ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ‘ಗೋ ಬ್ಯಾಕ್' ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು

Update: 2019-03-26 11:33 GMT

ಪಾಟ್ನಾ, ಮಾ.26: ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜ್ಯಸಭಾ ಸಂಸದ ಆರ್.ಕೆ. ಸಿನ್ಹಾ ಅವರ ಬೆಂಬಲಿಗರು ಪಾಟ್ನಾ ವಿಮಾನ ನಿಲ್ದಾಣದ ಹೊರಗಡೆ ಮಂಗಳವಾರ ಕೇಂದ್ರ ಸಚಿವ  `ರವಿಶಂಕರ್  ಪ್ರಸಾದ್ ಗೋ ಬ್ಯಾಕ್'' ಎಂಬ ಘೋಷಣೆಗಳನ್ನು ಕೂಗಿದರು.

ಸಿನ್ಹಾ ಅವರನ್ನು ಕಡೆಗಣಿಸಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಪಡೆದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರು ಆರ್.ಕೆ. ಸಿನ್ಹಾ ಅವರನ್ನು ಬೆಂಬಲಿಸಿ ಕೂಡ ಘೋಷಣೆಗಳನ್ನು ಕೂಗಿದ್ದಾರೆ.

ನಟ ಶತ್ರುಘ್ನ ಸಿನ್ಹಾ ಈ ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸುತ್ತಿದ್ದರೂ ಕಳೆದ ಹಲವು ಸಮಯದಿಂದ ಮೋದಿ ಸರಕಾರದ ಕಟು ಟೀಕಾಕಾರರಾಗಿ ಮಾರ್ಪಟ್ಟಿರುವ ಅವರಿಗೆ ನಿರೀಕ್ಷೆಯಂತೆ ಈ ಬಾರಿ ಟಿಕೆಟ್ ದಕ್ಕದೆ ಅವರ ಬದಲು ರವಿ ಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತ್ತು.

ಆರ್.ಕೆ. ಸಿನ್ಹಾ ಅವರು ಈ ಕ್ಷೇತ್ರದ ಟಿಕೆಟಿಗಾಗಿ ಹಂಬಲಿಸುತ್ತಿದ್ದವರಲ್ಲಿ ಪ್ರಮುಖರಾಗಿದ್ದರೂ ಅವರನ್ನು ಕಡೆಗಣಿಸಿ ಪ್ರಸಾದ್ ಅವರಿಗೆ ಟಿಕೆಟ್ ನೀಡಿರುವುದು ಸಿನ್ಹಾ ಬೆಂಬಲಿಗರ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 17 ಸ್ಥಾನಗಳಿಗೆ ಸ್ಪರ್ಧಿಸಲಿದ್ದರೆ ಲೋಕ ಜನಶಕ್ತಿ ಪಾರ್ಟಿ ಆರು ಸ್ಥಾನಗಳಿಗೆ ಸ್ಪರ್ಧಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News