ಪಶ್ಚಿಮಘಟ್ಟಗಳು: ಗಾಡ್ಗೀಳ್ ವರದಿ ಕಂಡಂತೆ

Update: 2018-11-21 18:40 GMT

ಭಾಗ-1

ಕೃಷಿಯೆಂದರೆ ಕೇವಲ ಬೇಸಾಯ ಮಾತ್ರವಲ್ಲ, ಅದರೊಡನೆ ನಮ್ಮ ಪರಂಪರೆ, ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ತಳುಕು ಹಾಕಿಕೊಂಡಿರುತ್ತದೆ. ಕೃಷಿ ವ್ಯಾಪಕವಾಗಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾಲವಿದು. ಹೀಗಿರುವಾಗ ಪಶ್ಚಿಮಘಟ್ಟದ ಮುಖ್ಯ ಹಿತಾಸಕ್ತಿಗಳಾದ ಜನ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿ, ಅವರ ಜೊತೆಯಲ್ಲಿ ಚರ್ಚೆಯನ್ನೇ ಮಾಡದೆ, ಅವರನ್ನು ಸಂಪೂರ್ಣ ಕತ್ತಲೆಯಲ್ಲಿಟ್ಟು, ಯಾವುದೋ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ತಯಾರಿಸಿ, ಪಶ್ಚಿಮಘಟ್ಟ ನಿವಾಸಿಗಳ ಮೇಲೆ ಹೇರಲಾದ ವರದಿಗಳನ್ನು ಜನ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳಬೇಕೇ? ಅಥವಾ ಅದನ್ನು ಧಿಕ್ಕರಿಸಬೇಕೇ ಎಂಬುದೇ ಇಂದು ಪಶ್ಚಿಮಘಟ್ಟ ನಿವಾಸಿಗಳ ಮುಂದಿರುವ ಸವಾಲಾಗಿದೆ.

ಪಶ್ಚಿಮಘಟ್ಟಗಳ ರಕ್ಷಣೆಗಾಗಿ ದಿನ ನಿತ್ಯ ಚರ್ಚೆಯಲ್ಲಿ ಪಶ್ಚಿಮಘಟ್ಟಗಳೆಂದರೆ ಏನೆಂದು, ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಗಳು ವಿವರಿಸಿ ಹೇಳಿವೆ. ಅದರಂತೆ ಪಶ್ಚಿಮಘಟ್ಟಗಳು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಗುಜರಾತಿನ ತಪ್ತನದಿ ದಂಡೆಯವರೆಗೆ ಬೆಳೆದಿರುವ ಪಶ್ಚಿಮಘಟ್ಟಗಳ ಉದ್ದ ಸುಮಾರು 1,600 ಕಿ.ಮೀ. ಇದ್ದರೆ, ಅಗಲ 10 ಕಿ.ಮೀ.ನಿಂದ 210 ಕಿ.ಮೀ. ವರೆಗಿದೆ. ಇದರ ಉತ್ತರ 1,800 ಅಡಿಯಿಂದ 2,400 ಅಡಿವರೆಗೆ ಏರುಪೇರಾಗಿದೆ. ಇದನ್ನು ಸಹ್ಯಾದ್ರಿ ಬೆಟ್ಟದ ಸಾಲುಗಳೆಂದೂ ಕರೆಯಲಾಗುತ್ತಿದ್ದು, ಇದು ಪಾಲ್ಗಾಟ್ ಎಂಬಲ್ಲಿ ಸುಮಾರು 30 ಕಿ.ಮೀ. ಉದ್ದ ಹಾಗೂ 100 ಮೀಟರ್ ಎತ್ತರ ಪಾಲ್ಗಾಟ್ ಗ್ಯಾಪ್ ಎಂಬ ಕಣಿವೆಯನ್ನು ಹೊರತುಪಡಿಸಿದರೆ, ನಿರಂತರವಾಗಿ ತಮಿಳುನಾಡು, ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳನ್ನು ಆವರಿಸಿಕೊಂಡಿದೆ. ಇದು 56,377 ಚದರ ಕಿ.ಮೀ. ವಿಸ್ತೀರ್ಣವಿದ್ದು, ಅದರ ಶೇ. 40ರಷ್ಟು ಭೂಭಾಗವನ್ನು ನೈಸರ್ಗಿಕ ವಲಯವೆಂತಲೂ, ಉಳಿದ ಶೇ. 60ರಷ್ಟು ಭೂಭಾಗವನ್ನು ಸಾಂಸ್ಕೃತಿಕ ವಲಯವೆಂತಲೂ ವಿಂಗಡಿಸಲಾಗಿದೆ.

ನೈಸರ್ಗಿಕ ವಲಯವೆಂದರೆ ಸಂಪೂರ್ಣವಾಗಿ ಅರಣ್ಯ ಇಲಾಖೆಯ ಅಧೀನಕ್ಕೊಳಪಟ್ಟಿರುವ ಭೂಭಾಗ. ಇಲ್ಲಿ ಆದಿವಾಸಿಗಳನ್ನು ಬಿಟ್ಟರೆ ಬೇರೆ ಜನವಸತಿ ಇಲ್ಲ. ಸಾಂಸ್ಕೃತಿಕ ವಲಯವೆಂದರೆ ಖಾಸಗಿ ಭೂ ಒಡೆತನವಿದ್ದು, ಕೃಷಿಗೆ ಒಳಪಟ್ಟಿರುವ ಭೂಪ್ರದೇಶ. ಒಟ್ಟಾರೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಐವತ್ತು ಮಿಲಿಯ ಅಂದರೆ, ಐದು ಕೋಟಿಯಷ್ಟು ಜನವಸತಿ ಇದೆಯೆಂದು ಕಸ್ತೂರಿ ರಂಗನ್ ವರದಿ ಹೇಳುತ್ತಿದೆೆ. ಈ ಜನಸಂಖ್ಯೆಯಲ್ಲಿ ಬಹುತೇಕರು ಕೃಷಿಕರಾಗಿದ್ದು, ಉಳಿದಂತೆ ಕೃಷಿ ಕಾರ್ಮಿಕರು, ಕುಶಲ ಕಾರ್ಮಿಕರು ಹಾಗೂ ಆದಿವಾಸಿಗಳಾಗಿದ್ದಾರೆ. ಇಲ್ಲಿ ಕೃಷಿಗೆ ಪೂರಕವಾದ ವ್ಯಾಪಾರ ವಹಿವಾಟು, ಸಣ್ಣ ಕೈಗಾರಿಕಾ ಘಟಕಗಳು ನಡೆಯುವ ಸಣ್ಣ ನಗರ ಹಾಗೂ ಪಟ್ಟಣಗಳೂ ತಲೆ ಎತ್ತಿ ನಿಂತಿವೆಯೆಂದು ಬೇರೆ ಹೇಳಬೇಕಾಗಿಲ್ಲ. ಹಿಮಾಲಯಕ್ಕಿಂತ ಮೊದಲೇ ಪಶ್ಚಿಮಘಟ್ಟ ಸಾಲುಗಳು, ಅಸ್ತಿತ್ವಕ್ಕೆ ಬಂದಿವೆಯೆಂದು ಹೇಳಲಾಗುತ್ತಿದೆ.

ಅಂದರೆ ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಜನಸಮುದಾಯ ಭಾರತವಾಸಿಗಳಲ್ಲೇ ಮೊದಲಿಗರಾಗಿದ್ದರೂ ಇರಬಹುದು. ಪಶ್ಚಿಮಘಟ್ಟದ ನೈಸರ್ಗಿಕ ವಲಯವನ್ನು ಪಶ್ಚಿಮಘಟ್ಟವೆಂತಲೂ, ಸಾಂಸ್ಕೃತಿಕ ವಲಯವನ್ನು ಪಶ್ಚಿಮಘಟ್ಟದ ತಪ್ಪಲು ಪ್ರದೇಶವೆಂತಲೂ ಕರೆಯಬಹುದು. ಕರಾವಳಿ ಪ್ರದೇಶಕ್ಕೆ ಒಂದಾಗಿ 40 ಕಿ.ಮೀ. ಅಗಲದ ಸಮುದ್ರ ತೀರಕ್ಕೆ ಸಮಾನಾಂತರವಾಗಿ ಪಶ್ಚಿಮಘಟ್ಟಗಳು ಸಾಗುತ್ತಿವೆ.

ಹವಾ ನಿಯಂತ್ರಿತ ಕೊಠಡಿಯಲ್ಲಿ ಸಿದ್ಧಪಡಿಸಿದ ವರದಿ

ಪಶ್ಚಿಮಘಟ್ಟಗಳ ಗಡಿಯನ್ನು ಸ್ಪಷ್ಟವಾಗಿ ಗುರುತಿಸಬೇಕಾದದ್ದು ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿ ಸಮಿತಿಯ ಜವಾಬ್ದಾರಿಯಾಗಿತ್ತು. ಅದಕ್ಕಾಗಿ ಸ್ಥಳ ಪರಿಶೀಲನೆ ಮತ್ತು ಹದ್ದುಬಸ್ತು ಸರ್ವೇ ನಡೆಸಬೇಕಾದ ಅಗತ್ಯವಿತ್ತು. ಆದರೆ ಈ ಎರಡೂ ಸಮಿತಿಗಳು ಸ್ಥಳ ಪರಿಶೀಲನೆಯನ್ನಾಗಲೀ, ಸರ್ವೇ ನಡೆಸುವುದಾಗಲೀ ಮಾಡದೆ, ಕೇವಲ ಸರಕಾರಿ ದಾಖಲೆಗಳನ್ನು ತರಿಸಿಕೊಂಡು ಹವಾನಿಯಂತ್ರಿತ ಕೊಠಡಿಯಲ್ಲಿ ಅಸೀನರಾಗಿ ತಮ್ಮ ಬದುಕನ್ನು ಭವ್ಯ ಮಾಡಿಕೊಳ್ಳಲು ಪರಿಸರ ರಕ್ಷಣೆಯ ಸೋಗಿನಲ್ಲಿ ದಂಧೆ ನಡೆಸುತ್ತಿರುವ ಹಲವಾರು ಲಾಭಕೋರ ಸರಕಾರೇತರ ಸಂಸ್ಥೆಗಳ ಮೂಗಿನ ನೇರಕ್ಕೆ ವರದಿಯನ್ನು ತಯಾರಿಸಿ ಪ್ರಕಟಿಸಿರುವುದೇ ವಾಸ್ತವ. ಜೊತೆಗೆ ಈ ಸಮಿತಿಗಳು ಪಶ್ಚಿಮಘಟ್ಟದ ಹಿತಾಸಕ್ತಿಗಳ ಜೊತೆ ಆಮೂಲಾಗ್ರ ಚರ್ಚೆಯ ನಂತರವೇ ವರದಿಯನ್ನು ತಯಾರಿಸಬೇಕಾಗಿತ್ತು. ಇಲ್ಲಿ ಅತ್ಯಂತ ಪ್ರಮುಖವಾದ ಹಿತಾಸಕ್ತಿಗಳೆಂದರೆ, ಈ ಭೂಭಾಗದಲ್ಲಿ ಆದಿಯಿಂದಲೂ ವಾಸಿಸುತ್ತಿರುವ ಐವತ್ತು ಮಿಲಿಯದಷ್ಟಿರುವ ಜನಸಮುದಾಯ. ಈ ಜನಸಮುದಾಯದ ಬದುಕಿಗೆ ಕೃಷಿಯೇ ಪ್ರಧಾನ ಆಧಾರವೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಕೃಷಿಕರ ಜೊತೆಗೆ ಕೃಷಿ ಕಾರ್ಮಿಕರೂ ಕುಶಲ ಕರ್ಮಿಗಳು, ಆದಿವಾಸಿಗಳೂ ಸೇರಿಕೊಂಡಿದ್ದಾರೆ.

ಕೃಷಿಯೆಂದರೆ ಕೇವಲ ಬೇಸಾಯ ಮಾತ್ರವಲ್ಲ, ಅದರೊಡನೆ ನಮ್ಮ ಪರಂಪರೆ ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ತಳುಕು ಹಾಕಿಕೊಂಡಿರುತ್ತದೆ. ಕೃಷಿ ವ್ಯಾಪಕವಾಗಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾಲವಿದು. ಹೀಗಿರುವಾಗ ಪಶ್ಚಿಮಘಟ್ಟದ ಮುಖ್ಯ ಹಿತಾಸಕ್ತಿಗಳಾದ ಜನ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿ, ಅವರ ಜೊತೆಯಲ್ಲಿ ಚರ್ಚೆಯನ್ನೇ ಮಾಡದೆ, ಅವರನ್ನು ಸಂಪೂರ್ಣ ಕತ್ತಲೆಯಲ್ಲಿಟ್ಟು, ಯಾವುದೋ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ತಯಾರಿಸಿ, ಪಶ್ಚಿಮಘಟ್ಟ ನಿವಾಸಿಗಳ ಮೇಲೆ ಹೇರಲಾದ ವರದಿಗಳನ್ನು ಜನ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳಬೇಕೇ? ಅಥವಾ ಅದನ್ನು ಧಿಕ್ಕರಿಸಬೇಕೇ ಎಂಬುದೇ ಇಂದು ಪಶ್ಚಿಮಘಟ್ಟ ನಿವಾಸಿಗಳ ಮುಂದಿರುವ ಸವಾಲಾಗಿದೆ.

ಪರಿಸರವಾದಿಗಳೆಂಬ ಪೆಡಂಭೂತಗಳು

ತಜ್ಞರ ವರದಿಗಳೆಂದು ಬಣ್ಣಿಸಲಾಗಿರುವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಗಳನ್ನು ಸಾರಾಸಗಟಾಗಿ ಧಿಕ್ಕರಿಸಬೇಕಾಗಿದೆ. ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ಈ ಎರಡು ಸಮಿತಿಗಳು ತಮ್ಮ ವರದಿಯನ್ನು ತಯಾರಿಸಲು ಅನುಸರಿಸಿದ ರೀತಿಯನ್ನು ಕಂಡ ಮೇಲೆ ಅವರನ್ನು ತಜ್ಞರೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಎರಡೂ ವರದಿಗಳು ಪರಿಸರವಾದದ ಸೋಗಿನಲ್ಲಿ, ವಿದೇಶಿ ದೇಣಿಗೆ ಪಡೆದು, ಮೋಜಿನ ಜೀವನವನ್ನು ಬೆವರಿಳಿಸದೆ ನಡೆಸುತ್ತಿರುವ ಸರಕಾರೇತರ ಸಂಸ್ಥೆಗಳ ಆದಾಯ ಹೆಚ್ಚಿಸಲೆಂದೇ ತಯಾರಿಸಲಾಗಿದೆ ಎಂಬುದಕ್ಕೆ ಸಕಾರಣಗಳಿವೆ. ಸಂಪಾದನೆಗಾಗಿಯೇ ಪರಿಸರವಾದವನ್ನು ಹಮ್ಮಿಕೊಂಡು, ಕಾರ್ಯಾಚರಣೆ ನಡೆಸುತ್ತಿರುವ ಸರಕಾರೇತರ ಸಂಸ್ಥೆಗಳನ್ನು ವಂಚಕರ ಜಾಲವೆಂದು ಬಣ್ಣಿಸಿದರೆ ತಪ್ಪಲ್ಲ. ಆದರೆ ಈ ಮಾತನ್ನು ಆಧುನಿಕ ನಾಗರಿಕತೆಯನ್ನು ತಮ್ಮದಾಗಿಸಿಕೊಂಡು ಬದುಕುತ್ತಿರುವ ಬುದ್ಧಿವಂತ ಜನ ಅಷ್ಟು ಸುಲಭವಾಗಿ ನಂಬುವುದಿಲ್ಲ. ಏಕೆಂದರೆ ಈ ಪರಿಸರವಾದಿಗಳು ಸಾಧಾರಣ ಜನ ಅಲ್ಲ. ಅವರು ಅತ್ಯಂತ ಪ್ರಭಾವಶಾಲಿಗಳು, ಬುದ್ಧಿವಂತರು, ಮಾತಿನ ಮಂಟಪ ಕಟ್ಟುವುದರಲ್ಲಿ ನಿಸ್ಸೀಮರು. ಇವರನ್ನು ಸಾಮಾಜಿಕ ಹೋರಾಟಗಾರ ಕಲ್ಕುಳಿ ಹೆಗ್ಗಡೆಯವರು ‘ಆಂಗ್ಲ ಮಾಧ್ಯಮ ಪರಿಸರವಾದಿ’ಗಳೆಂದು ಬಣ್ಣಿಸುವುದು ಸರಿಯಾಗಿಯೇ ಇದೆ. ಪ್ರಭಾವಿ ಜನಗಳನ್ನು, ನ್ಯಾಯಾಧೀಶರಾದಿಯಾಗಿ ತಮ್ಮ ಬುಟ್ಟಿಯೊಳಗೆ ಹಾಕಿಕೊಳ್ಳುವುದಕ್ಕೆ ಅನುಸರಿಸುವ ವಿನೂತನ ಮಾರ್ಗಗಳನ್ನು ಗಮನಿಸಿದಾಗ ವಿಸ್ಮಯವುಂಟಾಗುತ್ತದೆ. ಅಧಿಕಾರಿ ವರ್ಗದವರನ್ನು ಅದರಲ್ಲೂ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ವಶಪಡಿಸಿಕೊಳ್ಳಲು ಅವರಿಗೆ ವಿದೇಶಿ ಪ್ರವಾಸ, ಪಂಚತಾರಾ ಹೊಟೇಲುಗಳಲ್ಲಿ ಔತಣೋಪಚಾರ, ಬೆಲೆಬಾಳುವ ಉಡುಗೊರೆಗಳು, ನಿರಂತರ ನಡೆಯುತ್ತಿರುತ್ತದೆ. ನ್ಯಾಯಾಧೀಶರೊಬ್ಬರನ್ನು ವಶಪಡಿಸಿಕೊಳ್ಳುವ ದೃಷ್ಟಿಯಿಂದ ಅವರ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಯಾ ಇನ್ನಾರನ್ನೋ ಹುಡುಕಿಕೊಂಡು, ಅವರಿಗೆ ಆಸೆ, ಆಮಿಷಗಳನ್ನೊಡ್ಡಿ, ತಮ್ಮ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತಾರೆ.

ನ್ಯಾಯಾಂಗ ಕೂಡ ಹಲವು ಪ್ರಸಂಗಗಳಲ್ಲಿ ಹಿಂದೆ ಮುಂದೆ ನೋಡದೆ, ಈ ಸೋಗಿನ ಪರಿಸರವಾದಿಗಳ ಪರವಾಗಿ ತೀರ್ಪು ನೀಡಿರುವ ಅದೆಷ್ಟೋ ಉದಾಹರಣೆಗಳು ಲಭ್ಯವಿವೆ. ಈ ಸೋಗಿನ ಪರಿಸರವಾದಿಗಳು ಅದೆಷ್ಟು ಪ್ರಭಾವಿಗಳು ಎಂದರೆ ಇಡೀ ಸಮಾಜ ಹಲವು ಪ್ರಗತಿಪರ ಚಿಂತಕರು ಸೇರಿದಂತೆ ಪರಿಸರ ಫೋಬಿಯಾ ಎಂಬ ಸಾಂಕ್ರಾಮಿಕ ರೋಗದಿಂದ ನರಳುವಂತೆ ಮಾಡಿಬಿಟ್ಟಿದ್ದಾರೆ. ಹೀಗಾಗಿ ಈ ಸೋಗಿನ ಪರಿಸರವಾದಿಗಳ ವಂಚನೆಯ ಜಾಲದ ಬಗ್ಗೆ ಹಾಗೂ ಅವರ ಸಮಾಜಘಾತಕ ಚಟುವಟಿಕೆಗಳ ಬಗ್ಗೆ ಅಲ್ಲಗಳೆಯಲಾಗದ ಆಧಾರಗಳನ್ನು ಮುಂದಿಡದಿದ್ದರೆ, ಯಾರೊಬ್ಬರು ಸಹ ಇವರನ್ನು ಸೋಗಿನ ಪರಿಸರವಾದಿಗಳೆಂದೂ, ನಯವಂಚಕರ ಜಾಲವೆಂದೂ ಒಪ್ಪಿಕೊಳ್ಳಲು ತಯಾರಾಗುವುದಿಲ್ಲ. ಪ್ರಶ್ನೆ ಮಾಡದೆ, ಯಾವುದನ್ನೂ ನಂಬಬಾರದೆಂದು ನಿತ್ಯ ಬೋಧಿಸುತ್ತಿರುವ ಹಲವಾರು ಪ್ರಗತಿಪರ ಚಿಂತಕರೂ ಕೂಡ, ಪ್ರಶ್ನೆಯೇ ಮಾಡದೆ, ನಕಲಿ ಪರಿಸರವಾದಿಗಳನ್ನು ಸಮರ್ಥಿಸುವುದು ಕಂಡು ಬರುತ್ತಿದೆ.

ಆದ್ದರಿಂದ ಈ ನಕಲಿ ಪರಿಸರವಾದಿಗಳ ನಯ ವಂಚನೆಯ ಕಾರ್ಯಚಟುವಟಿಕೆ ಬಗ್ಗೆ ಬೆಳಕು ಚೆಲ್ಲುವುದಕ್ಕಾಗಿಯೇ ಅವರ ದುಷ್ಟ ಕಾರ್ಯಾಚರಣೆಯ ಬಗ್ಗೆ ಬೆಳಕು ಚೆಲ್ಲುವ ದಾಖಲೆಗಳನ್ನು ಒದಗಿಸಬೇಕಾಗಿದೆ. ದಾಖಲೆ ಪ್ರಕಾರವೇ ಪರಿಸರ ಭಯೋತ್ಪಾದನೆಯಲ್ಲಿ ತೊಡಗಿರುವ ಹಲವು ಮಂದಿಗೆ ನಾಯಕರಾಗಿರುವವರು ಉಲ್ಲಾಸ ಕಾರಂತರೆಂಬವರು. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಹುಲಿ ಮತ್ತು ಅದರ ಕೊಳ್ಳೆ ಪ್ರಾಣಿಗಳ ಅಂಕಿ ಅಂಶಗಳಿಗೆ ಸಂಬಂಧಪಟ್ಟಂತೆ ಪಿ.ಎಚ್.ಡಿ. ಪದವೀಧರ. ಇವರು ಕೆಲವೊಮ್ಮೆ. Conservational Geologistಎಂದೂ, ಕೆಲವೊಮ್ಮೆ Conservational Zoologist ಎಂದೂ, ಇನ್ನು ಕೆಲವೊಮ್ಮೆ Conservational Ecologist ಎಂದೂ, ಮತ್ತೊಮ್ಮೆ Conservational Biologist ಎಂದೆಲ್ಲಾ ಸಮಯ ಸಂದರ್ಭಗಳಿಗೆ ತಕ್ಕಂತೆ ಹೇಳಿಕೊಳ್ಳುತ್ತಾ ಬಂದಿರುವುದಾಗಿ ಇವರ ಬಗ್ಗೆ ತನಿಖೆ ಮಾಡಿ ಸಲ್ಲಿಸಿದ, ಪರಿಣಿತ ಅಧಿಕಾರಿ ತಂಡದ ವರದಿಯಲ್ಲಿ ನಮೂದಿಸಲಾಗಿದೆ.

ಪ್ರವೀಣ ಭಾರ್ಗವ, ಸಂಜಯಗುಬ್ಬಿ, ಡಿ.ವಿ. ಗಣೇಶ, ನಿರೇನ್ ಜೈನ್, ಕೆ.ಯಂ. ಚಿಣ್ಣಪ್ಪ, ತಮ್ಮುಪೂವಯ್ಯ, ಯಂ.ಕೆ. ಅಪ್ಪಚ್ಚು, ಸನತ್‌ಕುಮಾರ್ ಈ ಎಂಟು ಜನ ಉಲ್ಲಾಸ ಕಾರಂತರ ತಂಡದಲ್ಲಿ ಸಕ್ರಿಯರಾಗಿ ಹಾಗೂ ಸಂಪೂರ್ಣವಾಗಿ ತೊಡಗಿಸಿಕೊಂಡಿರುವವರು. ಇವರೆಲ್ಲರಿಗೂ ನಾಯಕತ್ವ ನೀಡಿದವರು ಉಲ್ಲಾಸ ಕಾರಂತರೇ ಆಗಿದ್ದಾರೆ. ಈ ಒಂಬತ್ತು ಮಂದಿ ಸೇರಿಕೊಂಡು ಉಲ್ಲಾಸ ಕಾರಂತರ ನೇತೃತ್ವದಲ್ಲಿ ಗುಂಪುಕಟ್ಟಿಕೊಂಡು ಪರಿಸರವಾದದ ಸೋಗಿನಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡು ಅಕ್ರಮ ಸಂಭಾವನೆ ಗಳಿಸುತ್ತಿದ್ದಾರೆಂಬ ಆರೋಪದ ಮೇರೆ ಸರಕಾರ ಇಸವಿ 2000ದಲ್ಲಿ ಆಜ್ಞೆ ನಂ. ಎಫ್.ಇ.ಇ. 239 ವರ್ಷ 1999 ದಿನಾಂಕ 16-6-2000ದಂತೆ, ತಜ್ಞರ ಸಮಿತಿಯನ್ನು ರಚನೆ ಮಾಡಿ, ವಿಚಾರಣೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿತು. ಈ ಸಮಿತಿಯ ಮುಖ್ಯಸ್ಥರಾಗಿದ್ದವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದವರು. ಈ ವಿಚಾರಣಾ ಸಮಿತಿ ಉಲ್ಲಾಸ ಕಾರಂತ ಮತ್ತು ಅವರೊಡನೆ ಕೈಜೋಡಿಸಿಕೊಂಡಿರುವ ಸುಮಾರು ಹತ್ತು ಮಂದಿಯಿಂದ ಕೂಡಿದ ತಂಡದವರು ಹತ್ತು ಹಲವು ಸರಕಾರೇತರ ಸಂಸ್ಥೆಗಳನ್ನು ರಚಿಸಿಕೊಂಡು, ನಡೆಸಿಕೊಂಡು ಬಂದರೆನ್ನಲಾದ ಅಕ್ರಮ ಚಟುವಟಿಕೆಗಳ ಬಗ್ಗೆ ಆಮೂಲಾಗ್ರ ತನಿಖೆ ನಡೆಸಿ ತನ್ನ ವರದಿಯನ್ನು 2004ನೇ ಇಸವಿಯಲ್ಲಿಯೇ Principle Chief Conservator of  Forest Wild Life & Chief Wildlife Warden ಇವರಿಗೆ ತಮ್ಮ ವರದಿಯನ್ನು ಸಲ್ಲಿಸಿರುತ್ತಾರೆ. ಆ ವರದಿಯ ಪ್ರತಿ ಲಭ್ಯವಿದೆ. ಆಸಕ್ತರು ಯಾರು ಬೇಕಾದರೂ ಈ ವರದಿಯನ್ನು ಓದಿ ಸತ್ಯಗಳನ್ನು ತಿಳಿದುಕೊಳ್ಳಬಹುದು.

ಆ ವರದಿ ಪ್ರಕಾರ ಉಲ್ಲಾಸ ಕಾರಂತರ ತಂಡದವರು, ವ್ಯಾಪಕವಾಗಿ ನಡೆಸಿದ ಅಕ್ರಮ ಚಟುವಟಿಕೆಗಳ ಸಾರಾಂಶವೇನೆಂದರೆ, 1) ಇವರುಗಳು ಅಂದಾಜು ಹತ್ತು ಜನರಿಂದ ಕೂಡಿದ ಒಂದು ಸಣ್ಣ ಗುಂಪು. 2) ಇವರಲ್ಲಿ ಪ್ರವೀಣ ಭಾರ್ಗವ್ ಎನ್ನುವವರು ಮುಂಚೂಣಿಯಲ್ಲಿರುವ ಪ್ರಚಾರ ಪ್ರಮುಖರು. 3) ಇವರುಗಳು ಹತ್ತಾರು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿಕೊಂಡಿದ್ದಾರೆ. ಅವುಗಳೆಂದರೆ 1) Wild Life Conservation Society India - programme. 2 Center for Wild Life Studies Bangalore 3) Wild Life first Bangalore. 4) Bhadra Wildlife Conservation Trust, Chikmagalur, 5). Kudremukha Wild Life Foundation, Mangalore. 6) Living Inspiration for Tribals. 7) Nagarhole Wild Life Conservation Education projest. 8) Nature Conservation   Guild, Chikmagalur. 9) Wild Life Cat C-Chikmagalur. 10) Arohana, Mangalore. 11) B.G. Force Moodabidri/Mangalore. 12) Green watchers, Tumkur. ಇಂತಹ ಹತ್ತಾರು ಸಂಘ ಸಂಸ್ಥೆಗಳನ್ನು ಇವರು ಹುಟ್ಟು ಹಾಕಿಕೊಂಡಿದ್ದರೂ, ಎಲ್ಲವನ್ನೂ ಉಲ್ಲಾಸ ಕಾರಂತರ ಅಂಕೆಯಲ್ಲಿಯೇ ಸೃಷ್ಟಿಸಲಾಗಿದೆಯೆಂದು ತನಿಖಾ ವರದಿ ಹೇಳುತ್ತದೆ.

ಇವರ ಉದ್ದೇಶ, ಸಂರಕ್ಷಿತಾ ಅರಣ್ಯ ವಲಯಗಳ ಮೇಲೆ ತಮ್ಮ ಹಿಡಿತ ಸಾಧಿಸಿಕೊಂಡು ಅಪಾರ ಪ್ರಮಾಣದ ಹಣ ಲಪಟಾಯಿಸಿ ಬೆವರಳಿಸದೆ ಮೋಜಿನ ಜೀವನ ನಡೆಸುವುದೇ ಆಗಿದೆಯೆಂದು ಸಹ ಉನ್ನತ ಮಟ್ಟದ ತನಿಖಾ ವರದಿ ಸ್ಪಷ್ಟಪಡಿಸುತ್ತದೆ. ಇವರು ಹುಟ್ಟು ಹಾಕಿಕೊಂಡಿರುವ ಎಲ್ಲಾ ಟ್ರಸ್ಟ್‌ಗಳು ರಹಸ್ಯವಾಗಿಯೇ ಕಾರ್ಯಾಚರಣೆ ನಡೆಸುವುದಾಗಿದೆ. ಇವರ ಕಾರ್ಯಾಚರಣೆಗಳು ಸಾರ್ವಜನಿಕರ ಗಮನಕ್ಕೆ ಬಾರದಂತೆ ಎಚ್ಚರಿಕೆಯಿಂದ ಇವರು ಗೌಪತ್ಯೆಯನ್ನು ಕಾಪಾಡಿಕೊಳ್ಳುತ್ತಾರೆ. ಸರಕಾರದ ಕೆಲಸಗಳನ್ನೇ ತಮ್ಮದೆಂದು ಬಿಂಬಿಸಿಕೊಂಡು ನಕಲಿ ದಾಖಲೆ ತಯಾರಿಸಿ ಅಪಾರ ಪ್ರಮಾಣದಲ್ಲಿ ವಿದೇಶಿ ಹಣ ಲಪಟಾಯಿಸುತ್ತಾರೆಂಬ ಬಗ್ಗೆ ಸಹ ತನಿಖಾ ವರದಿ ಬೆಳಕು ಚೆಲ್ಲುತ್ತದೆ ಉದಾಹರಣೆಗಾಗಿ ಹೇಳಬೇಕೆಂದರೆ, ಆದಿವಾಸಿಗಳಿಗೆ ನಾಗರಹೊಳೆಯ ಹತ್ತಿರ ವೀರನಹೊಸಳ್ಳಿ ಎಂಬಲ್ಲಿ ಮಾಡಲಾಗಿರುವ ಪುನರ್ ವಸತಿ ವ್ಯವಸ್ಥೆ ಸಂಪೂರ್ಣ ಕೇಂದ್ರ ಸರಕಾರದ್ದು. ಇದನ್ನು ಮುಚ್ಚಿಟ್ಟ ಉಲ್ಲಾಸ ಕಾರಂತರ ಯಜಮಾನಿಕೆಯಲ್ಲಿ Living Inspiration for Tribe I ಎಂಬ ಸಂಸ್ಥೆ ಒಂದೇ ವರ್ಷ 60,000 ಡಾಲರ್ ವಿದೇಶಿ ಹಣ ಲಪಟಾಯಿಸಿದ್ದು, ತನಿಖಾ ವರದಿಯಲ್ಲಿ ಕಂಡು ಬರುತ್ತದೆ.

ಹೀಗೆ ಹರಿದು ಬರುವ ಹಣವನ್ನು ಸಂಬಳ, ಸಾರಿಗೆ ವೆಚ್ಚ, ಖರ್ಚು ವೆಚ್ಚ, ಇತ್ಯಾದಿಗಳೆಂದು ತಮ್ಮಾಳಗೆ ಹಂಚಿಕೊಳ್ಳುತ್ತಾರೆಂದು, ತನಿಖಾ ವರದಿ ಸಾರಿ ಹೇಳಿದೆ. ಉಲ್ಲಾಸ ಕಾರಂತರ ಸುಮಾರು ಹತ್ತು ಜನರಿಂದ ಕೂಡಿದ ತಂಡ ಸುಮಾರು ಹನ್ನೆರಡು ಸರಕಾರೇತರ ಸಂಸ್ಥೆಗಳು ಸೃಷ್ಟಿಕೊಂಡಿದೆ. ಇವುಗಳು ಬಹುತೇಕ ಟ್ರಸ್ಟ್‌ಗಳಾಗಿದ್ದು, ಸಾರ್ವಜನಿಕರಿಗೆ ಗೊತ್ತಾಗದ ರೀತಿಯಲ್ಲಿ ರಹಸ್ಯವಾಗಿ ಕೆಲಸ ಮಾಡುತ್ತವೆ. ಕೆಲವು ಮಾತ್ರ ಕ್ಲಬ್‌ಗಳಾಗಿದ್ದು, ಪ್ರಚಾರ, ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವುದು, ತಮ್ಮನ್ನು ಟೀಕೆ ಮಾಡುವವರ ವಿರುದ್ಧ ಮೊಕದ್ದಮೆ ಹೂಡಿ ಬೆದರಿಸಿ ಬಾಯಿ ಮುಚ್ಚಿಸುವುದು ಇತ್ಯಾದಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತವೆ. ಸಮಾಜ ಸೇವೆ ಮಾಡುವುದಕ್ಕೆ ಹತ್ತು ಜನರ ಕೂಟ ಒಂದಕ್ಕೆ ಹನ್ನೆರಡು ಸಂಸ್ಥೆಗಳ ಅಗತ್ಯವಿದೆಯೇ?. ಖಂಡಿತಾ ಇಲ್ಲ. ವಿವಿಧ ಮೂಲಗಳಿಂದ ಹಣ ಲಪಟಾಯಿಸುವುದಕ್ಕೆ ಇವರು ಹತ್ತಾರು ಟ್ರಸ್ಟ್‌ಗಳನ್ನು ಹುಟ್ಟು ಹಾಕಿಕೊಂಡಿದ್ದಾರೆಂದು ಯಾರು ಬೇಕಾದರೂ ಊಹಿಸಬಹುದು. ಸರಕಾರ ಮಾಡುವ ಕೆಲಸಗಳನ್ನೇ ತಾವು ಮಾಡಿದ್ದೆಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಅಪಾರ ಪ್ರಮಾಣದಲ್ಲಿ ಲಪಟಾಯಿಸಿ, ಬೆವರಿಳಿಸದೆ, ಮೋಜಿನ ಜೀವನ ನಡೆಸುತ್ತಿರುವುದು ಒಂದಲ್ಲ, ನಾಲ್ಕಾರು ಉನ್ನತ ಮಟ್ಟದ ತನಿಖಾ ವರದಿಯಿಂದ ಬೆಳಕಿಗೆ ಬಂದಿದೆ. ಉಲ್ಲಾಸ ಕಾರಂತರು ಯಾವ ಪರಿಸರ ತಜ್ಞರೂ ಅಲ್ಲ. ಇವರ ತಂದೆ ಶಿವರಾಮ ಕಾರಂತರು, ನೀಲಗಿರಿ ಗಿಡಗಳನ್ನು ನೆಡುವುದರ ವಿರುದ್ಧ ಆಂದೋಲನ ನಡೆಸುತ್ತಿದ್ದಾಗ, ಮಗ ಉಲ್ಲಾಸ ಕಾರಂತ ಪಿರಿಯಾಪಟ್ಟಣದಲ್ಲಿ ಹೊಗೆಸೊಪ್ಪುಸಂಸ್ಕರಿಸಲು ಕಟ್ಟಿಗೆ ಒದಗಿಸಲು ನೀಲಗಿರಿ ವ್ಯವಸಾಯದಲ್ಲಿ ತೊಡಗಿದ್ದರೆಂದು ಹೇಳಲಾಗಿದೆ. ಈ ದಂಧೆ ಮಾಡುತ್ತಿದ್ದಂತೆ, ಸೂಕ್ಷ್ಮ ಬುದ್ಧಿಯ ಉಲ್ಲಾಸ ಕಾರಂತರಿಗೆ ಪರಿಸರವಾದಿಯಾಗುವುದು ಹೆಚ್ಚು ಲಾಭದಾಯಕರ ಎಂಬುದರ ಅರಿವು ಮೂಡಿರಬೇಕು. ತಕ್ಷಣ ಹೊಗೆ ಸೊಪ್ಪುಸಂಸ್ಕರಣೆ ಬಿಟ್ಟು ಹುಲಿ ತಜ್ಞರಾಗಿ ಅವತಾರವೆತ್ತಿ ಬಿಟ್ಟಂತೆ ಗೋಚರವಾಗುತ್ತದೆ. ಹೇಗೋ ನಾಗರಹೊಳೆ ವನ್ಯಧಾಮದಲ್ಲಿ ಹುಲಿಗಳನ್ನು ಲೆಕ್ಕ ಮಾಡಲು ಹುಲಿಗಳಿಗೆ ಅಪಾಯವಾಗಿದೆಯೆಂದೂ ಆಗಲೇ ಸಾಬೀತಾಗಿದ್ದ ರೇಡಿಯೋ ಕಾಲರಿಂಗ್ ಮಾಡುವುದಕ್ಕೆ ಪರವಾನಿಗೆ ಪಡೆದು ಹುಲಿಗಳ ರೇಡಿಯೋ ಕಾಲರಿಂಗ್ ದಂಧೆ ಶುರು ಹಚ್ಚಿಕೊಂಡರು. ರೇಡಿಯೋ ಕಾಲರಿಂಗ್ ಮಾಡುವುದರ ಬಗ್ಗೆ ಯಾವ ಪರಿಣತಿಯೂ ಇರಲಿಲ್ಲ. ಹೀಗಾಗಿ ರೇಡಿಯೋ ಕಾಲರಿಂಗ್‌ಸಾಗುತ್ತಿದ್ದಂತೆ ಹತ್ತಾರು ಹುಲಿಗಳು ಸತ್ತು ಬಿದ್ದವು. ಇದು ಬಹಿರಂಗವಾಗಿ ಪತ್ರಿಕೆಗಳು ಟೀಕಿಸಿದಾಗ ಎಚ್ಚೆತ್ತ ಅಧಿಕಾರಿಗಳು, ರೇಡಿಯೋ ಕಾಲರಿಂಗ್ ಮಾಡಲು ನೀಡಿದ್ದ ಅನುಮತಿಯನ್ನು ಹಿಂಪಡೆದುಕೊಳ್ಳಲಾಗಿ, ರೇಡಿಯೋ ಕಾಲರಿಂಗ್ ನಿಂತು ಬಾಕಿಯಿದ್ದ ಹುಲಿಗಳು ಉಳಿದುಕೊಂಡವು.

ಆದರೆ ಉಲ್ಲಾಸ ಕಾರಂತರು ಸುಮ್ಮನಾಗಲಿಲ್ಲ. ಆಗಲೇ ಹುಲಿಗಳಿಗೆ ಅಪಾಯಕಾರಿಯೆಂದು ಸಾಬೀತಾಗಿದ್ದರೂ, ರೇಡಿಯೋ ಕಾಲರಿಂಗ್ ನಡೆಸಲು ಮತ್ತೆ ಅನುಮತಿ ಪಡೆದು ಬಿಟ್ಟರು. ಅದರ ಬಗ್ಗೆ ಟೀಕೆಗಳು ಬಂದಾಗ ಅದನ್ನೂ ನಿಲ್ಲಿಸಲಾಯಿತು. ಅಷ್ಟರೊಳಗೆ ಉಲ್ಲಾಸ ಕಾರಂತರು ದೇಶದ ‘ಹುಲಿ ತಜ್ಞ’ ಎಂದು ಬಿರುದಾಂಕಿತರಾಗಿ ಬಿಟ್ಟಿದ್ದರು. ಒಂದು ಅನುಮತಿ ರದ್ದಾದರೆ, ಇನ್ನೊಂದು, ಒಬ್ಬರ ಹೆಸರಿನಲ್ಲಿದ್ದದ್ದು, ರದ್ದಾದರೆ, ಇನ್ನೊಬ್ಬರ ಹೆಸರಿನಲ್ಲಿ ಅನುಮತಿ ಪಡೆಯುತ್ತಾ, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ತಮ್ಮ ಅಕ್ರಮ ದಂಧೆಯನ್ನು ಮುಂದುವರಿಸುತ್ತಲೇ ಬಂದದ್ದರ ಬಗ್ಗೆ ತನಿಖಾ ವರದಿಗಳು ಬೆಳಕು ಚೆಲ್ಲುತ್ತಾ ಬಂದಿವೆ. ಉಲ್ಲಾಸ ಕಾರಂತ ನಾಗರಹೊಳೆ ವನ್ಯಧಾಮದಲ್ಲಿ ರೇಡಿಯೋ ಕಾಲರಿಂಗ್ ದಂಧೆ ನಡೆಸುತ್ತಿದ್ದಾಗ, ಇವರಿಗೆ ಕೈಜೋಡಿಸಿದವರು ಕೆ.ಎಂ. ಚಿಣ್ಣಪ್ಪಎಂಬ ನಾಗರಹೊಳೆಯ ಅಂದಿನ ವಲಯ ಅರಣ್ಯಾಧಿಕಾರಿ. ಕೆ.ಎಂ. ಚಿಣ್ಣಪ್ಪ, ನಂತರ ಸರಕಾರಿ ಹುದ್ದೆಗೆ ರಾಜೀನಾಮೆ ನೀಡಿ ಉಲ್ಲಾಸ ಕಾರಂತರ ತಂಡದಲ್ಲಿ ಸೇರಿಕೊಂಡರು.

Writer - ಎ. ಕೆ. ಸುಬ್ಬಯ್ಯ

contributor

Editor - ಎ. ಕೆ. ಸುಬ್ಬಯ್ಯ

contributor

Similar News

ಜಗದಗಲ
ಜಗ ದಗಲ