ಪದವೀಧರೆಯಲ್ಲವೆಂದು ಒಪ್ಪಿಕೊಂಡ ಸಚಿವೆ ಸ್ಮೃತಿ ಇರಾನಿ
ಅಮೇಠಿ,ಎ.12: ಉತ್ತರಪ್ರದೇಶದ ಅಮೇಠಿಯಲ್ಲಿ ರಾಹುಲ್ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದಾವಿತ್ನಲ್ಲಿ ತಾನು ಪದವೀರೆಯಲ್ಲವೆಂದು ಘೋಷಿಸಿದ್ದಾರೆ. ತನ್ನ ಮೂರು ವರ್ಷಗಳ ಅವಧಿಯ ಪದವಿ ಕೋರ್ಸ್ ಪೂರ್ಣಗೊಂಡಿಲ್ಲವೆಂದು ಅವರು ಘೋಷಿಸಿರುವುದು ಇದೇ ಮೊದಲ ಸಲವಾಗಿದೆ.
ಉನ್ನತ ಶೈಕ್ಷಣಿಕ ಅರ್ಹತೆ ಶ್ರೇಣಿಯಲ್ಲಿ ತನ್ನ ದಿಲ್ಲಿಯ ಮುಕ್ತ ವಿಶ್ವದ್ಯಾನಿಲಯದಲ್ಲಿ ವಾಣಿಜ್ಯಶಾಸ್ತ್ರ ಭಾಗ-1ರ ಪದವಿ ಶಿಕ್ಷಣ ಕೋರ್ಸ್ಗೆ 1994ರಲ್ಲಿ ತಾನು ಸೇರ್ಪಡೆಯಾಗಿದ್ದು, ಅದನ್ನು ತಾನು ಪೂರ್ತಿಗೊಳಿಸಿಲ್ಲವೆಂದು ಆಕೆ ಅಫಿದಾವಿತ್ನಲ್ಲಿ ತಿಳಿಸಿದ್ದಾರೆ.
ಸ್ಮೃತಿ ಇರಾನಿ ಅವರು 2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ವೇಳೆ ಸಲ್ಲಿಸಿದ್ದ ಅಫಿದಾವಿತ್ನಲ್ಲಿ ತಾನು 1994ರಲ್ಲಿ ದಿಲ್ಲಿ ಮುಕ್ತ ವಿವಿಯಲ್ಲಿ ವಾಣಿಜ್ಯ ಶಾಸ್ತ್ರ ಭಾಗ-1ರ ಕೋರ್ಸ್ ಅಧ್ಯಯನ ಮಾಡಿರುವುದಾಗಿ ವಿವರಿಸಿದ್ದರು.
2004ರಲ್ಲಿ ದಿಲ್ಲಿಯ ಚಾಂದನಿಚೌಕ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರು ಅಫಿದಾವಿತ್ನಲ್ಲಿ ದಿಲ್ಲಿ ವಿವಿ ಅಂಚೆ ತೆರಪಿನ ಶಿಕ್ಷಣದಲ್ಲಿ 1996ರ ಬಿ.ಎ. ಪದವೀಧರಳೆಂದು ತಿಳಿಸಿದ್ದರು.
ತಾನು ಹೊಂದಿರುವ ಸಂಪತ್ತಿನ ವೌಲ್ಯ 4.71 ಕೋಟಿ ರೂ.ಗಳೆಂದು ಸ್ಮತಿ ಅಫಿದಾವಿತ್ನಲ್ಲಿ ಘೋಷಿಸಿದ್ದಾರೆ. ಸಚಿವೆ ಸ್ಮತಿ ಇರಾನಿ ತನ್ನ ಶೈಕ್ಷಣಿಕ ಅರ್ಹತೆಯ ಬಗ್ಗೆ ವ್ಯತಿರಿಕ್ತವಾದ ಮಾಹಿತಿಗಳನ್ನು ನೀಡುತ್ತಿದ್ದಾರೆಂದು ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಆರೋಪಿಸುತ್ತಿವೆ.