ಪಾಕ್ ಮೇಲೆ ಮತ್ತೊಂದು ಹೊಡೆತ ಎಂಬ ಅಮಿತ್ ಶಾ ಟ್ವೀಟ್‌ಗೆ ಆರ್‌ಜೆಡಿ ಇದಿರೇಟು

Update: 2019-06-17 18:39 GMT

ಹೊಸದಿಲ್ಲಿ, ಜೂ.17: ರವಿವಾರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದೆದುರು ಭಾರತ ತಂಡ ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದ ಗೃಹ ಸಚಿವ ಅಮಿತ್ ಶಾ, ಪಾಕ್ ಮೇಲೆ ಮತ್ತೊಂದು ಹೊಡೆತ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಜನತಾದಳ ಪಕ್ಷ, ಸರ್, ದಯವಿಟ್ಟು ಬಿಹಾರದಲ್ಲಿ ಮೆದುಳಿನ ಉರಿಯೂತ ಹಾವಳಿಯ ಮೇಲೆ ಹೊಡೆತ ನೀಡಿ ಎಂದು ಟ್ವೀಟ್ ಮಾಡಿದೆ.

ಬಿಹಾರದ ಮುಝಫ್ಫರ್‌ಪುರದಲ್ಲಿ ಕಳೆದ 16 ದಿನದಲ್ಲಿ ಮೆದುಳಿನ ಉರಿಯೂತ ಕಾಯಿಲೆಯಿಂದ 100ಕ್ಕೂ ಅಧಿಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಜೆಡಿ ಪಕ್ಷದ ಟ್ವಿಟರ್‌ನಲ್ಲಿ ‘ಸರ್, ದಯವಿಟ್ಟು ಬಿಹಾರದಲ್ಲಿ ಕಳೆದ 16 ದಿನದಲ್ಲಿ 100ಕ್ಕೂ ಅಧಿಕ ಮಕ್ಕಳ ಸಾವಿಗೆ ಕಾರಣವಾದ ಮೆದುಳಿನ ಉರಿಯೂತದ ಮೇಲೆ ಹೊಡೆತ ನೀಡಿ. ಹೀಗೆ ಮಾಡುವಿರೆಂಬ ನಿರೀಕ್ಷೆಯಲ್ಲಿ ಈಗಲೇ ಧನ್ಯವಾದ ಸಲ್ಲಿಸುತ್ತಿದ್ದೇವೆ ಎಂದು ಹೇಳಲಾಗಿದೆ.

ಮ್ಯಾಂಚೆಸ್ಟರ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕ್ ಎದುರು 89 ರನ್‌ಗಳ ಜಯ ಸಾಧಿಸಿತ್ತು. ಈ ಗೆಲುವಿಗೆ ಟೀಂ ಇಂಡಿಯಾದ ಆಟಗಾರರನ್ನು ಅಭಿನಂದಿಸಿದ್ದ ಅಮಿತ್ ಶಾ, ಪಾಕ್ ಮೇಲೆ ಮತ್ತೊಂದು ಹೊಡೆತ ಮತ್ತು ಈ ಹಿಂದಿನ ಫಲಿತಾಂಶ ಪುನರಾವರ್ತನೆಯಾಗಿದೆ. ಈ ಅದ್ಭುತ ಗೆಲುವಿಗಾಗಿ ಇಡೀ ತಂಡಕ್ಕೆ ಅಭಿನಂದನೆ ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News