ಇಫ್ತಾರ್ಗೆ ಅಡ್ಡಿ ಅನಾಗರಿಕ ವರ್ತನೆ: ಪಾಕ್ಗೆ ಭಾರತದ ಖಂಡನೆ
ಹೊಸದಿಲ್ಲಿ, ಜೂ.2: ಶನಿವಾರ ಇಸ್ಲಾಮಾಬಾದಿನಲ್ಲಿ ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ಅತಿಥಿಗಳಿಗೆ ಪಾಕಿಸ್ತಾನದ ಅಧಿಕಾರಿಗಳು ಕಿರುಕುಳ ನೀಡಿರುವ ಘಟನೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿರುವ ಭಾರತ, ಇದು ರಾಜತಾಂತ್ರಿಕ ನಡಾವಳಿ ಹಾಗೂ ನಾಗರಿಕ ವರ್ತನೆಯ ಸಂಕಲ್ಪದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಘಟನೆಯ ಬಗ್ಗೆ ಪ್ರತಿಭಟನಾ ಹೇಳಿಕೆಯನ್ನು ಭಾರತ ಸರಕಾರ ಸಲ್ಲಿಸಿದೆ ಎಂದು ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ ತಿಳಿಸಿದ್ದಾರೆ.
ಈ ಕೊಳಕು ಘಟನೆಯ ಬಗ್ಗೆ ಶೀಘ್ರ ತನಿಖೆ ನಡೆಸಿ ತನಿಖೆಯ ಫಲಿತಾಂಶವನ್ನು ಹೈಕಮಿಷನ್ನೊಂದಿಗೆ ಹಂಚಿಕೊಳ್ಳುವಂತೆ ಭಾರತ ಸರಕಾರ ಸಲ್ಲಿಸಿದ ಪ್ರತಿಭಟನಾ ಪತ್ರದಲ್ಲಿ ತಿಳಿಸಲಾಗಿದೆ. ಇಸ್ಲಾಮಾಬಾದ್ನಲ್ಲಿ ಇರುವ ರಾಜತಾಂತ್ರಿಕ ಸಮುದಾಯದ ಹಲವು ಅತಿಥಿಗಳಿಗೂ ಕಿರುಕುಳ ನೀಡಲಾಗಿದೆ. ಇದು ರಾಜತಾಂತ್ರಿಕ ನೀತಿಯ ಸಂಪೂರ್ಣ ಉಲ್ಲಂಘನೆಯಾಗಿದೆ. ಇಫ್ತಾರ್ ಕೂಟ ನಡೆದಿದ್ದ ಸೆರೆನಾ ಹೋಟೆಲ್ಗೆ ಮುತ್ತಿಗೆ ಹಾಕಿದ್ದ ಪಾಕ್ ಭದ್ರತಾ ಇಲಾಖೆ ನಮ್ಮ ಅತಿಥಿಗಳನ್ನು ಬಲವಂತವಾಗಿ ವಾಪಾಸು ಕಳುಹಿಸಿದೆ ಎಂದು ಬಿಸಾರಿಯಾ ತಿಳಿಸಿದ್ದಾರೆ.
ಇಫ್ತಾರ್ ಕಾರ್ಯಕ್ರಮಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅಧ್ಯಕ್ಷ ಆರಿಫ್ ಆಲ್ವಿಯವರನ್ನೂ ಆಮಂತ್ರಿಸಲಾಗಿತ್ತು. ಆದರೆ ಅವರಿಬ್ಬರೂ ಗೈರುಹಾಜರಾಗಿದ್ದರು.