ಆರ್ಥಿಕ ಪ್ರಗತಿ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಧಾನಿ ಅಧ್ಯಕ್ಷತೆಯ 2 ಸಂಪುಟ ಸಮಿತಿ ರಚನೆ
ಹೊಸದಿಲ್ಲಿ, ಜೂ.5: ಪ್ರಧಾನಮಂತ್ರಿ ನರೇಂದ್ರ ಮೋದಿ ತನ್ನ ನೇತೃತ್ವದ ಎನ್ಡಿಎ ಸರಕಾರ ಎದುರಿಸುತ್ತಿರುವ ಎರಡು ಮುಖ್ಯ ಸವಾಲುಗಳಾದ ಆರ್ಥಿಕ ಪ್ರಗತಿ ಕುಂಠಿತ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ತನ್ನ ಅಧ್ಯಕ್ಷತೆಯ ಎರಡು ಸಂಪುಟ ಸಮಿತಿಯನ್ನು ಬುಧವಾರ ರಚಿಸಿದ್ದಾರೆ.
ಹೂಡಿಕೆ ಹಾಗೂ ಪ್ರಗತಿಗಾಗಿ ರಚಿಸಿರುವ ಐವರು ಸದಸ್ಯರ ಸಂಪುಟ ಸಮಿತಿಗೆ ಪ್ರಧಾನಿ ನೇತೃತ್ವವಹಿಸಿಕೊಂಡಿದ್ದು, ಇದರಲ್ಲಿ ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರೈಲ್ವೆ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿದ್ದಾರೆ.
ನಿರುದ್ಯೋಗ ಹಾಗೂ ಕೌಶಲಾಭಿವೃದ್ಧಿ ಬೆಳವಣಿಗೆಯನ್ನು ನೋಡಿಕೊಳ್ಳಲು ಮತ್ತೊಂದು 10 ಸದಸ್ಯರ ಸಮಿತಿ ರಚಿಸಲಾಗಿದ್ದು, ಇದರಲ್ಲಿ ಶಾ, ಸೀತಾರಾಮನ್, ಗೋಯಲ್, ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ಥೋಮರ್, ಎಚ್ಆರ್ಡಿ ಸಚಿವ ರಮೇಶ್ ನಿಶಾಂಕ್, ಪೆಟ್ರೋಲಿಯಂ, ಸ್ಟೀಲ್ ಸಚಿವ ಧರ್ಮೇಂದ್ರ ಪ್ರಧಾನ್, ಕೌಶಲ್ಯ ಹಾಗೂ ಉದ್ಯಮ ಸಚಿವ ಮಹೇಂದ್ರನಾಥ ಪಾಂಡೆ ಹಾಗೂ ರಾಜ್ಯ ಸಚಿವರಾದ ಸಂತೋಷ್ ಕುಮಾರ್ ಗಾಂಗ್ವರ್ ಹಾಗೂ ಹರ್ದೀಪ್ ಸಿಂಗ್ ಪುರಿ ಅವರಿದ್ದಾರೆ.
ಗಾಂಗ್ವಾರ್ ಹಾಗೂ ಪುರಿ ಕಾರ್ಮಿಕ ಹಾಗೂ ಉದ್ಯೋಗ, ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯದ ಕಿರಿಯ ಸಚಿವರಾಗಿದ್ದಾರೆ.