ಇಫ್ತಾರ್‌ಗೆ ಹಾಲು ಖರೀದಿಸಲು ಬಂದ ವೈದ್ಯನ ಮೇಲೆ ಹಲ್ಲೆ

Update: 2019-05-14 18:27 GMT

ಗುರುಗ್ರಾಮ,ಮೇ.14: ಇಫ್ತಾರ್‌ಗೆ ಹಾಲು ಖರೀದಿಸಲು ಆಗಮಿಸಿದ ಮಕ್ಕಳ ತಜ್ಞ ವೈದ್ಯರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ಇಲ್ಲಿನ ಆರ್ಡಿ ನಗರದಲ್ಲಿ ನಡೆದಿದೆ. ಈ ಬಗ್ಗೆ ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಮೂಲತಃ ಉತ್ತರಾಖಂಡ ನಿವಾಸಿ ಸದ್ಯ ವಝೀರಾಬಾದ್‌ನಲ್ಲಿ ನೆಲೆಸಿರುವ ವೈದ್ಯ ಡಾ.ನೂರುಲ್, ತಾನು ಶನಿವಾರ ರಾತ್ರಿ ಎಂಟರ ಸುಮಾರಿಗೆ ಇಫ್ತಾರ್‌ಗೆ ಹಾಲು ತರಲೆಂದು ಆಗಮಿಸಿದ್ದ ವೇಳೆ ಯುವಕರ ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿಸಿದ್ದಾರೆ.

ಹಾಲು ಖರೀದಿಸಿದ ನಂತರ ನಾನು ನನ್ನ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದೆ. ಈ ವೇಳೆ ಇಬ್ಬರು ವ್ಯಕ್ತಿಗಳು ಬಿಳಿ ಬಣ್ಣದ ಕಾರಿನಲ್ಲಿ ಆಗಮಿಸಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಅವರು ರಸ್ತೆಯ ವಿರುದ್ಧ ದಿಕ್ಕಿನಲ್ಲಿದ್ದಾರೆ ಎಂದು ನಾನವರಿಗೆ ತಿಳಿಸಿದಾಗ ಇತರ 8-9 ಮಂದಿಯನ್ನು ಕರೆದ ಅವರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ನೂರುಲ್ ಆರೋಪಿಸಿದ್ದಾರೆ. ವೈದ್ಯರು ನೀಡಿದ ದೂರಿನ ಆಧಾರದಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News