಡಿದ ಸಂದರ್ಶನದಲ್ಲಿ, ಗೋಧ್ರಾ ಹತ್ಯಾಕಾಂಡ ಮತ್ತು ಆಮೇಲೆ ನಡೆದ ಗಲಭೆಗಳ ನಂತರ ಕೆಲವು ರೀತಿಯ ಮತ್ತು ರೂಪಗಳ ಉಗ್ರರು ಗುಜರಾತನ್ನು ಗುರಿ ಮಾಡಿದ್ದಾರೆ. ಗುಜರಾತ್ ಉಗ್ರರ ತಾಣವಾಗುತ್ತಿದೆ ಎಂದು ತಿಳಿಸಿದ್ದರು. (ೆಡಿಫ್ ಸಂದರ್ಶನ ಜುಲೈ 27,2004).
ಈ ಯೋಜನೆಗೆ ಪೂರ್ವತಯಾರಿ ಎಂಬಂತೆ ರಾಜ್ಯದಲ್ಲಿರುವ ಮಸೀದಿಗಳು ಮತ್ತು ಮದ್ರಸಗಳ ಸಂಖ್ಯೆಗಳೆಷ್ಟು, ರಾಜ್ಯದಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್ ಸಂಸ್ಥೆಗಳೆಷ್ಟು ಮತ್ತು ಅವುಗಳಿಗೆ ದೇಶದ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿರುವ ಸಂಘಟನೆಗಳ ಜೊತೆಗಿರುವ ಸಂಪರ್ಕಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಯಿತು. ಯೋಜನೆಯ ಭಾಗವಾಗಿ, ಪೇದೆಯಿಂದ ಹಿಡಿದು ಉನ್ನತಾಧಿಕಾರಿಯವರೆಗೆ ಪೊಲೀಸ್ ಪಡೆಯ ಪ್ರತಿಯೊಬ್ಬ ಅಧಿಕಾರಿಯನ್ನೂ ಮೂಲ ಮಟ್ಟದಲ್ಲಿ ಪರಿಸ್ಥಿತಿಯ ಮೇಲೆ ನಿಗಾಯಿಡುವಂತೆ ಸೂಚಿಸಲಾಯಿತು. ಆಕೆ/ಆತನಲ್ಲಿ ಮಸೀದಿಗಳಲ್ಲಿ ನಡೆಯುವ ಸಭೆಗಳು ಮತ್ತು ಮದ್ರಸಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾಯಿಡುವಂತೆ ಸೂಚಿಸಲಾಯಿತು. ಈ ಯೋಜನೆಯಲ್ಲಿ ತಬ್ಲೀಗ್ ಜಮಾಅತ್‌ನಲ್ಲಿ ನಡೆಯುವ ಚಟುವಟಿಕೆಗಳ ಮೇಲೂ ತೀವ್ರ ನಿಗಾಯಿಡಲಾಯಿತು.
ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯ ಸರಕಾರದ ಸೂಚನೆಯಂತೆ ಗುಜರಾತ್ ಸರಕಾರ ರೂಪಿಸಿದ್ದ ಭಯೋತ್ಪಾದನೆ ನಿಗ್ರಹ ಯೋಜನೆಯು ಒಂದು ಹಂತಕ್ಕೆ ಇಡೀ ಅಲ್ಪಸಂಖ್ಯಾತ ಸಮುದಾಯವನ್ನು ಆತಂಕಕ್ಕೆ ದೂಡಿತ್ತು ಎಂಬುದು ಓರ್ವ ಸಾವಾನ್ಯ ನಾಗರಿಕನಿಗೂ ಸ್ಪಷ್ಟವಾಗಿತ್ತು.
ಕುಚೋದ್ಯವೆಂದರೆ, ಇಡೀ ಯೋಜನೆಯಲ್ಲಿ ಹಿಂದೂ ಸಮುದಾಯದಲ್ಲಿರುವ ತೀವ್ರವಾದಿ ವಿಷಯಗಳನ್ನು ಎಲ್ಲೂ ಪ್ರಸ್ತಾಪಿಸಿರಲಿಲ್ಲ ಮತ್ತು ಹಿಂದುತ್ವ ಬ್ರಿಗೇಡ್‌ನ ಅಸಂಖ್ಯಾತ ಸಂಘಟನೆಗಳು ಮತ್ತು ಅದರ ನಾಯಕರ ವಿವಾದಾತ್ಮಕ ಚಟುವಟಿಕೆಗಳ ಮೇಲೆ ನಿಕಟ ಕಣ್ಗಾವಲಿಡುವ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಉಗ್ರ ಚಟುವಟಿಕೆಗಳ ಹೊಸ ಮೂಲಗಳನ್ನು ಮೊಗ್ಗಿನಲ್ಲೇ ಚಿವುಟಿ ಹಾಕಬೇಕೆಂಬ ಇರಾದೆಯಿದ್ದರೆ ಕೇಂದ್ರ ಸರಕಾರ ಹಿಂದೂ ಮುಖಂಡರಾದ ‘ಅಅ’ ಮತ್ತು ‘ಆಆಆ’ರನ್ನು ನಿಯಂತ್ರಿಸಬೇಕು ಎಂದು ದೇಶದಲ್ಲಿ ನಡೆಯುತ್ತಿದ್ದ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದ ಗುಪ್ತಚರ ಇಲಾಖೆ ಇದೇ ಅವಧಿಯಲ್ಲಿ ಸರಕಾರವನ್ನು ಎಚ್ಚರಿಸಿತ್ತು.
ಆಸಕ್ತಿದಾಯಕ ವಿಷಯವೆಂದರೆ, ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ ಸಂದರ್ಭದಲ್ಲಿ ವಂಝಾರ ಬರೆದಿದ್ದ ರಾಜೀನಾಮೆ ಪತ್ರದಲ್ಲಿ, ತಾನು ಮತ್ತು ಇತರ ಪೊಲೀಸ್ ಅಧಿಕಾರಿಗಳು ನೀತಿ ನಿರೂಪಕರ ಆದೇಶಗಳನ್ನು ಸಾಧ್ಯವಾಗುವ ಎಲ್ಲ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದೆವು ಅಷ್ಟೇ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದರು.
ತನ್ನ ಹತ್ತು ಪುಟಗಳ ರಾಜೀನಾಮೆ ಪತ್ರದಲ್ಲಿ ವಂಝಾರ ಕೆಲವೊಂದು ಆಘಾತಕಾರಿ ವಿಷಯಗಳನ್ನು ತಿಳಿಸಿದ್ದರು. ಈ ಎಲ್ಲ ಎನ್‌ಕೌಂಟರ್ ಹತ್ಯೆಗಳನ್ನು ನಡೆಸಿದ್ದಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತ ಪಡಿಸದ ವಂಝಾರ, ಈ ಹತ್ಯೆಗಳ ಕಾರಣದಿಂದಾಗಿ ಗುಜರಾತ್ ಇದೇ ಮಾದರಿಯ ಉಗ್ರರ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ವಂಝಾರ ಪ್ರಕಾರ, ಅವರು ಮತ್ತು ಅವರ ಇತರ ಅಧಿಕಾರಿಗಳು ರಾಜ್ಯದಲ್ಲಿ ಆರಂಭದಲ್ಲಿದ್ದ ಅವ್ಯವಸ್ಥೆಯನ್ನು ತಡೆಯುವಲ್ಲಿ ನೀಡಿದ ಬಲಿದಾನ ಪರಿಣಾಮವಾಗಿ ಗುಜರಾತ್ ಮಾದರಿ ಅಭಿವೃದ್ಧಿಯ ಯಶಸ್ಸಿ ಬಗ್ಗೆ ಶಂಖ ಊದಲು ಸಾಧ್ಯವಾಯಿತು.
ಕೆಲವು ಐಪಿಎಸ್ ರ್ಯಾಂಕ್‌ನ ಅಧಿಕಾರಿಗಳೂ ಸೇರಿದಂತೆ ವಂಝಾರ ಜೊತೆ ಸೇವೆಯಲ್ಲಿದ್ದ ಮೂವತ್ತಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಸದ್ಯ ಜೈಲಿನಲ್ಲಿರುವ ಬಗ್ಗೆ ಪ್ರತಿಕ್ರಿಯಿಸಿದ ವಂಝಾರ, 2002 ಮತ್ತು 2007ರ ಮಧ್ಯೆ ತನ್ನ ಜೊತೆಗಿದ್ದ ಅಧಿಕಾರಿಗಳು ಸರಕಾರದ ನೀತಿಗಳಿಗೆ ಅನುಗುಣವಾಗಿ ಕರ್ತವ್ಯವನ್ನು ನಿಭಾಯಿಸಿದ್ದರು ಮತ್ತು ಸರಕಾರದ ಸೂಚನೆಯಂತೆ ನಡೆದುಕೊಂಡಿದ್ದರು. ಆದರೆ ಅವರ ರಾಜಕೀಯ ನಾಯಕರು ಮಾತ್ರ ನಂತರ ಅವರಿಗೆ ಮೋಸ ಮಾಡಿದ್ದರು.
ವಂಝಾರ ಪ್ರಕಾರ; ನಮ್ಮನ್ನು ಪ್ರೇರೇಪಿಸುತ್ತಿದ್ದ, ಮಾರ್ಗದರ್ಶನ ನೀಡುತ್ತಿದ್ದ ಮತ್ತು ನಮ್ಮ ನಡೆಯ ಮೇಲೆ ಎಲ್ಲ ಕಡೆಗಳಿಂದಲೂ ನಿಗಾಯಿಟ್ಟಿದ್ದ ಸರಕಾರದ ನಿಯಮಗಳನ್ನು ಅನುಷ್ಠಾನಕ್ಕೆ ತರಲು ನಾವೆಲ್ಲ ಪ್ರಯತ್ನಿಸುತ್ತಿದ್ದೆವು. ಹಾಗಾಗಿ ಸಿಬಿಐ ತನಿಖಾಧಿಕಾರಿಗಳು ಸೊಹ್ರಾಬುದ್ದೀನ್, ತುಲಸಿರಾಮ್, ಸಾದಿಕ್ ಜಮಾಲ್ ಮತ್ತು ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ನೀತಿ ನಿರೂಪಕರನ್ನು ಬಂಧಿಸಬೇಕಾಗಿದೆ.
ವಂಝಾರ ನೀತಿ ನಿರೂಪಕರು ಎಂದು ಹೇಳುತ್ತಿರುವವರ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದ್ದರೂ ಮತ್ತು ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ ಹೊರತಾಗಿಯೂ ರಾಜ್ಯ ಸರಕಾರ ಅವರ ರಾಜೀನಾಮೆಯನ್ನು ಕೇಂದ್ರ ಸಕಾರಕ್ಕೆ ಕಳುಹಿಸದೆ ತಿರಸ್ಕರಿಸಿದೆ.
ಈ ಎಲ್ಲ ಎನ್‌ಕೌಂಟರ್‌ಗಳಿಂದ ಕಳಂಕಕ್ಕೆ ಒಳಗಾಗಿರುವ ಅಧಿಕಾರಿಯನ್ನು ಸೇವೆಯಲ್ಲಿ ಮುಂದುವರಿಸಲು ಸರಕಾರ ಇಷ್ಟೊಂದು ಕಾತರದಿಂದ ಇದ್ದಿದ್ದಾದರೂ ಯಾಕೆ? ಸರಕಾರ ಸಾರ್ವ ಜನಿಕರಿಗೆ ತಿಳಿಯಬಾರದು ಎಂದು ಬಯಸಿರುವ ರಹಸ್ಯಗಳ ಬಗ್ಗೆ ಆರೋಪಿ ಅಧಿಕಾರಿಗೆ ತಿಳಿದಿದೆ ಎಂಬ ಕಾರಣದಿಂದಲೇ?
ಕೃಪೆ: newsclick.in

Writer - ಸುಭಾಶ್ ಗಟಾಡೆ

contributor

Editor - ಸುಭಾಶ್ ಗಟಾಡೆ

contributor

Similar News

ಜಗದಗಲ
ಜಗ ದಗಲ