ಮರೆತುಹೋದ ವಿ.ಪಿ. ಸಿಂಗ್ ಮೊಮ್ಮಗನ ನೆನಪಲ್ಲಿ...

Update: 2019-06-24 18:34 GMT

1998ರ ಬೇಸಿಗೆಯ ಸಮಯ. ನನ್ನ ಕುಟುಂಬದವರು ಅಲಹಾಬಾದ್‌ನಲ್ಲಿರುವ ನಮ್ಮ ಮನೆಯಲ್ಲಿ ಒಟ್ಟು ಸೇರಿದ್ದರು. ನಾನಾಗ ಕೇವಲ 8 ವರ್ಷದವನಾಗಿದ್ದೆ, ಆದರೂ ನನ್ನ ಕೋಣೆಯಲ್ಲಿ ರಣರಂಗದ ವಾತಾವರಣವಿದ್ದುದು ನನಗೆ ಸ್ಪಷ್ಟವಾಗಿತ್ತು. ನನ್ನ ಚಿಕ್ಕಮ್ಮಂದಿರು, ದೊಡ್ಡ ಅತ್ತೆಯಂದಿರು, ಮಾವನವರು ಒಂದು ಬದಿಯಲ್ಲಿ ಗುಂಪು ಸೇರಿದ್ದರೆ ಬಿಳಿ ಬಣ್ಣದ ಕುರ್ತಾ, ಸಡಿಲವಾದ ಪೈಜಾಮ ಧರಿಸಿದ್ದ ನನ್ನ ಅಜ್ಜ, ವಿಶ್ವನಾಥ ಪ್ರತಾಪ ಸಿಂಗ್ ಇನ್ನೊಂದು ಬದಿಯಲ್ಲಿದ್ದ ಸೋಫಾದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದರು.
ಅದೇ ಮೊದಲ ಬಾರಿಗೆ ನಾನು ‘ಮಂಡಲ ಆಯೋಗ’ ಎಂಬ ಪದವನ್ನು ಕೇಳಿದ್ದೆ.
ಈ ಎರಡು ಪದಗಳು ನನ್ನ ಕುಟುಂಬದ ಹಾಗೂ ಬಹುಪಾಲು ಭಾರತೀಯರ ಹಣೆಬರಹವನ್ನು ವ್ಯಾಖ್ಯಾನಿಸುತ್ತದೆ ಎಂಬ ಬಗ್ಗೆ ನನಗಾಗ ಹೆಚ್ಚಿನ ತಿಳುವಳಿಕೆ ಇರಲಿಲ್ಲ.
ನಾನು ಅಜ್ಜನಿಗೆ ತಾಗಿಕೊಂಡೇ ಕುಳಿತಿದ್ದೆ. ಪ್ರತೀ ಐದು ನಿಮಿಷಕ್ಕೊಮ್ಮೆ ‘‘ರಾಜಾ ಬಹಾದೂರ್, ನೀವು ನಮಗೆ ದ್ರೋಹ ಬಗೆದಿರಿ, ಈಗ ನೋಡಿ, ಠಾಕೂರರ ಸ್ಥಿತಿ ಏನಾಗಿದೆ’’ ಎಂಬ ಮಾತಿನ ಫಿರಂಗಿ ನನ್ನ ಕಿವಿಗೆ ಅಪ್ಪಳಿಸುತ್ತಿತ್ತು. ‘‘ನಿನ್ನ ನಿರ್ಧಾರ ಮೇಲ್ವರ್ಗದ ಜನರ ಅದೃಷ್ಟವನ್ನು ಶಾಶ್ವತವಾಗಿ ಬದಲಿಸಿಬಿಟ್ಟಿದೆ’’ ಎಂದು ನನ್ನ ದೊಡ್ಡ ಅತ್ತೆ ಹೇಳಿದರು.
ಆದರೆ ನನ್ನ ಅಜ್ಜ ಶಾಂತವಾಗಿ, ಸಮಚಿತ್ತದಿಂದ ಉತ್ತರಿಸಿದರು- ‘‘ನಾವು ಠಾಕೂರರು ಸಮಾಜವನ್ನು, ಅದರಲ್ಲೂ ವಿಶೇಷವಾಗಿ ಶೋಷಿತ ಮತ್ತು ದುರ್ಬಲ ವರ್ಗದವರನ್ನು ರಕ್ಷಿಸುವ ಪವಿತ್ರ ಪ್ರಮಾಣವಚನ ಸ್ವೀಕರಿಸಿದ್ದೇವೆ. ಸುಮಾರು 5,000 ವರ್ಷಗಳ ತನಕ ನಮ್ಮ ಕೈಗಳು ಕೆಳವರ್ಗದ ಜನರ ಮೇಲೆ ವ್ಹಿಪ್ ಚಲಾಯಿಸಿದ್ದವು, ಅವರಿಗೆ ಶಿಕ್ಷಣದ ಮತ್ತು ಅಭಿವೃದ್ಧಿ ಹೊಂದುವ ಹಕ್ಕನ್ನು ನಿರಾಕರಿಸಿದ್ದೆವು ಎಂಬುದನ್ನು ನಾವು ಮರೆಯಬಾರದು. ಈಗ ಅಧಿಕಾರದ ಬಾಗಿಲನ್ನು ಅವರಿಗೆ ತೆರೆಯಬೇಕಿದೆ. ನಾವೀಗ ಎಲ್ಲರೂ ಒಟ್ಟು ಸೇರಿ ಸಾಮಾಜಿಕವಾಗಿ ಸಶಕ್ತ ಭಾರತದ ಅಡಿಪಾಯ ಹಾಕಬೇಕಿದೆ. ನಾನು ಕೇವಲ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಅಷ್ಟೇ’’.
ಗಾಂಧಿವಾದಿ ಆದರ್ಶವಾದ:
 ಇಂದು, ಅವರ ಜನ್ಮದಿನಾಚರಣೆಯಂದು ಕೂಡಾ ಈ ಸಾಮಾಜಿಕ ನ್ಯಾಯದ ಮರೆಯಲಾಗದ ಪಾಠ ನನಗೆ ಮಾರ್ಗಸೂಚಕವಾಗಿದೆ. ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಬಗ್ಗೆ ಎಲ್ಲೋ ಒಂದಿಷ್ಟು ಬರೆದಿರುವುದನ್ನು ಹೊರತುಪಡಿಸಿ, ಸಮಕಾಲೀನ ಭಾರತ ನಿರ್ಮಾಣದ ನಿಟ್ಟಿನಲ್ಲಿ ಅವರ ಕೊಡುಗೆಯನ್ನು ಸ್ಮರಿಸುವ ಯಾವುದೇ ಪ್ರಯತ್ನ ನಡೆದಿಲ್ಲ. ಈ ಪ್ರಮಾದದ ಬಗ್ಗೆ ಬೇಸರಗೊಂಡಿರುವ ಅಲಹಾಬಾದ್‌ನ ಯಮುನಾ ನದಿಯ ಬಳಿಯಲ್ಲಿರುವ ವಿ.ಪಿ. ಸಿಂಗ್ ಅವರ ಈ ಹಿಂದಿನ ಎಸ್ಟೇಟ್ ದೈಯಾ-ಮಂಡದ ಜನತೆಯ ವಂಶದವರು, ಸಂಬಂಧಿಕರು 2016ರನ್ನು ಮಾಜಿ ಪ್ರಧಾನಿಯ ಸಾಮಾಜಿಕ ದೃಷ್ಟಿಕೋನವನ್ನು ಸ್ಮರಿಸಿಕೊಳ್ಳುವ ವರ್ಷವನ್ನಾಗಿ ಆಚರಿಸಿದ್ದರು. ನೂರಾರು ಯುವ ಕಾರ್ಯಕರ್ತರು ಒಟ್ಟು ಸೇರಿ, ಒಂದು ಸಮಿತಿಯನ್ನು ರಚಿಸಿ ವರ್ಷವಿಡೀ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
 ದೇಶದಲ್ಲಿ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ವಿ.ಪಿ. ಸಿಂಗ್ ಅವರ ಪ್ರಮುಖ ಕೊಡುಗೆಯೆಂದರೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನತೆಯ ಪರವಾದ ಸಕಾರಾತ್ಮಕ ಕ್ರಿಯೆಯಾದ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿರುವುದು. ವಿ.ಪಿ. ಸಿಂಗ್ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಜನವರಿಯಲ್ಲಿ ಹಮ್ಮಿಕೊಳ್ಳಲಾದ ಮಂಡಲ್ ಮಿಲನ್ ಕಾರ್ಯಕ್ರಮದಲ್ಲಿ ನಾನು ವಿ.ಪಿ. ಸಿಂಗ್‌ರ ಆರಂಭಿಕ ಗಾಂಧಿವಾದಿ ಬದುಕಿನ ಬಗ್ಗೆ ಬಹಳ ಕತೆಗಳನ್ನು ಕೇಳಿದೆ.
1956-57ರಲ್ಲಿ, ಗಾಂಧಿವಾದಿ ಕಾರ್ಯಕರ್ತ ವಿನೋಬಾ ಭಾವೆಯವರು ತಮ್ಮ ಭೂದಾನ ಚಳವಳಿ(ಭೂರಹಿತರಿಗೆ ಭೂಮಿಯನ್ನು ಮರುಹಂಚುವ ಚಳವಳಿ)ಯ ಅಂಗವಾಗಿ ಅಲಹಾಬಾದ್ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಆಗ 26 ವರ್ಷದವರಾಗಿದ್ದ ವಿ.ಪಿ. ಸಿಂಗ್ ತಮ್ಮ ಮೊದಲ ಗುರುವಿನಿಂದ ಪ್ರೇರಿತಗೊಂಡು ಈ ಪ್ರದೇಶದಲ್ಲಿ ಒಂದು ಬೃಹತ್ ಶ್ರಮದಾನ ಕಾರ್ಯವನ್ನು ಆಯೋಜಿಸಿದ್ದರು. ತಮ್ಮ ಹೆಸರಲ್ಲಿದ್ದ ಸುಮಾರು 200 ಬಿಘಾದಷ್ಟು ಭೂಮಿಯನ್ನು ಸಂಪೂರ್ಣವಾಗಿ ಭೂದಾನ ಚಳವಳಿಗೆ ಅರ್ಪಿಸಿಬಿಟ್ಟರು. ಅಷ್ಟೇ ಅಲ್ಲ, ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದೆ ಈ ಪ್ರದೇಶದಲ್ಲಿದ್ದ ಕೆರೆ, ಹೊಂಡ, ಬಾವಿಗಳ ಕೆಸರೆತ್ತುವ ಕಾಯಕದಲ್ಲಿ ತೊಡಗಿಕೊಂಡಿದ್ದರು ಎಂಬುದನ್ನು ಜನತೆ ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ.
 ಅಲ್ಲದೆ ಕೊರಾನ್ ಎಂಬಲ್ಲಿ ಆರಂಭವಾದ ಪ್ರಥಮ ಜನತಾ ಶಾಲೆಗೆ ದೇಣಿಗೆ ಸಂಗ್ರಹಿಸಲು ಮನೆ ಮನೆ ತಿರುಗುತ್ತಾ ಸುಮಾರು ನೂರಾರು ಕಿ.ಮೀ.ನಷ್ಟು ಪಾದಯಾತ್ರೆ ನಡೆಸಿದ್ದರು. ಜನತಾ ಶಾಲೆಯಲ್ಲಿ ಜಾತಿ, ಧರ್ಮದ ಗೋಡೆ ಮೀರಿ ಆ ಪ್ರದೇಶದ ಎಲ್ಲಾ ಜನತೆಗೆ ಕಲಿಯಲು ಅವಕಾಶವಿತ್ತು.
ಇಂತಹ ಶಕ್ತಿ ಅವರಲ್ಲಿ ಎಂದಿಗೂ ಕಡಿಮೆಯಾಗಿರಲಿಲ್ಲ. ತನ್ನ ಬದುಕಿನ ಅಂತಿಮ ದಿನಗಳಲ್ಲಿ, ಕ್ಯಾನ್ಸರ್ ಹಾಗೂ ಮೂತ್ರಪಿಂಡದ ವೈಫಲ್ಯ ಕೂಡಾ ಅವರ ಚೈತನ್ಯವನ್ನು ಕುಂದಿಸಲು ಶಕ್ತವಾಗಿರಲಿಲ್ಲ. ಪ್ರಧಾನಿಯಾಗಿದ್ದ 1989-90ರ ಅವಧಿಯ ಬಳಿಕ ಅವರ ದೃಷ್ಟಿಕೋನ ಮತ್ತಷ್ಟು ವಿಶಾಲವಾಯಿತು. ದೇಶವನ್ನು ಹರಿದು ಹಂಚಲು ಹೊಂಚು ಹಾಕುತ್ತಿರುವ ಶಕ್ತಿಗಳ ಬಗ್ಗೆ ಅವರಿಗೆ ಹೆಚ್ಚಿನ ತಿಳುವಳಿಕೆ ದೊರಕಿತು. ದೇಶದ ಸಮಗ್ರತೆಯನ್ನು ಹಿಂದುತ್ವ ಹಾಗೂ ಸಾಂಸ್ಥಿಕ ಪ್ರಾಬಲ್ಯಗಳು ದುರ್ಬಲಗೊಳಿಸುತ್ತಿವೆ ಎಂದವರು ನಂಬಿದ್ದರು.
 ತನ್ನ 75ನೇ ಜನ್ಮದಿನದ ಕೆಲ ದಿನದ ಮೊದಲು ಚಿಂತಾಕ್ರಾಂತರಂತೆ ತೋರುತ್ತಿದ್ದ ವಿ.ಪಿ. ಸಿಂಗ್ ತನ್ನ ಕೋಣೆಗೆ ನನ್ನನ್ನು ಕರೆದರು. ಸುದೀರ್ಘ ವೌನದ ಬಳಿಕ, ಚಿಂತೆಗೆ ಕಾರಣವೇನೆಂದು ಅವರಲ್ಲಿ ಕೇಳಿದೆ. ‘‘ದೇಶದ ಸಣ್ಣ ರೈತರು ಕಠಿಣ ಪರಿಶ್ರಮಿಗಳು ಹಾಗೂ ಪ್ರಾಮಾಣಿಕರು. ಅವರ ಪರಿಶ್ರಮ ಮತ್ತು ದುಡಿಮೆ ದೇಶಕ್ಕೆ ಅನ್ನ ನೀಡುತ್ತಿದೆ. ಆದರೆ ಅವರಲ್ಲಿ ಬಹುತೇಕ ರೈತರು ತಮ್ಮ ಕುಟುಂಬದ ಹೊಟ್ಟೆ ತುಂಬಿಸಲೂ ಅಸಮರ್ಥರಾಗಿದ್ದಾರೆ. ನಮ್ಮ ದೇಶದ ರೈತರನ್ನು ಶೋಷಿಸುವ ಯಾವುದೇ ವ್ಯಕ್ತಿ ಅಥವಾ ಸಾಂಸ್ಥಿಕ ಶಕ್ತಿಗಳು ದೇಶದ ಆತ್ಮವನ್ನೇ ಘಾಸಿಗೊಳಿಸುವ ಪಾಪದ ಕೆಲಸ ಮಾಡುತ್ತಿವೆೆ’’ ಎಂದು ವಿ.ಪಿ. ಸಿಂಗ್ ಹೇಳಿದರು.
ಕಂಪೆನಿಗಳು ಭಾರತದ ಕೃಷಿ ಭೂಮಿಯನ್ನು ವಶಕ್ಕೆ ಪಡೆಯುವ ಬಗ್ಗೆ ಮುನ್ಸೂಚನೆ ಅವರಿಗಿತ್ತು. ಸರಕಾರ ಕಾನೂನುಬದ್ಧವಾಗಿ ಭೂಮಿಯನ್ನು ವಶಪಡಿಸಿಕೊಳ್ಳಲು ವಿಫಲವಾದರೆ, ಅವರು (ಕಾರ್ಪೊರೇಟ್ ಶಕ್ತಿಗಳು) ತಮ್ಮ ಲಾಭಕ್ಕಾಗಿ ರೈತರ ಕೈಗಳನ್ನು ತಿರುಚಲಿದ್ದಾರೆ. ಸಾಂಸ್ಥಿಕ ನಿಯಂತ್ರಣದ ಯುಗದಲ್ಲಿ ಚಿನ್ನ ಮಾತ್ರ ಉತ್ತಮ ಎಂಬ ಭಾವನೆ ಮೂಡುತ್ತದೆ. ರೈತರನ್ನು ಸಮರ್ಥಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಅವರನ್ನು ಸ್ವಾವಲಂಬಿಗಳನ್ನಾಗಿಸುವುದು. ಇದನ್ನು ಹೇಗೆ ಮಾಡುವುದು ಎಂದು ನಿರ್ಧರಿಸಲು ನನಗೆ ಸುದೀರ್ಘ ಸಮಯದ ಅಗತ್ಯ ಬೀಳಬಹುದು. ಆದರೆ ಉತ್ತರ ನಿಜವಾಗಿ ಸರಳವಾಗಿದೆ: ಸಾಂಪ್ರದಾಯಿಕ ಕೃಷಿ ಪದ್ಧತಿ ಮತ್ತು ಸಾವಯವ ಕೃಷಿ ಪದ್ಧತಿ ಇದಕ್ಕೆ ಪರಿಹಾರವಾಗಿದೆ.
ಮಾರ್ಚ್‌ನಲ್ಲಿ ಸುಮಾರು 5,000 ರೈತರ ಉಪಸ್ಥಿತಿಯಲ್ಲಿ ನಾವು ಅಲಹಾಬಾದ್ ನಗರವನ್ನು ಉತ್ತರಪ್ರದೇಶದ ಪ್ರಪ್ರಥಮ ಸಾವಯವ ನಗರವನ್ನಾಗಿಸಲು ‘ಜೈವಿಕ ಕಿಸಾನ್ ಮಾರ್ಚ್’ ಆರಂಭಿಸಿದೆವು.
 ಆಧುನಿಕ ಭಾರತದ ನಿರ್ಮಾಣದಲ್ಲಿ ವಿ.ಪಿ. ಸಿಂಗ್‌ರ ಕೊಡುಗೆ ಏನೆಂಬುದು ಈಗಲೂ ಹಲವರಿಗೆ ಅರ್ಥವಾಗದು. ಆದರೆ ಈಗಲೂ ಸಾಮಾಜಿಕ ನ್ಯಾಯ ಮತ್ತು ಸತ್ಯದಲ್ಲಿ ವಿಶ್ವಾಸ ಇಟ್ಟಿರುವ, ವಿ.ಪಿ. ಸಿಂಗ್‌ರ ಹೆಸರು ಸ್ಮರಿಸದಿದ್ದರೂ ಅವರ ಆದರ್ಶಕ್ಕಾಗಿ ಹೋರಾಟ ನಡೆಸುವ ಜನತೆ ಇದ್ದಾರೆ ಎಂಬ ವಿಶ್ವಾಸ ನನಗಿದೆ.
ಕೃಪೆ: scroll.in

Writer - ಇಂದ್ರಶೇಖರ್ ಸಿಂಗ್

contributor

Editor - ಇಂದ್ರಶೇಖರ್ ಸಿಂಗ್

contributor

Similar News

ಜಗದಗಲ
ಜಗ ದಗಲ