ವಿವಾಹವಾಗಲು ನಿರಾಕರಿಸಿದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ

Update: 2019-06-17 10:49 GMT

ಹೊಸದಿಲ್ಲಿ : ತನ್ನನ್ನು ಮದುವೆಯಾಗಲು ನಿರಾಕರಿಸಿದ ಪ್ರಿಯಕರನಿಗೆ ರಾಜಧಾನಿಯ ಮಹಿಳೆಯೊಬ್ಬಳು ವಿಕಾಸಪುರಿ ಪ್ರದೇಶದಲ್ಲಿ ಆ್ಯಸಿಡ್ ಎರಚಿ ಪ್ರತೀಕಾರ ತೀರಿಸಿದ್ದಾಳೆ.

ಆಕೆ ತನ್ನ ಪ್ರಿಯಕರನ ಬೈಕಿನಲ್ಲಿ  ಹಿಂಬದಿ ಕುಳಿತು ಸಾಗುತ್ತಿದ್ದ ವೇಳೆ ಆತನನ್ನು ಸರಿಯಾಗಿ ಮುಟ್ಟಲು ಆಗುತ್ತಿಲ್ಲ ಎಂಬ ನೆಪ ಹೇಳಿ ಹೆಲ್ಮೆಟ್ ತೆಗೆಯಲು ಸಲಹೆ ನೀಡಿದ್ದಳು. ಆತ ಹೆಲ್ಮೆಟ್ ತೆಗೆದ ಕೆಲವೇ ಕ್ಷಣಗಳಲ್ಲಿ ಆಕೆ ಆತನ ಮೇಲೆ ಆ್ಯಸಿಡ್ ಎರಚಿದ್ದಳು.

ಯುವ ಜೋಡಿಯೊಂದರ ಮೇಲೆ ಆ್ಯಸಿಡ್ ದಾಳಿ ನಡೆದಿದೆ ಎಂದು ಜೂ. 11ರಂದು ಪೊಲೀಸರಿಗೆ ಕರೆಯೊಂದು ಬಂದಿತ್ತು. ಅವರು ಆಸ್ಪತ್ರೆಗೆ ತೆರಳಿದಾಗ ಯುವತಿಯ ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ ಯುವಕನ ಮುಖ, ಕುತ್ತಿಗೆ ಹಾಗೂ ಎದೆ  ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದವು. ಹಲವು ದಿನಗಳ ಕಾಲ ದಾಳಿಕೋರ ಯಾರೆಂಬ ಬಗ್ಗೆ ಪೊಲೀಸರಿಗೆ ಸುಳಿವು ದೊರಕಿರಲಿಲ್ಲ. ತಾವು ಬೈಕಿನಲ್ಲಿ ಸಾಗುತ್ತಿದ್ದಾಗ ದಾಳಿ ನಡೆದಿತ್ತೆಂದು ಇಬ್ಬರೂ ತಿಳಿಸಿದ್ದರು.

ಆದರೆ ನಂತರ ವಿಚಾರಣೆ ವೇಳೆ ಆಕೆ ತನಗೆ  ಹೆಲ್ಮೆಟ್ ತೆಗೆಯಲು ಹೇಳಿದ್ದನ್ನು ಯುವಕ ಪೊಲೀಸರಿಗೆ ತಿಳಿಸಿದ್ದು, ಸಂಶಯಗೊಂಡ ಪೊಲೀಸರು ಯುವತಿಯನ್ನು ಸತತ ವಿಚಾರಣೆಗೊಳಪಡಿಸಿದಾಗ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ.

ಅವರಿಬ್ಬರ ನಡುವೆ ಮೂರು ವರ್ಷಗಳಿಂದ ಪ್ರೇಮ ವ್ಯವಹಾರವಿತ್ತು.  ಆದರೆ ಇತ್ತೀಚೆಗೆ ಸಂಬಂಧ ಅಂತ್ಯಗೊಳಿಸುವಂತೆ ಆತ ಹೇಳಿದ್ದರೂ ಆತ ತನ್ನನ್ನು ವಿವಾಹವಾಗಲೇಬೇಕೆಂದು ಆಕೆ ಹಠ ಹಿಡಿದು ಕೊನೆಗೆ ಆತನಿಗೆ ಆ್ಯಸಿಡ್ ಎರಚಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News