ಎರಡು ಹಂತದ ಮತದಾನ ನಡೆಯುತ್ತಿರುವ ರಾಜ್ಯದ ಏಕೈಕ ಜಿಲ್ಲೆ ಉಡುಪಿ!

Update: 2019-03-22 07:40 GMT

ಲೋಕತಂತ್ರ 2019

ಉಡುಪಿ, ಮಾ.21: ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ಉಡುಪಿ ಜಿಲ್ಲೆಯು ಇಡೀ ರಾಜ್ಯದಲ್ಲೇ ವಿಶೇಷ ಜಿಲ್ಲೆಯಾಗಿ ಮೂಡಿಬಂದಿದೆ. ಯಾವುದೇ ಜಿಲ್ಲೆಯಲ್ಲೂ ನಡೆಯದ ಎರಡು ಹಂತದ ಚುನಾವಣೆ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವುದೇ ಈ ವಿಶೇಷ. ಚುನಾವಣಾ ಆಯೋಗ ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ. ಮೊದಲನೇ ಹಂತ ಎ.18 ಮತ್ತು ಎರಡನೇ ಹಂತ ಎ.23ರಂದು ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದರೆ, ಎರಡನೇ ಹಂತದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. 2018ರ ಕ್ಷೇತ್ರ ಪುನರ್‌ವಿಂಗಡೆಯ ಬಳಿಕ ಉಡುಪಿ ಜಿಲ್ಲಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆ ಯಾಗಿರುವುದರಿಂದ ಉಡುಪಿ ಜಿಲ್ಲೆ ಈ ಬಾರಿಯ ಎರಡೂ ಹಂತದ ಮತ ದಾನವನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಮೊದಲ ಹಂತ ಮಾತ್ರವಲ್ಲದೆ ಎ.23ರ ಎರಡನೆ ಹಂತದ ಮತದಾನದವರೆಗೂ ಕಾರ್ಯನಿರ್ವಹಿಸಬೇಕಾಗುತ್ತದೆ.

ರಾಜ್ಯದ ಇತರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದ್ದರೂ ಎರಡು ಹಂತದ ಮತದಾನ ನಡೆಯುತ್ತಿರು ವುದು ಇಲ್ಲಿ ಮಾತ್ರ ಎಂಬುದು ವಿಶೇಷ. ಆದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಗೆ ಮಾತ್ರ ಕಾರ್ಯವ್ಯಾಪ್ತಿಯ ಬಗ್ಗೆ ಸಮಸ್ಯೆಗಳು ಹಾಗೂ ಗೊಂದಲಗಳು ಎದುರಾಗಿವೆ. 2014ರ ಲೋಕಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆದಿರುವುದರಿಂದ ಈ ರೀತಿಯ ಸಮಸ್ಯೆ ಎದುರಾಗಿರಲಿಲ್ಲ. ಕ್ಷೇತ್ರ ಶಿವಮೊಗ್ಗಕ್ಕೆ, ಜವಾಬ್ದಾರಿ ಉಡುಪಿಗೆ!: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಚುನಾವಣಾಧಿಕಾರಿಯಾಗಿದ್ದರೆ, ಬೈಂದೂರು ವಿಧಾನ ಕ್ಷೇತ್ರವನ್ನೊಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಚುನಾವಣಾಧಿಕಾರಿಯಾಗಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಎ.23ರ ಎರಡನೆ ಹಂತದ ಮತದಾನ ನಡೆಯುವುದರಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಎ.18ರ ಮೊದಲ ಹಂತದ ಮತದಾನ ಮುಗಿದರೂ ಉಡುಪಿ ಜಿಲ್ಲಾಡಳಿತದ ಜವಾಬ್ದಾರಿ ಮಾತ್ರ ಮುಂದುವರಿಯಲಿದೆ.

ಶಿವಮೊಗ್ಗ ಜಿಲ್ಲಾಧಿಕಾರಿ ಚುನಾವಣಾಧಿಕಾರಿಯಾಗಿರುವ ಬೈಂದೂರು ಕ್ಷೇತ್ರದಲ್ಲಿ ಮತದಾನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾತ್ರ ಉಡುಪಿ ಜಿಲ್ಲಾಡಳಿತವೇ ಮಾಡಬೇಕಾಗಿದೆ.ಮತಯಂತ್ರ, ಸಿಬ್ಬಂದಿ, ವಾಹನದ ವ್ಯವಸ್ಥೆ, ಪೊಲೀಸ್ ಭದ್ರತೆ ಸೇರಿದಂತೆ ಎಲ್ಲ ಕಾರ್ಯಗಳ ಜವಾಬ್ದಾರಿ ಉಡುಪಿ ಜಿಲ್ಲಾಡಳಿತದ್ದಾಗಿದೆ. ಸಣ್ಣ ಸಣ್ಣ ಚುನಾವಣಾ ಪ್ರಚಾರಕ್ಕೆ ಬೇಕಾದ ಅನುಮತಿಯನ್ನು ಬೈಂದೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಿಂದ ಪಡೆದುಕೊಂಡರೆ, ಹೆಲಿಕಾಪ್ಟರ್, ಸ್ಟಾರ್ ಪ್ರಚಾರಕರ ಪ್ರಚಾರಕ್ಕೆ ಉಡುಪಿ ಜಿಲ್ಲಾಡಳಿತವೇ ಅನುಮತಿ ಕೊಡಬೇಕಾಗುತ್ತದೆ. ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ಅದರ ವರದಿ, ಉಡುಪಿ ಜಿಲ್ಲಾಡಳಿತದ ಮೂಲಕವೇ ಶಿವಮೊಗ್ಗ ಚುನಾವಣಾಧಿಕಾರಿಗೆ ಹೋಗಬೇಕಾಗುತ್ತದೆ. ಆದರೆ ಮಾಧ್ಯಮದಲ್ಲಿ ಆಗುವ ನೀತಿ ಸಂಹಿತೆ ಉಲ್ಲಂಘನೆಯು ನೇರವಾಗಿ ಶಿವಮೊಗ್ಗ ಚುನಾವಣಾಧಿಕಾರಿಯ ವ್ಯಾಪ್ತಿಗೆ ಬರುತ್ತದೆ. ಅದೇ ರೀತಿ ಬೈಂದೂರು ಕ್ಷೇತ್ರದಲ್ಲಿ ಮತದಾನ ಪ್ರಮಾಣ ವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ ಸ್ವೀಪ್ ಕಾರ್ಯ ಕ್ರಮವನ್ನು ಕೂಡ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯೇ ನಡೆಸಬೇಕು. ಹೀಗಾಗಿ ಎ.18ರ ಮೊದಲ ಹಂತದ ಚುನಾವಣೆಯ ನಂತರವೂ ಬೈಂದೂರು ಕ್ಷೇತ್ರದಲ್ಲಿ ಸ್ವೀಪ್ ಕಾರ್ಯಕ್ರಮಗಳು ಮತದಾನಕ್ಕೆ ಮುನ್ನಾ ದಿನವಾದ ಎ.22ರವರೆಗೆ ಮುಂದುವರಿಯಲಿದೆ.

ಅದಲು ಬದಲಾದ ಕ್ಷೇತ್ರಗಳು

1957ರಲ್ಲಿ ಆರಂಭಗೊಂಡ ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಮುಲ್ಕಿ- ಮೂಡುಬಿದಿರೆ, ಸುರತ್ಕಲ್, ಬಂಟ್ವಾಳ ವಿಧಾನಸಭಾ ಕ್ಷೇತ್ರಗಳಿದ್ದವು. ಆದರೆ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ಮಾತ್ರ ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡನೆಯಿಂದ ಉಡುಪಿ-ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರವು ರಚನೆಗೊಂಡಿತು. ಇದರಿಂದ ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಲೋಕಸಭಾದ ಕ್ಷೇತ್ರದ ಪಾಲಾಯಿತು. ಬ್ರಹ್ಮಾವರ ವಿಧಾನಸಭಾ ಕ್ಷೇತ್ರವು ಮಾಯವಾಗಿ ಉಡುಪಿ ಮತ್ತು ಕುಂದಾಪುರ ಕ್ಷೇತ್ರಗಳಲ್ಲಿ ಹಂಚಿಹೊಯಿತು.

ಹೀಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾರ್ಕಳ, ಕಾಪು ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡುಗೆರೆ, ಚಿಕ್ಕಮಗಳೂರು ತರಿಕೆರೆ ವಿಧಾನಸಭಾ ಕ್ಷೇತ್ರಗಳು ಸೇರ್ಪಡೆಗೊಂಡವು. ಅದರ ಪರಿಣಾಮ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾದವು.

ಎರಡು ಹಂತದ ಮತದಾನಗಳು ಇಡೀ ರಾಜ್ಯದಲ್ಲೇ ಉಡುಪಿ ಜಿಲ್ಲೆಯಲ್ಲಿ ಮಾತ್ರ ನಡೆಯುತ್ತಿವೆ. ಬೈಂದೂರು ಕ್ಷೇತ್ರದ ಚುನಾವಣಾಧಿಕಾರಿ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದರೂ ಮತದಾನಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ಉಡುಪಿ ಜಿಲ್ಲಾಡಳಿತವೇ ಮಾಡಬೇಕಾಗುತ್ತದೆ. ಮತಯಂತ್ರ, ಸಿಬ್ಬಂದಿ, ರಕ್ಷಣೆ ಮಾತ್ರವಲ್ಲದೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕೂಡ ನಮ್ಮ ವ್ಯಾಪ್ತಿಗೆ ಬರುತ್ತದೆ.

 ವಿದ್ಯಾ ಕುಮಾರಿ,

ಅಪರ ಜಿಲ್ಲಾಧಿಕಾರಿ, ಉಡುಪಿ

ಎರಡೂ ಹಂತದ ಮತದಾನಗಳು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವುದ ರಿಂದ ಸ್ವೀಪ್ ಕಾರ್ಯಕ್ರಮಗಳು ಎ.23ರವರೆಗೂ ಮುಂದುವರಿಯುತ್ತದೆ. ಈ ಬಗ್ಗೆ ಇದ್ದ ಕೆಲವೊಂದು ಗೊಂದಲಗಳನ್ನು ನಿವಾರಿಸಲಾಗಿದೆ. ಬೈಂದೂರು ಸಹಾಯಕ ಚುನಾವಣಾಧಿಕಾರಿ ಮೂಲಕ ಮತದಾನ ಹೆಚ್ಚಿಸುವ ಕಾರ್ಯಕ್ರಮ ಗಳನ್ನು ನಡೆಸಲಾಗುವುದು.

 ಸಿಂಧೂ ಬಿ.ರೂಪೇಶ್,

ಅಧ್ಯಕ್ಷರು, ಉಡುಪಿ ಜಿಲ್ಲಾ ಸ್ವೀಪ್ ಸಮಿತಿ

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News