ದೇವರ ಸನ್ನಿಧಿಯಲ್ಲಿ ಲೆನಿನ್

Update: 2018-12-11 11:48 GMT

ಅಲ್ಲಾಮಾ ಸರ್ ಮುಹಮ್ಮದ್ ಇಕ್ಬಾಲ್. ಅನುವಾದ: ಎ.ಹಾಜಿರಾ ಪುತ್ತಿಗೆ

ನಿನ್ನ ನಿದರ್ಶನಗಳು ಜಗದಲೆಲ್ಲ ಎಲ್ಲ ಜೀವಗಳಲ್ಲೂ ಮೆರೆಯುತ್ತಿವೆ,

ನಿನ್ನ ಅಸ್ತಿತ್ವವು ಅನಂತವಾಗಿದೆ ಎಂಬುದೇ ಪರಮ ಸತ್ಯವು

ನಿನ್ನ ಅಸ್ತಿತ್ವ ಸತ್ಯವೋ ಅಲ್ಲವೋ ಎಂಬುದನ್ನು ಹೇಗೆ ತಾನೇ ಅರಿಯಲಿ ನಾನು?

ಕ್ಷಣ ಕ್ಷಣವೂ ಬದಲಾಗುತ್ತಲಿರುತ್ತವೆ ಬುದ್ಧಿಯ ವಿಚಾರಗಳು

ಗ್ರಹಗಳ ವೀಕ್ಷಕರಿರಲಿ, ಸಸ್ಯ ಶಾಸ್ತ್ರದ ಪ್ರವೀಣರಿರಲಿ,

ಪ್ರಕೃತಿಯ ಕಾಲಾತೀತ ಸಂಗೀತವನ್ನು ಬಲ್ಲವರಲ್ಲ

ಇಂದು ಕಣ್ತೆರೆದು ನೋಡಿದಾಗ ಮನವರಿಕೆಯಾಯಿತು,

ಮಂದಿರಗಳ ಕಟ್ಟಳೆಗಳೆಂದು ನಾನಂದು ಕೊಂಡಿದ್ದೆಲ್ಲವೂ ಸತ್ಯವಾಗಿತ್ತೆಂದು

ಹಗಲು -ಇರುಳುಗಳ ಸರಪಣಿಯಲ್ಲಿ ಸಿಕ್ಕ ದಾಸರು ನಾವು,

ನೀನಾದರೋ, ಸಕಲ ಕಾಲಗಳ ಮತ್ತು ಅಮಿತ ವೈಶಾಲ್ಯಗಳ ಸೃಷ್ಟಿಕರ್ತನು.

ನೀನು ಅನುಮತಿಸಿದರೆ ನಾನೊಂದು ಮಾತ ಕೇಳುವೆ,

ಮಹಾ ಜಾಣರ ಬರಹಗಳಿಂದ ಬಗೆಹರಿಯದ ಒಗಟದು

ಬಾನ ತಳದ ಶಿಬಿರದಲ್ಲಿ ನಾನಿದ್ದಷ್ಟು ಕಾಲ ಸದಾ ಮುಳ್ಳಂತೆ ಚುಚ್ಚುತ್ತಲೇ ಇದ್ದ ಒಗಟದು

ಮಾತಿನ ಧಾಟಿಯ ಮೇಲೆ ನಿಯಂತ್ರಣ ಉಳಿದಿರುವುದಿಲ್ಲ,

ಆತ್ಮದೊಳಗೆ ವಿಚಾರಗಳು ಭೋರ್ಗರೆಯತೊಡಗಿದಾಗ

ಯಾವ ಮಾನವನ ದೇವರು ನೀನು?

ನೀನೇನು, ಬಾನಿನಡಿ ಬದುಕುತ್ತಿರುವ ಮಾನವನ ದೇವರೇ?

ಪಶ್ಚಿಮದ ಬಿಳಿ ತೊಗಲಿನವರು ಪೌರ್ವಾತ್ಯರ ದೇವರಾಗಿ ಬಿಟ್ಟಿರುವರು,

ಹೊಳೆಯುವ ಲೋಹಗಳನ್ನೇ ಪಾಶ್ಚಿಮಾತ್ಯರು ದೇವರಾಗಿಸಿ ಬಿಟ್ಟಿರುವರು.

ಯುರೋಪಿನಲ್ಲಿ ವಿದ್ಯೆ ಮತ್ತು ಕಲೆಗಳ ಬೆಳಕು ಧಾರಾಳವಾಗಿದೆ,

ಆದರೆ ನಿಜವಾಗಿ ಅದು ಕತ್ತಲಲ್ಲಿ ಅಲೆಯುವ ಕಣ್ಣಿಲ್ಲದ ಪಶುವಿನಂತಾಗಿ ಬಿಟ್ಟಿದೆ.

ಕಲೆಯ ದೃಷ್ಟಿಯಿಂದಲೂ, ಗಾತ್ರದಲ್ಲೂ ವೈಭವದಲ್ಲೂ ಬ್ಯಾಂಕುಗಳ ಕಟ್ಟಡಗಳು ಇಗರ್ಜಿಗಳಿಗಿಂತ ತುಂಬಾ ಮುಂದಿವೆ,

ಮೇಲುನೋಟಕ್ಕಿದು ವ್ಯಾಪಾರ,ಆದರೆ ವಾಸ್ತವದಲ್ಲಿ ಜೂಜು ಮಾತ್ರ ಇಲ್ಲಿ ಒಬ್ಬನ ಲಾಭ (ಬಡ್ಡಿ )ಲಕ್ಷಾಂತರ ಮಂದಿಯ ಪಾಲಿಗೆ ಮರಣದ ಸಂದೇಶವಾಗಿರುತ್ತದೆ.

ಅವರ ವಿದ್ಯೆ ಇರಲಿ, ಜಾಣ್ಮೆ ಇರಲಿ, ಯೋಜನೆಗಳಿರಲಿ, ಸರಕಾರವಿರಲಿ,

ಅವರು ಸಮಾನತೆಯ ಉಪದೇಶ ನೀಡುತ್ತಿರುತ್ತಾರೆ ಮತ್ತು ಜನರ ರಕ್ತ ಹೀರುತ್ತಿರುತ್ತಾರೆ.

ನಿರುದ್ಯೋಗ, ನಗ್ನತೆ, ಮದ್ಯ ವ್ಯಸನ ಮತ್ತು ದಾರಿದ್ರ

ಬಿಳಿಯರ ನಾಗರಿಕತೆಯ ಯಶೋಗಾಥೆಗೆ ಇನ್ನು ಏನೇನನ್ನು ಸೇರಿಸೋಣ!

ದಿವ್ಯ ಮಾರ್ಗದರ್ಶನದಿಂದ ವಂಚಿತ ಜನಾಂಗವು ಎಷ್ಟು ಸಾಧಿಸಿದರೂ ಉಗಿ (ಬಂಡಿ)ಮತ್ತು ವಿದ್ಯುತ್ತಿನ ಮೇರೆಗಳನ್ನು ದಾಟಲಾರದು.

ಯಂತ್ರಗಳ ಆಧಿಪತ್ಯವು ಮನಸ್ಸುಗಳ ಪಾಲಿಗೆ ಮರಣವಾಗಿದೆ,

ಉಪಕರಣಗಳು ವಾತ್ಸಲ್ಯದ ಭಾವನೆಯನ್ನೇ ಹೊಸಕಿ ಹಾಕುತ್ತವೆ,

ಕೆಲವು ಲಕ್ಷಣಗಳು ಈಗಾಗಲೇ ತಲೆದೋರ ತೊಡಗಿವೆ,

ವಿಧಿಯ ತಜ್ಞನ ಕೈಯಲ್ಲಿ,ಯೋಜನೆಗಳ ಪ್ರವೀಣರು ಸೋಲುಂಡಂತಿದೆ

ಪಾನ ಶಾಲೆಯ ಅಡಿಪಾಯ ಅಲುಗಾಡಿದೆ,

ನಾಶವಾದ ನಾಡಿನ ಮುದಿ ತಲೆಗಳು ಚಿಂತಾ ಕ್ರಾಂತವಾಗಿವೆ.

ಸಂಜೆ ಹೊತ್ತು ಅವರ ಮುಖದಲ್ಲಿ ಕಾಣಿಸುವ ಕೆಂಬಣ್ಣವೆಲ್ಲ ಒಂದೋ ಅಲಂಕಾರ ದ್ರವದ ಫಲವಾಗಿದೆ,ಅಥವಾ ಮದಿರೆಯ ಪ್ರಭಾವವಾಗಿದೆ.

ನೀನು ಭಾರಿ ಶಕ್ತಿಶಾಲಿ ಮತ್ತು ನ್ಯಾಯಶೀಲನು ಹೌದು,

ಆದರೆ ನಿನ್ನ ಜಗದಲ್ಲಿ ಕಾರ್ಮಿಕರು ತೀರಾ ದುಸ್ಥಿತಿಯಲ್ಲಿ ನರಳುತ್ತಿದ್ದಾರೆ.

ಬಂಡವಾಳಶಾಹಿಯ ಹಡಗು ಎಂದು ಮುಳುಗಿ ಹೋದೀತು?

ನಿನ್ನ ಜಗತ್ತು ನಿನ್ನ ಅಂತಿಮ ನ್ಯಾಯಕ್ಕಾಗಿ ಕಾಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಗಾಂಧೀಜಿ