ಬೇಸಿಗೆಯಲ್ಲಿ ಬೆಂಡಾಗಿಸುವ ನಿರ್ಜಲೀಕರಣ

Update: 2019-02-28 18:37 GMT

ನಮ್ಮ ದೇಹದ ತೂಕದಲ್ಲಿ ಸುಮಾರು ಶೇ. 60ರಷ್ಟು ನೀರಿನಾಂಶ ಇದ್ದು, ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್‌ಗಳಷ್ಟು ನೀರು ಇರುತ್ತದೆ. ದೇಹದ ಹೆಚ್ಚಿನ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ) ದೇಹದಿಂದ ಹೊರ ಹಾಕಲ್ಪಟ್ಟ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದು ಅತೀ ಅಗತ್ಯ. ಈ ಪ್ರಮಾಣದಲ್ಲಿ ಏರುಪೇರು ಉಂಟಾದಲ್ಲಿ ದೇಹದೊಳಗಿನ, ನೀರಿನ ಅಂಶ ಕಡಿಮೆಯಾದಲ್ಲಿ ಆ ದೈಹಿಕ ಸ್ಥಿತಿಯನ್ನು ನಿರ್ಜಲೀಕರಣ ಅಥವಾ ಆಂಗ್ಲ ಭಾಷೆಯಲ್ಲಿ ಡೀಹೈಡ್ರೇಷನ್ ಎಂದು ಕರೆಯುತ್ತಾರೆ. ಕಾರಣಾಂತರಗಳಿಂದ ನಮ್ಮ ನೀರಿನ ಸೇವನೆಯ ಪ್ರಮಾಣ ಕಡಿಮೆಯಾದಾಗ ನಿರ್ಜಲೀಕರಣ ಉಂಟಾಗುತ್ತದೆ. ಸರಿಯಾದ ಸುರಕ್ಷಿತ ನೀರಿನ ಕೊರತೆ, ಕೆಲಸದೊತ್ತಡದಿಂದ ನೀರು ಸೇವಿಸದಿರುವುದು, ಪ್ರಯಾಣದ ಸಂದರ್ಭದಲ್ಲಿ ಸುರಕ್ಷಿತ ನೀರಿನ ಅಲಭ್ಯತೆ, ಅಸೌಖ್ಯದಿಂದಾಗಿ ನೀರು ಸೇವಿಸದಿರುವುದು ಅಥವಾ ಇನ್ನಾವುದೇ ಕಾರಣದಿಂದ ನೀರಿನ ಸೇವನೆ ಕಡಿಮೆಯಾದಲ್ಲಿ ನಿರ್ಜಲೀಕರಣ ಉಂಟಾಗಬಹುದು. ನಮ್ಮ ದೇಹಕ್ಕೆ ಪ್ರತಿದಿನ ಕನಿಷ್ಠ ಪಕ್ಷ ಸುಮಾರು 3 ರಿಂದ 4 ಲೀಟರ್ ನೀರಿನ ಆವಶ್ಯಕತೆೆ ಇರುತ್ತದೆ. ದಿನಕ್ಕೆ ನೀವು ಇಂತಿಷ್ಟೇ ನೀರು ಕುಡಿಯಬೇಕು ಎಂದು ನಿಖರವಾಗಿ ಹೇಳಲು ಕಷ್ಟವಾಗಬಹುದು, ಯಾಕೆಂದರೆ ಒಬ್ಬ ವ್ಯಕ್ತಿಯ ದೈನಂದಿನ ನೀರಿನ ಆವಶ್ಯಕತೆೆ ಆತನ ವಯಸ್ಸು, ಶರೀರದ ಗಾತ್ರ, ತೂಕ, ಆರೋಗ್ಯ ಮತ್ತು ಹವಾಮಾನ ಮುಂತಾದ ಅಂಶಗಳಿಗೆ ನೇರವಾಗಿ ಸಂಬಂಧ ಹೊಂದಿರುತ್ತದೆ. ಒಟ್ಟಿನಲ್ಲಿ ನಮ್ಮ ದೇಹದ ಎಲ್ಲಾ ಜೈವಿಕ ಕ್ರಿಯೆಗಳಿಗೆ ಮತ್ತು ನಮ್ಮ ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸುರಕ್ಷಿತವಾದ ನೀರನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸುವುದು ಅತೀ ಅನಿವಾರ್ಯ.

ನಿರ್ಜಲೀಕರಣಕ್ಕೆ ಕಾರಣ:

♦ ಬೇಸಿಗೆಯ ವಾತಾವರಣದಲ್ಲಿ ತಾಪಮಾನ ಜಾಸ್ತಿಯಾಗಿ ವಿಪರೀತ ಬೆವರುವಿಕೆಯಿಂದಾಗಿ ದೇಹದ ನೀರಿನಾಂಶ ಮತ್ತು ಲವಣಾಂಶ ನಷ್ಟವಾಗಿ, ನಿರ್ಜಲೀಕರಣ ಉಂಟಾಗುತ್ತದೆ. ಸಮುದ್ರ ಮಟ್ಟದಲ್ಲಿರುವ ಕರಾವಳಿಯ ಪ್ರದೇಶಗಳಲ್ಲಿ ವಾತಾವರಣದ ತಾಪಮಾನ ಹೆಚ್ಚಾಗಿರುವುದರ ಜೊತೆಗೆ ಲವಣದ ಸಾಂದ್ರತೆಯೂ ಹೆಚ್ಚಾಗಿ ಇರುವುದರಿಂದ (Humidity) ದೇಹದಿಂದ ನೀರಿನ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

♦ ಕೆಫೇನ್ ಪದಾರ್ಥಗಳಾದ ಕಾಫಿ, ಟೀ, ಚಾಕಲೆಟ್‌ಗಳ ಅತಿಯಾದ ಸೇವನೆ.

♦ ಇಂಗಾಲಯುಕ್ತ ಪಾನೀಯಗಳಾದ ಪೆಪ್ಸಿ, ಕೋಲಾ, ಸೋಡಾ ಮುಂತಾದವುಗಳ ಅತಿಯಾದ ಬಳಕೆ.

♦ ಅತಿಯಾದ ವಾಂತಿ, ಭೇದಿಯಿಂದಾಗಿ ದೇಹದಲ್ಲಿನ ನೀರಿನಾಂಶ ಮತ್ತು ಲವಣಾಂಶ (ಇಲೆಕ್ರೋ ಲೈಟ್ಸ್) ನಾಶವಾಗುತ್ತದೆ ಅಥವಾ ಸೋರಿ ಹೋಗುತ್ತದೆ ಮತ್ತು ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು.

♦ ವಿಪರೀತ ಜ್ವರ ಬಂದಾಗ, ಅತಿಯಾದ ಬೆವರುವಿಕೆ ಯಿಂದ, ನೀರಿನ ನಷ್ಟವಾಗಿ ನಿರ್ಜಲೀಕರಣವಾಗಬಹುದು.

♦ ಅತಿಯಾದ ಮಧುಮೇಹ ರೋಗ ಅಥವಾ ಅತಿಯಾದ ಔಷಧಿ ಸೇವನೆಯಿಂದಲೂ ನಿರ್ಜಲೀಕರಣವಾಗುವ ಸಾಧ್ಯತೆ ಇದೆ.

♦ ಅತಿಯಾದ ಲವಣಾಂಶ ಸೇವನೆ, ಆಹಾರದಲ್ಲಿ ಪೋಷಕಾಂಶಗಳ ಕೊರತೆಯಾದಾಗ ಕೂಡಾ ನೀರಿನ ಕೊರತೆಯಾಗಬಹುದು.

♦ ಅತಿಯಾದ ಉಪವಾಸ ಮಾಡಿದಾಗ ಮತ್ತು ಕೆಲಸದ ಒತ್ತಡದಿಂದ ಅತಿಯಾದ ಚಿಂತೆ, ಉದ್ವೇಗ, ಬಾಧಿಸಿದಾಗಲೂ ನಿರ್ಜಲೀಕರಣವಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಮಕ್ಕಳಲ್ಲಿ ದೇಹದ ತೂಕ ಕಡಿಮೆ ಇರುವ ಕಾರಣದಿಂದಾಗಿ, ನಿರ್ಜಲೀಕರಣವಾದಾಗಲೂ ನಿಮಗೆ ಯಾವುದೇ ಲಕ್ಷಣಗಳು ನಿಖರವಾಗಿ ಕಾಣಿಸಲಿಕ್ಕಿಲ್ಲ. ಮಕ್ಕಳು ಸಾಮಾನ್ಯವಾಗಿ ಚುರುಕಾಗಿದ್ದು, ಯಾವಾಗಲೂ ಬಿಸಿಲಲ್ಲಿ ಆಟವಾಡುವ ಸಾಧ್ಯತೆ ಹೆಚ್ಚಿರುವ ಕಾರಣ, ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸುವ ಅನಿವಾರ್ಯತೆ ಇರುತ್ತದೆ.

ತಡೆಗಟ್ಟುವುದು ಹೇಗೆ?:

♦ ಪ್ರತಿ ಗಂಟೆಗೊಮ್ಮೆ ದ್ರವಾಹಾರ ಸೇವಿಸಿ. ನೀರು ಅತೀ ಉತ್ತಮವಾದ ದ್ರವಾಹಾರ. ನೀರು ನಿಮ್ಮ ದೇಹದ ಎಲ್ಲಾ ಜೈವಿಕ ಕ್ರಿಯೆಗಳಿಗೆ ಅತೀ ಅಗತ್ಯ.

♦ ಸಾಕಷ್ಟು ಹಣ್ಣು ಹಂಪಲುಗಳನ್ನು ಸೇವಿಸಿ, ಹಣ್ಣುಗಳಲ್ಲಿ ಪೋಷಕಾಂಶಗಳು ಮತ್ತು ನೀರಿನಾಂಶ ಎರಡೂ ಇರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 80ರಷ್ಟು ನೀರಿನಾಂಶ ಇರುತ್ತದೆ ಮತ್ತು ಬೇಸಿಗೆಯಲ್ಲಿ ಹೆಚ್ಚು ಸೇವಿಸಬಹುದು.

♦ ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು, ದಿನವೊಂದರಲ್ಲಿ 7 ರಿಂದ 8 ಗಂಟೆಗಳ ನಿದ್ರೆ ಬೇಸಿಗೆಯಲ್ಲಿ ಅತೀ ಅಗತ್ಯ. ಹಗಲು ಹೊತ್ತಲ್ಲಿ ತಾಪಮಾನ ಜಾಸ್ತಿಯಾಗಿದ್ದಲ್ಲಿ, ಬಿಸಿಲಿಗೆ ಹೋಗುವುದನ್ನು ಕಡಿಮೆ ಮಾಡಿ. ಅನಿವಾರ್ಯವಿದ್ದಲ್ಲಿ ಮಾತ್ರ ಹೋಗಬೇಕು. ಮಕ್ಕಳನ್ನೂ ಕೂಡಾ ಬಿಸಿಲಿನಲ್ಲಿ ಗಂಟೆಗಟ್ಟಲೆ ಆಟವಾಡದಂತೆ ಎಚ್ಚರಿಸಬೇಕು.

♦ ಆಹಾರದಲ್ಲಿ ಉಪ್ಪಿನಾಂಶ ಜಾಸ್ತಿ ಬಳಸಬೇಡಿ. ದೇಹದಲ್ಲಿ ಸೋಡಿಯಂ ಲವಣ ಜಾಸ್ತಿಯಾದಂತೆ, ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು.

♦ ಕೆಫೇನ್‌ಯುಕ್ತ ಮತ್ತು ಇಂಗಾಲಯುಕ್ತ ಪೇಯಗಳಾದ ಕೋಕ್, ಪೆಪ್ಸಿ, ಕಾಫಿ, ಟೀ ಸೇವನೆಯನ್ನು ಕಡಿಮೆ ಮಾಡಿ.

♦ ರಾಸಾಯನಿಕ ಮತ್ತು ಲವಣಾಂಶ ಜಾಸ್ತಿ ಇರುವ ದಿಢೀರ್ ಜಂಕ್ ಆಹಾರಗಳನ್ನು ಸೇವಿಸಬೇಡಿ. ಈ ಲವಣಗಳ ಜೊತೆ ದೇಹದಿಂದ ನೀರಿನಾಂಶವೂ ಕಳೆದು ಹೋಗಿ ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚು.

♦ ನೈಸರ್ಗಿಕವಾದ ಪೇಯಗಳಾದ ತಾಜಾ ಹಣ್ಣಿನ ರಸ, ಎಳನೀರು, ಮಜ್ಜಿಗೆ ಮುಂತಾದವುಗಳನ್ನು ಹೆಚ್ಚು ಸೇವಿಸಿ, ಹೆಚ್ಚು ಸಕ್ಕರೆ ಹಾಕಿದ, ಕೃತಕ ಹಣ್ಣಿನ ರಸವನ್ನು ಸೇವಿಸಲೇಬಾರದು. ತಾಜಾ ಹಣ್ಣಿನ ರಸವನ್ನು ಸಕ್ಕರೆ ಬೆರಸದೆ ಸೇವಿಸಬೇಕು.

♦ ಹಸಿ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ, ಜಾಸ್ತಿ ಮಸಾಲೆಯುಕ್ತ, ಲವಣಯುಕ್ತ ಆಹಾರಗಳನ್ನು ವರ್ಜಿಸಿ ಹಾಲಿನ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು.

♦ ಅತಿಯಾದ ಬಾಯಿ ಒಣಗುವಿಕೆ ಉಂಟಾಗಿ, ಬಾಯಾರಿಕೆಯಾದಲ್ಲಿ ಸ್ವಲ್ಪ ಸಕ್ಕರೆ, ಉಪ್ಪು ಸೇರಿಸಿದ ನೀರನ್ನು ಕುಡಿಯಿರಿ. ಮಾರುಕಟ್ಟೆಯಲ್ಲಿ ಸಿಗುವ ಒ.ಆರ್.ಎಸ್. ಕೂಡಾ ನೀರು ಸೇರಿಸಿ ಸೇವಿಸಬಹುದು.

ಗುರುತಿಸುವುದು ಹೇಗೆ?

♦ ಬಾಯಿ ಒಣಗುವುದು, ವಿಪರೀತ ಬಾಯಾರಿಕೆ.

♦ ಯಾವಾಗಲೂ ಉಲ್ಲಸಿತವಾಗಿರುವ ಮಕ್ಕಳು, ಸುಸ್ತಾಗಿ ಮಂಕಾಗಿದ್ದು ಯಾವುದೇ ಚಟುವಟಿಕೆ ಇಲ್ಲದೆ ಇರುವುದು.

♦ ಮೂತ್ರದ ಪ್ರಮಾಣ ಕಡಿಮೆಯಾಗುವುದು ಮತ್ತು ಮೂತ್ರದ ಬಣ್ಣ ಬದಲಾಗಬಹುದು. ದಿನವೊಂದರಲ್ಲಿ ಸಾಮಾನ್ಯ ನಡು ವಯಸ್ಸಿನ ಆರೋಗ್ಯವಂಥ ವ್ಯಕ್ತಿ ಒಂದೂವರೆ ಲೀಟರ್‌ನಷ್ಟು ಮೂತ್ರ ವಿಸರ್ಜಸುತ್ತಾನೆ ಮತ್ತು ಮೂತ್ರದ ಬಣ್ಣ ತಿಳಿಯಾಗಿದ್ದು ಯಾವುದೇ ಬಣ್ಣವಿರುವುದಿಲ್ಲ. ನಿರ್ಜಲೀಕರಣವಾದಂತೆ ಮೂತ್ರದ ಪ್ರಮಾಣ ಕಡಿಮೆಯಾಗಿ, ಮೂತ್ರದ ಬಣ್ಣ ಹಳದಿ ಬಣ್ಣಕ್ಕೆ ತಿರುಗಬಹುದು.

♦ ಚರ್ಮ ಒಣಗುವುದು, ಸುಕ್ಕುಗಟ್ಟುವುದು, ಚರ್ಮದ ಕಾಂತಿ ಕುಂದುತ್ತದೆ. ತಲೆನೋವು, ಮಲಬದ್ಧತೆ, ತಲೆ ಸುತ್ತುವುದು, ತಲೆ ಭಾರವಾಗುವುದು, ಇತ್ಯಾದಿ ಕಾಣಿಸಿಕೊಳ್ಳಬಹುದು.

♦ ದೃಷ್ಟಿ ಮಂಜಾಗುವುದು, ಮೈಕೈ ನೋವು, ಮಾಂಸಖಂಡಗಳು ಹಿಡಿದುಕೊಳ್ಳುವುದು, ಸ್ನಾಯು ಸೆಳೆತ ಕಾಣಿಸಿಕೊಳ್ಳಬಹುದು.

♦ ರಕ್ತದ ಒತ್ತಡ ಕಡಿಮೆಯಾಗಬಹುದು.

♦ ಮಕ್ಕಳಲ್ಲಿ ನಿದ್ರಾಹೀನತೆ, ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಳುವುದು ಮತ್ತು ಸಿಡಿದೇಳುವುದು.

♦ ಹೃದಯದ ಬಡಿತ ಜೋರಾಗುವುದು, ಜೋರಾದ ಉಸಿರಾಟ, ಮಕ್ಕಳು ಅಳುವಾಗ ಕಣ್ಣೀರು ಬಾರದಿರುವುದು, ಕಣ್ಣಿನ ಗೋಲಗಳು ಕಣ್ಣಿನೊಳಗೆ ಹುಗಿದಂತೆ ಭಾಸವಾಗುವುದು.

♦ ಅತಿಯಾದ ನಿರ್ಜಲೀಕರಣವಾದಲ್ಲಿ, ವಿಪರೀತವಾದ ಗೊಂದಲ ಉಂಟಾಗಬಹುದು, ಬುದ್ಧ್ದಿ ಮಂಕಾಗುತ್ತದೆ ಮತ್ತು ವ್ಯಕ್ತಿ ತಾನೆಲ್ಲಿದ್ದೇನೆ ಎಂಬುದರ ಅರಿವಿಲ್ಲದಿರುವುದು ಮತ್ತು ಕೊನೆ ಹಂತದಲ್ಲಿ ಮೂರ್ಛೆ ತಪ್ಪುವುದು ಕೂಡಾ ಆಗುವ ಸಾಧ್ಯತೆ ಇದೆ.

Writer - ಡಾ. ಮುರಲೀಮೋಹನ್, ಚೂಂತಾರು

contributor

Editor - ಡಾ. ಮುರಲೀಮೋಹನ್, ಚೂಂತಾರು

contributor

Similar News