ಗ್ರಾಮೀಣ ಸ್ಟಾರ್ಟಪ್ ಯಾನ: ಹಳ್ಳಿಯ ಸ್ಟಾರ್ಟಪ್‌ಗಾಗಿ ನಗರದ ಉದ್ಯೋಗವನ್ನು ತೊರೆದ ಟೆಕ್ಕಿ

Update: 2019-06-01 18:31 GMT

ಮಧು ಹೇಳುವಂತೆ ಅವರ ಘಟಕದಲ್ಲಿ ಪ್ರತಿದಿನ 300 ತೆಂಗಿನ ಕಾಯಿಗಳಿಂದ 18ರಿಂದ 29 ಕೆ.ಜಿ. ತೆಂಗಿನೆಣ್ಣೆ ತೆಗೆಯಲಾಗುತ್ತದೆ. ಎಣ್ಣೆ ತೆಗೆದ ನಂತರವೂ ಸುಮಾರು ಶೇ.30 ಎಣ್ಣೆ ಕಾಯಿಯ ಹುಡಿಯಲ್ಲೇ ಉಳಿಯುವುದರಿಂದ ಇದು ಪಶುಗಳಿಗೆ ಅತ್ಯುತ್ತಮ ಆಹಾರವಾಗಿದೆ. ಹೀಗೆ ತೆಗೆದ ಎಣ್ಣೆಯನ್ನು ಕೆ.ಜಿ.ಗೆ 695ರೂ.ನಂತೆ ಮಾರಲಾಗುತ್ತದೆ

ಬೇಸಾಯ ನಿಧಾನವಾಗಿ ಮರೆಯಾಗುತ್ತಿದೆ. ಕರ್ನಾಟಕದಾದ್ಯಂತ ಹಳ್ಳಿಗಳ 20ರಿಂದ 35ರ ಹರೆಯದ ಯುವಕರು ಉತ್ತಮ ಜೀವನವನ್ನು ಅರಸಿ ನಗರಗಳತ್ತ ಮುಖ ಮಾಡುತ್ತಾರೆ ಮತ್ತು ಅಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಕೊಳೆಗೇರಿ ಪ್ರದೇಶಗಳಲ್ಲಿ ಜೀವಿಸಲು ಆರಂಭಿಸುತ್ತಾರೆ. ಈ ಅಲೆಯನ್ನು ಬದಲಾಯಿಸಲು ಬೆಳೆ ಕೊಯ್ಲು ನಂತರದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಈ ತಂತ್ರಜ್ಞಾನ ಹೊಸ, ತೃಪ್ತಿಕರ ಮತ್ತು ಲಾಭದಾಯಕ ಉದ್ಯೋಗ ಒದಗಿಸುತ್ತದೆ.

ಅರಸೀಕೆರೆಯಿಂದ 15ಕಿ.ಮೀ. ದೂರವಿರುವ ಕರ್ಗುಂಡ ಗ್ರಾಮದ ನಿವಾಸಿ, ಎಂಸಿಎ ಪದವೀಧರ ಮಧು ಬಸವರಾಜು ಬೆಂಗಳೂರಿನ ಬಹುರಾಷ್ಟ್ರೀಯ ಹೂಡಿಕೆ ಕಂಪೆನಿಯಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆದರೆ ಅವರ ಒಳಮನಸ್ಸು ಮಾತ್ರ ತಾನು ಹುಟ್ಟಿ ಬೆಳೆದ ಗ್ರಾಮದ ರೈತರ ಕಷ್ಟಕ್ಕೆ ತನ್ನಿಂದ ಏನೂ ಮಾಡಲಾಗುತ್ತಿಲ್ಲವೆಂಬ ದುಃಖವನ್ನು ಸದಾ ಹೊಂದಿತ್ತು. ರೈತರ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದಾಗ, ಅವರು ಮೂಲ ಕಚ್ಚಾವಸ್ತುವನ್ನೇನೋ ಉತ್ಪಾದಿಸುತ್ತಾರೆ. ಆದರೆ ಅದನ್ನು ವೌಲ್ಯವರ್ಧಿತ ಉತ್ಪನ್ನಗಳಾಗಿ ಮಾರ್ಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂತು.
ಕರ್ನಾಟಕದ ವ್ಯಾವಸಾಯಿಕ ಪ್ರದೇಶದಲ್ಲಿ ಸತತ ಐದು ವರ್ಷಗಳ ಕಾಲ ತಲೆದೋರಿದ ಬರದಿಂದಾಗಿ ಇಲ್ಲಿನ ಬಾವಿಗಳು ಬತ್ತಿ ಹೋಗಿದ್ದವು. ಬಿಸಿಲಿನ ಝಳಕ್ಕೆ ನೀರು ಭೂಮಿಯ ಸಾವಿರ ಅಡಿ ಆಳಕ್ಕೆ ಇಳಿದಿತ್ತು. ಕೃಷಿಭೂಮಿಗಳು ಅನುತ್ಪಾದಕವಾಗಿ ಪಾಳು ಬಿದ್ದಿದ್ದವು. ತೆಂಗಿನ ಮರಗಳು ನೀರಿಲ್ಲದೆ ಸೊರಗಿದ್ದವು. ರೈತರು ಬೆಳೆಯುತ್ತಿದ್ದ ಅಲ್ಪ ಬೆಳೆಯನ್ನು ಖರೀದಿಸಲು ಯಾರೂ ಮುಂದಾಗುತ್ತಿರಲಿಲ್ಲ.
ಬರದಿಂದ ಬೇಸತ್ತ ಯುವಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿ ಅಲ್ಲಿ ಓಲಾ ಅಥವಾ ಉಬೆರ್ ಕಾರುಗಳ ಚಾಲನೆಯಲ್ಲಿ ತೊಡಗಿದರು ಅಥವಾ ಸಂಸ್ಥೆಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇರಿಕೊಂಡರು. ಇದನ್ನು ಗಮನಿಸಿದ ಮಧು ಈ ವಿದ್ಯಮಾನವನ್ನು ತಡೆದು ಯುವಕರನ್ನು ಮರಳಿ ಹಳ್ಳಿಗೆ ಕರೆತರುವ ದಾರಿಯನ್ನು ಹುಡುಕಲು ಆರಂಭಿಸಿದರು.
ಹೀಗೆ ಯೋಚಿಸುತ್ತಿರುವಾಗ ಮಧು ತಲೆಗೆ ಹೊಳೆದ ಉಪಾಯ: ಸುತ್ತಮುತ್ತಲ ಗ್ರಾಮಗಳಿಂದ ತೆಂಗಿನ ಕಾಯಿಗಳನ್ನು ಖರೀದಿಸಿ ಅದರಿಂದ ಎಣ್ಣೆ ತೆಗೆದು ಆ ನೈಸರ್ಗಿಕ ತೈಲವನ್ನು, ಪ್ಯಾರಫಿನ್ ಮಿಶ್ರಿತ ಬ್ರಾಂಡೆಡ್ ತೆಂಗಿನೆಣ್ಣೆ ಬಳಸುತ್ತಿರುವ ಕೋಟ್ಯಂತರ ಜನರಿಗೆ ತಲುಪಿಸಿದರೆ ಹೇಗೆ?


ಮಧು ಕುಟುಂಬ ಹಳ್ಳಿಯಲ್ಲಿ ಐದು ಎಕರೆ ಜಾಗದಲ್ಲಿ ತೆಂಗಿನ ಬೆಳೆ ಹೊಂದಿತ್ತು. ಮಾರುಕಟ್ಟೆಯಲ್ಲಿ ಮಾರಲು ನೈಸರ್ಗಿಕ ತೆಂಗಿನೆಣ್ಣೆ ತೆಗೆಯುತ್ತಿದ್ದ ರೈತರು ಗ್ರಾಮದಲ್ಲಿ ಅಳವಡಿಸಿದ ತೈಲ ತೆಗೆಯುವ ಯಂತ್ರವೂ ಇತ್ತು. ಆದರೆ ಈ ಯಂತ್ರದ ಸಾಮರ್ಥ್ಯ ಕಡಿಮೆಯಾಗಿದ್ದು ದಿನದಲ್ಲಿ ಕೇವಲ 40ರಿಂದ 50 ತೆಂಗಿನ ಕಾಯಿಗಳಿಂದ ಮಾತ್ರ ಎಣ್ಣೆ ತೆಗೆಯಲು ಸಾಧ್ಯವಾಗುತ್ತಿತ್ತು.
ಸುತ್ತಮುತ್ತಲ ಹಳ್ಳಿಗಳ ಬೆಳೆ ಮ್ಯಾಪಿಂಗ್ ನಡೆಸಿದ ಮಧು ತೆಂಗಿನೆಣ್ಣೆ ತೆಗೆಯುವ ತೆಂಗಿನ್ ಎಂಬ ಹೊಸ ಉದ್ದಿಮೆಯನ್ನು ಆರಂಭಿಸಿದರು. ಗ್ರಾಮದಲ್ಲಿ ಮೊದಲೇ ರೈತರು ಉಪಯೋಗಿಸುತ್ತಿದ್ದ ತೈಲ ತೆಗೆಯುವ ಯಂತ್ರ ಅವರ ನೆರವಿಗೆ ಬಂತು. ಮಧು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ವಾರಂತ್ಯಗಳಲ್ಲಿ ತನ್ನ ಗ್ರಾಮಕ್ಕೆ ಆಗಮಿಸಿ ನೈಸರ್ಗಿಕ ತೆಂಗಿನೆಣ್ಣೆಯನ್ನು ಬಾಟಲಿಗಳಲ್ಲಿ ತುಂಬಿಸಿ ಅದನ್ನು ನಗರದ ತನ್ನ ಸಹೋದ್ಯೋಗಿಗಳಿಗೆ ಮಾರುತ್ತಿದ್ದರು. ಅವರಿಂದ ಬರುತ್ತಿದ್ದ ಉತ್ತಮ ವಿಮರ್ಶೆಗಳು ಮಧು ಮತ್ತಷ್ಟು ಹೆಚ್ಚು ತೆಂಗಿನೆಣ್ಣೆ ತಯಾರಿಸಲು ಪ್ರೋತ್ಸಾಹ ನೀಡಿತು.
ಜನರ ಮೂಲಕವೇ ಪ್ರಚಾರ ಪಡೆದ ಮಧು ಅವರ ತೆಂಗಿನ್ ಬ್ರಾಂಡಿನ ತೆಂಗಿನೆಣ್ಣೆ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಪಡೆದುಕೊಂಡಿತು. ಇದರಿಂದ ಪ್ರೇರಿತರಾದ ಮಧು ತನ್ನ ಬಹುರಾಷ್ಟ್ರೀಯ ಉದ್ಯೋಗವನ್ನು ತೊರೆಯಲು ನಿರ್ಧರಿಸಿದರು. ತೆಂಗಿನ್ ಬ್ರಾಂಡಿನ ತೆಂಗಿನ ಎಣ್ಣೆ ಬಗ್ಗೆ ಗ್ರಾಮೀಣ ಮಾರುಕಟ್ಟೆಗಳಲ್ಲಿ ಮತ್ತು ಬನ್ನೇರ್‌ಘಟ್ಟ ರಸ್ತೆಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರತಿ ರವಿವಾರ ರಾಗಿ ಕಾನ ಎಂಬ ಸಾಂಸ್ಕೃತಿಕ ತಾಣ ಆಯೋಜಿಸುವ ಗ್ರಾಮೀಣ ಮಾರುಕಟ್ಟೆಯಲ್ಲಿ ಪ್ರಚಾರ ನಡೆಸಲಾಯಿತು.
ನಗರದ ಗ್ರಾಹಕರ ಜೊತೆ ಸಂಪರ್ಕ ಸಾಧಿಸಬಹುದಾಗಿದ್ದ ವೇದಿಕೆಯಿಂದಾಗಿ ಬಹಳಷ್ಟು ನೆರವು ಸಿಗುವ ಜೊತೆಗೆ ಮಧು ಸಮಾನ ಮನಸ್ಕರ ಜೊತೆ ಸಂಪರ್ಕ ಸಾಧಿಸಲೂ ಸಾಧ್ಯವಾಯಿತು. ಆ ಮೂಲಕ ಅವರು ಸುತ್ತಮುತ್ತಲ ಹಳ್ಳಿಗಳಿಂದ ಅಗತ್ಯ ಪ್ರಮಾಣದ ತೆಂಗಿನಕಾಯಿಯನ್ನು ಖರೀದಿಸಲು ಆರಂಭಿಸಿದರು.
ಮಧು ಹೇಳುವಂತೆ ಅವರ ಘಟಕದಲ್ಲಿ ಪ್ರತಿದಿನ 300 ತೆಂಗಿನ ಕಾಯಿಗಳಿಂದ 18ರಿಂದ 29 ಕೆ.ಜಿ. ತೆಂಗಿನೆಣ್ಣೆ ತೆಗೆಯಲಾಗುತ್ತದೆ. ಎಣ್ಣೆ ತೆಗೆದ ನಂತರವೂ ಸುಮಾರು ಶೇ.30 ಎಣ್ಣೆ ಕಾಯಿಯ ಹುಡಿಯಲ್ಲೇ ಉಳಿಯುವುದರಿಂದ ಇದು ಪಶುಗಳಿಗೆ ಅತ್ಯುತ್ತಮ ಆಹಾರವಾಗಿದೆ. ಹೀಗೆ ತೆಗೆದ ಎಣ್ಣೆಯನ್ನು ಕೆ.ಜಿ.ಗೆ 695ರೂ.ನಂತೆ ಮಾರಲಾಗುತ್ತದೆ ಮತ್ತು ಇವುಗಳನ್ನು ಕೇವಲ ನಿಗದಿತ ಸಂಖ್ಯೆಯ ಜೈವಿಕ ಅಂಗಡಿಗಳ ಮೂಲಕ ಮಾತ್ರ ಹಂಚಲಾಗುತ್ತದೆ.
ಸದ್ಯ ಮಧು ಅವರ ದೃಷ್ಟಿ ನೀರಾದ ಮೇಲಿದೆ. ಇದು ತೆಂಗಿನ ಮರದಿಂದ ತೆಗೆಯಲಾಗುವ ರಸವಾಗಿದ್ದು ಸೂರ್ಯ ಬಿಸಿಲಿಗೆ ಹುದುಗುವ ಮೂಲಕ ಉದ್ದೀಪನ ಗುಣವನ್ನು ಹೊಂದುತ್ತದೆ. ಆದರೆ ಮಧು ಇದನ್ನು ಸಕ್ಕರೆಯಾಗಿ ಬದಲಾಯಿಸಲು ಬಯಸುತ್ತಾರೆ. ಮೂರು ತಿಂಗಳ ಹಿಂದೆ ತೆಂಗಿನ ಮರದಿಂದ ನೀರಾ ತೆಗೆದು ಅದನ್ನು ಕಡಿಮೆ ಉಷ್ಣತೆಯಲ್ಲಿ ಬಿಸಿ ಮಾಡುವ ಮೂಲಕ ಈ ನಿಟ್ಟಿನಲ್ಲಿ ಪ್ರಯೋಗ ಆರಂಭವಾಯಿತು. ಬಿಸಿಯಾದ ನೀರಾ ಕಂದು ಬಣ್ಣದ ಸಕ್ಕರೆಯಾಗಿ ಮಾರ್ಪಾಡಾಗಿದ್ದು ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರ ಮಧ್ಯೆ ಇದಕ್ಕೆ ಉತ್ತಮ ಮಾರುಕಟ್ಟೆಯಿದೆ.
ಈಗ ಮಧು ತನ್ನ ತೆಂಗಿನ್ ಬ್ರಾಂಡ್‌ನಡಿ ತೆಂಗಿನ ಸಕ್ಕರೆಯನ್ನೂ ಪ್ಯಾಕ್ ಮಾಡಿ ಮಾರಾಟ ಮಾಡಲು ಆರಂಭಿಸಿದ್ದಾರೆ. 200ಗ್ರಾಂ ತೆಂಗಿನ ಸಕ್ಕರೆಗೆ 160ರೂ. ನಿಗದಿಪಡಿಸಲಾಗಿದೆ. ಈ ಉದ್ದಿಮೆಗೆ ಇಳಿಯುವ ಮೊದಲು ಮಧು ಬೆಂಗಳೂರಿನ ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ನಡೆದ ಉದ್ಯೋಗಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತೆಂಗಿನ ಸಕ್ಕರೆ ಈಗಲೂ ಪ್ರಾಯೋಗಿಕ ಹಂತದಲ್ಲಿದ್ದು ನೀರಾದಿಂದ ಸಕ್ಕರೆ ತೆಗೆಯಲು ಮಧು ಇನ್ನಷ್ಟೇ ಪರವಾನಿಗೆ ಪಡೆದುಕೊಳ್ಳಬೇಕಿದೆ.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ