ಉಳ್ಳವರ ಸ್ವಾರ್ಥಕ್ಕೆ ಬಾಡಿದ ಹಳ್ಳಿಯ ಬದುಕು !

Update: 2019-06-11 07:45 GMT

ಉಪ್ಪು ನೀರು ನುಗ್ಗಿ ಪಾಲು ಬಿದ್ದವು ಫಲವತ್ತಾದ ಕೃಷಿ ಭೂಮಿ
 

ಕೆರೆ, ಬಾವಿಗಳಿಗೂ ಬಂದವು ಉಪ್ಪು ನೀರಿನ ಒರತೆ!

ಮಂಗಳೂರು : ಇಳೆಗೆ ಮಳೆ ಬಿತ್ತೆಂದರೆ ಸಾಕು ತಲೆಗೊಂದು ಬೈರಾಸು ಬಿಗಿದು ಗದ್ದೆಯಲ್ಲಿ ಪ್ರತ್ಯಕ್ಷರಾಗುವ ನೇಗಿಲ ಯೋಗಿಗಳು. ರೈಲು ಗಾಡಿಯಂತೆ ಒಂದರ ಹಿಂದೆ ಒಂದರಂತೆ ನೊಗ, ನೇಗಿಲಿನೊಂದಿಗೆ ಉಲುಮೆಗೆ ಸಿದ್ಧವಾಗುವ ಎತ್ತು, ಹೋರಿಗಳ ಸಾಲು. ಉಳುತ್ತಾ ಹೋರಿ ನಡೆದಂತೆ ಕುಪ್ಪಳಿಸುವ ಹುಳ, ಹುಪ್ಪಟೆಗಳನ್ನು ಹೆಕ್ಕಿ ತಿನ್ನಲು ಮುಗಿಬೀಳುವ ಗದ್ದೆಯುದ್ದಕ್ಕೂ ಮಲ್ಲಿಗೆ ಚೆಲ್ಲಿದಂತೆ ಬಿಳಿ ಕೊಕ್ಕರೆಗಳ ಕಲರವ. ಭತ್ತ ನಾಟಿ ಮಾಡುವ ರೈತ ಮಹಿಳೆಯರ ಜಾನಪದ ಗೀತೆ ತಂಗಾಳಿಯಲ್ಲಿ ತೇಳಿ ಕಿವಿಯನ್ನು ಇಂಪಾಗಿಸುತ್ತಿದ್ದಂತೆ ಪ್ರಪಂಚವನ್ನೇ ಮರೆತು ತಲೆದೂಗದವರು ಯಾರೂ ಇಲ್ಲ.

ಇದು ಮಂಗಳೂರು ತಾಲೂಕಿನ ಅಂಬ್ಲಮೊಗರು ಗ್ರಾಮದ ದೋಟ ಎಂಬ ಹಳ್ಳಿಯ ಕಥೆ. ಆದರೆ ಇಂದು ಈ ಹಳ್ಳಿಯಲ್ಲಿ ಅದೇನೂ ಇಲ್ಲ. ಈಗ ಇವೆಲ್ಲವೂ ನೆನಪು ಮಾತ್ರ. ಮನುಷ್ಯನ ಸ್ವಾರ್ಥಕ್ಕೆ, ಅಧಿಕಾರಿಗಳು, ಜನಪ್ರತಿನಿಧಿಗಳ ಭಷ್ಟಾಚಾರಕ್ಕೆ ಈ ಹಳ್ಳಿಯ ಜನರ ಬದುಕು ಇಂದು ಬಾಡಿ ಹೋಗಿದೆ. ಕೃಷಿ ಸಂಪೂರ್ಣವಾಗಿ ನಿಂತಿದೆ. ಫಲವತ್ತಾದ ಕೃಷಿ ಭೂಮಿ ಬಿಲ್ಡರ್‌ಗಳ ಸ್ವಾಧೀನಕ್ಕೆ ಒಳಪಟ್ಟಿದೆ. ಉಲುಮೆಯ ಎತ್ತು, ಹೋರಿಗಳು ಮಾರಾಟವಾಗಿವೆ. ಕೊಕ್ಕರೆಗಳು ಎಲ್ಲೋ ದೂರ ಹಾರಿ ಹೋಗಿವೆ. ಜಾನಪದ ಗೀತೆಯನ್ನು ಹಳ್ಳಿಯ ಜನ ಮರೆಯುತ್ತಿದ್ದಾರೆ!.

ಸಮತಟ್ಟಾದ ವಿಶಾಲ ಕೃಷಿ ಭೂಮಿ ಹೊಂದಿರುವ ದೋಟ ಎಂಬ ಈ ಹಳ್ಳಿಯಲ್ಲಿ ಪ್ರತೀ ವರ್ಷ ಮಳೆಗಾಲ ಆರಂಭವಾಯಿತೆಂದರೆ ಸಾಕು ಕೃಷಿ ಚಟುವಟಿಕೆ ಭರದಿಂದ ಸಾಗುತ್ತಿತ್ತು. ಉಳುಮೆ, ನಾಟಿ, ಕಟಾವು ಅಬ್ಬಾ! ಹಳ್ಳಿಗೆ ಹಳಿಯೇ ಹಬ್ಬದ ವಾತಾವರಣ. ಹಿಂದೂ ಯಾರು ಮುಸ್ಲಿಮ್ ಯಾರು ಎಂದು ತಿಳಿಯದಷ್ಟು ಸೌಹಾರ್ದ. ಸಮೃದ್ಧಿಯ ಬದುಕು ಕಟ್ಟಿಕೊಂಡಿದ್ದ ಈ ಹಳ್ಳಿಯಲ್ಲಿ ಕೆಲವು ಉಳ್ಳವರ ಜಮೀನುಗಳೂ ಇದ್ದವು. ಕೆಲವು ವರ್ಷಗಳ ಹಿಂದೆ ಉಳ್ಳವರ ಜಮೀನುಗಳಿಗೆ ಜೆಸಿಬಿ, ಹಿಟಾಚಿಗಳು ಬಂದಿಳಿದವು. ಸಿಗಡಿ ಮೀನು ಸಾಕಣೆಗಾಗಿ ಜಮೀನನ್ನು ಅಗೆದು ಎರಡು, ಮೂರು ಎಕ್ಕರೆಗೂ ವಿಶಾಲವಾದ ಕೊಳಗಳನ್ನು ನಿರ್ಮಿಸಿದರು.

ಹಳ್ಳಿಯ ಅನಕ್ಷರಸ್ಥ, ಮುಗ್ಧ ಜನರಿಗೆ ಸಿಗಡಿ ಸಾಕಣೆಯಿಂದ ಉಂಟಾಗುವ ದುಷ್ಪರಿಣಾಮಗಳ ಯಾವುದೇ ಅರಿವು ಇರಲಿಲ್ಲ. ಹಾಗಾಗಿ ಕೊಳಗಳ ನಿರ್ಮಾಣದ ಸಂದರ್ಭದಲ್ಲಿ ಖುಷಿಯೊಂದಿಗೆ ಎಲ್ಲ ತರದ ಸಹಕಾರ ನೀಡಿದರು. ಒಂದರ ಪಕ್ಕ ಒಂದರಂತೆ ಏಳು ವಿಶಾಲವಾದ ಕೊಳಗಳು ನಿರ್ಮಾಣವಾದವು.

ಈ ಹಳ್ಳಿಗೆ ತೋಡೊಂದರ ಮೂಲಕ ಬೇಸಿಗೆಯಲ್ಲಿ ನೇತ್ರಾವತಿ ನದಿಯ ಉಪ್ಪು ನೀರು ಹರಿದು ಬರುತ್ತಿತ್ತು. ಉಪ್ಪು ನೀರು ಕೃಷಿ ಭೂಮಿ ಸೇರದಂತೆ ಒಂದೆಡೆ ಕಿಂಡಿ ಅಣೆಕಟ್ಟು ಕಟ್ಟಲಾಗಿತ್ತು. ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮ ಪಂಚಾಯತ್‌ನವರು ಅಣೆಕಟ್ಟೆಗೆ ಎರಡು ಕಡೆ ಹಲಗೆಯನ್ನು ಭದ್ರಪಡಿಸಿ ಮಧ್ಯೆ ಮಣ್ಣು ತುಂಬಿಸಿ ಉಪ್ಪು ನೀರು ಹಳ್ಳಿ ಕಡೆ ಹೋಗದಂತೆ ಮಾಡುತ್ತಿದ್ದರು. ಆದರೆ ಸಿಗಡಿ ಸಾಕಣೆಗೆ ಉಪ್ಪು ನೀರಿನ ಅಗತ್ಯ ಇತ್ತು. ಸಿಹಿ ನೀರಿನಲ್ಲಿ ಸಿಗಡಿ ಕೃಷಿ ಅಸಾಧ್ಯ. ತಮ್ಮ ಸ್ವಾರ್ಥಕ್ಕಾಗಿ ಸಿಗಡಿ ಸಾಕಣೆ ಮಾಡುವವರು ಬೇಸಿಗೆಯಲ್ಲಿ ಅಣೆಕಟ್ಟೆಗೆ ಹಲಗೆ ಹಾಕದಂತೆ ಮಾಡುವಲ್ಲಿ ಯಶಸ್ವಿಯಾದರು. ಒಂದೆಡೆ ಕಟ್ಟೆಹಾಕದ ಪರಿಣಾಮ ಬೇಸಿಗೆಯಲ್ಲಿ ಹರಿದುಬಂದ ಉಪ್ಪು ನೀರನ್ನು ಉಳ್ಳವರು ಕೊಳಗಳಲ್ಲಿ ಶೇಖರಿಸಿ ಸಿಗಡಿ ಕೃಷಿ ಆರಂಭಿಸಿದರೆ ಇನ್ನೊಂದಡೆ ಉಪ್ಪು ನೀರು ಇಡೀ ಕೃಷಿ ಭೂಮಿಯನ್ನು ನುಗ್ಗಿತ್ತು.

ಬೇಸಿಗೆ ಮುಗಿದು ಮಳೆಗಾಲದಲ್ಲಿ ನಾಟಿ ಮಾಡಿದ ಭತ್ತ ಎಲ್ಲಾ ವರ್ಷದಂತೆ ಉತ್ತಮವಾಗಿ ಬೆಳೆಯಲಿಲ್ಲ. ಕಟಾವಿಗೆ ಬಂದರೂ ಹಿಂದಿನಷ್ಟು ಫಸಲು ನೀಡಲಿಲ್ಲ. ಹಳ್ಳಿಯ ಜನರಿಗೆ ಸಮಸ್ಯೆಯ ಬಗ್ಗೆ ಅರಿವಾಗತೊಡಗಿತು. ಉಳ್ಳವರ ಬಳಿ ಸಮಸ್ಯೆಯನ್ನು ಹೇಳಿದರು. ಆದರೆ ಅವರು ಅದನ್ನು ಆಲಿಸಲು ತಯಾರಿರಲಿಲ್ಲ. ನಾವು ಲಕ್ಷಾಂತರ ರೂ. ವೆಚ್ಚ ಮಾಡಿದ್ದೇವೆ ಎಂದರು. ಮತ್ತೆಯೂ ಅಣೆಕಟ್ಟೆಗೆ ಹಲಗೆ ಹಾಕದೆ ಇದ್ದರಿಂದ ಮುಂದಿನ ಬೇಸಿಗೆಯಲ್ಲೂ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗಿತ್ತು. ನಿರೀಕ್ಷಿಸಿದ ಬೆಳೆ ಸಿಗದೆ ರೈತರು ಕಂಗಾಲಾದರು. ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ಒಂದರ ನಂತರ ಒಂದರಂತೆ ಹಳ್ಳಿಯ ಬಾವಿಗಳ ನೀರು ಕೂಡಾ ಉಪ್ಪಾಗಿ ಕುಡಿಯಲು ಅಯೋಗ್ಯವಾದವು.

ಹಳ್ಳಿಯ ಜನರು ತಮ್ಮ ಸಮಸ್ಯೆಯನ್ನು ಗ್ರಾಮ ಪಂಚಾಯತ್‌ಗೆ ತಲುಪಿಸಿದರು. ಆದರೆ ಪಂಚಾಯತ್ ಅದೇ ಉಳ್ಳವರ ಕೈ ಕೆಳಗಿತ್ತು. ಸಮಸ್ಯೆಯ ಪರಿಹಾರಕ್ಕಾಗಿ ರೈತರು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಕೃಷಿ ಅಧಿಕಾರಿಗಳು ಹೀಗೆ ಕಚೇರಿಯಿಂದ ಕಚೇರಿಗಳಿಗೆ ಅಲೆಯತೊಡಗಿದರು. ಶಾಸಕರು, ಜನಪ್ರತಿನಿಧಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸತೊಡಗಿದರು. ಆದರೆ ಯಾರಿಂದಲೂ ಸ್ಪಂದನೆ ಸಿಗಲಿಲ್ಲ. ಗ್ರಾಮ ಸಭೆಯಲ್ಲಿ ಕಿಂಡಿ ಅಣೆಕಟ್ಟೆಯ ಹಲಗೆಯ ಬಗ್ಗೆ ಕೇಳಿದರೆ, ಅದನ್ನು ಪಂಚಾಯತ್ ಕಟ್ಟಡಕ್ಕೆ ಬಾಗಿಲು ಮಾಡಲಾಗಿದೆ ಎಂಬ ಉತ್ತರ ನೀಡಲಾಗಿತ್ತು!.

ಬೇರೆ ದಾರಿ ಕಾಣದೆ ಕಂಗಾಲಾಗಿದ್ದ ರೈತರು ಕೃಷಿ ಭೂಮಿಗೆ ಬರುವ ಉಪ್ಪು ನೀರನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಗೋಣಿ ಚೀಲಗಳಿಗೆ ಮಣ್ಣು ತುಂಬಿಸಿ ಅಣೆಕಟ್ಟೆಯ ಪಕ್ಕದಲ್ಲಿ ತಡೆಗೋಡೆಯೊಂದನ್ನು ಕಟ್ಟಿದರು. ಆದರೆ ಕೆಲವೇ ದಿನಗಳಲ್ಲಿ ಆ ತಡೆಗೋಡೆಯನ್ನು ಕೂಡಾ ಸಿಗಡಿ ಕೃಷಿಯ ಮಾಲಕರು ಒಡೆದು ಹಾಕಿದರು. ಈ ಸಂದರ್ಭ ಎರಡೂ ಕಡೆಯ ಜನರ ನಡುವೆ ವಾಗ್ವಾದ ಉಂಟಾದರೂ ಮಗ್ಧ ರೈತರ ಮೇಲೆಯೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾದವು. ಆ ವರೆಗೆ ಠಾಣೆಯ ಮೆಟ್ಟಿಲೇರದ ಹಳ್ಳಿಗರು ಠಾಣೆಯ ಮೆಟ್ಟಿಲೇರುವಂತೆ ಆಯಿತು.

ತಮ್ಮ ನಿರಂತರ ಹೋರಾಟಕ್ಕೆ ಯಾರಿಂದಲೂ ಸ್ಪಂದನೆ ಸಿಗದೆ ಅನ್ಯಾಯವಾಗುತ್ತಿದ್ದರೂ ಯಾರಿಂದಲೂ ನ್ಯಾಯ ಸಿಗಲಿಲ್ಲ. ಜೊತೆಗೆ ಪೊಲೀಸ್ ಕೇಸುಗಳು ಬೇರೆ. ಇದರಿಂದ ನೊಂದ ಹಳ್ಳಿಯ ಜನರು ಕೃಷಿಯನ್ನೇ ಕೈ ಬಿಟ್ಟು ಕಾರ್ಖಾನೆ, ಆಸ್ಪತ್ರೆ, ಮಾರುಕಟ್ಟೆ ಹೀಗೆ ವಿವಿಧೆಡೆ ಕೆಲಸಗಳಿಗೆ ಸೇರಿಕೊಂಡರು. ಫಲವತ್ತಾದ ಕೃಷಿ ಭೂಮಿ ಪಾಲು ಬಿದ್ದವು. ಕೆಲವರು ತಮ್ಮ ಕೃಷಿ ಭೂಮಿಯನ್ನು ಬಿಲ್ಡರ್‌ಗಳಿಗೆ ಮಾರಿಕೊಂಡರು. ಅತ್ತ ಸಿಗಡಿ ಕೃಷಿ 4, 5 ವರ್ಷಗಳು ನಡೆದರೂ ಬಳಿಕ ನಷ್ಟದ ಕಾರಣದಿಂದ ನಿಂತು ಹೋದವು. ಇಂದು ಹಳ್ಳಿಯ ಜನರು ಕೃಷಿಯನ್ನೇ ಮರೆತು ಬಿಟ್ಟಿದ್ದಾರೆ. ಕೃಷಿ ಚಟುವಟಿಕೆಯಿಂದ ಕಂಗೊಳಿಸುತ್ತಿದ್ದ ಹಳ್ಳಿ ಇಂದು ಉಳ್ಳವರ ಸ್ವಾರ್ಥದಿಂದ ಕೃಷಿ ಚಟುವಟಿಕೆಯಲ್ಲದೆ ಕಲೆಗುಂದಿದೆ. ತಲೆತಲಾಂತರದಿಂದ ಬಂದ ಕೃಷಿಯ ಅರಿವು ಹೊಸ ಪೀಳಿಗೆಗೆ ಇಂದು ಇಲ್ಲವಾಗಿದೆ.

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News