ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ವರಿಷ್ಠ: ಮಣಿಶಂಕರ್ ಅಯ್ಯರ್ ಹೇಳಿದ್ದು ಹೀಗೆ…
ಹೊಸದಿಲ್ಲಿ, ಜೂ. 23: ಕಾಂಗ್ರೆಸ್ನ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯುವ ಅನಿಶ್ಚಿತತೆ ನಡುವೆ ರವಿವಾರ ಕಾಂಗ್ರೆಸ್ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ನ ವರಿಷ್ಠರಾಗಲು ಸಾಧ್ಯ. ಆದರೆ, ‘ಗಾಂಧಿ’ ಕುಟುಂಬ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ. ‘ಗಾಂಧಿ ಮುಕ್ತ ಕಾಂಗ್ರೆಸ್’ ನಂತೆ ‘ಕಾಂಗ್ರೆಸ್ ಮುಕ್ತ ಭಾರತ’ವನ್ನು ಹೊಂದುವುದು ಬಿಜೆಪಿ ಉದ್ದೇಶ ಎಂದು ಅವರು ಹೇಳಿದರು.
ಕಾಂಗ್ರೆಸ್ನ ಪರಿಷ್ಠರಾಗಿ ರಾಹುಲ್ ಗಾಂಧಿ ಮುಂದುವರಿಯುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ. ಆದರೆ, ಅದೇ ಸಂದರ್ಭ ರಾಹುಲ್ ಗಾಂಧಿ ಅವರ ನಿಲುವಿಗೆ ಕೂಡ ಗೌರವ ಕೊಡಬೇಕು ಎಂದು ಅವರು ಹೇಳಿದರು.
ಪಕ್ಷದ ಮುಖ್ಯಸ್ಥರಾಗಿ ನೆಹರೂ, ಗಾಂಧಿಯ ಹೆಸರಿಲ್ಲದೆ ನಾವು ಮುಂದುವರಿಯಲು ಸಾಧ್ಯ ಎಂಬ ಭರವಸೆ ನನಗೆ ಇದೆ. ಆದರೆ, ನೆಹರೂ-ಗಾಂಧಿಗಳು ಪಕ್ಷದ ಒಳಗಡೆ ಸಕ್ರಿಯವಾಗಿರಬೇಕು. ಪಕ್ಷದ ಒಳಗೆ ಗಂಭೀರ ಭಿನ್ನಾಭಿಪ್ರಾಯಗಳು ತಲೆದೋರಿದಾಗ ಪರಿಹರಿಸಲು ಅವರು ನೆರವು ನೀಡಲು ಸಾಧ್ಯ ಎಂದು ಸಂದರ್ಶನವೊಂದರಲ್ಲಿ ಅಯ್ಯರ್ ಹೇಳಿದ್ದಾರೆ.