ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ

Update: 2018-12-29 08:58 GMT

ಭಾಗ -1

►► ಇಂದು ಕುವೆಂಪು ಜನ್ಮದಿನ

ಅಮೃತಪುತ್ರರಲ್ಲಿ ವಿಜ್ಞಾಪನೆ, ಮಿತ್ರರೇ, ನಿಮ್ಮ ಮುಂದೆ ನಿಂತು, ನನ್ನ ಕೆಲವು ಅಭಿಪ್ರಾಯಗಳನ್ನು ಪ್ರಕಾಶಪಡಿಸಲು ಅವಕಾಶ ಕಲ್ಪಿಸಿಕೊಟ್ಟುದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಮನಮುಟ್ಟಿ ವಂದಿಸುತ್ತೇನೆ.

ನನ್ನ ಅಭಿಪ್ರಾಯಗಳು ಕೆಲವರಿಗೆ ರುಚಿಸದಿರಬಹುದು, ಮತ್ತೆ ಕೆಲವರಿಗೆ ಕ್ರಾಂತಿಕಾರಿಗಳಾಗಿ ತೋರಬಹುದು. ಆದರೂ ನನ್ನಮನಸ್ಸಿನಲ್ಲಿ ಯಾರನ್ನಾದರೂ ನೋಯಿಸಬೇಕೆಂಬ ಇಚ್ಛೆ ಲವಲೇಶವೂ ಇಲ್ಲ. ಅಲ್ಲದೆ ನಾನು ಹೇಳಲಿರುವ ಅಭಿಪ್ರಾಯಗಳು ಅಲ್ಪಾಲೋಚನೆಗಳಿಂದಾಗಲಿ, ಉದ್ರೇಕದ ಬುದ್ಧಿಯಿಂದಾಗಲಿ, ಅನುದಾರತೆಯಿಂದಾಗಲಿ, ಪ್ರತಿಹಿಂಸಾಭಾವದಿಂದಾಗಲಿ ಬಂದವಲ್ಲ; ಬಹುಕಾಲದ ದೀರ್ಘಮಂಥನದಿಂದ, ಪ್ರಶಾಂತ ಧ್ಯಾನದಿಂದ, ಅನ್ಯಾಯಗಳನ್ನೂ, ಅವಿವೇಕಗಳನ್ನೂ ಅಜ್ಞಾನಜನ್ಯವಾದ ಕ್ರೂರ ವರ್ತನೆಗಳನ್ನೂ ಕಂಡಾಗ ಮೂಡಿದ ಸಾತ್ವಿಕ ಕ್ರೋಧದಿಂದ, ನಮ್ಮ ದೇಶ, ನಮ್ಮ ನಾಡು, ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಸ್ಥಿತಿಗತಿಗಳು ಉಚ್ಫ್ರಾಯವಾಗಬೇಕೆಂಬ ಹಂಬಲದಿಂದ ಮೂಡಿದುವಾಗಿವೆ. ಆದಕಾರಣ, ತಾಳ್ಮೆಯಿಂದ ಆಲಿಸಿ, ವಿವೇಕದಿಂದ ಭಾವಿಸಿ, ವಿಮರ್ಶಕ ಬುದ್ಧಿಯಿಂದ ಪರೀಕ್ಷಿಸಿ, ಒಪ್ಪಿಗೆಯಾದುದನ್ನು ಸ್ವೀಕರಿಸಿ, ತಪ್ಪುಗಳನ್ನು ತಿದ್ದಿಕೊಳ್ಳಬೇಕೆಂದು ವಿನಯದಿಂದ ಕೇಳಿಕೊಳ್ಳುತ್ತೇನೆ. ನಾನಿಲ್ಲಿ ಗುರುಸ್ಥಾನದಲ್ಲಿ ನಿಂತಿಲ್ಲ; ನೀವೂ ಶಿಷ್ಯಸ್ಥಾನದಲ್ಲಿ ಕುಳಿತಿಲ್ಲ. ನಾನು ಉಪದೇಶ ಮಾಡುತ್ತಿಲ್ಲ; ವಿಜ್ಞಾಪಿಸುತ್ತಿದ್ದೇನೆ. ನನ್ನಂತೆಯೇ ನಿಮ್ಮಲ್ಲಿ ಅನೇಕರು ಜಿಜ್ಞಾಸೆ ಮಾಡಿರಬಹುದು. ಹಾಗಿದ್ದರೆ ನಮ್ಮ ಅಭಿಪ್ರಾಯಗಳು ಘರ್ಷಿಸದೆ ಮೃದುವಾಗಿ ಹೊಂದಿಕೊಳ್ಳುತ್ತವೆ. ಜಿಜ್ಞಾಸೆ ಮಾಡದೆ ಇದ್ದವರಿಗೆ ಜಿಜ್ಞಾಸೆ ಮಾಡಲು ಭಾವಾವಕಾಶಗಳು ದೊರೆಯುತ್ತವೆ. ಆದ್ದರಿಂದ ಯಾರೊಬ್ಬರೂ ನನ್ನ ಮಾತುಗಳನ್ನು ಪಚನಮಾಡದೆ ನುಂಗದಿರಲಿ; ಮತಿಯ ಒರೆಗಲ್ಲಿಗೆ ಹಚ್ಚದೆ ಸ್ವೀಕರಿಸದಿರಲಿ; ಧೀರವಾಗಿ ವಿಮರ್ಶಿಸದೆ ಒಪ್ಪದಿರಲಿ; ಆದರೆ ಪಕ್ಷಪಾತವಿಲ್ಲದೆ ಕಿವಿಗೊಟ್ಟು ಮಾತ್ರ ಕೇಳಿ. ಯುವಕರು ‘ನಿರಂಕುಶಮತಿ’ಗಳಾಗಬೇಕು. ‘ನಿರಂಕುಶಮತಿ’ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮ ಪೂರ್ಣವಾದ ಬುದ್ಧಿ ಸ್ವಾತಂತ್ರವೇ ‘ನಿರಂಕುಶ ಮತಿ’.

ಮತಿ ಮಾನವನ ಸರ್ವೋತ್ಕೃಷ್ಟವಾದ ಆಯುಧ. ಮತಿಯೇ ಕತ್ತಲಲ್ಲಿ ದಾರಿ ತೋರುವ ರತ್ನದ ಕೈದೀವಿಗೆ. ಮತಿಯ ದೆಸೆಯಿಂದಲೇ, ಪ್ರಾಣಿಮಾತ್ರವಾಗುತ್ತಿದ್ದ ನರಜೀವಿ ಮನುಷ್ಯತ್ವಕ್ಕೆ ಏರಿದ್ದಾನೆ. ಮತಿಯ ಕೃಪಾಮಹಿಮೆಯಿಂದಲೇ ನಾವು ಮನುಷ್ಯತ್ವದಿಂದ ದೇವತ್ವಕ್ಕೆ ಏರಬೇಕಾಗಿದೆ. ಮತಿ ಮನುಷ್ಯತ್ವದ ಹಕ್ಕು. ಆದ್ದರಿಂದ, ಸಹೋದರರೇ, ಮತಿ ನಿಮ್ಮ ನೆಚ್ಚಿನ ರನ್ನ ದೀವಿಗೆಯಾಗಲಿ. ಸ್ವಲ್ಪವಾಗಿಯೋ ಹೆಚ್ಚಾಗಿಯೋ ಮತಿ ಮನುಷ್ಯರೆಲ್ಲರಲ್ಲಿಯೂ ಇರುತ್ತದೆ. ಆದರೆ ಈಗೇನಾಗಿದೆ ಅದರ ಗತಿ? ವೌಢ್ಯದಿಂದಲೂ ಮತಾಚಾರಗಳಿಂದಲೂ ಸಮಾಜ ಭೀತಿಯಿಂದಲೂ ರಾಜಭಯದಿಂದಲೂ ಸ್ವರ್ಗ, ನರಕ ದೇವಾನುದೇವತೆಗಳ ಮೋಹ ಮಾಯೆಗಳಿಂದಲೂ ಅದು ಸತ್ವರಹಿತವಾಗಿದೆ; ಕಾಂತಿಹೀನವಾಗಿದೆ. ಚಕ್ರವರ್ತಿಯಂತೆ ಸಿಂಹಾಸನದಲ್ಲಿ ಮಂಡಿಸಬೇಕಾದುದು ತೊತ್ತಾಗಿ ಕಾಲೊತ್ತಬೇಕಾಗಿದೆ. ಎಂದರೆ ಮತಿಗೆ ಅಂಕುಶಗಳು ಅತಿಯಾಗಿ ಹೋಗಿ ಜೀವವೇ ನಿಸ್ತೇಜವಾಗಿದೆ. ಯುವಕ ಮಿತ್ರರೇ, ಅಧೋಗತಿಗಿಳಿದಿರುವ ನಮ್ಮ ಮತಿಯನ್ನು ಮತ್ತೆ ಆಕಾಶಕ್ಕೆತ್ತಬೇಕು. ಮತಿಯನ್ನು ನಿಸ್ತೇಜನಗೈದಿರುವ ಕೆಲವು ಅಂಶಗಳನ್ನು ವಿವರಿಸುತ್ತೇನೆ. ಸಾವಧಾನದಿಂದ ಕೇಳಿ.

ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ. ಪರಮಶಾಂತಿಯೂ, ಪರಮಾನಂದವೂ ಆಗಿರುವ ಪರಮೇಶ್ವರನನ್ನು ಪಡೆಯಲೆಂದು ಜೀವ ಮಾಡುವ ಪ್ರಯತ್ನವೇ ಮತದ ನಿಜಾವಸ್ಥೆ. ಆದರೆ, ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟು ಕಟ್ಟಳೆಗಳ ಕಾಟವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು; ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ, ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರಬರಗೊಡಿಸುವುದು; ಹಾಗೆ ಬರಗೊಡಿಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು;-ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಉಪನಿಷತ್ತು, ಭಗವದ್ಗೀತೆ ಮತ್ತು ಮಹಾವಿಭೂತಿಗಳು ಸಾರಿದ ಮತ್ತು ಸಾರುತ್ತಿರುವ ಅಮೃತ ಸಂದೇಶ ಅರಣ್ಯರೋದನವಾಗಿದೆ. ಆದರೆ ಇನ್ನು ಹೆಚ್ಚು ಕಾಲ ಆ ಅಮೃತ ಸಂದೇಶಕ್ಕೆ ಕಿವುಡಾಗಿರಲಾರೆವು. ಹಾಗಿದ್ದರೆ ನಮಗೂ ನಮ್ಮ ಸಂಸ್ಕೃತಿಗೂ ಮರಣವೇ ಗತಿಯಾಗಿರುತ್ತದೆ. ಯುವಕರಾದವರು ಎಚ್ಚೆತ್ತುಕೊಂಡು ದೀರ್ಘದೃಷ್ಟಿಯಿಂದಲೂ ವಿಶಾಲ ಹೃದಯದಿಂದಲೂ ಸನಾತನವಾದರೂ ಚಿರನವೀನವಾದ ಆತ್ಮನ ಚಿರಂತನ: ದರ್ಶನ ವನ್ನು ಪಡೆದು ದೇಶವನ್ನೂ ಉದ್ಧಾರಮಾಡಿಕೊಳ್ಳಬೇಕಾಗಿದೆ.

ಸರ್ವಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದದು. ಆ ಗುರು, ಈ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮತಿ ಮೊದಲಾದುವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಈಶ್ವರನು ನಮ್ಮಲ್ಲಿಯೂ ಇದ್ದಾನೆ. ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುದ್ಧಿಯಲ್ಲಿಯೂ ಪ್ರಕಾಶಿಸುತ್ತವೆ. ಆ ಪ್ರಕಾಶವೇ ಮತಿ. ಮತಿಯನ್ನು ತಿರಸ್ಕರಿಸಿದರೆ ಈಶ್ವರನ ಜ್ಯೋತಿಯನ್ನು ತಿರಸ್ಕರಿಸಿದಂತಾಗುತ್ತದೆ. ಹಾಗೆ ಮಾಡುವವನೇ ನಿಜವಾಗಿ ನಾಸ್ತಿಕನು. ವೌಢ್ಯವೇ ಈಶ್ವರ ನಿಂದೆ. ಯಾವ ರೂಪದಲ್ಲಿಯೇ ಆಗಲಿ, ಯಾವ ವೇಷದಲ್ಲಿಯೇ ಆಗಲಿ, ತಿಳಿದೂ ತಿಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ. ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮಾಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ, ಯಾವ ಕಾಲದಲ್ಲಿಯೋ ಯಾವ ಸಮಾಜಕ್ಕಾಗಿಯೋ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ತಲೆದೂಗಿಸಬೇಡಿ. ಆಗಿನ ಮನು ಪವಿತ್ರನಾದರೆ ಈಗಿನ ಮಹಾತ್ಮಾ ಗಾಂಧಿ ಪವಿತ್ರರಲ್ಲವೇ? ನಂಬುಗೆ ಪುರಾತನವಾದ ಮಾತ್ರಕ್ಕೆ ಸತ್ಯವಾದುದೆಂದು ಭಾವಿಸಬೇಡಿ. ವಿಜ್ಞಾನ ಪ್ರಪಂಚದಲ್ಲಿ ಹೊಸದಾಗಿ ಕಂಡು ಹಿಡಿದ ಸತ್ಯಗಳು ಹಳೆಯ ಅರ್ಧಸತ್ಯಗಳಿಗಿಂತಲೂ ಮಾನ್ಯವಾಗುವುದಾದರೆ ಧರ್ಮ ಪ್ರಪಂಚದಲ್ಲೇಕೆ ಹಾಗಾಗಬಾರದು? ವೇದ ಅನಾದಿಯಾದರೆ ಆನಂತರವೂ ಆಗಿರುವುದಿಲ್ಲವೇ? ವೇದ ಪೂರೈಸಿದ ಗ್ರಂಥವಲ್ಲ; ವೇದದ ಕಟ್ಟಕಡೆಯ ಅಧ್ಯಾಯ ಅಂದಿಗೇ ಮುಗಿದಿಲ್ಲ. ಅದು ಇಂದಿಗೂ ನಾಳೆಗೂ ಮುಂದುವರಿಯುತ್ತವೆ. ಹಾಗೆಯೇ ಋಷಿಗಳೂ ಆಚಾರ್ಯರೂ ಅಂದಿಗೇ ಪೂರೈಸಿಲ್ಲ, ಕೊನೆಗೊಂಡಿಲ್ಲ; ಇಂದಿಗೂ ನಾಳೆಗೂ ಬರುತ್ತಲೇ ಇರುತ್ತಾರೆ. ಆದ್ದರಿಂದ ಹೊಸ ಋಷಿಗಳ ಹೊಸ ವೇದವಾಕ್ಯಗಳನ್ನು ಕಿವಿಗೊಟ್ಟು ಕೇಳಿ. ಸಂಕುಚಿತ ಬುದ್ಧಿಯನ್ನು ದೂರಮಾಡಿ. ಹೃದಯ ಜೀವನ ಹಳೆಯನೀರಿನ ಕೊಳಕು ಕೊಳವಾಗದಿರಲಿ; ಯಾವಾಗಲೂ ಹೊಸ ನೀರು ಬಂದು ಹರಿಯುತ್ತಿರುವ ಸ್ವಚ್ಛ ಸಲಿಲ ಸ್ರೋತವಾಗಿರಲಿ.

ಮಹನೀಯರೇ, ಕೆಲವು ಉದಾಹರಣೆಗಳನ್ನು ತೆಗೆದುಕೊಂಡರೆ ನನ್ನ ಆಶಯ ನಿಮಗೆ ಇನ್ನೂ ಸ್ಪಷ್ಟವಾಗುತ್ತದೆ. ಅಸ್ಪುಟವಾಗಿ ಅನಿರ್ದಿಷ್ಟವಾಗಿ ನಿರಾಕಾರವಾಗಿ ತತ್ವ್ತ ಪ್ರತಿಪಾದನೆ ಮಾಡುವುದಕ್ಕಿಂತ ದೃಷ್ಟಾಂತಗಳನ್ನೂ ನಿದರ್ಶನಗಳನ್ನೂ ತೆಗೆದುಕೊಂಡು ಭಾವವನ್ನು ವಿವರಿಸುವುದು ಮೇಲು. ಮತಭ್ರಾಂತಿಯೂ ವೌಢ್ಯವೂ ವೈಜ್ಞಾನಿಕ ಪ್ರಗತಿಗೆ ಹೇಗೆ ಮಹಾಕಂಟಕಗಳಾದವು ಎಂಬುದಕ್ಕೆ ಪಾಶ್ಚಾತ್ಯ ದೇಶಗಳ ಕ್ರೈಸ್ತ ಧರ್ಮ ಚರಿತ್ರೆಯಲ್ಲಿ ಬೇಕಾದಷ್ಟು ನಿದರ್ಶನಗಳಿವೆ. ಅವುಗಳಲ್ಲಿ ಒಂದು ಸುಪ್ರಸಿದ್ಧ ವಿಜ್ಞಾನಿಯಾಗಿದ್ದ ಗೆಲಿಲಿಯೋ ಎಂಬಾತನನ್ನು ಕುರಿತದ್ದು. ಕ್ರೈಸ್ತರಿಗೆ ಬೈಬಲ್ ಪರಮ ಪ್ರಮಾಣವಾದ ಪವಿತ್ರ ಗ್ರಂಥ, ಹಿಂದೂಗಳಿಗೆ ವೇದಗಳಿರುವಂತೆ. ಆದ್ದರಿಂದ ಕ್ರೈಸ್ತ ಪುರೋಹಿತರೂ ಗುರುಗಳೂ ಭಕ್ತ ಜನರೂ ಬೈಬಲಿಗೆ ವ್ಯತಿರಿಕ್ತವಾದುವೆಲ್ಲ ಪಾಷಂಡ ಮತವೆಂದು ಸಾರಿ, ಅಂತಹ ದುರ್ಮತಕ್ಕೆ ಕಾರಣರಾದವರನ್ನು ಜೀವಸಹಿತವಾಗಿ ಸುಡುವುದೇ ಮೊದಲಾದ ಶಿಕ್ಷೆಗಳಿಗೆ ಗುರಿ ಮಾಡುತ್ತಿದ್ದರು. ಎಷ್ಟೋ ಜನಸಾತ್ವಿಕ ಜೀವಿಗಳೂ ಮೇಧಾವಿಗಳೂ ಆದ ಸತ್ಯಾರಾಧಕರು ಬೈಬಲ್‌ಗೂ ಮತ್ತು ಕ್ರೈಸ್ತ ಸಂಪ್ರದಾಯಕ್ಕೂ ಖಗೋಲ ಶಾಸ್ತ್ರ, ಜೀವಶಾಸ್ತ್ರ ಮತ್ತು ಭೌತಶಾಸ್ತ್ರಗಳ ಅಮೂಲ್ಯ ಸತ್ಯಗಳನ್ನು ಕಂಡುಹಿಡಿದು ಹೇಳಿದುದರ ಫಲವಾಗಿ ಆ ಪುರೋಹಿತರ ಕ್ರೋಧಾಗ್ನ್ನಿಗೆ ಸಿಕ್ಕಿ ಭಸ್ಮೀಭೂತರಾಗಬೇಕಾಯಿತು. ಗೆಲಿಲಿಯೋ ಎಂಬಾತನು ದೂರದರ್ಶಕ ಯಂತ್ರವನ್ನು ಕಂಡುಹಿಡಿದು, ಗ್ರಹ, ಚಂದ್ರ ತಾರೆಗಳನ್ನು ನೋಡಿ ಪರೀಕ್ಷಿಸಿದುದರ ಫಲರೂಪವಾಗಿ ಭೂಮಿ ಇತರ ಗ್ರಹಗಳಂತೆ ಸೂರ್ಯನನ್ನು ಸುತ್ತುತ್ತದೆ ಎಂದು ಪ್ರಯೋಗಪೂರ್ವಕವಾಗಿ ಸಿದ್ಧಾಂತ ಮಾಡಿದನು. ಆದರೆ ಕ್ರೈಸ್ತ ಸಂಪ್ರದಾಯಕ್ಕನುಸಾರವಾಗಿ ಭೂಮಿ ಜಗತ್ತಿನ ಕೇಂದ್ರಸ್ಥಾನ; ಸೂರ್ಯ ನಕ್ಷತ್ರಗಳೆಲ್ಲ ಭೂಮಿಯ ಸುತ್ತ ಸುತ್ತುತ್ತವೆ. ಆ ಕಾರಣದಿಂದಲೇ ಕ್ರೈಸ್ತಗುರುಗಳು ಗೆಲಿಲಿಯೊವನ್ನು ಪಾಷಂಡಿಯೆಂದು ಸಾರಿ ವಿಚಾರಣೆಗೆ ಒಳಪಡಿಸಿದರು. ಮುಟ್ಟಾಳರೆಲ್ಲ ಸೇರಿ ಮೇಧಾವಿಯನ್ನು ಕುರಿತು ಹೀಗೆ ಹೇಳಿದರು. ‘‘ನಮ್ಮ ಪವಿತ್ರ ಧರ್ಮಶಾಸ್ತ್ರ ಭೂಮಿಯನ್ನು ವಿಶ್ವದ ಕೇಂದ್ರವೆಂದು ಹೇಳುತ್ತವೆ.. ಸೂರ್ಯ ಚಂದ್ರ ನಕ್ಷತ್ರಗಳೆಲ್ಲ ದೇವರು ತನ್ನ ಮಕ್ಕಳಾದ ಮನುಷ್ಯರ ಪ್ರಯೋಜನಕ್ಕಾಗಿ ಆಕಾಶದಲ್ಲಿಟ್ಟಿರುವ ಅಲಂಕಾರ ದೀಪಗಳು. ಅವು ಭೂಮಿಯ ಸುತ್ತ ಸುತ್ತುತ್ತವೆ. ಭೂಮಿ ತನಗಿಂತಲೂ ಬಹುಪಾಲು ದೊಡ್ಡದಾಗಿರುವ ಸೂರ್ಯನ ಸುತ್ತಲೂ ಸುತ್ತುವ ಅನೇಕ ಗ್ರಹಗಳಲ್ಲಿ ಒಂದು ಸಣ್ಣ ಯಃಕಶ್ಚಿತ್ ಗ್ರಹ ಮಾತ್ರವೆಂದು ಸಿದ್ಧಾಂತ ಮಾಡಿ ನಮ್ಮನ್ನು ಸೃಷ್ಟಿಸಿದ ಕರುಣಾಮಯನಾದ ಸೃಷ್ಟಿಕರ್ತನಿಗೂ ಆತನ ವಾಣಿಗೂ ಆತನ ಭಕ್ತರಿಗೂ ಅವಮಾನ ಮಾಡಿದ್ದೀಯ, ಅಲ್ಲದೆ ನೀನು ಹೇಳುವುದು ಬೈಬಲ್‌ಗೆ ವ್ಯತಿರಿಕ್ತವಾದುದರಿಂದ ಅದು ಸುಳ್ಳು. ನಿನ್ನ ಸಿದ್ಧಾಂತವನ್ನು ವಾಪಸು ತೆಗೆದುಕೊಂಡು ನಮ್ಮ ಪವಿತ್ರಮತ ಹೇಳುವ ಸಿದ್ಧಾಂತವನ್ನು ಒಪ್ಪಿಕೊಳ್ಳದಿದ್ದರೆ ಪವಿತ್ರ ಮತದ ಉದ್ಧಾರಕ್ಕಾಗಿಯೂ ಬೈಬಲ್‌ನ ಗೌರವಾರ್ಥವಾಗಿಯೂ ಪಾಷಂಡಿಗಳಿಗೆ ಭೀತಿ ಹುಟ್ಟಿಸುವ ಸಲುವಾಗಿಯೂ ಸೃಷ್ಟಿಕರ್ತನ ಮಹಿಮೆ ಪೂಜೆಗಳಿಗಾಗಿಯೂ ನಿನ್ನ ಆತ್ಮದ ಪ್ರಾಯಶ್ಚಿತ ಮತ್ತು ಮೋಕ್ಷಾರ್ಥವಾಗಿಯೂ ನಿನ್ನನ್ನು ಜೀವಸಹಿತವಾಗಿ ಸುಡುತ್ತೇವೆ! ಹೇಳು! ಸುಳ್ಳು ಸಿದ್ಧಾಂತವನ್ನು ವಾಪಸು ತೆಗೆದುಕೊಳ್ಳುತ್ತಿಯೋ? ಜೀವ ಸಹಿತವಾಗಿ ಸುಡಿಸಿಕೊಳ್ಳುತ್ತೀಯೊ?’’

ಗೆಲಿಲಿಯೋಗೆ ಚೆನ್ನಾಗಿ ಗೊತ್ತು, ತನ್ನ ಸಿದ್ಧಾಂತವೇ ಸರಿ ಎಂದು. ಆದರೆ ವಾಪಸು ತೆಗೆದುಕೊಳ್ಳದಿದ್ದರೆ, ಹಿಂದೆ ಕೆಲವರನ್ನು ಸುಟ್ಟ ಹಾಗೆ ತನ್ನನ್ನೂ ಸುಡುತ್ತಾರೆ ಎಂದೂ ಆತನಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ಆ ಮುಟ್ಠಾಳರ ತೃಪ್ತಿಗಾಗಿ ತನ್ನ ಸಿದ್ಧಾಂತವನ್ನು ವಾಪಸು ತೆಗೆದುಕೊಂಡು, ಅವರ ಸಿದ್ಧಾಂತವೇ ಸರಿಯೆಂದು ಒಪ್ಪಿ ಬಿಡುಗಡೆ ಪಡೆದನು. ಆದರೆ ಕೋರ್ಟ್‌ನಿಂದ ಹೊರಗೆ ಬರುವಾಗ ತನ್ನಷ್ಟಕ್ಕೆ ತಾನೇ ‘‘ನಾನು ನೋವಿಗೆ ಹೆದರಿ ವಾಪಸು ತೆಗೆದುಕೊಂಡರೇನಾಯಿತು? ಭೂಮಿ ಸೂರ್ಯನ ಸುತ್ತ ಸುತ್ತಿಯೇ ಸುತ್ತುತ್ತದೆ’’ ಎಂದುಕೊಂಡನಂತೆ. ಹೀಗೆ ಮತಿ ಹೀನವಾದ ಮತ ಜ್ಞಾನದ ಪ್ರಗತಿಗೆ ಅಡಚಣೆಯಾಗಿರುವುದಕ್ಕೆ ಸಾವಿರಾರು ನಿದರ್ಶನಗಳು ಹಿಂದೆಯೂ ಸಿಕ್ಕುತ್ತವೆ; ಇಂದೂ ದೊರೆಯುತ್ತವೆ.

ಕೆಲವು ತಿಂಗಳ ಹಿಂದೆ ಪತ್ರಿಕೆಯೊಂದರಲ್ಲಿ ಯಾರೋ ಒಬ್ಬರಿಗೆ ಯಾವುದೋ ದೇವತೆ ಯಾವುದೋ ತೋಟದಲ್ಲಿ ಕಾಣಿಸಿಕೊಂಡಂತೆಯೂ, ಆ ದೇವತೆ ‘‘ಎಲ್ಲರೂ ಇಂತಿಷ್ಟು ದಿನಗಳ ಒಳಗಾಗಿ ಉಗಾದಿ ಹಬ್ಬವನ್ನು ಮಾಡದಿದ್ದರೆ ಮನೆಮನೆಗೂ ಒಂದೊಂದು ಜೀವವನ್ನು ಅಪಹರಿಸುತ್ತೇನೆ’’ ಎಂದು ಹೇಳಿದ ಹಾಗೂ ಪ್ರಕಟವಾಗಿದ್ದಿತು. ಮಾಡಬೇಕಾದ ನೈವೇದ್ಯಗಳ ವಿವರವೂ ಪ್ರಮಾಣವೂ ಕೂಡ ಅಚ್ಚಾಗಿತ್ತು. ಅನೇಕರು ಹೆದರಿಯೇ ಹಬ್ಬ ಮಾಡಿಕೊಂಡು ತಿಂದರು. ಹಬ್ಬ ಮಾಡಿಕೊಂಡು ತಿಂದುದರಿಂದ ಅಪಾಯವೇನಿಲ್ಲ. ಆದರೆ ಮೂಢ ಭಾವಗಳ ಪ್ರಚಾರ ದುಷ್ಪರಿಣಾಮಕಾರಿಯಾದುದಲ್ಲವೇ? ಅದರಲ್ಲಿಯೂ ಹಳ್ಳಿಗಳಲ್ಲಿ ಪತ್ರಿಕೆಗಳೆಂದರೆ ವೇದಸಮವಾಗಿದೆ. ಪತ್ರಿಕೆಗಳಲ್ಲಿ ಬಂದಿದೆ ಎಂದರೆ ಏನನ್ನು ಬೇಕಾದರೂ ನಂಬುತ್ತಾರೆ. ವೇದ ಧರ್ಮಶಾಸ್ತ್ರಗಳಲ್ಲಿ ಹೇಳಿದೆ ಎಂದರೆ ಎಂತಹ ಕ್ರೂರ ಕರ್ಮವನ್ನಾದರೂ ಸರಿ ಎಂದು ನಂಬುವಂತೆ! ಅಚ್ಚಿನಲ್ಲಿ ಅವರಿಗಷ್ಟು ಗೌರವ; ನಮಗೆ ಸಂಸ್ಕೃತ ಶ್ಲೋಕಗಳಲ್ಲಿರುವಂತೆ. ದುಡ್ಡು ಇದ್ದರೆ ಸರಿ. ‘‘ಮೊಲಕ್ಕೆ ಮೂರು ಕೊಂಬುಗಳ ತುದಿಯಲ್ಲಿ ಕಣ್ಣುಗಳಿವೆ’’ ಎಂದು ಬೇಕಾದರೂ ಅಚ್ಚು ಮಾಡಬಹುದು ಎಂಬ ಸಂಗತಿ, ಪಾಪ, ಆ ಹಳ್ಳಿಗರಿಗೇನು ಗೊತ್ತು?

ಹಾಗೆಯೇ ಪರ್ಜನ್ಯಜಪ ಮಾಡಿ ಮಳೆ ಬರಿಸಿದರು ಎನ್ನುವ ವಿಷಯ. ಅದನ್ನು ಕುರಿತು ಎಷ್ಟು ಮಂದಿ ನಿಷ್ಪಕ್ಷಪಾತವಾಗಿ ಧೀರಮತಿಯಿಂದ ಆಲೋಚಿಸಿದ್ದಾರೆ? ಸಹರಾ ಮರುಭೂಮಿಗೆ ಪುರೋಹಿತರನ್ನು ಕಳುಹಿಸಿ ಪರ್ಜನ್ಯಜಪ ಮಾಡಿಸಿದರೆ ಮಳೆ ಬಂದು ಅದು ಫಲವತ್ತಾಗುತ್ತದೆಯೆ? ಆಗುತ್ತದೆ ಎಂದು ನಿರ್ಣಯವಾಗುವವರೆಗೆ ನಂಬುಗೆ ಕುರುಡಲ್ಲವೇ? ಹೃತ್ಪೂರ್ವಕವಾದ ಪ್ರಾರ್ಥನೆಯಿಂದ ಪ್ರಕೃತಿ ನಿಯಮಗಳು ಮನಕರಗುತ್ತವೆಯೆ? ಒಂದು ವೇಳೆ ಕರಗುವುದಾದರೂ ರೈತಾದಿ ಜನಗಳು ಮನೆಮನೆಯಲ್ಲಿಯೂ ಮೂರು ಹೊತ್ತೂ ‘‘ಭಗವಂತ, ಮಳೆಯನ್ನು ದಯಪಾಲಿಸು’’ ಎಂದು ಬೇಡುವ ಅರ್ತಧ್ವನಿಗಿಂತಲೂ ದುಡ್ಡು ಕೊಟ್ಟು ಮಾಡಿಸುವ ಜಪಕ್ಕೆ ಜಗಚ್ಛಕ್ತಿ ಹೆಚ್ಚಾಗಿ ಕೃಪೆದೋರುತ್ತದೆಯೇ? ಯುವಕರೆಲ್ಲರೂ ಇಂತಹ ಪ್ರಶ್ನೆಗಳನ್ನು ಧೀರವಾಗಿ ಕೇಳಿಕೊಳ್ಳಬೇಕು. ಧೀರವಾದ ಉತ್ತರಗಳನ್ನು ಕಂಡುಹಿಡಿದುಕೊಳ್ಳಬೇಕು.

ಯಾಕೆಂದರೆ ಇಂದು ಪರ್ಜನ್ಯಜಪ ಮಾಡಿ ಮಳೆ ಬರಿಸಿದವರು ನಾಳೆ ರಾಮಧ್ಯಾನ ಮಾಡಿ ಪ್ಲೇಗು ಓಡಿಸಲಾರರೇ ಎಂದು ಮೂಢರು ಆ ರೋಗಕ್ಕೆ ಬೇಕಾಗುವ ವೈದ್ಯ ಕಾರ್ಯಗಳನ್ನು ಮಾಡದೆ ನಾಶವಾಗಬಹುದು! ಅಂತಹ ವೌಢ್ಯದಿಂದ ನಾಶವಾಗುತ್ತಿರುವುದನ್ನು ನಾವು ಕಣ್ಣಾರೆ ಕಾಣಬಹುದು. ಉದ್ದೇಶ ಎಷ್ಟೇ ಶ್ಲಾಘ್ಯವಾಗಲಿ, ಅದು ತಿಳಿವಳಿಕೆಯಿಂದ ಕೂಡಿರದಿದ್ದರೆ ಅಪಾಯವಾಗುತ್ತದೆ. ಒಂದು ಪಟ್ಟಣದಲ್ಲಿ ಸಿಡುಬು ರೋಗ ತಲೆದೋರಿ ಎಲ್ಲೆಲ್ಲಿಯೂ ಜನರು ಸಾಯುತ್ತಿದ್ದರಂತೆ. ಆ ನಗರದ ದೊಡ್ಡ ಪಾದ್ರಿ ಸಿಡುಬಿನ ರೋಗವನ್ನು ಓಡಿಸುವುದಕ್ಕೆಂದು ಜನರನ್ನೆಲ್ಲ ಚರ್ಚ್‌ನಲ್ಲಿ ಒಟ್ಟುಗೂಡಿಸಿ ದೇವರ ಪ್ರಾರ್ಥನೆ ಮಾಡಿಸಿದನಂತೆ. ಆದರೆ ಆ ಗುಂಪಿನಲ್ಲಿ ಸಿಡುಬಿನ ಸೋಂಕು ತಗಲಿದವರು ಇದ್ದುದರಿಂದ, ಜನರು ‘‘ಸಿಡುಬಿನಿಂದ ಪಾರು ಮಾಡು’’ ಎಂದು ದೇವರನ್ನು ಬೇಡುತ್ತಿದ್ದಾಗಲೇ ಆ ಭಯಂಕರ ರೋಗ ನೆರೆದವರಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತಿತ್ತು. ಇಲ್ಲಿ ಪಾದ್ರಿಯ ಮತ್ತು ಜನರ ಉದ್ದೇಶ ಸದ್ಭಾವದಿಂದ ಕೂಡಿದ್ದರೂ ಸಿಡುಬಿನ ರೋಗದ ವಿಚಾದಲ್ಲಿದ್ದ ಅವರ ಅಜ್ಞಾನ ಆ ಸದುದ್ದೇಶವನ್ನೇ ಅದು ಭಯಂಕರ ವ್ಯಾಪಾರಕ್ಕೆ ಕಾರಣವಾಗುವಂತೆ ಮಾಡಿತು. ಅಂತಹ ಅನಾಹುತಗಳಿಂದ ಜನರನ್ನು ಪಾರು ಮಾಡಬೇಕಾದರೆ ಅವರ ಕೈಗೆ ಮತೀಯ ದೀವಿಗೆಯನ್ನು ಕೊಡಬೇಕು. ಅವರಲ್ಲಿ ಪರೀಕ್ಷಿಸುವ ಬುದ್ಧಿಯೂ ವಿಮರ್ಶಿಸುವ ಧೈರ್ಯವೂ ಉದ್ಭವಿಸುವಂತೆ ಮಾಡಬೇಕು. ‘‘ಅವಿದ್ಯಾಯಾ ಮಂತರೇ ವರ್ತಮಾನಾಃ ಸ್ವಯಂ ಧೀರಾಃ ಪಂಡಿತಂ ಮಂನ್ಯಮಾನಾಃ ದಂದ್ರಮ್ಯಮಾಣಾಃ ಪರಿಯಂತಿ ಮೂಢಾ ಅಂಧೇ ನೈವ ನೀಯಮಾನಾ ಯಥಾಂಧಾಃ॥ ಅವಿದ್ಯೆಯ ಮಧ್ಯೆ ಬಿದ್ದುಕೊಂಡಿದ್ದರೂ ತಾವು ಬುದ್ಧಿವಂತರೆಂದೂ ಪಂಡಿತರೆಂದೂ ಭ್ರಮಿಸಿ ಕುರುಡರಿಂದ ನಡೆಸಲ್ಪಡುವ ಕುರುಡರಂತೆ, ಅಜ್ಞಾನಿಗಳು ಕಷ್ಟಕ್ಕೀಡಾಗಿ ತೊಳಲುತ್ತಾರೆ’’ ಎಂದು ಹೇಳುವ ಉಪನಿಷತ್ತಿನ ಎಚ್ಚರಿಕೆಗೆ ಕಿವಿಗೊಡಬೇಕು.

ಹಾಗೆಯೇ ‘ದೇವಾಲಯ ಪ್ರವೇಶ’ದ ಪ್ರಶ್ನೆ-ಮುಂತಾದವುಗಳನ್ನು ಕೆಚ್ಚಿನಿಂದ ಮತಿಯ ಒರೆಗಲ್ಲಿಗೆ ಹಚ್ಚಿ ನೋಡಬೇಕು. ಮೊನ್ನೆ ಪತ್ರಿಕೆಗಳಲ್ಲಿ ನಾನು ಓದಿದೆ. ಒಬ್ಬರು ಕೃತವಿದ್ಯಾರಾದ ಗೌರವಸ್ಥರು ದೇವಾಲಯಕ್ಕೆ ಹೋಗಿ ಬಂದುದಕ್ಕೆ ಪ್ರತಿಯಾಗಿ ಸಂಪ್ರೋಕ್ಷಣೆಗೆ ಜುಲುಮಾನೆ ಕೊಡಬೇಕಾಗಿ ಬಂದಿತ್ತಂತೆ. ಕಾರಣ, ಅವರು ಅಸ್ಪಶ್ಯ ಜಾತಿಗೆ ಸೇರಿದವರಂತೆ. ಅವರಿಗಿಂತಲೂ ಮೂಢರೂ, ಕೊಳಕರೂ, ದುಷ್ಟರೂ, ರೋಗಿಗಳೂ, ದುರಾಚಾರಿಗಳೂ ಆದ ‘ಸ್ಪಶ್ಯ’ರೆಂದೆನಿಸಿಕೊಂಡವರು ಗುಡಿಯೊಳಗೆ ಹೋದರೆ ಮೈಲಿಗೆಯಾಗುವುದಿಲ್ಲವಂತೆ! ‘ಸ್ಪಶ್ಯ’ ಯುವಕರು ತಮ್ಮ ಸಹೋದರ ನಿಗಾದ ಅವಮಾನ ತಮ್ಮದೆಂದು ಭಾವಿಸಿ ದೇವಾಲಯಗಳಿಗೆ ಹೋಗುವುದನ್ನೇ ಬಿಟ್ಟು, ಹೊರಗೆ ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ ದರಿದ್ರ ನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯವನ್ನು ಮುರಿಯಬೇಕು. ಅಸ್ಪಶ್ಯ ಯುವಕರಾದವರಿಗೆ ನನ್ನದೊಂದು ಬಿನ್ನಹ. ನೀವು ಅವಮಾನಿಸಿಕೊಂಡ ದೇವಾಲಯಕ್ಕೆ ಹೋಗದಿದ್ದರೆ ಏನಾಗುತ್ತದೆ? ಗುಡಿಯ ಕಲ್ಲಿನಲ್ಲಿ ದೇವರಿದ್ದಾನೆ ಎಂಬ ಭ್ರಾಂತಿ ನಿಮಗೇಕೆ? ‘ಪ್ರಭುಲಿಂಗ ಲೀಲೆ’ಯಲ್ಲಿ ಸತ್ಯಸಾಕ್ಷಾತ್ಕಾರದ ಕಾರ್ಯವನ್ನು ಬಿಟ್ಟು ಕೀರ್ತಿ ಪೂಜಾ ಲಾಭದಾಸೆಗೆ ದೇವಸ್ಥಾನವನ್ನು ಕಟ್ಟಿಸುತ್ತಿದ್ದ ಸಿದ್ದರಾಮನನ್ನು ಕುರಿತು ಅಲ್ಲಮನು- ‘‘ಸಕಲ ಕಲ್ಲನ್ನು ಕಡಿದು, ಕಲ್ಲಿಗೆ ಶಿಖರ ದೇಗುಲವೆಂದು ಮಾಡಿಸಿ, ಮಕರಿಸುವರಿವರೊಡ್ಡರಲ್ಲದೆ ಸಿದ್ದರಲ್ಲ’’ ಎಂದಿದ್ದಾನೆ. ಒಡ್ಡತನದ ಕೆಲಸವನ್ನು ನಾವೇಕೆ ಮಾಡಬೇಕು! ಗುಡಿಯೊಳಗೆ ಹೋಗಿ ಮತದ ವೌಢ್ಯಕ್ಕೂ ಪುರೋಹಿತರ ಸುಲಿಗೆಗೂ ಒಳಗಾಗುವುದಕ್ಕಿಂತ ದೂರವಾಗಿದ್ದುಕೊಂಡು ಎದೆಯ ದೇಗುಲದಲ್ಲಿಯೇ ಈಶ್ವರನನ್ನು ಇನ್ನಷ್ಟು ಅತಿಶಯವಾದ ಭಾವ ಭಕ್ತಿಯಿಂದ ಪೂಜಿಸಬಾರದೆ? ಅಸ್ಪಶ್ಯರನ್ನು ದೇವಾಲಯಗಳಿಗೆ ಪ್ರವೇಶ ಮಾಡಲು ಬಿಡಬೇಕೆಂದು ಹೇಳುತ್ತಿರುವುದು ಉಚ್ಚ ವರ್ಗದ ಹಿಂದೂಗಳ ಪರಿಶುದ್ಧತೆಗಾಗಿ ಮತ್ತು ದೃಷ್ಟಿ ವೈಶಾಲ್ಯ ಸಾಧನೆಗಾಗಿ ಹೊರತು ಹರಿಜನರ ಮೋಕ್ಷಕ್ಕಾಗಿಯಲ್ಲ. ಹೊರಗಿನ ಸುಂದರ ಪ್ರಕೃತಿಮಯ ಜಗತ್ತೂ ಅಂತರಂಗದ ದಿವ್ಯಭಾವಗಳ ಪ್ರಪಂಚವೂ ಸರ್ವರಿಗೂ ಸುಲಭವಾದ ಮಹಾಪುರುಷರ ಕೃತಿಗಳಲ್ಲಿರುವ ಮಹದಾಲೋಚನೆಗಳೂ ನಮಗೆ ದೇವಸ್ಥಾನ, ಪೂಜೆ, ಗುರು, ಮಂತ್ರ, ಇವುಗಳೆಲ್ಲವೂ ಆಗಲಿ. ಪ್ರಯತ್ನಿಸುವವರಿಗೆಲ್ಲ ಆ ‘ದರ್ಶನ’ ಲಭಿಸುವುದರಲ್ಲಿ ಸಂದೇಹವಿಲ್ಲ. ಅದು ಸಿದ್ಧಿಸುವವರೆಗೂ ನಮಗಾಗಲಿ ನಮ್ಮ ದೇಶಕ್ಕಾಗಲೀ ಮೋಕ್ಷವಿಲ್ಲ, ಸುಖವಿಲ್ಲ, ಶಾಂತಿಯಿಲ್ಲ, ದಾಸ್ಯದಿಂದ ಬಿಡುಗಡ�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News