ಹೇ ರಾಮ್! ಇಡೀ ದೇಶ ರೋದಿಸುತ್ತಿದ್ದರೆ ಇವರು ಸಿಹಿ ಹಂಚುತ್ತಿದ್ದರು!

Update: 2019-01-31 18:32 GMT

ಭಾಗ-2

ಬಾಪೂಜಿಯ ಈ ದುರಂತಮಯ ಹತ್ಯೆಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಕಗ್ಗತ್ತಲು ಕವಿಯಿತು. ಬಡವರ ಮನೆಗಳಲ್ಲಿ ಒಲೆಗಳು ಉರಿಯಲಿಲ್ಲ! ಶುಕ್ರವಾರ ಸಂಜೆಯಿಂದ ಶನಿವಾರ ಅಂತ್ಯಕ್ರಿಯೆ ಮುಗಿಯುವವರೆಗೂ ಇಡೀ ದೇಶ ಯಾರೂ ಕರೆಕೊಡದಿದ್ದರೂ ವ್ಯಾಪಾರ ವಹಿವಾಟು ಇನ್ನಿತರ ಕಾರ್ಯಗಳನ್ನೇನೂ ಮಾಡದೆ ಹರತಾಳವನ್ನು ಆಚರಿಸಲಾಯಿತು. ಈ ಭರಿಸಲಾರದ ದುಃಖವನ್ನು ಅನುಭವಿಸುತ್ತಿರುವಾಗ ಕೆಲವು ಕಡೆ ನಾಥೂರಾಮ್ ಗೋಡ್ಸೆ ಪಂಥಾನುಯಾಯಿಗಳು-ಸಂಘಪರಿವಾರ ಎಂದು ಕುಖ್ಯಾತವಾದ ಜನಸಮುದಾಯ-ಗಾಂಧಿ ಹತ್ಯೆಯಿಂದ ಖುಷಿಪಟ್ಟು ಸಿಹಿ ಹಂಚಿದ್ದನ್ನು ದಕ್ಷಿಣ ಭಾರತದಲ್ಲೂ ನಾವು ಕಣ್ಣಾರೆ ಕಂಡೆವು!!

ಆ ಇಬ್ಬರು ಯುವತಿಯರು ಕುಸಿದುಬಿದ್ದಿದ್ದ ಬಾಪೂ ದೇಹದ ಪಕ್ಕದಲ್ಲಿ ಕುಳಿತು ಆ ಮಹಾತ್ಮನ ದೇಹವನ್ನು ಅಪ್ಪಿಕೊಂಡು ಶೋಕಗ್ರಸ್ತರಾದರು. ನೆರೆದಿದ್ದವರ ಸಹಾಯದಿಂದ ಬಾಪೂ ದೇಹವನ್ನು ಅವರಿರುತ್ತಿದ್ದ ಬಿರ್ಲಾ ಭವನದ ಕೊಠಡಿಗೆ ಕೊಂಡೊಯ್ದು ಹಾಸಿಗೆ ಮೇಲೆ ಮಲಗಿಸಿದರು! ತಲೆಯ ಕಡೆ ‘ಹೇ ರಾಮ್’ ಎಂದೂ ಪಾದದ ಕಡೆ ‘ಓಂ’ ಎಂದೂ ಹೂವುಗಳಿಂದ ಚಿತ್ರಿಸಿದರು. ಗಾಂಧೀಜಿಗೆ ಅತ್ಯಂತ ಪ್ರಿಯವಾಗಿದ್ದ, ತಾಯಿಯಂತಿದ್ದ ‘ಗೀತೆ’ಯ ‘ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ’ ಎಂಬ ಸಾಲಿನಿಂದ ಪ್ರಾರಂಭವಾಗುವ ಶ್ಲೋಕಗಳನ್ನು ಸಣ್ಣದನಿಯಲ್ಲಿ ಪಠಿಸತೊಡಗಿದರು. ದೇಹದ ಸುತ್ತ ಹನ್ನೆರಡು ದೀಪಗಳನ್ನು ಹಚ್ಚಿ ಸುಗಂಧ ಪರಿಮಳದ ಊದಿನ ಕಡ್ಡಿಗಳನ್ನು ಹಚ್ಚಿದರು.
 ನೆಹರೂ ಕೊಠಡಿಯಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದರು. ಕೆನ್ನೆಗುಂಟ ಕಣ್ಣೀರು ಸುರಿಯುತ್ತಿತ್ತು. ಬಹುಶಃ ಅವರ ತಂದೆ ಮೋತಿಲಾಲ್ ನೆಹರೂ ಸತ್ತಾಗಲೂ ಹಾಗೆ ಸುರಿಸಿದರೋ ದಾಖಲೆಯಿಲ್ಲ. ತಂದೆ ಋಣಕ್ಕಿಂತಲೂ ಮಿಗಿಲಾಗಿ ಬಾಪೂಗೆ ಋಣಿಯಾಗಿದ್ದರು! ಇನ್ನೊಂದು ಕಡೆ ವಲ್ಲಭಭಾಯ್ ಗೋಡೆಗೆ ಆತುಕೊಂಡು ಶಿಲಾಮೂರ್ತಿಯಂತೆ ಕುಳಿತಿದ್ದರು. ಆಝಾದ್ ಮುಂತಾದ ಕೇಂದ್ರ ಮಂತ್ರಿ ಮಂಡಲದ ಸದಸ್ಯರೆಲ್ಲ ಬಂದರು. ಗವರ್ನರ್ ಜನರಲ್ ಲೂಮಿ ವೌಂಟ್‌ಬ್ಯಾಟನ್ ಬಂದರು. ವೌನವಾಗಿ ತಲೆಬಾಗಿ ನಿಂತರು. ಆಗ ತಾನೇ ಮಲಗಿ ನಿದ್ರಿಸುತ್ತಿರುವಂತೆ ಪ್ರಶಾಂತ ಮುಖಮುದ್ರೆಯಿಂದ ಚಿರನಿದ್ರೆಯಲ್ಲಿದ್ದ ಮಹಾತ್ಮನಿಗೆ ತಲೆ ಬಾಗಿದರು. ತಮ್ಮ ಅಜ್ಜಿ ರಾಣಿ ವಿಕ್ಟೋರಿಯಾ ಸ್ಥಾಪಿಸಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತದಿಂದ ಕಿತ್ತೊಗೆದ ಯುದ್ಧಕ್ಕೆ ಕಾರಣಕರ್ತರಾಗಿದ್ದ ಗಾಂಧಿಗೆ ಮಣಿದರು. ಕೊಠಡಿಯಲ್ಲಿ ಇದ್ದವರೊಬ್ಬರು, ಗುಲಾಬಿ ಹೂಗಳ ಪಕಳೆಯನ್ನು ಅವರ ಕೈಗೆ ಕೊಟ್ಟರು. ವೌಂಟ್ ಬ್ಯಾಟನ್ ಆ ಪುಷ್ಪಾಂಜಲಿಯನ್ನು ಗಾಂಧೀಜಿಯ ಮೃತದೇಹದ ಮೇಲೆ ಅರ್ಪಿಸಿ ತಮಗೆ ತಾವೇ ‘ಮಹಾತ್ಮಗಾಂಧಿ, ಬುದ್ಧ ಕ್ರೈಸ್ತರಂತೆ ಇತಿಹಾಸದಲ್ಲಿ ಶಾಶ್ವತವಾಗಿ ಅಜರಾಮರರಾಗುವರು’ ಎಂದರು.
ಕಣ್ಣೊರೆಸಿಕೊಳ್ಳುತ್ತಿದ್ದ ನೆಹರೂ ಮತ್ತು ಗರ ಬಡಿದವರಂತೆ ಮೂಕರಾಗಿದ್ದ ಪಟೇಲರ ಕಡೆ ನೋಡಿ, ಇಬ್ಬರನ್ನೂ ಆಲಂಗಿಸುವ ಭಂಗಿಯಲ್ಲಿ ಬಾಹುಗಳನ್ನು ಚಾಚಿ: ‘‘ನಾನು ಗಾಂಧೀಜಿಯನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದು ನಿಮ್ಮಿಬ್ಬರಿಗೂ ಗೊತ್ತು.. ಸರಿ, ನಾನೊಂದು ಮಾತು ಹೇಳಲು ಬಯಸುತ್ತೇನೆ. ಕೊನೆಯ ಬಾರಿ ನಾನವರೊಡನೆ ಮಾತನಾಡಿದಾಗ ಅವರ ಅತ್ಯಂತ ಶ್ರೇಷ್ಠ ಮಿತ್ರರೂ, ಅವರ ಬೆಂಬಲಿಗರೂ, ಪ್ರೀತಿಪಾತ್ರರೂ, ಆರಾಧಕರೂ ಆದ ನೀವಿಬ್ಬರೂ ಒಬ್ಬರಿಂದೊಬ್ಬರು ದೂರವಾಗುತ್ತಿರುವುದು ಆತಂಕವನ್ನುಂಟುಮಾಡಿದೆ ಎಂದರು. ‘ಈಗ ನನ್ನ ಮಾತಿಗಿಂತಲೂ ನಿಮ್ಮ ಮಾತನ್ನೇ ಹೆಚ್ಚು ಕೇಳುತ್ತಾರೆ (ಮನ್ನಿಸುತ್ತಾರೆ) ಅವರಿಬ್ಬರನ್ನೂ ಒಂದುಗೂಡಿಸಲು ಪ್ರಯತ್ನಿಸಿ’ ಎಂದು ಹೇಳಿದರು. ಇದೇ ಅವರ ಕೊನೆಯ ಬಯಕೆಯಾಗಿತ್ತು’’ ಈ ಎದೆ ತುಂಬಿ ಹೇಳಿದ ಮಾತನ್ನು ಕೇಳಿದ ಅವರಿಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡರು.
 ಹೊರಡುವ ಮುನ್ನ ನೆಹರೂ ಅವರತ್ತ ತಿರುಗಿ ‘‘ನೀವು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಬೇಕು. ರಾಷ್ಟ್ರ ಈಗ ನಿಮ್ಮ ಮಾರ್ಗದರ್ಶನವನ್ನು ನಿರೀಕ್ಷಿಸುತ್ತದೆ’’ ಎಂದರು.
‘‘ಇಲ್ಲ. ನನ್ನಿಂದಾಗದು. ನಾನು ತುಂಬ ವ್ಯಾಕುಲಗೊಂಡಿದ್ದೇನೆ. ನಾನು ಅದಕ್ಕೆ ಸಿದ್ಧನಿಲ್ಲ. ಏನು ಹೇಳಬೇಕೋ ನನಗೆ ತೋಚುತ್ತಿಲ್ಲ’’ ಎಂದರು ನೆಹರೂ.
‘‘ಚಿಂತಿಸಬೇಡಿ, ನೀವು ಏನು ಹೇಳಬೇಕೆಂಬುದನ್ನು ದೇವರೇ ಹೇಳಿಕೊಡುತ್ತಾನೆ.’’
ಆ ರಾತ್ರಿ ನೆಹರೂ ಆಕಾಶವಾಣಿಯ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು: ಆ ಭಾಷಣವನ್ನು ಈ ಲೇಖಕ ಕೇಳಿದ್ದ.
 ‘‘ನಮ್ಮ ಬಾಳಿನ ಬೆಳಕು ಆರಿಹೋಯಿತು. ಎಲ್ಲೆಲ್ಲಿಯೂ ಕಗ್ಗತ್ತಲೆ ಕವಿದಿದೆ. ನಮ್ಮ ನೆಚ್ಚಿನ ನಾಯಕ, ಬಾಪೂ ಎಂದು ಕರೆಯುತ್ತಿದ್ದ ಬೆಳಕು ನಮ್ಮ ರಾಷ್ಟ್ರಪಿತ ಹೋಗಿಬಿಟ್ಟರು. ಆರಿಹೋಯಿತು ಎಂದೆ. ಅದು ತಪ್ಪು. ಈ ದೇಶವನ್ನು ಬೆಳಗಿಸಿದ ಆ ಬೆಳಕು ಸಾಮಾನ್ಯವಾದ ಬೆಳಕಲ್ಲ. ಸಾವಿರಾರು ವರ್ಷಗಳು ಆ ಬೆಳಕು ಕಾಣಿಸುತ್ತಲೇ ಇರುತ್ತದೆ. ಜಗತ್ತು ಅದನ್ನು ನೋಡುತ್ತದೆ. ಆ ಬೆಳಕು ಅಸಂಖ್ಯಾತ ಹೃದಯಗಳಿಗೆ ತಂಪು, ಸಾಂತ್ವನ ನೀಡುತ್ತದೆ. ಆ ಬೆಳಕು ನಿತ್ಯ ಸತ್ಯಗಳನ್ನು ಪ್ರತಿನಿಧಿಸುತ್ತದೆ. ನಮಗೆ ಸತ್ಪಥವನ್ನು ನೆನಪು ಮಾಡುತ್ತದೆ; ತಪ್ಪಾಗುವುದನ್ನು ತಪ್ಪಿಸುತ್ತದೆ. ಈ ಪುರಾತನ ದೇಶವನ್ನು ಸ್ವಾತಂತ್ರದೆಡೆಗೆ ಕೊಂಡೊಯುತ್ತದೆ.’’
ನೆಹರೂ ಮಾತನಾಡಿದ ನಂತರ ಸರ್ದಾರ ಪಟೇಲ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು;
‘‘ಇಂದೀಗ ನನ್ನಪ್ರಿಯ ಸೋದರ ಜವಾಹರಲಾಲ್ ನಿಮ್ಮನ್ನು ಉದ್ದೇಶಿಸಿ ಮಾತನಾಡಿದರು. ನನ್ನ ಹೃದಯ ಹಿಂಡುತ್ತಿದೆ. ನಿಮಗೆ ನಾನು ಏನು ಹೇಳಲಿ? ನನ್ನ ನಾಲಿಗೆ ಸೇದಿಹೋಗಿದೆ. ಈ ದಿನ ಭಾರತಕ್ಕೆ ದುಃಖ, ಲಜ್ಜೆ ಮತ್ತು ಸಂಕಟದ ದಿನ. ಇಂದು ಸಂಜೆ 4 ಗಂಟೆಗೆ ಗಾಂಧೀಜಿಯ ಬಳಿ ಹೋಗಿ ಒಂದು ಗಂಟೆ ಇದ್ದೆ.
‘‘ನಾನು ಇನ್ನು ಮನೆ ಮುಟ್ಟಿರಲಿಲ್ಲ. ಯಾರೋ, ಗಾಂಧೀಜಿಯನ್ನು ಒಬ್ಬ ಹಿಂದೂ ಮೂರು ಬಾರಿ ಗುಂಡಿಕ್ಕಿ ಹತ್ಯೆ ಮಾಡಿದನೆಂದು ಸುದ್ದಿ ಕೊಟ್ಟರು. ಕೂಡಲೇ ನಾನು ಬಿರ್ಲಾ ಗೃಹಕ್ಕೆ ಹಿಂದಿರುಗಿ ಬಾಪು ಬಳಿಯಿದ್ದೆ. ಅವರ ಕಣ್ಣು ಮುಚ್ಚಿದ್ದವು. ಆದರೆ ಮುಖಮುದ್ರೆ ಎಂದಿನಂತೆ ಪ್ರಶಾಂತವಾಗಿತ್ತು. ಅವರ ಮುಖದಲ್ಲಿ ಕರುಣೆ, ಕ್ಷಮಾಗುಣದ ಲಕ್ಷಣಗಳಿದ್ದವು.’’
‘‘ಸ್ನೇಹಿತರೇ, ಇದು ಕೋಪಕ್ಕೆ ಸಮಯವಲ್ಲ ನಾವೆಲ್ಲರೂ ಹೃದಯ ಶೋಧ ಮಾಡಿಕೊಳ್ಳಬೇಕಾದ ಸಮಯ. ಈಗ ನಮ್ಮ ನ್ಯಾಯಸಮ್ಮತ ಸಹಜವಾದ ಕೋಪಕ್ಕೆ ದಾರಿ ಕೊಟ್ಟರೆ ನಮ್ಮ ಗೌರವಾನ್ವಿತ ಪ್ರಿಯ ನಾಯಕರ ಬೋಧನೆಗಳನ್ನು ಅವರು ತೀರಿದ ಸ್ವಲ್ಪ ಕಾಲದಲ್ಲೇ ಮರೆತುಬಿಟ್ಟಂತೆ ಆದೀತು. ಅವರು ಬದುಕಿದ್ದಾಗಲೇ ನಾವು ಅವರ ಹಿಂದೆ ಅರ್ಧಂಬರ್ಧ ಹಿಂಬಾಲಿಸುತ್ತಿದ್ದೆವು.
ಇತ್ತೀಚೆಗೆ ಭಾರತ ಭರಿಸಬೇಕಾದ ಭಾರ ಬಹು ಅಗಾಧವಾದದ್ದು. ಆ ಮಹಾತ್ಮನ ಬೆಂಬಲ ಮತ್ತು ಆಸರೆ ಇಲ್ಲದೆ ಹೋಗಿದ್ದರೆ ನಮ್ಮ ಬೆನ್ನು ಮುರಿದು ಹೋಗುತ್ತಿತ್ತು. ಆ ಆಸರೆ ಈಗ ಇಲ್ಲವಾಗಿದೆ. ಆದರೆ ಗಾಂಧೀಜಿ ನಮ್ಮ ಹೃದಯದಲ್ಲಿ ಚಿರಕಾಲ ಜೀವಿಸುವರು. ನಾಳೆ ಸಂಜೆ 4 ಗಂಟೆಗೆ ಅವರ ದೇಹ ಬೂದಿಯಾಗುವುದು. ಆದರೆ ಅವರ ಅವಿನಾಶಿ ಬೋಧನೆಗಳು ನಮ್ಮಲ್ಲಿ ಉಳಿಯುತ್ತವೆ.
ಅವರನ್ನು ಕೊಂದ ಹುಚ್ಚು ಯುವಕ ಅವರ ದಿವ್ಯ ಸಂದೇಶಗಳನ್ನು ಧ್ವಂಸ ಮಾಡಿದನೆಂದು ಭಾವಿಸಿದ್ದರೆ ಅದು ಶುದ್ಧ ತಪ್ಪು. ಬಹುಶಃ ಭಗವಂತ ಗಾಂಧೀಜಿ ತಮ್ಮ ಮರಣದ ಮೂಲಕ ತಮ್ಮ ದೈವೀ ಕಾರ್ಯವನ್ನು ಈಡೇರಿಸಬೇಕೆಂದು ಇಚ್ಛಿಸಿದ್ದನೋ ಏನೋ!’’
ಈ ಭಾಷಣಗಳಾದ ಮೇಲೆ ನಾಳೆ ನಡೆಯಬೇಕಾಗಿದ್ದ ಅಂತಿಮ ಯಾತ್ರೆಯ ವಿಚಾರವಾಗಿ ನೆಹರೂ ಪಟೇಲ್ ಗಮನಹರಿಸಿದರು. ಈ ಮಾತುಗಳನ್ನು ದೆಹಲಿ ಆಕಾಶವಾಣಿ ಕೇಂದ್ರದಿಂದ ಬಿತ್ತರಿಸುತ್ತಿದ್ದಾಗ ತಿರುಚಿಪಳ್ಳಿ ಆಕಾಶವಾಣಿ ಕೇಂದ್ರದ ನಿರ್ದೇಶಕರು ಗಾಂಧಿ ಅಸ್ತಗಂತರಾದ ಬಗ್ಗೆ ತಮ್ಮ ಸಂದೇಶವನ್ನು ಕೊಡಬೇಕೆಂದು ಪಾಂಡಿಚೇರಿ ಆಶ್ರಮದಲ್ಲಿ ಶ್ರೀ ಅರವಿಂದ ಮಹರ್ಷಿಗಳನ್ನು ಕೇಳಿದಾಗ ಅವರು:
‘‘ನಮ್ಮನ್ನು ಆವರಿಸಿರುವ ಈಗಿನ ಸನ್ನಿವೇಶದಲ್ಲಿ ನಾನು ಸುಮ್ಮನಿರುವುದು ಲೇಸೆಂದು ಬಗೆದಿದ್ದೇನೆ. ಯಾಕೆಂದರೆ ಇಂಥ ಘಟನೆಗಳು ಸಂಭವಿಸಿದಾಗ ಯಾವ ಮಾತುಗಳೂ ನೀರಸವಾಗಿ ಕಾಣುತ್ತವೆ. ಆದರೂ ನಾನು ಇಷ್ಟನ್ನು ಹೇಳಬಯಸುತ್ತೇನೆ. ನಮ್ಮನ್ನು ಐಕ್ಯತೆಗೆ ಅಲ್ಲದಿದ್ದರೂ ಸ್ವಾತಂತ್ರಕ್ಕೆ ಕರೆದೊಯ್ದ ಜ್ಯೋತಿ ಇನ್ನೂ ಉರಿಯುತ್ತಿದೆ. ಅದು ಜಯಶಾಲಿಯಾಗುವವರೆಗೂ ಬೆಳಗುತ್ತಲೇ ಇರುತ್ತದೆ.’’
ಈ ಸುದ್ದಿ ಕೇಳಿದ ರಮಣ ಮಹರ್ಷಿಗಳ ಕಣ್ಣಾಲಿಗಳು ತೇವಗೊಂಡವು.
ಬಾಪೂಜಿಯ ಈ ದುರಂತಮಯ ಹತ್ಯೆಯ ಸಂದರ್ಭದಲ್ಲಿ ಇಡೀ ದೇಶದಲ್ಲಿ ಕಗ್ಗತ್ತಲು ಕವಿಯಿತು. ಬಡವರ ಮನೆಗಳಲ್ಲಿ ಒಲೆಗಳು ಉರಿಯಲಿಲ್ಲ! ಶುಕ್ರವಾರ ಸಂಜೆಯಿಂದ ಶನಿವಾರ ಅಂತ್ಯಕ್ರಿಯೆ ಮುಗಿಯುವವರೆಗೂ ಇಡೀ ದೇಶ ಯಾರೂ ಕರೆಕೊಡದಿದ್ದರೂ ವ್ಯಾಪಾರ ವಹಿವಾಟು ಇನ್ನಿತರ ಕಾರ್ಯಗಳನ್ನೇನೂ ಮಾಡದೆ ಹರತಾಳವನ್ನು ಆಚರಿಸಲಾಯಿತು. ಈ ಭರಿಸಲಾರದ ದುಃಖವನ್ನು ಅನುಭವಿಸುತ್ತಿರುವಾಗ ಕೆಲವು ಕಡೆ ನಾಥೂರಾಮ್ ಗೋಡ್ಸೆ ಪಂಥಾನುಯಾಯಿಗಳು-ಸಂಘಪರಿವಾರ ಎಂದು ಕುಖ್ಯಾತವಾದ ಜನಸಮುದಾಯ-ಗಾಂಧಿ ಹತ್ಯೆಯಿಂದ ಖುಷಿಪಟ್ಟು ಸಿಹಿ ಹಂಚಿದ್ದನ್ನು ದಕ್ಷಿಣ ಭಾರತದಲ್ಲೂ ನಾವು ಕಣ್ಣಾರೆ ಕಂಡೆವು!!
ಪುಣೆ, ಕೊಲ್ಲಾಪುರ, ಸಾಂಗ್ಲಿ, ಮುಂಬೈ ಮುಂತಾದ ಕಡೆ ರೊಚ್ಚಿಗೆದ್ದ ಜನ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಕಾರ್ಯಾಲಯಗಳ ಮೇಲೆ ದಾಳಿ ನಡೆಸಿದ್ದೂ ಸುದ್ದಿ ಆಯಿತು. ಈ ದೇಶದಲ್ಲಿ ಬಾಪೂಜಿಯ ಕೊಲೆಯಿಂದ ದುಃಖತಪ್ತರಾಗಿ ಜನ ರೋದಿಸುತ್ತಿರುವಾಗ ವಿದೇಶದಿಂದ ಶೋಕ ಸಂದೇಶಗಳ ಮಹಾಪೂರವೇ ಹರಿದುಬಂದಿತು. ಜಗದ್ವಿಖ್ಯಾತ ವಿಜ್ಞಾನಿ ಐನ್‌ಸ್ಟೈನ್ ‘‘ರಕ್ತ ಮಾಂಸದಿಂದ ಕೂಡಿದ ಇಂಥ ಒಬ್ಬ ಮನುಷ್ಯ ಈ ಪೃಥ್ವಿಯ ಮೇಲೆ ನಡೆದಾಡಿದನೆಂಬುದನ್ನು ಮುಂಬರುವ ಪೀಳಿಗೆಗಳು ನಂಬುವುದು ಬಹು ವಿರಳ’’ ಎಂಬುದಾಗಿ ಹೇಳಿದರು.
ಗುರುದೇವ ರವೀಂದ್ರನಾಥ ಠಾಕೂರರು ಬಹು ವರ್ಷಗಳ ಹಿಂದೆ ಗಾಂಧೀಜಿಯ ಎಪ್ಪತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ: ‘‘ಗತಿಯಿಲ್ಲದ ಸಹಸ್ರಾರು ಜನರ ಗುಡಿಸಲಿನ ಬಾಗಿಲ ಮುಂದೆ ಗಾಂಧೀಜಿ ನಿಂತರು. ಅವರಂತೆ ಉಡುಗೆ ತೊಟ್ಟರು. ಅವರ ಭಾಷೆಯಲ್ಲಿ ಅವರಿಗೆ ಅರ್ಥವಾಗುವ ಮಾತಿನಲ್ಲಿ ಮಾತನಾಡಿಸಿದರು. ಅವರು ಸಜೀವ ಸತ್ಯವಾಗಿದ್ದರು. ಆದ್ದರಿಂದಲೇ ಈ ದೇಶದ ಜನ ಅವರನ್ನು ‘ಮಹಾತ್ಮ’ ಎಂದು ಕರೆದರು. ಸಮಸ್ತ ಭಾರತೀಯರೂ ತಮ್ಮ ರಕ್ತಮಾಂಸವೆಂದು ಅವರಂತೆ ಭಾವಿಸುವವರು ಬೇರೊಬ್ಬರಿಲ್ಲ’’ ಎಂದಿದ್ದರು.
ತಮ್ಮ ಚಕ್ರಾಧಿಪತ್ಯವನ್ನು ಕೊನೆಗೊಳಿಸಿದ ಗಾಂಧಿ ನಿಧನಕ್ಕೆ ಚಕ್ರವರ್ತಿ ಆರನೇ ಜಾರ್ಜ್, ಬ್ರಿಟಿಷ್ ಮುಖ್ಯಮಂತ್ರಿ ಕ್ಲೆಮೆಂಟ್ ಆಟ್ಲಿ ಗಾಂಧೀಜಿಯ ಪರಮ ಶತ್ರು ವಿನ್‌ಸ್ಟನ್ ಚರ್ಚಿಲ್, ಸರ್ ಸ್ಟಾರ್ಫಡ್ ಕ್ರಿಪ್ಸ್, ಕ್ಯಾಂಟರ್ ಬರಿ ಬಿಷಪ್ ಮುಂತಾದ ಸಹಸ್ರಾರು ಪ್ರಮುಖರು ಶೋಕ ಸಂತಾಪಕ ಸಂದೇಶಗಳನ್ನು ಕಳಿಸಿದರು. ವಾಷಿಂಗ್ಟನ್‌ನಿಂದ ಅಧ್ಯಕ್ಷ ಹ್ಯಾರಿ ಟ್ರೂಮನ್, ದಕ್ಷಿಣ ಆಫ್ರಿಕಾದಿಂದ ಫೀಲ್ಡ್ ಮಾರ್ಷಲ್ ಸ್ಮಟ್ಸ್ ಗಾಂಧೀಜಿಯನ್ನು ‘‘ನಮ್ಮ್‌ಡನಿದ್ದ ಒಬ್ಬ ಅಸಾಮಾನ್ಯ ಮನುಷ್ಯ ಕಾಣೆಯಾದರು’’ ಎಂದು ಗೌರವ ಅರ್ಪಿಸಿದರು.
 ಇದು ಜಗದ್ವಿಖ್ಯಾತರ ಮಾತಾಯಿತು. ಆದರೆ ಪಾಕಿಸ್ತಾನದ ಸರ್ವಸಾಮಾನ್ಯರು, ಸ್ತ್ರೀಯರು ಗಾಂಧೀಜಿಯ ಹತ್ಯೆ ಸುದ್ದಿ ಕೇಳಿ ತಮ್ಮ ಆಭರಣಗಳನ್ನು, ಬೆಲೆಬಾಳುವ ಅಲಂಕರಣಗಳನ್ನು ಕಳಚಿ ಹಾಕಿದರು!! ಇದಕ್ಕಿಂತ ಅರ್ಥಪೂರ್ಣವಾದ ದುಃಖ ಸೂಚನೆಯನ್ನು ಯಾರೂ ಎಂದಿಗೂ ಮಾಡಿರಲಾರರು, ಅಂಥ ಮಹಿಳೆಯರ ಮನಸೂರೆಗೊಂಡ ಮತ್ತೊಬ್ಬ ಮಹಾನುಭಾವ ಜನಿಸಿಲ್ಲ! ಭಾರತೀಯ ಅದರಲ್ಲೂ ಬಡ ಹೆಂಗಸರು ದುಃಖ ಭರಿಸಲಾರದೆ ತಲೆಗೂದಲನ್ನು ಹರಿದುಕೊಂಡು ಕಣ್ಣು ಕಿತ್ತ ಕರಡಿಯಂತೆ ಗೋಳಾಡಿದರು.
ಏನು ಮಾಡಿದರೂ ಆ ಕಡುಪಾಪಿ ಕೊನೆಗಾಣಿಸಿದ ಅಪರೂಪದ ಜೀವ ಮತ್ತೆ ಬಂದೀತೇ? ಲಕ್ಷೋಪಲಕ್ಷ ಜನರು ಶುಕ್ರವಾರ ರಾತ್ರಿ ಮರು ದಿನ ಶನಿವಾರ ಪಾರ್ಥಿವ ಶರೀರದ ದರ್ಶನ ಮಾಡಿದರು! ತೀರಿದ 24 ತಾಸುಗಳ ಒಳಗಾಗಿ ಅವರ ಅಂತ್ಯಕ್ರಿಯೆ ಮಾಡಿ ಮುಗಿಸಬೇಕೆಂದು ಇಚ್ಛಿಸಿದ್ದ ಪ್ರಕಾರವೇ ಮರುದಿನ ಮಧ್ಯಾಹ್ನ ಅಂತ್ಯಯಾತ್ರೆ ದಿಲ್ಲಿಯ ರಾಜಘಾಟ್‌ಗೆ ಹೊರಟಿತು. ಐದು ಮೈಲಿಗಳು ಕ್ರಮಿಸಲು ಐದು ಗಂಟೆ ಹಿಡಿಯಿತು. ಬಿರ್ಲಾ ಭವನದಿಂದ ರಾಜಘಾಟಿನವರೆಗೆ ಬೀದಿಯ ಇಕ್ಕೆಲಗಳಲ್ಲಿ ಮನೆಗಳ ಮಾಳಿಗೆ ಮೇಲೆ, ಲಾಂದ್ರ ಕಂಬದ ಮೇಲೆ, ಮರಗಳ ಮೇಲೆ, ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಲಕ್ಷೋಪಲಕ್ಷ ಜನ ತಮ್ಮನ್ನು ಉದ್ಧರಿಸಲು ಹೆಣಗಿದ ಬಡವರ ಬಂಧು, ಅಸ್ಪಶ್ಯರ ತಂದೆ, ದೀನ ದಲಿತರ ಮಾರ್ಗದರ್ಶಕನ ಪಾರ್ಥಿವ ಶರೀರದ ಅಂತ್ಯದರ್ಶನ ಪಡೆದರು. ಅಂದಿನ ಪತ್ರಿಕೆಗಳು ವರದಿ ಮಾಡಿದಂತೆ ಜಗತ್ತಿನ ಯಾವುದೇ ಭಾಗದಲ್ಲಿ ಯಾರದೇ ಅಂತ್ಯಯಾತ್ರೆಯಲ್ಲಿ ಇಷ್ಟೊಂದು ಲಕ್ಷೋಪಲಕ್ಷ ಜನ ಎಂದೂ ಸೇರಿರಲ್ಲಿಲ್ಲವಂತೆ!!
ಶವಸಂಸ್ಕಾರ ನಡೆಯುವ ರಾಜಘಾಟಿನಲ್ಲಿ ಆಗಲೇ ಮತ್ತೆ ಲಕ್ಷೋಪಲಕ್ಷ ಜನ ದಿಲ್ಲಿ, ಹರ್ಯಾಣ(ಆಗ ಅದು ಪಂಜಾಬಿನ ಒಂದು ಭಾಗವಾಗಿತ್ತು), ದಿಲ್ಲಿಯ ಸರಹದ್ದಿನಲ್ಲಿರುವ ಉತ್ತರ ಪ್ರದೇಶದ ಹಳ್ಳಿಗಳಿಂದ ಜನ ನಡೆದುಕೊಂಡು, ಸೈಕಲ್ ಮೇಲೆ, ಬಸ್ಸು, ಟ್ರಕ್ಕು, ಲಾರಿ, ಬೈಕ್‌ಗಳ ಮೇಲೆ ಬಂದರು. ಮತ್ತೆ ಎಷ್ಟೋ ಲಕ್ಷ ಜನ ಅಂತ್ಯದರ್ಶನಕ್ಕಾಗಿ ಸೇರಿದರು!
  ದೇಶ ವಿದೇಶಗಳಿಂದ- ಅದರಲ್ಲೂ ಇಂಗ್ಲೆಂಡ್, ಅಮೆರಿಕ, ಚೀನಾ, ಜಪಾನ್, ಬರ್ಮಾ, ಇಂಡೋನೇಶ್ಯಾ, ಆಫ್ರಿಕಾ ದೇಶಗಳ ಪ್ರತಿನಿಧಿಗಳು ಬಂದು ಸೇರಿದರು. ಆ ಮಹಾ ಜನಸ್ತೋಮವನ್ನು ನಿಯಂತ್ರಿಸಲು ಬೃಹತ್ ಪೊಲೀಸ್ ಪಡೆ, ಸಾವಿರಾರು ಸೈನಿಕರು ಸಮವಸ್ತ್ರದಲ್ಲಿ ಸನ್ನದ್ಧರಾಗಿ ನಿಂತಿದ್ದರು. ಅಂದಿನ ಗವರ್ನರ್ ಜನರಲ್ ಲೂಯಿ ವೌಂಟ್ ಅವರ ಮಡದಿ ಎಡ್ವಿನಾ ವೌಂಟ್ ಬ್ಯಾಟನ್, ರಾಜಧಾನಿಯಲ್ಲಿದ್ದ ವಿದೇಶೀ ರಾಯಭಾರಿಗಳು, ಬಂದಿದ್ದ ಪ್ರತಿನಿಧಿಗಳು ಚಿತಾಮಂಚದ ಸುತ್ತ 20 ಗಜ ದೂರದಲ್ಲಿ ನೆಲದ ಮೇಲೆ ಕುಳಿತಿದ್ದರು! ನಿಗದಿಪಡಿಸಿದ್ದ ಸಮಯಕ್ಕೆ ಸರಿಯಾಗಿ ಪಾರ್ಥಿವ ಶರೀರವನ್ನು ಗಂಧದ ಕೊರಡುಗಳ ಮೇಲೆ ಮಲಗಿಸಲಾಯಿತು. ಶವದ ಮೇಲೆ ಮತ್ತೆ ಗಂಧದ ಕೊರಡುಗಳನ್ನು ಒಟ್ಟಲಾಯಿತು. ಹತ್ಯೆಯಾದ ಇಪ್ಪತ್ತನಾಲ್ಕು ಗಂಟೆಯವರೆಗೆ ಅದೇ ಪ್ರಶಾಂತ ಮುಖಮುದ್ರೆ ಚಿತಾಗ್ನಿಯಿಂದ ಕಣ್ಮರೆಯಾಯಿತು. ಹಿರಿಯ ಮಗ ಹರಿಲಾಲ್ ಇಲ್ಲದಿದ್ದರಿಂದ ಎರಡನೇ ಮಗ ರಾಮದಾಸ್ ಮತ್ತು ಅವರ ತಮ್ಮ ದೇವದಾಸ್ ಗಾಂಧಿ ಚಿತಾಗ್ನಿ ಸ್ಪರ್ಶ ಮಾಡಿದರು! ಅಗ್ನಿಜ್ವಾಲೆ ನಭೋಮಂಡಲದತ್ತ ಕೆನ್ನಾಲಿಗೆ ಚಾಚಿ ಮಹಾತ್ಮನ ಕಳೇಬರವನ್ನು ಆಪೋಶನ ತೆಗೆದುಕೊಂಡಿತು. ಸಂಜೆ 6 ಗಂಟೆಗೆ ಪಾರ್ಥಿವ ಶರೀರ ಸಂಪೂರ್ಣ ಭಸ್ಮವಾಯಿತು.
‘ಮಹಾತ್ಮಾ ಗಾಂಧಿ ಅಮರ್ ಹೋ’ ಎಂದು ಲಕ್ಷೋಪಲಕ್ಷ ದುಃಖತಪ್ತ ಕಂಠಗಳು ಘೋಷಿಸಿದವು! ದೇಹ ಭಸ್ಮವಾದರೂ ಅವರ ಸಂದೇಶ ಅಮರವಾಯಿತು. ಅವರ ನೀಡಿದ ಪರಮತ ಸಹಿಷ್ಣುತೆ, ಹಿಂದೂ- ಮುಸ್ಲಿಂ ಐಕಮತ್ಯ, ಕೋಮುಸೌಹಾರ್ದ, ಪ್ರೇಮ, ಸತ್ಯ ಅಹಿಂಸೆಯ ಸಂದೇಶ ಇಂದಿಗೂ ಪ್ರಸ್ತುತ. ಇಂದಿಗೂ ಪ್ರಜ್ವಲ.
ಫೆಬ್ರವರಿ 1ನೇ ತಾರೀಖು ಚಿತಾಭಸ್ಮವನ್ನು ತಾಮ್ರದ ಬಿಂದಿಗೆಯೊಂದರಲ್ಲಿ ತುಂಬಿಕೊಂಡು ತಂದು ಬಿರ್ಲಾ ಭವನದಲ್ಲಿ ಹೂಮಾಲೆಗಳಿಂದ ಅಲಂಕರಿಸಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು. ಆ ಸಂಜೆ ರಾಜಘಾಟಿನಲ್ಲಿಯೇ ಪ್ರಾರ್ಥನಾ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಆ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿಯ ಅತ್ಯಂತ ನಿಷ್ಠಾವಂತ ಅನುಯಾಯಿ ಖ್ವಾಜಾ ಅಬ್ದುಲ್ ಮಜೀದ್ ಕುರ್‌ಆನ್ ಪಠಿಸಿದರು.
ಗಾಂಧೀಜಿ ಒಮ್ಮೆ ಹೇಳಿದ್ದರು: ‘‘ನಾನು ಹೋದ ಮೇಲೆ ಯಾರೊಬ್ಬರೂ ನನ್ನನ್ನು ಸಂಪೂರ್ಣವಾಗಿ ಪ್ರತಿನಿಧಿಸಲಾರರು. ಆದರೂ ನಿಮ್ಮಂತಹ ಬಹುಜನರಲ್ಲಿ ನನ್ನೊಂದು ಚಿಕ್ಕ ತುಣುಕು ಬದುಕಿರುತ್ತದೆ’’. ಗಾಂಧೀಜಿಯ ಶಾಂತಿ, ಕೋಮುಸೌಹಾರ್ದ, ಸರ್ವಮತ ಸಹಿಷ್ಣುತೆ, ಸಂದೇಶವನ್ನು ನಂಬುವವರು ಗಾಂಧೀಜಿಯ ಒಂದು ತುಣುಕು ಎಂದೇ ಭಾವಿಸಬಹುದು. ಆಗ ಗಾಂಧೀಜಿ ಹೇಳಿದಂತೆ: ‘‘ಪ್ರತಿಯೊಬ್ಬರೂ ತತ್ತ್ವ ಮೊದಲು, ತಾನು ಕೊನೆಗೆ ಎಂಬಂತೆ ಬದುಕಿದರೆ ಆ ಶೂನ್ಯ ಅಷ್ಟರಮಟ್ಟಿಗೆ ತುಂಬುತ್ತದೆ’’ ಈ ದೇಶ ಆ ಆದೇಶಕ್ಕೆ ಅನುಗುಣವಾಗಿ ಬದುಕಬೇಕೆಂಬುದು ಆ ಮಹಾತ್ಮನ ಕನಸಾಗಿತ್ತು. ಆ ಕನಸನ್ನು ಭಗ್ನಪಡಿಸಲು ಸಂಘಪರಿವಾರ ಸನ್ನದ್ಧವಾಗಿದೆ.
ಗಾಂಧೀಜಿಯ ಚಿತಾಭಸ್ಮವನ್ನು ವಿಶೇಷ ಉಗಿಬಂಡಿಯಲ್ಲಿ ದೆಹಲಿಯಿಂದ ತ್ರಿವೇಣಿ ಸಂಗಮಕ್ಕೆ ಕೊಂಡೊಯ್ಯಲಾಯಿತು. ಅಲಹಾಬಾದ್‌ಗೆ ತಲುಪುವ ದಾರಿಯಲ್ಲಿ ಪ್ರತಿ ರೈಲು ನಿಲ್ದಾಣದಲ್ಲೂ ದುಃಖತಪ್ತ ಜನರ ಭಸ್ಮ ತುಂಬಿದ ಕಲಶದ ದರ್ಶನ ಮಾಡಿದರು. ಎಷ್ಟೋ ಜನ ದುಃಖ ತಾಳಲಾರದೆ ಉಗಿಬಂಡಿಗೆ ಹಣೆ ಹಣೆ ಗಟ್ಟಿಸಿ ಅತ್ತರು! ಕೊನೆಗೆ ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮದಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು.
ಚಿತಾಭಸ್ಮದ ಒಂದಿಷ್ಟು ಭಾಗವನ್ನು ಕರ್ನಾಟಕಕ್ಕೂ ತಂದು ತುಂಗಭದ್ರ, ಕಾವೇರಿಯಲ್ಲಿ ವಿಸರ್ಜನೆ ಮಾಡಿದರು. ಇಂದಿಗೂ ಕೆಲವು ಕಡೆ ಅವರ ಅಸ್ಥಿಯ ಅವಶೇಷಗಳನ್ನು ಅಲ್ಲಲ್ಲಿ ಕಾದಿಟ್ಟು ಗೌರವ ಸಲ್ಲಿಸಲಾಗುತ್ತಿದೆ.
ಕೃಪೆ: ಗಾಂಧಿ ಕಗ್ಗೊಲೆ ಕಾರಣ-ಪರಿಣಾಮ, ನವಕರ್ನಾಟಕ ಪ್ರಕಾಶನ

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News

ಜಗದಗಲ
ಜಗ ದಗಲ