ಹೊಸ ವರ್ಷ ತಂದೀತೇ ಹರ್ಷ?

Update: 2018-12-31 18:40 GMT

2018 ಹೋಗಿ 2019 ಬಂದಾಯಿತು. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮ ಹಲವು ಕಡೆಗಳಲ್ಲಿ ಕಾಣುತ್ತಿದೆ. ಆದರೆ ನಿಜವಾಗಿಯೂ ಜನಸಾಮಾನ್ಯರು ಸಂಭ್ರಮ ಪಡುವಂತಹ ವಾತಾವರಣವಿದೆಯೇ ಎಂದರೆ ಇಲ್ಲ ಎನ್ನುವುದೇ ಬಹುತೇಕರ ಉತ್ತರವಾಗಿರುತ್ತದೆ. ಜಾಗತೀಕರಣದ ನಂತರದ ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ಜಗತ್ತು ಹಾದು ಹೋಗುತ್ತಿದೆ. ಭಾರತವು ಹಿಂದೆಂದೂ ಕಾಣದ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರ ಹಿಂದೆಂದೂ ಕಾಣದ ಕುಸಿತ ಕಾಣುತ್ತಿದೆ. ತಲಾ ವರಮಾನವಂತೂ ಪಾತಾಳ ಕಾಣುತ್ತಿದೆ. ರಾಷ್ಟ್ರೀಯ ಉತ್ಪನ್ನಕ್ಕೂ ತಲಾ ವರಮಾನಕ್ಕೂ ಒಂದಕ್ಕೊಂದು ಸಂಬಂಧವನ್ನು ಕಲ್ಪಿಸಲು ಸಾಧ್ಯವಿಲ್ಲದ ಸ್ಥಿತಿ ಮೊದಲಿನಿಂದಲೂ ಇದೆ. ರಾಷ್ಟ್ರೀಯ ಉತ್ಪನ್ನವೆಂದಾಗ ಭಾರೀ ಕೈಗಾರಿಕೋದ್ಯಮಿಗಳ ಉತ್ಪನ್ನಗಳನ್ನು ಸೇರಿಸಿ ಹೇಳುವುದು ಸಾಮಾನ್ಯ ವಿಚಾರ. ಬಹುಸಂಖ್ಯಾತ ಜನಸಾಮಾನ್ಯರ ತಲಾ ಉತ್ಪನ್ನ ಹತಾಶ ಸ್ಥಿತಿಯಲ್ಲಿರುವುದನ್ನು ಗಮನಕ್ಕೆ ಬಾರದಂತೆ ರಾಷ್ಟ್ರೀಯ ಉತ್ಪನ್ನವನ್ನು ಬಿಂಬಿಸಲಾಗುತ್ತದೆ. ಅದೇ ವೇಳೆಯಲ್ಲಿ ತಲಾ ಆದಾಯದ ಬಗ್ಗೆ ಮಾಹಿತಿಗಳನ್ನು ಹೇಳದೆ ಜಾಣತನದಿಂದ ಬೆಳವಣಿಗೆ ಭಾರೀ ಮಟ್ಟದಲ್ಲಿದೆ ಎಂದೆಲ್ಲಾ ಬಿಂಬಿಸುತ್ತಾ ಬರುವುದು ಆಳುವ ಶಕ್ತಿಗಳ ಮಾಮೂಲಿ ವಿಚಾರ. ಆದರೆ ಆ ಲೆಕ್ಕಾಚಾರ ಕೂಡಾ ಕೆಳಮುಖ ಬೆಳವಣಿಗೆಯತ್ತ ಸಾಗುತ್ತಿರುವುದು ಈ ಸಂದರ್ಭದ ವಿಶೇಷವಾಗಿದೆ.

ಭಾರತದ ಕೈಗಾರಿಕಾ ಬೆಳವಣಿಗೆಯಾಗಲೀ, ಕೃಷಿಬೆಳವಣಿಗೆಯಾಗಲೀ ಮೇಲ್ಮುಖ ಚಲನೆ ಪಡೆಯುತ್ತಿಲ್ಲ. ಸೇವಾ ವಲಯವೂ ಕೂಡ ಮಂದಗತಿಯ ಚಲನೆಯಲ್ಲಿದೆ. ಅವುಗಳಲ್ಲಿ ಕೆಲವು ಕೆಳಮುಖ ಚಲನೆಯಲ್ಲಿವೆ. ಬ್ಯಾಂಕಿಂಗ್ ವಲಯ ಹಿಂದೆಂದೂ ಇಲ್ಲದ ಬಿಕ್ಕಟ್ಟಿನಲ್ಲಿದೆ. ಬೃಹತ್ ಕಾರ್ಪೊರೇಟ್‌ಗಳ ಬಳಿ ಶೇಖರಣೆಗೊಂಡಿರುವ ಎನ್‌ಪಿಎ (ಕಾರ್ಯನಿರ್ವಹಣೆಯಲ್ಲಿಲ್ಲದ ಆಸ್ತಿ, ಎಂದರೆ ವಾಪಸ್ ಬಾರದಿರುವ ಸಾಲದ ಮೊತ್ತ) ಸಮಸ್ಯೆ ಪರಿಹಾರ ಕಾಣದೇ ಬ್ಯಾಂಕುಗಳ ವಿಲೀನದಂತಹ ಕಾರ್ಯಗಳನ್ನು ಮಾಡಲಾಗುತ್ತಿದೆ. ನಿರುದ್ಯೋಗದ ಪ್ರಮಾಣ ಕಳೆದ ಇಪ್ಪತ್ತು ವರ್ಷಗಳಲ್ಲೇ ಅತ್ಯಧಿಕ ಮಟ್ಟದಲ್ಲಿದೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಅದು ಶೇ. 7ರ ಗಡಿಯನ್ನು ದಾಟಿದೆ ಎಂದು ಒಂದು ವರದಿ ಹೇಳುತ್ತದೆ. ವಾಸ್ತವದಲ್ಲಿ ಇದು ಇನ್ನೂ ಹೆಚ್ಚಿದೆ. ಆದರೆ ಸರಕಾರಿ ವರದಿ ಮಾತ್ರ ತೀರಾ ಭಿನ್ನವಾಗಿದೆ. ವರ್ಷದಲ್ಲಿ ಒಬ್ಬ ವ್ಯಕ್ತಿಗೆ ಕನಿಷ್ಠ 30 ದಿನಗಳ ಕೆಲಸ ದೊರೆತರೆ ಅವರನ್ನು ಉದ್ಯೋಗಿಯೆಂದು ಪರಿಗಣಿಸಿ ಸರಕಾರದ ಅಂಕಿ ಅಂಶಗಳನ್ನು ತಯಾರಿಸಲಾಗುತ್ತಿದೆ. ಆ ರೀತಿಯ ಲೆಕ್ಕದಲ್ಲಿ ಭಾರತದ ನಿರುದ್ಯೋಗದ ಮಟ್ಟ ಶೇ. 3.7ರಷ್ಟಿದೆ ಎಂದು ಸರಕಾರ ಹೇಳುತ್ತಿದೆ. ಈ ಅಂಕಿ ಅಂಶವನ್ನೇ ಕಳೆದ ಇಪ್ಪತ್ತು ವರ್ಷಗಳಲ್ಲೇ ಅತ್ಯಧಿಕ ಮಟ್ಟದ ನಿರುದ್ಯೋಗ ಪ್ರಮಾಣ ಎಂದು ಹೇಳುತ್ತಿರುವುದು. ಇದು ಎಂತಹ ಹಾಸ್ಯಾಸ್ಪದ ಲೆಕ್ಕಚಾರ ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ. ಕೇವಲ ಮೂವತ್ತು ದಿನಗಳು ಕೆಲಸ ಮಾಡಿದರೆ ವರ್ಷವಿಡೀ ಕಳೆಯಲು ಭಾರತದಲ್ಲಿ ಸಾಧ್ಯವೇ ಇಲ್ಲ ಎಂಬ ಸಾಮಾನ್ಯ ಗ್ರಹಿಕೆ ಬಹುತೇಕ ಜನರಿಗಿದೆ. ನೋಟು ರದ್ದತಿ ಮತ್ತು ಜಿಎಸ್‌ಟಿಯ ಹೊಡೆತಗಳಿಂದ ಸಣ್ಣ ಪುಟ್ಟ ಹಾಗೂ ಮಧ್ಯಮ ಗಾತ್ರದ ವ್ಯಾಪಾರಿ ಹಾಗೂ ಉತ್ಪಾದನಾ ಸಂಸ್ಥೆಗಳು ಇನ್ನೂ ಚೇತರಿಸಿಕೊಳ್ಳಲಾಗುತ್ತಿಲ್ಲ. ಮುಚ್ಚಿಹೋದವುಗಳ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ.

ಭಾರತ ಮತ್ತೊಂದು ಮಹಾಚುನಾವಣೆಗೆ ಹತ್ತಿರವಾಗುತ್ತಿದೆ. ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳು ಯಾವುದಾದರೂ ರೂಪದಲ್ಲಿ ರಾಜಕೀಯ ಅಧಿಕಾರ ಹಿಡಿಯಬೇಕೆಂದು ಇನ್ನಿಲ್ಲದ ಹವಣಿಕೆಗಳನ್ನು ನಡೆಸಲು ಶುರುಮಾಡಿ ಬಹಳ ದಿನಗಳಾದವು. ಮೋದಿಯ ಬಿಜೆಪಿಗೆ ಕಳೆದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಸ್ವಲ್ಪಇರಿಸುಮುರಿಸನ್ನು ಉಂಟುಮಾಡಿದೆ. ಮುಂದಿನ ಚುನಾವಣೆಯನ್ನು ಹೇಗೆಲ್ಲಾ ನಿಭಾಯಿಸಬೇಕು ಎಂಬ ಚಿಂತೆಯಲ್ಲಿ ಮೋದಿ, ಅಮಿತ್ ಶಾ ಪಟಾಲಂ ನಿರತವಾಗಿದೆ. ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ವಿಚಾರಗಳನ್ನೇ ಬಿಜೆಪಿಗಿಂತ ಸ್ವಲ್ಪವ್ಯತ್ಯಾಸಗಳೊಂದಿಗೆ ಮುಂದಿಡುವ ಮೂಲಕ ಅಧಿಕಾರ ವಶಪಡಿಸಿಕೊಳ್ಳಬೇಕೆಂಬ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿದೆ. ಈ ರೀತಿ ಮಾಡಿ ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಅದು ಪಡೆದ ಸ್ಥಾನಗಳಿಂದ ಮತ್ತಷ್ಟು ಸ್ಫೂರ್ತಿಗೊಂಡಿದೆ. ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಮುನ್ನೆಲೆಗೆ ಬಂದಿದ್ದಾರೆ. ಕಾಂಗ್ರೆಸ್ ಜೊತೆಗೆ ಸೇರಿ ಬಿಜೆಪಿಯನ್ನು ಹೊರಗಿಟ್ಟು ಅಧಿಕಾರದಲ್ಲಿ ಪಾಲು ಪಡೆಯುವ ಪ್ರಯತ್ನಗಳನ್ನು ಹಲವು ಪ್ರಾದೇಶಿಕ ಪಕ್ಷಗಳು ಸೇರಿ ಮಾಡುತ್ತಿವೆ. ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತ ಜನರ ಮೇಲಿನ ದಾಳಿ ವಿಪರೀತ ಹಂತ ಮುಟ್ಟಿದೆ. ಇದುವರೆಗೂ ಒಂದು ಮಟ್ಟಕ್ಕೆ ಇದ್ದ ಮಾನವಹಕ್ಕುಗಳು, ಮಾಧ್ಯಮ ಸ್ವಾತಂತ್ರ್ಯಗಳು ಆಪತ್ತಿಗೊಳಗಾಗಿ ಸಾಂವಿಧಾನಿಕ ಹಕ್ಕುಗಳು ಜನಸಾಮಾನ್ಯರಿಗೆ ಕಣ್ಣಿಗೂ ಕೂಡ ಬೀಳದಂತಹ ಸ್ಥಿತಿ ಬಂದಿದೆ.

ವಿಶ್ವದ ದೊಡ್ಡಣ್ಣನಂತೆ ಇದುವರೆಗೂ ವರ್ತಿಸುತ್ತಾ ಬಂದಿದ್ದ ಅಮೆರಿಕದ ಆಡಳಿತ ಸಂಪೂರ್ಣ ಸ್ತಬ್ಧವಾಗಿ ನಿಂತಿದೆ. ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಉದ್ದೇಶಿತ ಮೆಕ್ಸಿಕೋ ಗಡಿಗುಂಟ 5 ಬಿಲಿಯನ್ ಅಮೆರಿಕ ಡಾಲರ್ ವೆಚ್ಚದ ತಡೆಗೋಡೆ ನಿರ್ಮಿಸಲು ಅಮೆರಿಕದ ಸಂಸತ್ತು ಅನುಮತಿಸದೆ ಸರಕಾರದ ಆಯವ್ಯಯದ ಹಣಕಾಸನ್ನು ತಡೆಹಿಡಿದಿದೆ. ಈ ಬಿಕ್ಕಟ್ಟು ಹೊಸವರ್ಷವಾದರೂ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಇದು ಇಡೀ ಅಮೆರಿಕದ ಜನಸಾಮಾನ್ಯರನ್ನು ನೇರ ಹಾಗೂ ಪರೋಕ್ಷವಾಗಿ ಬಾಧಿಸಲಾರಂಭಿಸಿದೆ. ಇದರ ಜೊತೆಗೆ ಜಾಗತಿಕವಾಗಿ ಅಮೆರಿಕ ದೊಡ್ಡಣ್ಣನ ಕಾರ್ಯ ನಿರ್ವಹಿಸಬೇಕಾದರೆ ಅದರ ಅಗತ್ಯವಿರುವ ರಾಷ್ಟ್ರಗಳು ಅದರ ಖರ್ಚುವೆಚ್ಚಗಳನ್ನು ಭರಿಸಬೇಕು ಎಂದು ಟ್ರಂಪ್ ಹೊಸ ವರಸೆ ಮುಂದಿಟ್ಟಿದ್ದಾರೆ. ಅದರ ಪ್ರಕಾರ ಅಮೆರಿಕದ ಸೇನೆ ಯಾವುದೇ ರಾಷ್ಟ್ರದ ಸಹಾಯಕ್ಕೆ ಬರಬೇಕಾದರೆ ಅವರು ಕೇಳುವ ಹಣ ಪಾವತಿಸಬೇಕಂತೆ. ಭಾರೀ ಅಪಾಯಕಾರಿ ಎಂದು ಅಮೆರಿಕ ಬಿಂಬಿಸಿದ್ದ ಐಸಿಸ್ ಅನ್ನು ತಾನು ಸೋಲಿಸಿಯಾಯಿತು ಎಂದು ಟ್ರಂಪ್ ಘೋಷಿಸುವುದರೊಂದಿಗೆ ತನ್ನ ಸೇನೆಯನ್ನು ಸಿರಿಯಾ ಸುತ್ತಮುತ್ತಲ ಪ್ರದೇಶಗಳಿಂದ ವಾಪಸ್ ಕರೆಸಿಕೊಳ್ಳಲು ಶುರುಮಾಡಲಾಗಿದೆ. ಅಲ್ಲದೆ ಈಗ ಯೂರೋಪ್, ಫ್ರಾನ್ಸ್ ನ ಜನರು ಅಲ್ಲಿನ ಮ್ಯಾಕ್ರಾನ್ ಸರಕಾರದ ಜನವಿರೋಧಿ ನೀತಿಗಳಿಂದ ರೋಷಗೊಂಡು ಬೀದಿಕಾಳಗಕ್ಕೆ ಇಳಿದಿರುವಂತಹ ಸ್ಥಿತಿ ಅಮೆರಿಕದಲ್ಲೂ ಗೋಚರಿಸಲಾರಂಭಿಸಿದೆ. ಅಮೆರಿಕ ಇಂದು ವಿಪರೀತವಾಗಿರುವ ಸಾಲದ ಬಿಕ್ಕಟ್ಟಿನಲ್ಲಿದೆ.

ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಅದೆಲ್ಲದರ ಪರಿಣಾಮವಾಗಿ ಆರ್ಥಿಕ ನಿರ್ಬಂಧ, ಶಸ್ತ್ರಾಸ್ತ್ರ ನಿರ್ಬಂಧ ಮೊದಲಾದ ವ್ಯಾಪಾರಿ ಯುದ್ಧಗಳನ್ನು ಮೊದಲಿನಿಂದಲೂ ನಡೆಸುತ್ತಾ ಬರುತ್ತಿದೆ. ಇತ್ತೀಚೆಗೆ ಚೀನಾದ ಜೊತೆಗೆ ವ್ಯಾಪಾರಿ ಯುದ್ಧದಲ್ಲಿ ತೊಡಗಿದೆ. ಆದರೆ ಆ ಕ್ರಮಗಳು ಕೂಡ ಅಮೆರಿಕವನ್ನು ಬಿಕ್ಕಟ್ಟಿನಿಂದ ಹೊರತರಲು ಸಾಕಾಗುತ್ತಿಲ್ಲ. ಅಲ್ಲದೇ ಅಮೆರಿಕಕ್ಕೆ ಅತೀ ಹೆಚ್ಚು ಸಾಲ ನೀಡಿರುವುದು ಚೀನಾ ದೇಶವೇ. ಹಾಗಾಗಿ ಅಮೆರಿಕದ ಚೀನಾದೊಂದಿಗಿನ ವ್ಯಾಪಾರಿ ಯುದ್ಧ ಅಮೆರಿಕಕ್ಕೆ ಬಹಳ ಒಳ್ಳೆಯ ಫಲಿತಾಂಶಗಳನ್ನೇನೂ ನೀಡುವುದಿಲ್ಲ.

ಯುನೈಟೆಡ್ ಕಿಂಗ್‌ಡಂ ತನ್ನ ಬಿಕ್ಕಟ್ಟಿನ ಭಾಗವಾಗಿಯೇ ಐರೋಪ್ಯ ಒಕ್ಕೂಟದಿಂದ ಹೊರಹೋಗಲು ತೀರ್ಮಾನಿಸಿದ್ದು. ಆ ಪ್ರಕ್ರಿಯೆಯಿನ್ನೂ ಪೂರ್ತಿಯಾಗಿಲ್ಲ. ಅದರ ಭಾಗವಾಗಿಯೇ ಇತ್ತೀಚೆಗೆ ಜನಮತಗಣನೆ ನಡೆಸಿ ಬ್ರೆಕ್ಸಿಟ್ ಎಂದೇ ಕರೆಯಲ್ಪಡುವ ಈ ಹೊರಹೋಗುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಹೊರಟಿದೆ ಅಲ್ಲಿನ ತೆರೇಸಾ ಮೇ ಸರಕಾರ. ಜನಮತಗಣನೆಯಲ್ಲಿ ಐರೋಪ್ಯ ಒಕ್ಕೂಟದಿಂದ ಹೊರಹೋಗುವ ಪರವಾಗಿ ಜನರ ತೀರ್ಪನ್ನು ಪಡೆಯಲಾಯಿತು. ಆದರೆ ಹಾಗೆ ಹೊರಹೋದರೆ ಈಗಾಗಲೇ ತೀವ್ರವಾಗಿರುವ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಯುಕೆಯ ಅಭಿವೃದ್ಧ್ಧಿದರ ಕುಸಿತದತ್ತಲೇ ಸಾಗುತ್ತಿದೆ. ಬ್ರೆಕ್ಸಿಟ್ ಮಾಡಿದರೆ ಈಗ ಕೇವಲ 0.6ರಷ್ಟಿರುವ ಒಟ್ಟು ರಾಷ್ಟ್ರೀಯ ಉತ್ಪನ್ನದ ವೃದ್ಧಿದರ 0.2ಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಈಗಾಗಲೇ ನಿರುದ್ಯೋಗ ಹಾಗೂ ಹದಗೆಟ್ಟ ಬದುಕು ನಿರ್ವಹಣೆಯಿಂದಾಗಿ ಫ್ರಾನ್ಸಿನಲ್ಲಾಗುತ್ತಿರುವಂತೆ ಸರಕಾರಿ ವಿರೋಧಿ ಚಳವಳಿ ಯುನೈಟೆಡ್ ಕಿಂಗ್‌ಡಂನಲ್ಲೂ ಬೆಳೆಯುವ ಲಕ್ಷಣಗಳು ದಟ್ಟವಾಗುತ್ತಿದೆ.

ಜರ್ಮನಿ ಯೂರೋಪಿನ ಅತೀ ದೊಡ್ಡ ಹಾಗೂ ಜಗತ್ತಿನ ನಾಲ್ಕನೇ ಅತೀ ದೊಡ್ಡ ಆರ್ಥಿಕತೆಯಿರುವ ರಾಷ್ಟ್ರ. ಆದರೆ ಅದು ಆರ್ಥಿಕ ಬಿಕ್ಕಟ್ಟುಗಳಲ್ಲಿ ಸಿಲುಕಿ ಬಹಳ ಕಾಲವಾಗಿದೆ. ನಿರುದ್ಯೋಗ ಶೇ.9ನ್ನು ದಾಟಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನದ ವೃದ್ಧಿದರ 2017ರಲ್ಲಿ 2.4ರಷ್ಟಿತ್ತು. 2008ರಲ್ಲಿ ಆರಂಭವಾದ ಜಾಗತಿಕ ಆರ್ಥಿಕ ಬಿಕ್ಕಟ್ಟು ಜರ್ಮನಿಯನ್ನು ಈಗಲೂ ಬಾಧಿಸುತ್ತಿದೆ. ಫ್ರಾನ್ಸಿನ ‘ಹಳದಿ ಬನಿಯನ್’ ಪ್ರತಿಭಟನೆ ಯನ್ನು ಜರ್ಮನಿಯ ಕಾರ್ಮಿಕರು ಬೆಂಬಲಿಸಿದ್ದಾರೆ.

ಫ್ರಾನ್ಸಿನ ಹಳದಿ ಬನಿಯನ್ ಪ್ರತಿಭಟನೆಯ ಕಾವು ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಅದು ದಿನೇದಿನೇ ಹೆಚ್ಚುತ್ತಾ ಹೋಗುತ್ತಿದೆ. ಅಲ್ಲಿನ ಅಧ್ಯಕ್ಷ ಮ್ಯಾಕ್ರಾನ್ ಪೊಲೀಸರ ಮೂಲಕ ಪ್ರತಿಭಟನೆಯನ್ನು ಹೇಗಾದರೂ ಹತ್ತಿಕ್ಕಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಪ್ರತಿಭಟನಾಕಾರರ ಮೇಲೆ ಬಂದೂಕುಗಳ ಮೂಲಕ ದಾಳಿ ಮಾಡಲಾಗುತ್ತಿದೆ. ಈಗಾಗಲೇ ನೂರಾರು ಜನರು ಗಾಯಗೊಂಡಿದ್ದಾರೆ. ಕೆಲವು ಸಾವುಗಳು ನಡೆದಿವೆ. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ. ಮ್ಯಾಕ್ರಾನ್ ಘೋಷಿಸಿದ ಬೆಣ್ಣೆ ಸವರುವ ತಂತ್ರಗಳನ್ನು ಜನರು ಸ್ವೀಕರಿಸುತ್ತಿಲ್ಲ. ಈಗಾಗಲೇ ಫ್ರಾನ್ಸಿನಾದ್ಯಂತ ಪ್ರತಿಭಟನೆ ಕಾವು ಪಡೆದುಕೊಳ್ಳತೊಡಗಿದೆ. ಉದ್ಯೋಗ, ತೆರಿಗೆ ಕಡಿತ, ಬೆಲೆಯಿಳಿಕೆ, ಶ್ರೀಮಂತರ ಸಂಪತ್ತುಗಳ ಮೇಲೆ ತೆರಿಗೆ ಹಾಕಬೇಕೆಂಬ ಹಕ್ಕೊತ್ತಾಯಗಳೂ ಸೇರಿದಂತೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಕೈಬಿಟ್ಟ ಮ್ಯಾಕ್ರಾನ್ ರಾಜೀನಾಮೆ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ.

ಯೂರೋಪಿನಾದ್ಯಂತ ಇರುವ ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ಸಹಜವಾಗಿ ಫ್ರಾನ್ಸಿನಲ್ಲಿ ನಡೆಯುತ್ತಿರುವ ಜನರ ಪ್ರತಿಭಟನೆ ಹಾಗೂ ಬೀದಿಕಾಳಗಗಳನ್ನು ಬೆಂಬಲಿಸುವಂತೆ ಮಾಡುತ್ತಿರುವುದು ಸುಳ್ಳಲ್ಲ. ಫ್ರಾನ್ಸಿನ ‘ಹಳದಿ ಬನಿಯನ್’ ಪ್ರತಿಭಟನೆ ಪರಿಸರ ಮೊದಲಾದ ಬೇರೆ ಬೇರೆ ರೂಪಗಳಲ್ಲಿ ಯೂರೋಪಿನಾದ್ಯಂತ ಹರಡುವ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ಕಾರಣ ಕೆಲವೇ ಕಾರ್ಪೊರೇಟ್‌ಗಳು ಬಹುಸಂಖ್ಯಾತ ಜನರ ದುಡಿಮೆಗಳನ್ನು ನುಂಗಿ ನೀರು ಕುಡಿಯಲು ಆಯಾ ಸರಕಾರಗಳು ನೇರವಾಗಿ ಬೆಂಬಲಿಸುತ್ತಿರುವುದೇ ಆಗಿದೆ. ಶೇ. 1ರಷ್ಟಿರುವ ಕಾರ್ಪೊರೇಟ್‌ಗಳ ಕೈಯಲ್ಲಿ ಆಯಾ ರಾಷ್ಟ್ರದ ಶೇ. 50ಕ್ಕಿಂತಲೂ ಹೆಚ್ಚು ಸಂಪತ್ತು ಶೇಖರಣೆಯಾದರೆ ಪಾಡೇನಾಗಬೇಕು. ಈ ಏರಿಕೆ ಮತ್ತೂ ಮುಂದುವರಿಯುತ್ತಲೇ ಇದೆ. ಇದು ಭಾರತದಲ್ಲಿ ಶೇ. 58.4, ಅಮೆರಿಕದಲ್ಲಿ 42.1, ದಕ್ಷಿಣ ಆಫ್ರಿಕಾದಲ್ಲಿ 41.9, ರಶ್ಯಾದಲ್ಲಿ 74.5 ರಷ್ಟಿದೆ ಎಂದು ಜೂರಿಚ್ ಮೂಲದ ಹಣಕಾಸು ಸೇವೆಗಳ ಕಂಪೆನಿ ಕ್ರೆಡಿಟ್ ಸ್ಯೂಸ್ ಗ್ರೂಪ್ ಮಾಹಿತಿ ಹೊರಹಾಕಿದೆ. ಭಾರತದ ಅತೀ ಶ್ರೀಮಂತ ಶೇ. 10ರಷ್ಟು ಜನ 2016ರಲ್ಲಿ ಶೇ.80ರಷ್ಟು ಸಂಪತ್ತನ್ನು ತಮ್ಮ ಕೈಯಲ್ಲಿ ಕ್ರೋಡೀಕರಿಸಿಟ್ಟುಕೊಂಡಿದ್ದರು ಎಂದು ಆ ವರದಿ ಹೇಳಿದೆ. ಅದೇ ವೇಳೆಯಲ್ಲಿ ಕೆಳ ಆರ್ಥಿಕ ಮಟ್ಟದ ಶೇ. 50 ಜನರು ಕೇವಲ ಶೇ. 2.5ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಇದು ಮತ್ತೂ ಕುಸಿಯುತ್ತಲೇ ಸಾಗುತ್ತಿದೆ.

ಇಂತಹ ಅಗಾಧ ಮಟ್ಟದ ಅಸಮಾನತೆಯನ್ನು ಪೋಷಿಸಿ ಬೆಳೆಸುವ ಕೆಲಸಗಳನ್ನು ಜನರಿಂದ ಚುನಾಯಿಸಲ್ಪಟ್ಟವರೆಂದು ಹೇಳಿಕೊಳ್ಳುವ ಆಳುವ ಸರಕಾರಗಳು ಮಾಡತೊಡಗಿದರೆ; ದಮನಕ್ಕೊಳಗಾಗುವ ಬಹುಸಂಖ್ಯಾತ ಜನರಿಗಿರುವ ಸಹಜ ಆಯ್ಕೆ ಅಂತಹ ವ್ಯವಸ್ಥೆಯನ್ನು ಕಿತ್ತೊಗೆಯುವುದಲ್ಲದೇ ಬೇರೇನಿರಲು ಸಾಧ್ಯ.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News