ಬಿಜೆಪಿ ಮುಖಂಡ ಹತ್ಯೆ ಪ್ರಕರಣ: ತನಿಖೆಗೆ ರಾಜ್ಯಪಾಲರ ಆದೇಶ
Update: 2019-05-05 16:21 GMT
ಶ್ರೀನಗರ, ಮೇ 5: ಬಿಜೆಪಿ ಮುಖಂಡ ಗುಲ್ ಮುಹಮ್ಮದ್ ಮೀರ್ ಅವರ ಹತ್ಯೆಯನ್ನು ಖಂಡಿಸಿರುವ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಇತ್ತೀಚಿನ ಕೆಲ ತಿಂಗಳುಗಳಲ್ಲಿ ರಾಜ್ಯದಲ್ಲಿ ನಡೆದ ವಿವಿಧ ಪಕ್ಷಗಳ ಕಾರ್ಯಕರ್ತರ ಹತ್ಯೆಯ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ರಾಜಕೀಯ ಕಾರ್ಯಕರ್ತರಿಗೆ ಒದಗಿಸಲಾಗಿರುವ ಭದ್ರತೆಯಲ್ಲಿ ಲೋಪವಾಗಿದೆಯೇ ಎಂಬುದನ್ನು ಪತ್ತೆಹಚ್ಚುವಂತೆ ಮತ್ತು ಈಗಿನಿಂದಲೇ ರಾಜ್ಯದ ಎಲ್ಲಾ ರಾಜಕೀಯ ವ್ಯಕ್ತಿಗಳಿಗೆ ಭದ್ರತೆ ಬಿಗಿಗೊಳಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಹ್ಮಣ್ಯಂಗೆ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ. ಶ್ರೀನಗರದಲ್ಲಿ ಸಚಿವಾಲಯ ಕಾರ್ಯಾರಂಭ ಮಾಡಿದ ಬಳಿಕ ರಾಜ್ಯಪಾಲರು ಉನ್ನತ ಮಟ್ಟದ ಸಭೆ ಕರೆದು ಎಲ್ಲಾ ರಾಜಕೀಯ ಮುಖಂಡರು ಹಾಗೂ ಪಂಚಾಯತ್ ಮುಖಂಡರಿಗೆ ನೀಡಲಾಗಿರುವ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಲಿದ್ದಾರೆ ಎಂದವರು ಹೇಳಿದ್ದಾರೆ.