ಅವಸರ ನಮ್ಮ ನಗುವನ್ನು ಕಸಿಯದಿರಲಿ

Update: 2019-02-12 18:33 GMT

ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ (B.D.S) ಪಡೆದ ಬಳಿಕ ಸುಮಾರು ಒಂಬತ್ತು ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತಕೋತರ ಪದವಿ (M.D.S ) ಪಡೆಯುವ ಅವಕಾಶವಿದೆ. ಇದರಲ್ಲಿ ಒಂದು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿಯನ್ನು ಬಾಯಿ, ಮುಖ ಮತ್ತು ದವಡೆ ಶಾಸ್ತ್ರ (“ORAL AND MAXILLOFACIAL SUREEONS) ಎಂದು ಕರೆಯಲಾಗುತ್ತದೆ. ಜನರಲ್ಲಿ ಈ ದಂತ ವೈದಕೀಯ ಶಾಸ್ತ್ರದ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಪ್ರತೀ ವರ್ಷ ಭಾರತದಾದ್ಯಂತ ‘ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ’ ಎಂದು ಫೆಬ್ರವರಿ 13ರಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಯಾವುದಾದರೊಂದು ದ್ಯೇಯ ವಾಕ್ಯ ಇಟ್ಟು ಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತದೆ. ನಮ್ಮ ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರಸ್ತೆಗಳ ನಿರ್ವಹಣೆ ಚೆನ್ನಾಗಿಲ್ಲದಿರುವುದರ ಜೊತೆಗೆ ಜನರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗೆಗಿನ ಅಸಡ್ಡೆ, ಅಸಹಕಾರ ಮತ್ತು ದಿವ್ಯ ನಿರ್ಲಕ್ಷದಿಂದಾಗಿ ಹೆಚ್ಚಿನ ಅಪಘಾತಗಳು ಮಾರಣಾಂತಿಕವಾಗಿ ಪರಿಣಮಿಸತೊಡಗಿದೆ. ದ್ವಿಚಕ್ರ ವಾಹನ ಓಡಿಸುವವರು ಕಡ್ಡಾಯವಾಗಿ ಹೆಲ್ಮೆಟ್‌ಗಳನ್ನು ಧರಿಸಿದಲ್ಲಿ ಶೇ. 80ರಷ್ಟು ಪ್ರಾಣಾಪಾಯವನ್ನು ಕಡಿಮೆ ಮಾಡಬಹುದು. ಅದೇ ರೀತಿ ಕಾರು ಇತ್ಯಾದಿ ಚತುಷ್ಚಕ್ರ ವಾಹನಗಳನ್ನು ಓಡಿಸುವವರು ಸೀಟು ಬೆಲ್ಟ್ ಧರಿಸಿದಲ್ಲಿ ಸುಮಾರು ಶೇ. 75ರಷ್ಟು ಬಾಯಿ, ಮುಖ ಮತ್ತು ದವಡೆಗಳ ಅಪಘಾತ ಮತ್ತು ತಲೆಯ ಮೇಲಾಗುವ ಮಾರಣಾಂತಿಕ ಅಪಘಾತಗಳನ್ನು ತಡೆಯಬಹುದಾಗಿದೆ.
ಅಪಘಾತದ ತೀವ್ರತೆಯನ್ನು ತಡೆಯಲು ಮಾಡಬೇಕಾದ ಮತ್ತು ಅನುಸರಿಸಬೇಕಾದ ನಿಯಮಗಳು
1. ರಸ್ತೆ ಸುರಕ್ಷಾ ನಿಯಮಗಳನ್ನು ಚಾಚು ತಪ್ಪದೆ ಅನುಸರಿಸಬೇಕು
2. ಸೀಟು ಬೆಲ್ಟ್ ಕಡ್ಡಾಯವಾಗಿ ಧರಿಸ ತಕ್ಕದ್ದು.
3. ಹೆಲ್ಮೆಟ್ ಕಡ್ಡಾಯವಾಗಿ ಧರಿಸಲೇಬೇಕು. ಶೋಕಿಗಾಗಿ ವಿವಿಧ ರೀತಿಯ ಹೆಲ್ಮೆಟ್ ಬೇಡ. ವ್ಶೆಜ್ಞಾನಿಕವಾಗಿ ತಲೆಗೆ ರಕ್ಷಣೆ ನೀಡುವ ಶಿರ ಕವಚ (ಹೆಲ್ಮೆಟ್) ಧರಿಸತಕ್ಕದ್ದು.
4. ವಾಹನ ಓಡಿಸುವಾಗ ಮೊಬೈಲ್‌ನ್ನು ಬಳಸಲೇ ಬಾರದು.
5. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ಲೇನ್ ಪದ್ಧತಿಯನ್ನು ಖಡ್ಡಾಯವಾಗಿ ಪಾಲಿಸತಕ್ಕದ್ದು.
6. ಅತಿಯಾದ ವೇಗ ಅಪಘಾತಕ್ಕೆ ಕಾರಣ.
7. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಲೇಬಾರದು
ಜೀವನ ಎನ್ನುವುದು ಒಂದು ಪಯಣ. ನಿಮ್ಮ ಪ್ರಯಾಣವನ್ನು ಆನಂದಿಸಿ. ಆನಂದ ಎನ್ನುವುದು ನಿಮ್ಮ ಜೀವನ ಪ್ರಯಾಣದ ಅನುಭವವಾಗಿರಬೇಕೇ ಹೊರತು ಗುರಿಯಾಗಿರಬಾರದು. ಹಾಗೆ ಮಾಡಿದ್ದಲ್ಲಿ ನೀವು, ನಿಮ್ಮವರು ಮತ್ತು ಉಳಿದವರು ಕೂಡಾ ಗುರಿ ತಲುಪಬಹುದು ಮತ್ತು ತಮ್ಮ ಜೀವನದ ಪಯಣವನ್ನು ಅನುಭವಿಸಬಹುದು. ನೀವು ರಸ್ತೆ ಸುರಕ್ಷಾ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸಿದಲ್ಲಿ ನಿಮ್ಮ ಜೀವನದ ಪಯಣ ಎಲ್ಲಿಂದ ಎಲ್ಲಿಗೂ ತಲುಪಬಹುದು. ಅದರ ಜೊತೆಗೆ ಉಳಿದವರ ಜೀವನದ ಪಯಣದ ದಾರಿ ಮತ್ತು ಗುರಿ ಕೂಡಾ ಬದಲಾಗಬಹುದು. ಈ ಕಾರಣದಿಂದಲೇ ನಾವೆಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕಾಗಿದೆ. ಅದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ.
ಕೊನೆಯ ಮಾತು
ಯಾರೂ ನಮ್ಮನ್ನು ಗಮನಿಸದೇ ಇರುವಾಗ ಅಂದರೆ ನಾವು ಏಕಾಂತದಲ್ಲಿರು ವಾಗಲೂ ಕೂಡಾ ನಮ್ಮ ವರ್ತನೆ ನಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ ಮತ್ತು ಪ್ರತಿ ಬಿಂಬಿಸುತ್ತದೆ ಎಂದು ಬಲ್ಲವರು ಹೇಳಿದ್ದಾರೆ. ಹಾಗಾಗಿ ಬೇರೆಯವರು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಭಯದಲ್ಲಿ ಅಥವಾ ಗ್ರಹಿಕೆಯಲ್ಲಿ ನಾವು ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬಾರದು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಪೊಲೀಸರು ಇರಲಿ, ಇಲ್ಲದಿರಲಿ ನಮ್ಮ ಜೀವದ ಮತ್ತು ಇತರರ ಜೀವದ ಮೇಲಿನ ಸುರಕ್ಷತೆಯ ದೃಷ್ಟಿಯಿಂದ ನಾವೆಲ್ಲರೂ ರಸ್ತೆ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೆ ಮಾಡಿದಲ್ಲಿ ಮಾತ್ರ ಅಪಘಾತಗಳ ಸಮಯದಲ್ಲಿ ಆಗುವ ಸಾವು ನೋವು ಮತ್ತು ಗಾಯದ ತೀವ್ರತೆಯನ್ನು ಕಡಿಮೆ ಮಾಡಬಹುದು. ಅದರಲ್ಲಿಯೇ ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದ ಒಳಿತು ಮತ್ತು ಶಾಂತಿ ಅಡಗಿದೆ. ಮೊದಲೇ ಅನರಕ್ಷತೆ, ಬಡತನ, ಅಜ್ಞಾನ, ಮೂಢನಂಬಿಕೆ ಮತ್ತು ಮೂಲಭೂತ ಸೌಕರ್ಯಗಳ ಅಲಭ್ಯತೆಗಳಿಂದ ನಮ್ಮ ದೇಶದ ಪ್ರಗತಿ ಕುಂಠಿತವಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾವಂತರಾದ ನಾವು ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದಲ್ಲಿ, ಮತ್ತಷ್ಟು ಸಾವು ನೋವು ಮತ್ತು ಹಾನಿ ಉಂಟಾಗಿ ದೇಶದ ಪ್ರಗತಿಗೆ ಮಾರಕವಾಗ ಬಹುದು. ಈ ನಿಟ್ಟಿನಲ್ಲಿ ನಾವೆಲ್ಲಾ ನಮ್ಮೆಲ್ಲರ ಜವಾಬ್ದಾರಿ ಅರಿತು ನಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದಲ್ಲಿ ನಮ್ಮ ದೇಶದ ಪ್ರಗತಿಯನ್ನು ತಡೆಯುವ ಶಕ್ತಿ ಇನ್ನೊಂದಿರಲಿಕ್ಕಿಲ್ಲ. ಅದರಲ್ಲಿಯೇ ನಮ್ಮ ಒಳಿತು ಅಡಗಿದೆ.

ನಿಮಗಿದು ಗೊತ್ತೇ?
 1. ಭಾರತ ವಿಶ್ವದ ಅಪಘಾತದ ರಾಜಧಾನಿ
2. 15ರಿಂದ 30ರ ವರ್ಷದ ಯುವ ಜನತೆಯ ಸಾವಿನ ಮೊದಲ ಮೂಲ ಕಾರಣ ರಸ್ತೆ ಅಪಘಾತ.
3. ರಸ್ತೆ ಅಪಘಾತ ಅತೀ ಸಾಮಾನ್ಯ. ಕಾರಣ ಮದ್ಯಪಾನ
  4. ಪ್ರತೀ 48 ನಿಮಿಷಕ್ಕೆ ಒಬ್ಬೊಬ್ಬರ ಸಾವಿಗೆ ಕಾರಣ ಮದ್ಯಪಾನ ಮತ್ತು ರಸ್ತೆ ಅಪಘಾತ
5. ಶಿರಕವಚ ಧರಿಸಿದಲ್ಲಿ ಮುಖಾಂಗದ ಅಪಘಾತ ಪ್ರಮಾಣ ಕೇವಲ ಶೇ.25, ಶಿರಕವಚವಿಲ್ಲದಿದ್ದಲ್ಲಿ ಶೇ. 50 ಮಂದಿ ಮುಖಾಂಗದ ಅಪಘಾತಕ್ಕೆ ಕಾರಣವಾಗಬಹುದು.
6. ಶಿರಕವಚ ತಲೆಗೆ ರಕ್ಷಣೆ ಕೊಡುವ ವಸ್ತುವಾಗಿರಬೇಕು ಹೊರತು ಫ್ಯಾಶನ್ ಆಗಬಾರದು. ತಲೆ ಮುಖ ಮುಚ್ಚುವ ಶಿರಕವಚ ಧರಿಸಿದಲ್ಲಿ ತಲೆಗೆ ಉಂಟಾಗುವ ಗಾಯದ ಪ್ರಮಾಣ ಸುಮಾರು ಶೇ. 13 ಮಾತ್ರ. ಆದರೆ ಅರ್ಧ ತಲೆ ಮುಚ್ಚುವ ಶಿರ ಕವಚದಿಂದ ತಲೆಗೆ ಗಾಯವಾಗುವ ಪ್ರಮಾಣ ಸುಮಾರು ಶೇ. 26. ಈ ಕಾರಣದಿಂದಲೇ ಪೂರ್ತಿ ತಲೆಮುಚ್ಚುವ ಶಿರ ಕವಚ ಧರಿಸಬೇಕು. ಅದೇ ರೀತಿ ಪೂರ್ತಿ ಶಿರ ಕವಚ ಧರಿಸಿದಲ್ಲಿ ಮುಖಾಂಗದ ಗಾಯದ ಪ್ರಮಾಣ ಶೇ. 7 ಮತ್ತು ಅರ್ಧ ಶಿರಕವಚ ಧರಿಸಿದಲ್ಲಿ ಮುಂಖಾಗದ ಗಾಯದ ಪ್ರಮಾಣ ಶೇ. 27
7. ನಮ್ಮ ದೇಶದ ಅಪಘಾತಗಳಲ್ಲಿ ಶೇ. 55 ಅಪಘಾತಗಳಲ್ಲಿ ಚಾಲಕರು ಸೀಟ್ ಬೆಲ್ಟ್ ಧರಿಸುವುದೇ ಇಲ್ಲ. ಸೀಟ್ ಬೆಲ್ಟ್ ಧರಿಸದ ಕಾರಣ ಅಪಘಾತದ ತೀವ್ರತೆ ಅತೀ ಹೆಚ್ಚು.
 
8. ನಮ್ಮ ದೇಶದ ಅಪಘಾತ ಸಂಖ್ಯೆಗಳಲ್ಲಿ ಶೇ. 50 ಮಂದಿ ಸೀಟ್‌ಬೆಲ್ಟ್ ಧರಿಸುವುದಿಲ್ಲ ಮತ್ತು ಮದ್ಯಪಾನ ಮಾಡಿರುತ್ತಾರೆ.

9. ಶೇ. 35 ಅಪಘಾತಕ್ಕೆ ಕಾರಣ, ವಾಹನ ಚಾಲನೆಯ ಸಮಯದಲ್ಲಿ ಮೊಬೈಲ್ ಬಳಕೆ

10. ಭಾರತದಲ್ಲಿ ಶೇ. 10 ದ್ವಿಚಕ್ರ ವಾಹನ ಚಾಲಕರು ಮಾತ್ರ ಶಿರ ಕವಚ ಧರಿಸುತ್ತಾರೆ. ಮತ್ತು ಶೇ. 33 ಚಾಲಕರು ಮಾತ್ರ ಸೀಟ್‌ಬೆಲ್ಟ್ ಬಳಸುತ್ತಾರೆ.

Writer - ಡಾ. ಮುರಲೀಮೋಹನ್, ಚೂಂತಾರು

contributor

Editor - ಡಾ. ಮುರಲೀಮೋಹನ್, ಚೂಂತಾರು

contributor

Similar News

ಜಗದಗಲ
ಜಗ ದಗಲ