ಮೇ ಸಾಹಿತ್ಯ ಮೇಳ ಚೆಲ್ಲಿದ ಬೆಳಕು

Update: 2019-05-12 18:31 GMT

ಸರಕಾರದಿಂದ ಕೋಟಿ ಕೋಟಿ ಪಡೆದು ಅದ್ದೂರಿಯ ಸಮ್ಮೇಳನ ನಡೆಸುವ ಕಡೆ ಸಾಹಿತ್ಯವೇ ತುಂಬ ತುಟ್ಟಿಯಾಗಿರುತ್ತದೆ. ಆದರೆ ಮೇ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಅರ್ಥಪೂರ್ಣ ಚರ್ಚೆ, ಸಂವಾದ, ಹಾಡು, ಸೂಫಿಗಾಯನ ಗಮನ ಸೆಳೆಯುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದ್ಯಾವುದೋ ಊರಿನ ಸಮಾನ ಮನಸ್ಕ ಗೆಳೆಯರ ಭೇಟಿ ಮೇ ಬಿಸಿಲಿನಲ್ಲೂ ಮನಸ್ಸನ್ನು ತಂಪಾಗಿ ಇಡುತ್ತದೆ.


ಪ್ರಗತಿಪರ ಸಂಘಟನೆಗಳಿಗೆ ಇದು ಅತ್ಯಂತ ಕೆಟ್ಟ ಕಾಲ. ಭಾರತ ಮಾತ್ರವಲ್ಲ ಜಗತ್ತಿನಲ್ಲೂ ಅದೇ ಪರಿಸ್ಥಿತಿ. ಇಲ್ಲಿ ಮನುವಾದಿ ಫ್ಯಾಶಿಸ್ಟ್ ಪಡೆಗಳು ಹುಟ್ಟಿಕೊಂಡಂತೆ ಜಗತ್ತಿನ ಇತರ ದೇಶಗಳಲ್ಲಿ ಮುಖ್ಯವಾಗಿ ಯುರೋಪಿನಲ್ಲಿ ಹಿಟ್ಲರ್‌ನ ಭೂತ ಗೋರಿಯಿಂದ ಹೊರಗೆದ್ದು ಬಂದು ಅನೇಕರ ಮೈಯಲ್ಲಿ ಹೊಕ್ಕಿದೆ.ಜನಾಂಗೀಯ ಧ್ವೇಷದ ಉನ್ಮಾದ ಎಲ್ಲೆಡೆ ಪಿಡುಗಿನಂತೆ ಹಬ್ಬುತ್ತಿದೆ.

ಇಂಥ ಆತಂಕದ ದಿನಗಳಲ್ಲಿ ಗದಗಿನಲ್ಲಿ ‘ಕಟ್ಟುತ್ತೇವೆ ನಾವು ಕಟ್ಟುತ್ತೇವೆ ಹೊಸ ನಾಡ ಕಟ್ಟುತ್ತೇವೆ’ ಎಂದು ಛಲದಿಂದ ಮೇ ಸಾಹಿತ್ಯ ಸಮ್ಮೇಳನ ನಡೆಯಿತು. ನಾಡಿನ ನಾನಾ ಕಡೆಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ಸಮಾನ ಮನಸ್ಕರು ಈ ಸಮಾವೇಶಕ್ಕೆ ಸಾಕ್ಷಿಯಾದರು. ಬಂದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಯುವಜನರು ಎಂಬುದು ಭರವಸೆದಾಯಕ ಸಂಗತಿ.

ಗದಗಿನ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ ಮತ್ತು ಧಾರವಾಡದ ಚಿತ್ತಾರ ಕಲಾಬಳಗ ಸಂಘಟಿಸಿದ್ದ ಈ ಸಮ್ಮೇಳನಕ್ಕೆ ದಲಿತ ಕಲಾ ಮಂಡಲಿ, ನಾಗಸುಧೆ ಜಗಲಿ, ಅನನ್ಯ ಸಾಹಿತ್ಯ ಕೂಟ, ಮಾನವ ಬಂಧುತ್ವ ವೇದಿಕೆ, ಕೆಜೆವಿಎಸ್ ಬಾಮ್ಸಪ್ ಮುಂತಾದ ಸಂಘಟನೆಗಳು ಹೆಗಲುಕೊಟ್ಟವು.
ಪ್ರತಿ ವರ್ಷ ಮೇ ತಿಂಗಳಲ್ಲಿ ಈ ಸಮ್ಮೇಳನ ನಡೆಯುತ್ತದೆ. ಗದಗ್‌ನಲ್ಲಿ ನಡೆದದ್ದು ಆರನೇ ಸಮ್ಮೇಳನ. ಪ್ರತಿ ವರ್ಷ ಧಾರವಾಡದಲ್ಲಿ ನಡೆಯುತ್ತಿದ್ದ ಮೇ ಸಾಹಿತ್ಯ ಸಮ್ಮೇಳನ ತಮ್ಮ ಊರಿನಲ್ಲೇ ನಡೆಯಬೇಕೆಂದು ಗದಗಿನ ಯುವಕರು ಹಠ ಹಿಡಿದು ಅಲ್ಲೇ ನಡೆಸಿದರು. ಗದಗ್‌ನಲ್ಲಿ ಮೂಲಭೂತ ಸೌಕರ್ಯಗಳಿಲ್ಲಎಂದು ನಾವೆಲ್ಲ ಹೇಳಿದರೂ ಕೇಳದೆ ನಿಮಗೆ ಏನೂ ಕಡಿಮೆಯಾಗದಂತೆ ಸಮ್ಮೇಳನ ಮಾಡುತ್ತೇವೆ ಎಂದು ಮಾಡಿ ತೋರಿಸಿದರು.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಪ್ರತಿನಿಧಿಗಳು ಬರುವ ಮೇ ಸಾಹಿತ್ಯ ಸಮ್ಮೇಳನಕ್ಕೆ ರೂ.15 ಲಕ್ಷಕ್ಕೂ ಹೆಚ್ಚು ಖರ್ಚು ಬರುತ್ತದೆ. ಈ ಹಣವನ್ನು ಸಮಾನ ಮನಸ್ಕ ಗೆಳೆಯರೇ 100, 200, 500ರಂತೆ ಸಂಗ್ರಹಿಸಿ ಸಮ್ಮೇಳನ ಮಾಡುತ್ತಾರೆ. ಇದಕ್ಕಾಗಿ ಸರಕಾರಕ್ಕೆ ಕೈ ಯೊಡ್ಡುವುದಿಲ್ಲ. ಯಾವುದೇ ಉದ್ಯಮಪತಿಯ ನೆರವನ್ನೂ ಕೇಳುವುದಿಲ್ಲ. ದುಡಿಯುವ ಜನ, ಮಧ್ಯಮ ವರ್ಗದವರು ತಮ್ಮ ಆದಾಯದ ಒಂದಿಷ್ಟು ಹಣವನ್ನು ಮೇ ಸಮ್ಮೇಳನಕ್ಕೆ ತೆಗೆದಿಟ್ಟು ಸಮ್ಮೇಳನವನ್ನು ಯಶಸ್ವಿಗೊಳಿಸುತ್ತಾರೆ.

ಕೆಲವರಿರುತ್ತಾರೆ ಎಂಥ ಪ್ರತಿಕೂಲ ಸಂದರ್ಭದಲ್ಲೂ ಕೈ ಚೆಲ್ಲಿ ಕುಳಿತುಕೊಳ್ಳದೆ ಹಠ ಹಿಡಿದು ಅಂದು ಕೊಂಡಿದ್ದನ್ನು ಸಾಧಿಸುತ್ತಾರೆ.ಕಲ್ಲು ಮುಳ್ಳಿನ ದಾರಿಯಲ್ಲಿ ನಡೆದು ಗುರಿ ತಲುಪುತ್ತಾರೆ. ಅಂಥ ಛಲವಂತಿಕೆಯನ್ನು ಮೈ ಗೂಡಿಸಿಕೊಂಡವರು ಈ ಸಮ್ಮೇಳನದ ಹಿಂದಿದ್ದಾರೆ. ನಮ್ಮ ವಿಜಯಪುರ ಜಿಲ್ಲೆಯ ರೂಡಗಿಯ ಬಸವರಾಜ ಸೂಳಿಬಾವಿ ಮತ್ತು ಕವಲಕ್ಕಿಯ ದಣಿವರಿಯದ ಡಾ. ಎಚ್ .ಎಸ್ ಅನುಪಮಾ ಈ ಸಮ್ಮೇಳನದ ಪ್ರೇರಕ ಶಕ್ತಿ, ಪ್ರತಿ ಸಮ್ಮೇಳನದ ಪರಿಕಲ್ಪನೆ ಇವರದು ಎಂದರೆ ಅತಿಶಯೋಕ್ತಿ ಅಲ್ಲ. ಆದರೆ ಅವರೆಂದೂ ವೇದಿಕೆಗೆ ಬರುವುದಿಲ್ಲ.

ಸಮ್ಮೇಳನ ನಡೆಸಲು ಇವರೊಂದಿಗೆ ದುಡಿಯುವ ಮಿತ್ರ ಬಳಗದ ಪಟ್ಟಿ ನೀಡಲು ಹೊರಟರೆ ಈ ಅಂಕಣದ ಜಾಗ ಸಾಕಾಗುವುದಿಲ್ಲ. ಡಾ.ಗವಾನಿ ಮುತ್ತು ಬಿಳಿಯಲಿ, ಶರೀಫ ಬಿಳಿಯಲಿ, ಎ.ಬಿ. ಹಿರೇಮಠ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬಸು, ಅನುಪಮಾ ಅವರಾಗಲಿ ಅವರ ಜೊತೆಗಾರರಾಗಲಿ ತಮ್ಮ ಹೆಸರು ಪ್ರಚಾರಕ್ಕೆ ಬರುವುದನ್ನು ಇಷ್ಟಪಡಲ್ಲ. ಅದಕ್ಕಾಗಿ ಆ ಬಗ್ಗೆ ನಾನು ಹೆಚ್ಚು ಬರೆಯುವುದಿಲ್ಲ.

ಈ ಬಾರಿಯ ಮೇ ಸಾಹಿತ್ಯ ಸಮ್ಮೇಳನವು ಅಭಿವೃದ್ಧಿ ಭಾರತದ ಕವಲು ದಾರಿಗಳ ಬಗ್ಗೆ ಚರ್ಚಿಸಿತು. ಅಭಿವೃದ್ಧಿ ಅಂದರೆ ಮನುಷ್ಯನಿಗೆ ಘನತೆಯ ಬದುಕನ್ನು ಕಲ್ಪಿಸುವುದು. ಅಸಮಾನತೆ, ನಿರಕ್ಷರತೆ, ಅಪೌಷ್ಟಿಕತೆ ನಿವಾರಿಸುವುದು. ಕಾರ್ಪೊರೇಟ್ ಬಂಡವಾಳಶಾಹಿಯ ಅಭಿವೃದ್ಧಿ ಅಭಿವೃದ್ಧಿ ಯಲ್ಲ ಎಂಬುದು ಈ ಬಾರಿಯ ಮೇ ಸಮ್ಮೇಳನದ ಸಂದೇಶ.

ಸಮ್ಮೇಳನದಲ್ಲಿ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತರು ಗೋಷ್ಠಿಯಲ್ಲಿ ಮಾತಾಡಿದ ಸಾಹಿತಿ, ಪತ್ರಕರ್ತ ಬಿ.ಎಂ. ಬಶೀರ್ ಅವರು ಅಲ್ಪಸಂಖ್ಯಾತರು ಎಂದರೆ ಕಣ್ಣೆದುರು ಬರುವುದು ಮುಸಲ್ಮಾನರು ಮಾತ್ರ. ಅಲ್ಪಸಂಖ್ಯಾತರ ಹೆಸರಿನಲ್ಲಿ ಅವರು ಲಾಭ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದರು. ಮಹಾರಾಷ್ಟ್ರದ ಪ್ರಗತಿಪರ ಚಿಂತಕ ರಾವಸಾಹೇಬ ಕಸಬೆ ಅವರು ಮಾತಾಡಿ, ಪ್ರಧಾನಿ ಮೋದಿ ನಿರುದ್ಯೋಗ, ಬಡತನದ ಬಗ್ಗೆ ಮಾತಾಡುವುದಿಲ್ಲ. ಉಗ್ರ ಹಿಂದುತ್ವದ ಮಾತಾಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದಾರೆ ಎಂದರು

ಈ ಸಮ್ಮೇಳನ ಉದ್ಘಾಟಿಸಿದ ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ನಾಯಕ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ಅವರು ಮಲದ ಗುಂಡಿಗಳಲ್ಲಿ, ಮ್ಯಾನ್ ಹೋಲ್‌ಗಳಲ್ಲಿ ಇಳಿದು ಉಸಿರುಗಟ್ಟಿ ಪ್ರಾಣ ಬಿಡುವವರನ್ನು ಗಡಿಯಲ್ಲಿ ವೈರಿಗಳ ಜೊತೆ ಹೋರಾಡಿ ಮಡಿಯುವ ಯೋಧರಂತೆ ಹುತಾತ್ಮರೆಂದು ಪರಿಗಣಿಸಬೇಕೆಂದು ಆಗ್ರಹಿಸಿದರು.

ಸದ್ಯದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಅದು ಬಡವರ ಪರವಾಗಿಲ್ಲ ಎಂದು ಹೇಳಿದರು.
ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತ ಸಾಚಾರ್ ವರದಿಯ ಬಗ್ಗೆ ಕಾಂಗ್ರೆಸ್ ಸರಕಾರ ಮಹತ್ವ ನೀಡಲಿಲ್ಲ. ಬಾಬರಿ ಮಸೀದಿಯ 2.4 ಎಕರೆ ಜಾಗವನ್ನು ಮುಸಲ್ಮಾನರ ಸಾವು ಬದುಕಿನ ಪ್ರಶ್ನೆ ಎಂಬಂತೆ ಮಾಡಲಾಗಿದೆ. ವಕ್ಫ್ ಆಸ್ತಿಯನ್ನು ಮುಸ್ಲಿಂ ನಾಯಕರೇ ಕಬಳಿಸುತ್ತಿದ್ದಾರೆ. ಈ ಆಸ್ತಿಯನ್ನು ಮರಳಿ ವಶಪಡಿಸಿಕೊಂಡು ಮುಸ್ಲಿಂ ಸಮುದಾಯದ ಬದುಕನ್ನು ಅಭಿವೃದ್ಧಿ ಮಾಡುವ ಕೆಲಸ ನಡೆಯಬೇಕಾಗಿದೆ ಎಂದು ಬಶೀರ್ ಹೇಳಿದರು.
ಭಾರತದಲ್ಲೇ ಹಿಂದೂಗಳ್ಯಾರೂ ಮುಸಲ್ಮಾನರಾಗಿ ಮತಾಂತರವಾಗಿಲ್ಲ. ಕೆಲ ವೃತ್ತಿ, ಜಾತಿಗಳ ಜನ ಮುಸ್ಲಿಮರಾಗಿ ಮತಾಂತರಗೊಂಡಿದ್ದಾರೆ. ಮುಸ್ಲಿಂ ಸಮಾಜ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ ಎಂದರು

ಕ್ರಿಶ್ಚಿಯನ್ ಸಮುದಾಯದ ಸಮಸ್ಯೆಗಳ ಬಗ್ಗೆ ಮಾತಾಡಿದ ಸಾಹಿತಿ ಲಿನೇಟ್ ಡಿಸಿಲ್ವ, ಕ್ರಿಶ್ಚಿಯನ್ ಸಮಾಜ ಹಲವಾರು ಸಂಕಟಗಳನ್ನು ಅನುಭವಿಸುತ್ತಿದೆ.ಸಾಮಾಜಿಕ ಸೇವೆ ಮಾಡಲು ಮುಂದಾದರೆ ಮತಾಂತರ ಮಾಡುವ ಉದ್ದೇಶಕ್ಕಾಗಿ ಮಾಡುತ್ತಿದ್ದೀರಿಎಂದು ಹುಯಿಲೆಬ್ಬಿಸಲಾಗುತ್ತಿದೆ ಎಂದರು. ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶದ ಕ್ರಾಂತಿಕಾರಿ ಲೇಖಕ, ಗಾಯಕ ಗೋರಂಟಿ ವೆಂಕಣ್ಣ ಅವರು ಮಾತಾಡಿ, ಮುಖೇಶ ಅಂಬಾನಿಯ ಜಿಯೋಗಾಗಿ ಬಿಎಸ್ಸೆನ್ನೆಲ್‌ನ್ನು ಕೊಂದವರು ಹಾಗೂ ಅನಿಲ್ ಅಂಬಾನಿ ಹಾಗೂ ಬಾಬಾ ರಾಮ್‌ದೇವ್ ಅವರ ಆಸ್ತಿ ಹೆಚ್ಚಿಸಲು ನೆರವಾದವರು ಬಂದೂಕಿನಿಂದ ಲೇಖನಿಯನ್ನು ಕೊಲ್ಲಲು ಸಾಧ್ಯವಿಲ್ಲ ಎಂದರು.

ಬಾಂಬ್ ತಯಾರಿಸಿದ್ದು ದೀಪಾವಳಿಯಲ್ಲಿ ಪಟಾಕಿ ಹಾರಿಸಲು ಅಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರನ್ನು ವೆಂಕಣ್ಣ ಟೀಕಿಸಿದರು. ಸಂಘಿ ಹಿಂಬಾಲಕರು ಹಿಂಸೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಸಮ್ಮೇಳನದ ಎರಡೂ ದಿನದ ಗೋಷ್ಠಿಗಳಲ್ಲಿ ದಿನೇಶ ಅಮೀನ್ ಮಟ್ಟು, ಸಿಜಿ ಮಂಜುಳಾ, ಸಿ.ಜಿ ಲಕ್ಷ್ಮೀಪತಿ, ಮಾಧುರಿ, ನಟರಾಜ ಬೂದಾಳ, ಕೇಸರಿ ಹರವೂ, ಮಮತಾ ಸಾಗರ, ಎಸ್.ಆರ್. ಹಿರೇಮಠ, ರಹಮತ್ ತರೀಕೆರೆ, ಕೆ. ನೀಲಾ, ಮೀನಾಕ್ಷಿ ಬಾಳಿ ಮುಂತಾದವರು ಮಾತಾಡಿದರು.ರಾಜಸ್ಥಾನದ ಮುಕ್ತಿಯಾರ್ ಅಲಿ ಅವರ ಸೂಫಿ ಗಾಯನ ಎಲ್ಲರ ಗಮನ ಸೆಳೆಯಿತು. ಜನರು ತಾವೇ ಹಣ ಸಂಗ್ರಹಿಸಿ ಮಾಡುವ ಈ ಮೇ ಸಾಹಿತ್ಯ ಸಮ್ಮೇಳನ ಅದ್ಭುತ ಯಶಸ್ಸನ್ನು ಪಡೆಯಿತು. ಸರಕಾರದಿಂದ ಕೋಟಿ ಕೋಟಿ ಪಡೆದು ಅದ್ದೂರಿಯ ಸಮ್ಮೇಳನ ನಡೆಸುವ ಕಡೆ ಸಾಹಿತ್ಯವೇ ತುಂಬ ತುಟ್ಟಿಯಾಗಿರುತ್ತದೆ. ಆದರೆ ಮೇ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಅರ್ಥಪೂರ್ಣ ಚರ್ಚೆ, ಸಂವಾದ, ಹಾಡು, ಸೂಫಿಗಾಯನ ಗಮನ ಸೆಳೆಯುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದ್ಯಾವುದೋ ಊರಿನ ಸಮಾನ ಮನಸ್ಕ ಗೆಳೆಯರ ಭೇಟಿ ಮೇ ಬಿಸಿಲಿನಲ್ಲೂ ಮನಸ್ಸನ್ನು ತಂಪಾಗಿ ಇಡುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News