ನವಜ್ಯೋತ್ ಸಿಂಗ್ ಸಿಧುಗೆ ಚುನಾವಣಾ ಆಯೋಗ ನೋಟಿಸ್

Update: 2019-04-21 17:13 GMT

ಹೊಸದಿಲ್ಲಿ, ಎ. 21: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪೂರ್ಣವಾಗಿ ಸೋಲಿಸಲು ಮತ ಹಾಕಿ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ ಚುನಾವಣಾ ಆಯೋಗ ಶನಿವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ರಾಜಕೀಯ ಪ್ರಚಾರದಲ್ಲಿ ಧಾರ್ಮಿಕತೆ ಉಲ್ಲೇಖಿಸುವುದಕ್ಕೆ ನಿಷೇಧ ಹೇರಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಉಲ್ಲಂಘಿಸುವ ಮೂಲಕ ಸಿಧು ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೋಟಿಸಿಗೆ ಪ್ರತಿಕ್ರಿಯೆ ನೀಡಲು ಸಿಧು ಅವರಿಗೆ 24 ಗಂಟೆಗಳ ಕಾಲಾವಕಾಶ ನೀಡಿದೆ. ಇಲ್ಲಿ ಚುನಾವಣಾ ರ್ಯಾಲಿ ಸಂದರ್ಭ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಬಿಹಾರದ ಕಥಿಹಾರ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಿಧು ವಿರುಧ್ದ ಎಫ್‌ಐಆರ್ ದಾಖಲಿಸಲಾಗಿತ್ತು.

ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಸಿಧು, “ಬಿಹಾರದಲ್ಲಿರುವ ಲೋಕಸಭಾ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರು ಸಂಘಟಿತರಾಗಿ ಮತ ಹಾಕಿ ಮೋದಿ ಅವರನ್ನು ಸೋಲಿಸಬೇಕು” ಎಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News