ಕಮಲ್ ನಾಲಿಗೆ ಕತ್ತರಿಸಬೇಕೆಂಬ ಹೇಳಿಕೆ: ತ.ನಾ.ಸಚಿವರ ವಜಾಕ್ಕೆ ಎಂಎನ್ಎಂ ಆಗ್ರಹ
ಚೆನ್ನೈ,ಮೇ 14: ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಹಿಂದೂ ಆಗಿದ್ದ ಎಂಬ ಹೇಳಿಕೆಗಾಗಿ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ನಾಲಿಗೆಯನ್ನು ಕತ್ತರಿಸಬೇಕು ಎಂದು ಕರೆ ನೀಡಿರುವ ಹಿರಿಯ ಎಐಎಡಿಎಂಕೆ ನಾಯಕ ಹಾಗೂ ತಮಿಳುನಾಡಿನ ಹಾಲು ಮತ್ತು ಡೇರಿ ಅಭಿವೃದ್ಧಿ ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ ಅವರನ್ನು ಹುದ್ದೆಯಿಂದ ಕಿತ್ತೊಗೆಯಬೇಕು ಎಂದು ಮಕ್ಕಳ್ ನೀಧಿ ಮೈಯಂ(ಎಂಎನ್ಎಂ) ಮಂಗಳವಾರ ಆಗ್ರಹಿಸಿದೆ.
ಬಾಲಾಜಿಯವರ ಹೇಳಿಕೆಯನ್ನು ಕಟುವಾಗಿ ಖಂಡಿಸಿದ ಎಂಎನ್ಎಂ ಪ್ರಧಾನ ಕಾರ್ಯದರ್ಶಿ ಎ.ಅರುಣಾಚಲಂ ಅವರು,ಅದು ಸಚಿವರಿಗೆ ರಾಜಕೀಯ ನೈತಿಕತೆ ಮತ್ತು ವೈಯಕ್ತಿಕ ಘನತೆಯ ಕೊರತೆಯಿದೆ ಎನ್ನುವುದನ್ನು ತೋರಿಸುತ್ತಿದೆ ಎಂದರು.
ಕಮಲ್ ಅವರು ಮಹಾತ್ಮಾ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಪ್ರಸ್ತಾಪಿಸಿ,‘ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಹಿಂದು ಆಗಿದ್ದ ’ ಎಂದು ಹೇಳಿರುವುದಕ್ಕಾಗಿ ಅವರ ನಾಲಿಗೆಯನ್ನು ಕತ್ತರಿಸಬೇಕು. ಉಗ್ರವಾದಕ್ಕೆ ಹಿಂದು ಅಥವಾ ಮುಸ್ಲಿಂ ಅಥವಾ ಕ್ರೈಸ್ತ ಹೀಗೆ ಯಾವುದೇ ಧರ್ಮವಿಲ್ಲ ಎಂದು ಬಾಲಾಜಿ ಸೋಮವಾರ ಹೇಳಿದ್ದರು.