ಹಕ್ಕುಗಳೇ ಇಲ್ಲದ ಜನಕಲ್ಯಾಣ ಕಾರ್ಯಕ್ರಮಗಳ ‘ಸ್ಕೀಂ ಕಾರ್ಮಿಕರು’

Update: 2019-03-03 18:30 GMT

ಕಾರ್ಮಿಕರ ಬಗ್ಗೆ ಸರಕಾರಕ್ಕೆ ಎಷ್ಟು ನಿರ್ಲಕ್ಷವಿದೆಯೆಂದರೆ 2013ರಷ್ಟು ಹಿಂದೆಯೇ ಇಂಡಿಯನ್ ಲೇಬರ್ ಕಾನ್ಫರೆನ್ಸ್ (ಐಎಲ್‌ಸಿ) ತನ್ನ ಶಿಫಾರಸುಗಳಲ್ಲಿ ಕೇಂದ್ರ ಸರಕಾರದ ಯೋಜನಾ ಕಾರ್ಯಕ್ರಮಗಳಡಿ ದುಡಿಯುತ್ತಿರುವ ‘ಸ್ವಯಂ ಸೇವಕ’ರನ್ನು ಕಾರ್ಮಿಕರನ್ನಾಗಿ ಪರಿಗಣಿಸಬೇಕೆಂದೂ, ಕನಿಷ್ಠ ಕೂಲಿ ಹಾಗೂ ಪಿಂಚಣಿ ಸೌಲಭ್ಯಗಳನ್ನು ನೀಡಬೇಕೆಂದೂ ಹಾಗೂ ಸಾಮೂಹಿಕವಾಗಿ ತಮ್ಮ ಬೇಡಿಕೆಗಳ ಬಗ್ಗೆ ಸರಕಾರದ ಜೊತೆ ಮಾತುಕತೆಯಾಡುವ ಹಕ್ಕುಗಳನ್ನು ನೀಡಬೇಕೆಂದು ಆಗ್ರಹಿಸಿದ್ದರೂ ಅವ್ಯಾವುದನ್ನೂ ಈವರೆಗೆ ಕಿಂಚಿತ್ತೂ ಪರಿಗಣಿಸಿಲ್ಲ.

ಹಾರಾಷ್ಟ್ರದ ಅಂಗನವಾಡಿ ಕಾರ್ಯಕರ್ತೆಯರು ಫೆಬ್ರವರಿ ತಿಂಗಳುದ್ದಕ್ಕೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೇ ಕಳೆದಿದ್ದಾರೆ. ಬಿಹಾರದಲ್ಲಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ತಯಾರಕರು ತಮ್ಮ ವೇತನವನ್ನು ಹೆಚ್ಚಿಸಬೇಕೆಂದು ಜನವರಿ ತಿಂಗಳುದ್ದಕ್ಕೂ ಹೋರಾಟ ನಡೆಸಿದರು. ಈ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ತಯಾರಕರು ದೇಶಾದ್ಯಂತ ಇರುವ ಕೇಂದ್ರದ ಮತ್ತು ರಾಜ್ಯಗಳ ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ‘ಕಲ್ಯಾಣ ಕಾರ್ಯಕ್ರಮಗಳ ಕಾರ್ಮಿಕ’ರ (ಸ್ಕೀಂ ವರ್ಕರ್ಸ್ -ಸ್ಕೀಂ ಕಾರ್ಮಿಕರು) ಭಾಗವಾಗಿದ್ದಾರೆ. ಸಾರಾಂಶದಲ್ಲಿ ಈ ಕಾರ್ಮಿಕರು ಆಯಾ ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳ ರಾಯಭಾರಿಗಳು ಮತ್ತು ಜಾರಿ ಮಾಡುವವರೂ ಆಗಿದ್ದಾರೆ. ಆದರೂ ಇಂಥ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತಿಬಾರಿಯೂ ಬೀದಿಗೆ ಬಂದು ಹೋರಾಡಬೇಕಾಗುತ್ತದೆ ಮತ್ತು ಅವರ ಬೇಡಿಕೆಗಳನ್ನು ಅತ್ಯಂತ ಪಾಕ್ಷಿಕವಾಗಿ ಈಡೇರಿಸಲಾಗುತ್ತದೆ ಮತ್ತು ಅದಕ್ಕೂ ಸಹ ಸರಕಾರವು ಸಾಕಷ್ಟು ಹಿಂದೆ ಮುಂದೆ ನೋಡುತ್ತಾ ವಿಳಂಬ ಮಾಡುತ್ತದೆ.

ಈ ಸ್ಕೀಂ ಕಾರ್ಮಿಕರು ಭಾರತ ದೇಶಾದ್ಯಂತ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಂಶದಂತಹ ಮೂಲಭೂತ ಕ್ಷೇತ್ರಗಳಲ್ಲಿನ ಕೀಲಕ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅವರಿಗೆ ‘ಸ್ವಯಂ ಸೇವಕ’ರೆಂಬ ಪಟ್ಟಿ ಕಟ್ಟಿ ಅತ್ಯಂತ ಕಡಿಮೆ ಸಂಭಾವನೆಯನ್ನು ಮತ್ತು ಅತಿ ಹೆಚ್ಚು ಕೆಲಸದ ಹೊರೆಯನ್ನೂ ಹೊರಿಸಲಾಗಿದೆ ಮತ್ತು ಸರಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯವೂ ದೊರೆಯದಂತೆ ಮಾಡಲಾಗಿದೆ. ಐಸಿಡಿಎಸ್ (ಇಂಟಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವಿಸಸ್- ಸಮಗ್ರ ಶಿಶು ಅಭಿವೃದ್ಧಿ ಸೇವೆ)ನಡಿ ದೇಶಾದ್ಯಂತ 27 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಕೆಲಸ ಮಾಡುತ್ತಿದ್ದರೆ, ಅಷ್ಟೇ ಸಂಖ್ಯೆಯ ಕಾರ್ಮಿಕರು ಎಂಡಿಎಂಎಸ್ (ಮಧ್ಯಾಹ್ನದ ಬಿಸಿಯೂಟದ ಯೋಜನೆ) ಕಾರ್ಯಕ್ರಮದಡಿ ಕೆಲಸ ಮಾಡುತ್ತಿದ್ದಾರೆ. ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಆಶಾ ಮಾತು ಉಷಾ ಕಾರ್ಯಕ್ರಮದ 10 ಲಕ್ಷ ಕಾರ್ಮಿಕರು ಮತ್ತು ಮೂರು ಲಕ್ಷ ಎಎನ್‌ಎಂಗಳು ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ನ್ಯಾಷನಲ್ ಚೈಲ್ಡ್ ಲೇಬರ್ ಪ್ರಾಜೆಕ್ಟ್, ಸಣ್ಣ ಉಳಿತಾಯ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮತ್ತು ನ್ಯಾಷನಲ್ ರೂರಲ್ ಲಿವ್ಲಿಹುಡ್ ಮಿಷನ್ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ) ಹಾಗೂ ಇನ್ನಿತರ ಯೋಜನೆಗಳಡಿ ಇನ್ನೂ ಹಲವಾರು ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಈ ಕಾರ್ಮಿಕರು ಮಾಡುವ ಕೆಲಸದ ವ್ಯಾಖ್ಯಾನ ಮತ್ತು ವ್ಯಾಪ್ತಿಯನ್ನು ಗಮನಿಸಿದರೆ ಮಹಿಳೆಯರೇ ಪ್ರಧಾನವಾಗಿರುವ ಈ ಶ್ರಮಶಕ್ತಿಯು ಅಲಕ್ಷಿತ ಸಮುದಾಯಗಳ ಸಂಕ್ಷೇಮವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂಬುದು ಅರ್ಥವಾಗುತ್ತದೆ. ಅವರು ಗರ್ಭಿಣಿಯರ, ಮಕ್ಕಳ, ರೋಗಿಗಳ ಮತ್ತು ಅಪೌಷ್ಟಿಕತೆಯಿಂದ ನರಳುತ್ತಿರುವವರ ಸಂಕ್ಷೇಮದ ಜವಾಬ್ದಾರಿ ಹೊತ್ತಿರುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ‘ಮುಖ’ ಮತ್ತು ‘ಕೈ’ಗಳಾಗಿದ್ದಾರೆ. ಅವರ ಕಾರ್ಮಿಕ ಸಂಘಟನೆಗಳ ಪ್ರಕಾರ ಈ ಎಲ್ಲಾ ಕೆಲಸದ ಹೊರೆಗಳನಡುವೆ ಅವರನ್ನು ಸರಕಾರಿ ಸರ್ವೇ ಮತ್ತು ಇತರ ದತ್ತಾಂಶ ಸಂಗ್ರಹಗಳಿಗೂ ಬಳಸಿಕೊಳ್ಳಲಾಗುತ್ತದೆ. ಇಷ್ಟೆಲ್ಲಾ ಮಾಡಿದರೂ ಅವರನ್ನು ಸರಕಾರಿ ನೌಕರರೆಂದು ಪರಿಗಣಿಸುವುದಿಲ್ಲ ಮತ್ತು ಅವರು ಮಾಡುವ ಕೆಲಸ ಮತ್ತು ಹೊತ್ತಿರುವ ಜವಾಬ್ದಾರಿಗಳಿಗೆ ಹೋಲಿಸಿದರೆ ಅವರಿಗೆ ನೀಡುವ ಸಂಭಾವನೆ ಏನೇನೂ ಸಾಲದು. ಇದಲ್ಲದೆ ಇಂಥ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಒದಗಿಸುವ ಅನುದಾನದಲ್ಲಿ ಆಗುವ ಕಡಿತವು ಈ ಕಾರ್ಮಿಕರ ಅಭದ್ರತೆಗೆ ಮತ್ತು ಇನ್ನಷ್ಟು ಕೆಲಸದ ಹೊರೆಗೆ ಕಾರಣವಾಗುತ್ತದೆ ಎಂದು ಅವರ ಕಾರ್ಮಿಕ ನಾಯಕರು ವಿವರಿಸುತ್ತಾರೆ. ಮಾಧ್ಯಮಗಳಲ್ಲಿ ಬಂದಿರುವ ವರದಿಯ ಪ್ರಕಾರ 2015-16ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಐಸಿಡಿಎಸ್ ಮತ್ತು ಎಮ್‌ಡಿಎಮ್‌ಎಸ್ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಅವರು ಮಾಡುತ್ತಿರುವ ಕೆಲಸಗಳ ಮಹತ್ವವನ್ನು ಗಮನಿಸಿದಾಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಕಾರ್ಮಿಕರಿಗೆ ಗೌರವಯುತವಾದ ವೇತನ ಮತ್ತು ಕೆಲಸದ ಸೌಲಭ್ಯಗಳನ್ನು ಒದಗಿಸಬೇಕೆಂದು ನಿರೀಕ್ಷಿಸಲೇ ಬೇಕಾಗುತ್ತದೆ.
ಆದರೆ ಪರಿಸ್ಥಿತಿ ತದ್ವಿರುದ್ಧವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಮಹಾರಾಷ್ಟ್ರ ಸರಕಾರವು ಈ ಕಾರ್ಮಿಕರನ್ನು ಹಕ್ಕುಗಳುಳ್ಳ ಕಾರ್ಮಿಕ ಸಮುದಾಯವೆಂದು ಪರಿಗಣಿಸುವ ಬದಲಿಗೆ ಈ ಕಾರ್ಮಿಕರ ಸೇವೆಯನ್ನು 2018ರ ಅಗತ್ಯ ಸೇವೆಗಳ ಕಾಯ್ದೆ (ಎಸೆನ್ಷಿಯಲ್ ಸರ್ವಿಸ್ ಮೈಂಟೆನೆನ್ಸ್ ಆಕ್ಟ್-2018)ಯಡಿ ತಂದು ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿತು. 2019ರ ಜನವರಿಯಲ್ಲಿ ಬಿಹಾರದ ಅಂದಾಜು 2.48 ಲಕ್ಷ ಮಧ್ಯಾಹ್ನದ ಬಿಸಿಯೂಟ ತಯಾರಕರು ವೇತನ ಹೆಚ್ಚಳಕ್ಕಾಗಿ ಕೆಲಸ ನಿಲ್ಲಿಸಿ ಹೋರಾಟದಲ್ಲಿ ತೊಡಗಿದರು. ಇದರಿಂದ ಲಕ್ಷಾಂತರ ಶಾಲಾ ಮಕ್ಕಳಿಗೆ ತೊಂದರೆಯಾದರೂ ಆ ಹೋರಾಟಕ್ಕೆ ಕಿವಿಗೊಡದ ಬಿಹಾರ ಸರಕಾರ ಸತತ 39 ದಿನಗಳ ಕಾಲ ಬಿಸಿಯೂಟ ಕಾರ್ಮಿಕರು ಹೋರಾಟ ಮಾಡುವಂತೆ ಮಾಡಿ ಕೊನೆಗೆ ಅತ್ಯಲ್ಪ ಪ್ರಮಾಣದ ವೇತನವನ್ನು ಮಾತ್ರ ಹೆಚ್ಚಿಸಿತು. ಯಾವುದೇ ಅಂಗನವಾಡಿಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳಿದ್ದರೆ ಅಂತಹ ಅಂಗನವಾಡಿಗಳನ್ನು ಮುಚ್ಚಲು ಸರಕಾರ ಮುಂದಾಗಿದೆಯೆಂದು ಅವರ ಕಾರ್ಮಿಕ ಸಂಘವು ಆರೋಪಿಸುತ್ತಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲೇ 97,000 ದೊಡ್ಡ ಮತ್ತು 10,000 ಸಣ್ಣ ಅಂಗನವಾಡಿಗಳಿದ್ದು ಪ್ರತಿ ಅಂಗನವಾಡಿಗಳಲ್ಲಿ ಕನಿಷ್ಠ ಒಬ್ಬ ಶಿಕ್ಷಕ/ಉಸ್ತುವಾರಿ ಮತ್ತು ಒಬ್ಬ ಸಹಾಯಕರಿರುತ್ತಾರೆ. ಇವುಗಳು ಬಂದ್ ಆದರೆ ಇಷ್ಟು ದೊಡ್ಡ ಪ್ರಮಾಣದ ಕಾರ್ಮಿಕರ ಭವಿಷ್ಯ ಅತಂತ್ರವಾಗುತ್ತದೆ.
ಕೇಂದ್ರ ಸರಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳಡಿ ದೇಶಾದ್ಯಂತ ಕೆಲಸ ಮಾಡುವ 50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಬೇಡಿಕೆಗಳತ್ತ ಸರಕಾರದ ಗಮನ ಸೆಳೆಯಲು 2018ರ ಜನವರಿ 17ರಂದು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರವನ್ನು ಮಾಡಿದರು ಮತ್ತು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳ ಮುಂದೆ ಪ್ರತಿಭಟನಾ ಪ್ರದರ್ಶನವನ್ನು ಮಾಡಿದರು. ದೇಶದ ಹತ್ತು ಕೇಂದ್ರೀಯ ಟ್ರೇಡ್ ಯೂನಿಯನ್ನುಗಳು ಒಟ್ಟು ಸೇರಿ ಈ ಮುಷ್ಕರಕ್ಕೆ ಕರೆ ನೀಡಿದ್ದರು. ವಾಸ್ತವವಾಗಿ ಈ ಕಾರ್ಮಿಕರ ಬಗ್ಗೆ ಸರಕಾರಕ್ಕೆ ಎಷ್ಟು ನಿರ್ಲಕ್ಷವಿದೆಯೆಂದರೆ 2013ರಷ್ಟು ಹಿಂದೆಯೇ ಇಂಡಿಯನ್ ಲೇಬರ್ ಕಾನ್ಫರೆನ್ಸ್ (ಐಎಲ್‌ಸಿ) ತನ್ನ ಶಿಫಾರಸುಗಳಲ್ಲಿ ಕೇಂದ್ರ ಸರಕಾರದ ಯೋಜನಾ ಕಾರ್ಯಕ್ರಮಗಳಡಿ ದುಡಿಯುತ್ತಿರುವ ‘ಸ್ವಯಂ ಸೇವಕ’ರನ್ನು ಕಾರ್ಮಿಕರನ್ನಾಗಿ ಪರಿಗಣಿಸಬೇಕೆಂದೂ, ಕನಿಷ್ಠ ಕೂಲಿ ಹಾಗೂ ಪಿಂಚಣಿ ಸೌಲಭ್ಯಗಳನ್ನು ನೀಡಬೇಕೆಂದೂ ಹಾಗೂ ಸಾಮೂಹಿಕವಾಗಿ ತಮ್ಮ ಬೇಡಿಕೆಗಳ ಬಗ್ಗೆ ಸರಕಾರದ ಜೊತೆ ಮಾತುಕತೆಯಾಡುವ ಹಕ್ಕುಗಳನ್ನು ನೀಡಬೇಕೆಂದು ಆಗ್ರಹಿಸಿದ್ದರೂ ಅವ್ಯಾವುದನ್ನೂ ಸರಕಾರ ಈವರೆಗೆ ಕಿಂಚಿತ್ತೂ ಪರಿಗಣಿಸಿಲ್ಲ. ಈಗ ಹಾಲಿ ಮುಷ್ಕರ ನಿರತರಾಗಿರುವ ಕಾರ್ಮಿಕರು ಮೇಲಿನ ಐಎಲ್‌ಸಿ ಶಿಫಾರಸುಗಳನ್ನು ಜಾರಿಗೆ ತರಬೇಕೆಂದೂ, ಪ್ರಾವಿಡೆಂಟ್ ಫಂಡ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಒದಗಿಸಬೇಕೆಂದೂ, ಕೇಂದ್ರೀಯ ಸಮಾಜ ಕಲ್ಯಾಣ ಯೋಜನೆಗಳಿಗೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನಗಳನ್ನು ಒದಗಿಸಬೇಕೆಂದೂ, ಸೂಕ್ತವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದೂ ಹಾಗೂ ಕೆಲವು ಕೇಂದ್ರೀಯ ಯೋಜನೆಗಳನ್ನು ಸರಕಾರೇತರ ಸಂಸ್ಥೆಗಳಿಗೆ ವಹಿಸಿಕೊಡುವ ಮೂಲಕ ಅವುಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ನಿಲ್ಲಿಸಬೇಕೆಂದೂ ಆಗ್ರಹಿಸುತ್ತಿದ್ದಾರೆ.
ಸಾಮಾನ್ಯವಾಗಿ ‘ಮಹಿಳೆಯರ ಕೆಲಸ’ದ ಬಗ್ಗೆ ಸಮಾಜದ ದೃಷ್ಟಿಕೋನವಿರುವಂತೆ ತಮ್ಮ ಕೆಲಸದ ವೌಲ್ಯವನ್ನು ಸಹ ಕೆಳ ಅಂದಾಜು ಮಾಡಿ ನೋಡಲಾಗುತ್ತಿದೆಯೆಂದೂ ಮತ್ತು ತಮ್ಮ ಬೇಡಿಕೆಗಳನ್ನು ಮೂಲೆಗುಂಪು ಮಾಡಲಾಗುತ್ತಿದೆಯೆಂದೂ ಈ ಕಾರ್ಮಿಕರು ಬೆಟ್ಟುಮಾಡಿ ತೋರಿಸುತ್ತಾರೆ. ಸರಕಾರವು ತನ್ನ ಕೀಲಕ ಸಂಕ್ಷೇಮ ಕರ್ತವ್ಯಗಳಿಂದ ಹಿಂದೆಸರಿಯಬೇಕೆಂಬ ವ್ಯೆಹತಂತ್ರದ ಭಾಗವಾಗಿಯೇ ಈ ಸೇವೆಗಳನ್ನು ಖಾಸಗೀಕರಿಸಲಾಗುತ್ತಿದೆ ಮತ್ತು ಬಜೆಟ್‌ನಲ್ಲಿ ಅನುದಾನಗಳನ್ನು ಕಡಿತಗೊಳಿಸಲಾಗುತ್ತಿದೆ. ಹೀಗಾಗಿ ಈ ಕಾರ್ಮಿಕರ ಹೋರಾಟಗಳು ಕಾರ್ಮಿಕರ ಯಾವುದೋ ಒಂದು ವಿಭಾಗದ ಕಾರ್ಮಿಕರ ಕೇವಲ ಆರ್ಥಿಕ ಬೇಡಿಕೆಗಳಿಗಾಗಿನ ಹೋರಾಟವೆಂಬ ವ್ಯಾಪ್ತಿಯನ್ನು ಮೀರಿ ಇನ್ನೂ ವಿಶಾಲವಾಗಿದೆ ಮತ್ತು ಗಹನವಾದದ್ದಾಗಿದೆ.

ಕೃಪೆ:  Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ