ಸೇನೆಯಲ್ಲಿ 2ನೆ ಭಾರಿ ಸೇವಾ ಹಿರಿತನ ಕಡೆಗಣಿಸಿದ ಮೋದಿ ಸರಕಾರ
ಹೊಸದಿಲ್ಲಿ, ಎ.8: ನೌಕಾಪಡೆಯ ಮುಖ್ಯಸ್ಥರ ನೇಮಕ ಸಂದರ್ಭ ತನ್ನ ಸೇವಾ ಜ್ಯೇಷ್ಠತೆಯನ್ನು ಕಡೆಗಣಿಸಿ, ತನಗಿಂತ ಜ್ಯೂನಿಯರ್ ಆಗಿರುವ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ರನ್ನು ನೇಮಕ ಮಾಡಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ವೈಸ್ ಅಡ್ಮಿರಲ್ ಬಿಮಲ್ ವರ್ಮ ಸಶಸ್ತ್ರ ಪಡೆಗಳ ಟ್ರಿಬ್ಯುನಲ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ನೌಕಾಸೇನೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬ ಮೇ 31ರಂದು ನಿವೃತ್ತರಾಗಲಿದ್ದು, ಅವರ ಸ್ಥಾನದಲ್ಲಿ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ರನ್ನು ಸರಕಾರ ನೇಮಕ ಮಾಡಿದೆ. ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನು ನೇಮಕ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಸರಕಾರ ಸೇವಾ ಹಿರಿತನವನ್ನು ಕಡೆಗಣಿಸಿರುವ ದ್ವಿತೀಯ ಸಂದರ್ಭ ಇದಾಗಿದೆ. 2016ರಲ್ಲಿ ಲೆ.ಜ. ಪ್ರವೀಣ್ ಬಕ್ಷಿ ಸೇವಾ ಜ್ಯೇಷ್ಠತೆಯನ್ನು ಕಡೆಗಣಿಸಿ ಜನರಲ್ ಬಿಪಿನ್ ರಾವತ್ರನ್ನು ಸೇನಾಪಡೆ ಮುಖ್ಯಸ್ಥರನ್ನಾಗಿ ಮೋದಿ ಸರಕಾರ ನೇಮಿಸಿತ್ತು. ಪ್ರತಿಷ್ಟಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದ ಕರಂಬೀರ್ ಸಿಂಗ್ ನೌಕಾಪಡೆಯ ಮುಖ್ಯಸ್ಥರ ಸ್ಥಾನಕ್ಕೇರಿದ ಪ್ರಪ್ರಥಮ ಹೆಲಿಕಾಪ್ಟರ್ ಪೈಲಟ್ ಆಗಲಿದ್ದಾರೆ. ಇವರು 2017ರಿಂದ ಪೂರ್ವ ನೌಕಾಕಮಾಂಡ್ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.