ಧಾರವಾಡದಲ್ಲಿ ಕಂಡ ಮುಖಗಳು

Update: 2019-01-13 18:40 GMT

ಈ ಬಾರಿ ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ನಾನು ಹೋಗಿದ್ದು ಗೋಷ್ಠಿಯಲ್ಲಿ ಭಾಗವಹಿಸಲು ಅಥವಾ ಭಾಷಣ ಕೇಳಲು ಅಲ್ಲ. ಈ ಸಮ್ಮೇಳನದಲ್ಲಿ ಹಳೆಯ ಸ್ನೇಹಿತರು ಸಿಗುತ್ತಾರೆ. ಅವರೊಂದಿಗೆ ನೆನಪಿನ ಓಣಿಯಲ್ಲಿ ಸಂಚರಿಸಬೇಕೆಂದು ಹೋಗಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. 70-80ರ ದಶಕದ ಅನೇಕ ಸ್ನೇಹಿತರು ಸಿಕ್ಕರು. ಅವರೊಂದಿಗೆ ಹಿಂದಿನ ಹೋರಾಟದ ದಿನಗಳನ್ನು ಮೆಲುಕು ಹಾಕಿ, ಒಂದಿಷ್ಟು ಮನಸ್ಸು ಹಗುರ ಮಾಡಿಕೊಂಡಿದ್ದಾಯಿತು.


ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೆಂದು ಕರೆಯಲ್ಪಡುವ ಧಾರವಾಡವನ್ನು ವಿದ್ಯಾ ಕಾಶಿ ಎಂದೂ ಸಹ ಕರೆಯುತ್ತಾರೆ. ಈ ದೇಶದ ಹಿಂದೂಸ್ಥಾನಿ ಸಂಗೀತದ ತವರುಭೂಮಿ ಎಂಬ ಪ್ರತೀತಿಯನ್ನು ಅದು ಪಡೆದಿದೆ. ನಾಲ್ಕು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಜಿಲ್ಲೆಯಿದು. ಇಲ್ಲಿ ಎಲ್ಲಿ ನಿಂತು ಕಲ್ಲು ಎಸೆದರೂ ಸಾಹಿತಿಗಳ ಮನೆಗೆ ಬೀಳುವುದೆಂಬ ಮಾತು ಜನಜನಿತವಾಗಿದೆ. ಇಂಥ ಧಾರವಾಡದಲ್ಲಿ ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

ನಾನು ಜನಿಸಿದ ಅವಿಭಜಿತ ಬಿಜಾಪುರ ಜಿಲ್ಲೆಯನ್ನು ಬಿಟ್ಟರೆ ನಾನು ಅತ್ಯಂತ ಇಷ್ಟಪಡುವ ಕರುಳಬಳ್ಳಿಯ ಸಂಬಂಧ ಹೊಂದಿರುವ ಜಿಲ್ಲೆ ಧಾರವಾಡ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು ಕರ್ನಾಟಕದ ಏಕೀಕರಣಕ್ಕಿಂತ ಮುಂಚೆ ಧಾರವಾಡ, ಬಿಜಾಪುರ, ಬೆಳಗಾವಿ ಮತ್ತು ಕಾರವಾರ ಜಿಲ್ಲೆಗಳು ಮುಂಬೈ ಪ್ರಾಂತದಲ್ಲಿ ಇದ್ದವು. ಏಕೀಕರಣದ ನಂತರ ಈಗ ಕರ್ನಾಟಕದಲ್ಲಿ ಇವೆಲ್ಲ ಸೇರ್ಪಡೆಯಾಗಿವೆ. ನಾನು 70ರ ದಶಕದಲ್ಲಿ ಬಿಜಾಪುರ ಬಿಟ್ಟು ಬಂದ ನಂತರ ಪತ್ರಿಕೋದ್ಯಮ ಪ್ರವೇಶಿಸಿದ್ದು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕದಲ್ಲಿ. ಹುಬ್ಬಳ್ಳಿ-ಧಾರವಾಡ ನಡುವಿನ ಅಂತರ ಕೇವಲ 20 ಕಿ.ಮೀ. ಇದೆ. ನಿತ್ಯವೂ ಎರಡೂ ನಗರಗಳ ಮಧ್ಯೆ ಅಪಾರ ಸಂಖ್ಯೆಯಲ್ಲಿ ಜನರು ಓಡಾಡುತ್ತಾರೆ. ಆದರೂ ಎರಡೂ ನಗರಗಳ ಜನರು ಮಾನಸಿಕವಾಗಿ ಒಂದಾಗಿಲ್ಲ ಎಂಬ ಭಾವನೆ ಆಗಾಗ ಉಂಟಾಗುತ್ತದೆ. ಧಾರವಾಡ ವಿದ್ಯಾನಗರಿಯೆಂದು ಖ್ಯಾತಿ ಪಡೆದಿದೆ. ಹುಬ್ಬಳ್ಳಿ ವಾಣಿಜ್ಯ ನಗರಿಯೆಂದು ಹೆಸರಾಗಿದೆ. ಇದನ್ನು ಚೋಟಾ ಮುಂಬೈ ಎಂದು ಕರೆಯುತ್ತಾರೆ. ಈದ್ಗಾ ಮೈದಾನ ಕೋಮು ಗಲಭೆ ನಂತರ ಇಲ್ಲಿನ ವ್ಯಾಪಾರ-ವಹಿವಾಟಿಗೆ ಏಟು ಬಿದ್ದು ಪಕ್ಕದ ಹಾವೇರಿ ಮತ್ತು ಗದಗ ಜಿಲ್ಲೆಗಳಿಗೆ ವ್ಯಾಪಾರ ಕೇಂದ್ರಗಳು ಸ್ಥಳಾಂತರವಾಗಿವೆ. ಇಂಥ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿ ನಾಡಿನ ಹಿರಿಯ ಪತ್ರಿಕೆ ಸಂಯುಕ್ತ ಕರ್ನಾಟಕದ ಕಚೇರಿ ಇದೆ. 1974ರಲ್ಲಿ ಅಲ್ಲಿ ಕೆಲಸಕ್ಕೆ ಸೇರಿದ ನಾನು ಪಕ್ಕದ ಧಾರವಾಡಕ್ಕೆ ಹೋಗಿದ್ದು ತುಂಬಾ ಕಡಿಮೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಮಾತ್ರ ಹೋಗಿದ್ದೇನೆ. ಅಲ್ಲಿ ಬೇಂದ್ರೆ ಮತ್ತು ಶಂ.ಬಾ.ಜೋಶಿ ಅವರ ನಡುವೆ ನಡೆಯುತ್ತಿದ್ದ ಜಗಳವನ್ನು ನೋಡಿದ್ದೇನೆ. ಆಗ ಧಾರವಾಡದಲ್ಲಿ ಬೇಂದ್ರೆ, ಶಂ.ಬಾ. ಮಾತ್ರವಲ್ಲದೇ ಬಸವರಾಜ ಕಟ್ಟಿಮನಿ, ಎಸ್.ಎಸ್.ಮಾಳವಾಡ, ಮಲ್ಲಿಕಾರ್ಜುನ ಮನ್ಸೂರ್ ಮುಂತಾದ ದಿಗ್ಗಜರಿದ್ದರು. ಹುಬ್ಬಳ್ಳಿಯಲ್ಲಿ ಸಾಹಿತಿಗಳ ಸಂಖ್ಯೆ ಕಡಿಮೆ. ಹಚ್ಚೇವು ಕನ್ನಡದ ದೀಪ ಎಂದು ಹಾಡಿದ ಡಿ.ಎಸ್.ಕರ್ಕಿ ಮತ್ತು ಜನಪ್ರಿಯ ಕವಿ ಗಂಗಪ್ಪ ವಾಲಿ ಅವರು ಮಾತ್ರ ಹುಬ್ಬಳ್ಳಿಯಲ್ಲಿ ಇದ್ದರು. ಅವರನ್ನು ಬಿಟ್ಟರೆ, ಆ ಕಾಲದಲ್ಲೇ ಆಲದ ಮರದಂತೆ ಬೆಳೆದು ನಿಂತಿದ್ದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ, ಕಮ್ಯುನಿಸ್ಟ್ ನಾಯಕರಾಗಿದ್ದ ಎ.ಜೆ.ಮುಧೋಳ, ಕೇಂದ್ರ ಗೃಹ ಸಹಾಯಕ ಸಚಿವರಾಗಿದ್ದ ಎಫ್.ಎಚ್.ಮೊಹಸಿನ್, ಐ.ಜಿ.ಸನದಿ ಮುಂತಾದವರು ಹುಬ್ಬಳ್ಳಿಯಲ್ಲಿ ಇದ್ದರು. ಮಹಾದೇವ ಜವಳಿ ಗಿರಣಿಯಂತಹ ದೊಡ್ಡ ಮಿಲ್ ಹುಬ್ಬಳ್ಳಿಯಲ್ಲಿ ಇತ್ತು.
ಆಗಿನ ಹುಬ್ಬಳ್ಳಿ-ಧಾರವಾಡ ಈಗಿಲ್ಲ. ಕಾಲ ಪ್ರವಾಹಕ್ಕೆ ಸಿಕ್ಕು ಎರಡೂ ನಗರಗಳು ಬದಲಾಗಿವೆ. ಎರಡೂ ನಗರಗಳ ನಡುವೆ ನೂರಾರು ಬಡಾವಣೆಗಳು ನಿರ್ಮಾಣವಾಗಿ ಒಂದೇ ನಗರವಾಗುವ ಸನ್ನಿವೇಶ ನಿರ್ಮಾಣವಾಗಿದೆ. ಈ ಬಾರಿ ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ನಾನು ಹೋಗಿದ್ದು ಗೋಷ್ಠಿಯಲ್ಲಿ ಭಾಗವಹಿಸಲು ಅಥವಾ ಭಾಷಣ ಕೇಳಲು ಅಲ್ಲ. ಈ ಸಮ್ಮೇಳನದಲ್ಲಿ ಹಳೆಯ ಸ್ನೇಹಿತರು ಸಿಗುತ್ತಾರೆ. ಅವರೊಂದಿಗೆ ನೆನಪಿನ ಓಣಿಯಲ್ಲಿ ಸಂಚರಿಸಬೇಕೆಂದು ಹೋಗಿದ್ದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. 70-80ರ ದಶಕದ ಅನೇಕ ಸ್ನೇಹಿತರು ಸಿಕ್ಕರು. ಅವರೊಂದಿಗೆ ಹಿಂದಿನ ಹೋರಾಟದ ದಿನಗಳನ್ನು ಮೆಲುಕು ಹಾಕಿ, ಒಂದಿಷ್ಟು ಮನಸ್ಸು ಹಗುರ ಮಾಡಿಕೊಂಡಿದ್ದಾಯಿತು.
ಸಂಯುಕ್ತ ಕರ್ನಾಟಕದ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರ ಕರೆಗೆ ಓಗ್ಗೊಟ್ಟು 1974ರಲ್ಲಿ ಆ ಪತ್ರಿಕೆಗೆ ಸೇರಿದೆ. 1974ರಿಂದ 1985ರವರೆಗೆ ಒಂದು ದಶಕ ಕಾಲ ಹುಬ್ಬಳ್ಳಿಯಲ್ಲಿ ಇದ್ದೆ. ಕ್ರಾಂತಿಯ ಕನಸುಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡು ಹಗಲು ರಾತ್ರಿ ಓಡಾಡುತ್ತಿದ್ದೆ. ಆ ದಿನಗಳನ್ನು ನೆನಪಿಸಿಕೊಂಡರೆ, ರೋಮಾಂಚನ ಆಗುತ್ತದೆ. ಹಗಲು ಪಾಳಿ ಕೆಲಸ ಮಾಡಿ, ರಾತ್ರಿ ಹೊತ್ತು ಗೋಡೆ ಬರಹ ಮಾಡುವುದು. ರಾತ್ರಿ ಪಾಳಿ ಕೆಲಸ ಮಾಡಿದರೆ, ಹಗಲೆಲ್ಲ ಆ ಹೋರಾಟ-ಈ ಹೋರಾಟ ಎಂದು ಓಡಾಡುವುದು. ಆ ಕಾಲಘಟ್ಟವೇ ಹಾಗಿತ್ತು,

 
ಹುಬ್ಬಳ್ಳಿಯಲ್ಲಿದ್ದಾಗ, ಅಲ್ಲಿದ್ದ ಸ್ನೇಹಿತರ ಬಳಗ ದೊಡ್ಡದು. ಆಗ ನಮ್ಮಾಂದಿಗೆ ಇದ್ದ ಮುಧೋಳ, ಕಾದಂಬರಿಕಾರ ಕಟ್ಟಿಮನಿ ಮತ್ತು ಜಗದೀಶ ಮಂಗಳೂರುಮಠ ಈಗಿಲ್ಲ. ಆಗ ನಮ್ಮಿಂದಿಗೆ ಇರುತ್ತಿದ್ದ ಬಸವರಾಜ ಹೊರಟ್ಟಿ ಈಗ ಶಾಸಕರಾಗಿದ್ದಾರೆ. ಆಗ ನಿತ್ಯವೂ ಭೇಟಿಯಾಗುತ್ತಿದ್ದ ಅಶೋಕ ಶೆಟ್ಟರ, ಶಿವಯೋಗಿ ಪ್ಯಾಟಿಶೆಟ್ಟರ್, ಚಿದಾನಂದ ತೆಗ್ಗಿಹಳ್ಳಿ, ಗಂಗಾಧರ ಗಾಡದ, ಕೆ.ವಿ.ರಾಯಚೂರು ಮಾಸ್ತರ ಈಗಲೂ ನಮ್ಮಿಂದಿಗೆ ಇದ್ದಾರೆ. ಬದುಕಿನ ನೌಕೆ ಅವರನ್ನು ಎಲ್ಲೆಲ್ಲೊ ಕರೆದೊಯ್ದಿದೆ. ಅವರೆಲ್ಲ ಸಾಹಿತ್ಯ ಸಮ್ಮೇಳನ ಜೊತೆಗೆ ಸಿಕ್ಕಾಗ, ಹಳೆಯ ದಿನಗಳೆಲ್ಲ ನೆನಪಾದವು. ನಾವು ಕನಸು ಕಂಡಿದ್ದ ಸಮಾಜವಾದಿ ಕ್ರಾಂತಿಯ ವೈಫಲ್ಯದ ಬಗ್ಗೆಯೂ ಚರ್ಚಿಸಿದೆವು. 70ರ ದಶಕದಲ್ಲಿ ನಮ್ಮ ಜೊತೆಗಿದ್ದ ಕೆ.ವಿ.ರಾಯಚೂರು ಸರ್ ಸಿಕ್ಕಿದ್ದರು. ಆ ಕಾಲದಲ್ಲಿ ನಮಗೆ ಸೈದ್ಧಾಂತಿಕ ಮಾರ್ಗದರ್ಶನ ನೀಡುತ್ತಿದ್ದ ಅವರು ಈಗಲೂ ಆ ಬದ್ಧತೆ ಉಳಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರನ್ನು ಸಂಘಟಿಸಿ ಸಂಘ ಪರಿವಾರದಿಂದ ವಿಧಾನಸಭಾ ಕ್ಷೇತ್ರಗಳನ್ನು ಮುಕ್ತಗೊಳಿಸಿದ ಶ್ರೇಯಸ್ಸು ಅವರದ್ದು. 70ರ ದಶಕಕ್ಕಿಂತ ಮುಂಚೆ ಧಾರವಾಡ ಶಿಕ್ಷಕರ ಕ್ಷೇತ್ರದಿಂದ ನಿರಂತರವಾಗಿ ಜನಸಂಘದ (ಈಗಿನ ಬಿಜೆಪಿ) ವೈ.ಎಸ್.ಪಾಟೀಲ ಆರಿಸಿ ಬರುತ್ತಿದ್ದರು. ಆದರೆ ರಾಯಚೂರು ಅವರು ಶಿಕ್ಷಕರನ್ನು ಸಂಘಟಿಸಿ, ಸಂಘ ಪರಿವಾರ ಅಲ್ಲಿ ತಳ ಕೀಳುವಂತೆ ಮಾಡಿದ್ದರು. ಪ್ರಚಂಡ ಸಂಘಟನಾ ಸಾಮರ್ಥ್ಯದ ಅವರು ವಿಧಾನ ಪರಿಷತ್ ಚುನಾವಣೆ ಬಂದಾಗ, ತಾವು ಸ್ಪರ್ಧಿಸಲಿಲ್ಲ. ಬಸವರಾಜ ಹೊರಟ್ಟಿಯವರನ್ನು ನಿಲ್ಲಿಸಿ, ಆರಿಸಿ ತಂದರು. ಆಗಿನಿಂದ ಆ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಗೆಲ್ಲಲಿಲ್ಲ. ಇಂಥ ರಾಯಚೂರು ಸರ್ ನಮ್ಮ ಪುಸ್ತಕ ಮಳಿಗೆಗೆ ಬಂದು ಐದಾರು ತಾಸು ಕುಳಿತು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು. ಭಾರತಕ್ಕೆ ಎದುರಾಗಿರುವ ಪ್ಯಾಶಿಸಂ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಪುರಾತನ ಗೆಳೆಯರಾದ ಅಶೋಕ ಶೆಟ್ಟರ್, ಬಸವರಾಜ ಸೂಳಿಬಾವಿ, ಸಿದ್ದನಗೌಡ ಪಾಟೀಲ, ಶಿವಯೋಗಿ ಪ್ಯಾಟಿಶೆಟ್ಟರ, ಮನೋಜಕುಮಾರ ಗುದ್ದಿ ಹೀಗೆ ಹಳೆಯ ಮತ್ತು ಹೊಸ ಪೀಳಿಗೆಯ ಗೆಳೆಯರೆಲ್ಲ ಸಿಕ್ಕಿದ್ದರು. ಹಳೆಯ ನೆನಪುಗಳನ್ನು ಮೆಲುಕು ಹಾಕುವುದರಲ್ಲಿ ಸಿಗುವಂತಹ ಖುಷಿ ಇನ್ನೊಂದಿಲ್ಲ.

ಈ ಬಾರಿ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರ ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭ ಮೆರವಣಿಗೆ ವಿವಾದ ಉಂಟು ಮಾಡಿತು. ಕವಿಗೋಷ್ಠಿಯಲ್ಲಿ ಡಾ. ಎಚ್.ಎಸ್.ಅನುಪಮಾ ಮತ್ತು ದಾಕ್ಷಾಯಿಣಿ ಹುಡೇದ್ ಇದನ್ನು ಟೀಕಿಸಿ ಪದ್ಯವನ್ನು ಓದಿದರು. ದಾಕ್ಷಾಯಿಣಿ ಹುಡೇದ ಅವರು ಪ್ರವಾಸಿ ಭತ್ತೆಯನ್ನು ಕೂಡ ವಾಪಸು ಕೊಟ್ಟು ಬಂದರು.
ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಮೂರು ದಿನ ನಡೆದ ಸಮ್ಮೇಳನದಲ್ಲಿ ಲಕ್ಷಾಂತರ ಜನರು ಬಂದಿದ್ದರು. ಕನ್ನಡ ಹೆಸರಿನಲ್ಲಿ ನಡೆಯುವ ಸಮ್ಮೇಳನಕ್ಕೆ ಈ ರೀತಿ ಲಕ್ಷ ಲಕ್ಷ ಜನ ಜಾತ್ರೋಪಾದಿಯಲ್ಲಿ ಬರುವುದನ್ನು ಕಂಡರೆ ಒಮ್ಮೋಮ್ಮೆ ಖುಷಿಯಾಗುತ್ತದೆ. ಸಾಹಿತ್ಯ ಸಮ್ಮೇಳನಗಳು ಈ ರೀತಿ ಜಾತ್ರೆಯಂತೆಯೇ ನಡೆಯಬೇಕು. ಜನ ಬರಬೇಕು. ಭಾಷಣ ಕೇಳಬೇಕು, ಪುಸ್ತಕ ಕೊಳ್ಳಬೇಕು. ಆಗ ಮಾತ್ರ ಅದು ಅರ್ಥಪೂರ್ಣ ಅನ್ನಿಸುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News