ಪೊಲೀಸ್ ಬಾತ್ಮಿದಾರರೆಂಬ ಶಂಕೆ: ದಾಂತೆವಾಡಾದ ಗ್ರಾಮಸ್ಥರನ್ನು ಹೊರದಬ್ಬುತ್ತಿರುವ ಮಾವೊವಾದಿಗಳು
ದಾಂತೆವಾಡಾ(ಛತ್ತೀಸ್ಗಡ),ಡಿ.29: ಪೊಲೀಸ್ ಬಾತ್ಮಿದಾರರೆಂಬ ಶಂಕೆಯಿಂದ ಮಾವೊವಾದಿಗಳು ದಾಂತೆವಾಡಾ ಜಿಲ್ಲಯಲ್ಲಿ ಡಝನ್ನಿಗೂ ಅಧಿಕ ಕುಟುಂಬಗಳನ್ನು ಅವರ ಗ್ರಾಮಗಳಿಂದ ಹೊರದಬ್ಬಿರುವ ದೂರುಗಳ ಹಿನ್ನೆಲೆಯಲ್ಲಿ ಶಿಬಿರಗಳನ್ನು ಸ್ಥಾಪಿಸಲು ಪೊಲೀಸರು ನಿರ್ಧರಿಸಿದ್ದಾರೆ.
ನಾನು ಪೊಲೀಸ್ ಬಾತ್ಮಿದಾರನೆಂದು ಆರೋಪಿಸಿದ ಮಾವೊವಾದಿಗಳು ನನ್ನ ಕುಟುಂಬವು ಅನಿವಾರ್ಯವಾಗಿ ಊರನ್ನು ತೊರೆಯುವಂತೆ ಮಾಡಿದ್ದಾರೆ. ನಮ್ಮ ಸೊತ್ತುಗಳನ್ನೆಲ್ಲ ಅಲ್ಲಿಯೇ ಬಿಟ್ಟು ನಮ್ಮ ಸಂಬಂಧಿಕರ ಸ್ಥಳಕ್ಕೆ ಹೋಗುವಂತಾಗಿದೆ ಎಂದು ಓರ್ವ ಸಂತ್ರಸ್ತ ಸುದ್ದಿಸಂಸ್ಥೆಗೆ ತಿಳಿಸಿದ.
ಮಾವೊವಾದಿಗಳು ಕಳೆದ ಮೂರು ವರ್ಷಗಳಿಂದ ಈತನನ್ನು ಗೃಹಬಂಧನದಲ್ಲಿರಿಸಿದ್ದರು. ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿಯನ್ನು ನೋಡಲೆಂದು ಈತ ಅಲ್ಲಿಂದ ಪರಾರಿಯಾಗಿದ್ದ. ಇದು ಗೊತ್ತಾದಾಗ ಈತನ ಇರುವಿಕೆಯ ಬಗ್ಗೆ ತಿಳಿದುಕೊಳ್ಳಲು ಮಾವೊವಾದಿಗಳು ತಂದೆ ಹಾಗೂ ಸೋದರನನ್ನು ಅಪಹರಿಸಿದ್ದರು.
ಕಳೆದ ಆರೆಂಟು ತಿಂಗಳುಗಳಿಂದ ನಾವು ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ನಡೆಸುತ್ತಿರುವುದರಿಂದ ನಕ್ಸಲರಿಗೆ ನೆಲೆಯಿಲ್ಲದಂತಾಗಿದೆ. ಹೀಗಾಗಿ ಅವರು ಗ್ರಾಮಸ್ಥರನ್ನು ಬೆದರಿಸಿ ಬಲವಂತದಿಂದ ಅವರು ಊರು ತೊರೆಯುವಂತೆ ಮಾಡುತ್ತಿದ್ದಾರೆ. ಜಾರಿಯಲ್ಲಿರುವ ಸರಕಾರಿ ಯೋಜನೆಗಳಡಿ ಸಂತ್ರಸ್ತರಿಗೆ ಪರಿಹಾರವನ್ನು ಕಲ್ಪಿಸಲಾಗುವುದು. ನಕ್ಸಲರ ಉಪಟಳವನ್ನು ತಡೆಯಲು ಪೊಲೀಸ್ ಶಿಬಿರಗಳನ್ನು ಸ್ಥಾಪಿಸಲು ಮತ್ತು ಪ್ರದೇಶದಲ್ಲಿ ಶಾಂತಿಯನ್ನು ಮರಳಿಸಲು ನಾವು ಯೋಜಿಸಿದ್ದೇವೆ ಎಂದು ದಾಂತೆವಾಡಾ ಎಸ್ಪಿ ಅಭಿಷೇಕ ಪಲ್ಲವ್ ಸುದ್ದಿಸಂಸ್ಥೆಗೆ ತಿಳಿಸಿದರು.