ಪ್ರಶ್ನೆ ಕೇಳಬಾರದೆಂದು ಆದಿತ್ಯನಾಥ್ ಭೇಟಿ ವೇಳೆ ಪತ್ರಕರ್ತರನ್ನು ಕೊಠಡಿಯಲ್ಲಿ ಕೂಡಿಟ್ಟ ಜಿಲ್ಲಾಧಿಕಾರಿ

Update: 2019-06-30 18:00 GMT

ಮೊರಾದಾಬಾದ್(ಉ.ಪ್ರ),ಜೂ.30: ಮುಖ್ಯಮಂತ್ರಿ  ಆದಿತ್ಯನಾಥ್ ಅವರು ರವಿವಾರ ಇಲ್ಲಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಕೇಶ ಕುಮಾರ್ ಅವರು ಒಂದು ಡಝನ್ ಪತ್ರಕರ್ತರನ್ನು ವಾರ್ಡ್‌ನಲ್ಲಿ ಕೂಡಿ ಹಾಕಿ ಬೀಗ ಜಡಿದಿರುವುದು ವರದಿಯಾಗಿದೆ.

ಆಸ್ಪತ್ರೆಯಲ್ಲಿನ ಸೇವೆಗಳ ಗುಣಮಟ್ಟ ಕುರಿತಂತೆ ಪತ್ರಕರ್ತರು ಮುಖ್ಯಮಂತ್ರಿಗಳಿಗೆ ಪ್ರಶ್ನಿಸುವುದನ್ನು ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ ಈ ವಿದ್ಯಮಾನಕ್ಕೆ ಕಾರಣಗಳು ಇನ್ನಷ್ಟೇ ಸ್ಪಷ್ಟವಾಗಿ ತಿಳಿದುಬರಬೇಕಿದೆ.

ಪತ್ರಕರ್ತರನ್ನು ಕೂಡಿ ಹಾಕಿದ್ದ ವಾರ್ಡ್‌ನ ಕಾವಲಿಗೆ ಪೊಲೀಸರನ್ನು ನಿಯೋಜಿಸಲಾಗಿತ್ತು ಮತ್ತು ಆದಿತ್ಯನಾಥ್ ಆಸ್ಪತ್ರೆಯಿಂದ ನಿರ್ಗಮಿಸಿ ಬಳಿಕವಷ್ಟೇ ಪತ್ರಕರ್ತರನ್ನು ಬಿಡುಗಡೆಗೊಳಿಸಲಾಗಿತ್ತು.

ಈ ಘಟನೆಯ ವೀಡಿಯೊ ವೈರಲ್ ಆದ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಶೇರ್ ಮಾಡಿಕೊಂಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕುಮಾರ್,ವರದಿಗಳು ತಪ್ಪಾಗಿವೆ. ಪರಿಶೀಲನೆ ಸಂದರ್ಭ ಪತ್ರಕರ್ತರು ವಾರ್ಡ್‌ನೊಳಗಿದ್ದರು,ಹೀಗಾಗಿ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳೊಂದಿಗೆ ವಾರ್ಡ್ ಪ್ರವೇಶಿಸದಂತೆ ತಾನವರಿಗೆ ಸೂಚಿಸಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News