ಜಠರದ ಉರಿತದ ಲಕ್ಷಣಗಳು ಮತ್ತು ಕಾರಣಗಳು

Update: 2019-07-10 15:40 GMT

ಗ್ಯಾಸ್ಟ್ರೋಎಂಟ್ರೈಟಿಸ್ ಅಥವಾ ಜಠರದುರಿತವು ವಿಶ್ವಾದ್ಯಂತ ಸಾಮಾನ್ಯವಾಗಿರುವ ಅನಾರೋಗ್ಯ ಸ್ಥಿತಿಯಾಗಿದೆ. ಜಠರಗರುಳು ನಾಳದ ಲೋರೆಪೊರೆಗಳಲ್ಲಿ ಉರಿಯೂತ ಉಂಟಾಗುವುದನ್ನು ಜಠರದುರಿತ ಎಂದು ವ್ಯಾಖ್ಯಾನಿಸಲಾಗಿದೆ. ಅತಿಸಾರ ಮತ್ತು ವಾಂತಿಗಳನ್ನು ವಿಶಿಷ್ಟ ಲಕ್ಷಣಗಳನ್ನಾಗಿ ಹೊಂದಿರುವ ಜಠರದುರಿತವು ಪ್ರತಿ ವರ್ಷ ವಿಶ್ವಾದ್ಯಂತ 15-20 ಲಕ್ಷ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ ಎನ್ನುತ್ತದೆ ಅಧ್ಯಯನ ವರದಿ.

ಜಠರದುರಿತವು ಮಕ್ಕಳಲ್ಲಿ ಸಾಮಾನ್ಯವಾಗಿದೆಯಾದರೂ ವಯಸ್ಕರನ್ನೂ ಅದು ಕಾಡುತ್ತದೆ. ಆದರೆ ಹೆಚ್ಚಿನ ಜನರಿಗೆ ಜಠರದುರಿತಕ್ಕೆ ಕಾರಣಗಳೇನು,ಅದು ಎಷ್ಟು ಸಮಯ ಕಾಡುತ್ತದೆ ಮತ್ತು ಅದಕ್ಕೆ ಚಿಕಿತ್ಸೆ ಹೇಗೆ ಎನ್ನುವುದು ಗೊತ್ತಿರುವುದಿಲ್ಲ. ಇಲ್ಲಿದೆ ಈ ಕುರಿತು ಅಗತ್ಯ ಮಾಹಿತಿಗಳು.....

ಜಠರದುರಿತಕ್ಕೆ ವೈರಸ್‌ಗಳು ಅತ್ಯಂತ ಸಾಮಾನ್ಯ ಕಾರಣಗಳಾಗಿವೆ. ಮಕ್ಕಳಲ್ಲಿ ಶೇ.70ರಷ್ಟು ತೀವ್ರ ಜಠರದುರಿತ ಪ್ರಕರಣಗಳು ವೈರಸ್‌ಗಳಿಂದುಂಟಾಗುತ್ತವೆ.

 ಜಠರದುರಿತಕ್ಕೆ ಕಾರಣವಾಗುವ 20ಕ್ಕೂ ಅಧಿಕ ವಿವಿಧ ವೈರಸ್‌ಗಳಿವೆಯಾದರೂ, ರೋಟಾವೈರಸ್ ಅತ್ಯಂತ ಸಾಮಾನ್ಯ ವೈರಸ್ ಆಗಿದೆ. ಆರು ತಿಂಗಳಿನಿಂದ ಎರಡು ವರ್ಷ ಪ್ರಾಯದವರೆಗಿನ ಮಕ್ಕಳಲ್ಲಿ ಶೇ.30ರಿಂದ ಶೇ.70ರಷ್ಟು ಪ್ರಕರಣಗಳಲ್ಲಿ ರೋಟಾವೈರಸ್ ಮುಖ್ಯ ಕಾರಣವಾಗಿರುತ್ತದೆ. ರೋಟಾವೈರಸ್ ಸೋಂಕು ವರ್ಷವಿಡೀ ಉಂಟಾಗುತ್ತದೆಯಾದರೂ ಚಳಿಗಾಲದಲ್ಲಿ ಉತ್ತುಂಗದಲ್ಲಿರುತ್ತದೆ. ಅಡೆನೊವೈರಸ್,ಕ್ಯಾಲಿಸಿವೈರಸ್ ಮತ್ತು ಆ್ಯಸ್ಟ್ರೋವೈರಸ್ ಇವು ಇತರ ಸಾಮಾನ್ಯ ವೈರಸ್‌ಗಳಲ್ಲಿ ಒಳಗೊಂಡಿವೆ.

ಜಠರದುರಿತ ಸಾಮಾನ್ಯವಾಗಿ ವೈರಸ್‌ಗಳಿಂದ ಉಂಟಾಗುತ್ತದೆಯಾದರೂ,ಬ್ಯಾಕ್ಟೀರಿಯಾಗಳು ಮತ್ತು ಪರಾವಲಂಬಿಗಳು ಸಹ ಇದಕ್ಕೆ ಕಾರಣವಾಗಬಲ್ಲವು.

ಜಠರದುರಿತವು ಅತ್ಯಂತ ಸಾಂಕ್ರಾಮಿಕ ಅನಾರೋಗ್ಯವಾಗಿದೆ. ಅದು ಕಲುಷಿತ ಆಹಾರ ಅಥವಾ ನೀರು ಅಥವಾ ಈ ಸ್ಥಿತಿಯಿಂದ ಬಳುತ್ತಿರುವ ವ್ಯಕ್ತಿಗಳ ನಿಕಟಸಂಪರ್ಕದಿಂದ ಹರಡುತ್ತದೆ.

ಜಠರದುರಿತದ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ ಒಂದೆರಡು ದಿನಗಳ ಬಳಿಕ ಕಾಣಿಸಿಕೊಳ್ಳುತ್ತವೆ ಮತ್ತು ಸುಮಾರು ಮೂರು ದಿನಗಳವರೆಗೆ ಈ ಲಕ್ಷಣಗಳಿರಬಹುದು. ಬ್ಯಾಕ್ಟೀರಿಯಾಗಳು ಅಥವಾ ಪರಾವಲಂಬಿಗಳು ಈ ಸ್ಥಿತಿಗೆ ಕಾರಣವಾಗಿದ್ದರೆ ಲಕ್ಷಣಗಳು ಇನ್ನಷ್ಟು ದಿನಗಳ ಕಾಲ ಮುಂದುವರಿಯುತ್ತವೆ.

 ಅತಿಸಾರ,ವಾಕರಿಕೆ ಮತ್ತು ವಾಂತಿ,ತಲೆನೋವು,ಜ್ವರ,ಚಳಿ,ಹೊಟ್ಟೆನೋವು ಮತ್ತು ಹಸಿವು ಕಡಿಮೆಯಾಗುವುದು ಇವು ಜಠರದುರಿತದ ಸಾಮಾನ್ಯ ಲಕ್ಷಣಗಳಾಗಿವೆ.

ರೋಟಾವೈರಸ್ ವಯಸ್ಕರನ್ನೂ ಬಾಧಿಸುತ್ತದೆ,ಆದರೆ ಲಕ್ಷಣಗಳು ಸೌಮ್ಯ ಸ್ವರೂಪದ್ದಾಗಿರುತ್ತವೆ. ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು,ವಯಸ್ಸಾದ ವ್ಯಕ್ತಿಗಳು ಮತ್ತು ಶರೀರದ ರೋಗ ನಿರೋಧಕ ಕುಂದಿದವರಲ್ಲಿ ಲಕ್ಷಣಗಳು ತೀವ್ರವಾಗಿ ಕಂಡುಬರಬಹುದು.

ಹೆಚ್ಚಿನ ಸಂದರ್ಭಗಳಲ್ಲಿ ಜಠರದುರಿತವನ್ನು ಆಹಾರ ಅಸಹಿಷ್ಣುತೆ(ಲ್ಯಾಕ್ಟೋಸ್ ಅಸಹಿಷ್ಣುತೆ),ಉರಿಯೂತದ ಕರುಳಿನ ಕಾಯಿಲೆ,ಉದರದ ಕಾಯಿಲೆ ಮತ್ತು ಕೆರಳಿಸುವ ಕರುಳಿನ ಸಹಲಕ್ಷಣಗಳು ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಆ್ಯಂಟಿ ಬಯಾಟಿಕ್‌ಗಳಂತಹ ಕೆಲವು ಔಷಧಿಗಳು ಸಹ ವೈರಸ್‌ಗಳಿಂದುಂಟಾಗುವ ಜಠರದುರಿತವನ್ನು ಹೋಲುವ ಲಕ್ಷಣಗಳಿಗೆ ಕಾರಣವಾಗುತ್ತವೆ. ಹೀಗಾಗಿ 2-3 ದಿನಗಳಲ್ಲಿ ಲಕ್ಷಣಗಳು ಕಡಿಮೆಯಾಗದಿದ್ದರೆ ಅಥವಾ ತೀವ್ರಗೊಂಡರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ಜಠರದುರಿತಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಅದು ಪೌಷ್ಟಿಕಾಂಶ ಕೊರತೆ,ಸ್ನಾಯುಗಳಲ್ಲಿ ನಿಶ್ಶಕ್ತಿಯಿಂದ ಹಿಡಿದು ನಿರ್ಜಲೀಕರಣದವರೆಗೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ವೈದ್ಯರು ಜಠರದುರಿತದ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆಯನ್ನು ನೀಡುತ್ತಾರೆ. ನಿರ್ಜಲೀಕರಣವನ್ನು ತಡೆಯುವುದು ಮತ್ತು ಶರೀರದಲ್ಲಿ ಸೂಕ್ತ ದ್ರವ ಮತ್ತು ವಿದ್ಯುದ್ವಿಚ್ಛೇದ್ಯ ಸಮತೋಲನವನ್ನು ಖಚಿತಪಡಿಸುವುದು ಚಿಕಿತ್ಸೆಯ ಮುಖ್ಯ ಉದ್ದೇಶವಾಗಿರುತ್ತದೆ. ಹೀಗಾಗಿ ಯಥೇಚ್ಛ ದ್ರವಗಳ ಸೇವನೆ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಮುಖ್ಯವಾಗುತ್ತದೆ. ಮಕ್ಕ ಳಲ್ಲಿ ಹೊಟ್ಟೆಯ ತೊಂದರೆಗಳನ್ನು ಕಡಿಮೆ ಮಾಡಲು ಹಾಗೂ ನಷ್ಟಗೊಂಡ ವಿದ್ಯುದ್ವಿಚ್ಛೇದ್ಯಗಳು ಮತ್ತು ದ್ರವಗಳ ಮರುಭರ್ತಿಗೆ ವೌಖಿಕ ಪುನರ್ಜಲೀಕರಣ ದ್ರವ(ಒಆರ್‌ಎಸ್)ಗಳು ನೆರವಾಗುತ್ತವೆ.

ಗಂಭೀರ ಪ್ರಕರಣಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಐವಿ ದ್ರವಗಳನ್ನು ನೀಡಬೇಕಾಗುತ್ತದೆ.

ಹೆಚ್ಚಿನ ಪ್ರಕರಣಗಳಲ್ಲಿ ಜಠರದುರಿತಕ್ಕೆ ವೈರಸ್‌ಗಳು ಕಾರಣವಾಗಿರುತ್ತವೆ ಮತ್ತು ಆ್ಯಂಟಿ ಬಯಾಟಿಕ್‌ಗಳು ಪರಿಣಾಮಕಾರಿಯಾಗುವ ಸಾಧ್ಯತೆ ತುಂಬ ಕಡಿಮೆಯಿರುತ್ತದೆ. ಹೀಗಾಗಿ ಆ್ಯಂಟಿ ಬಯಾಟಿಕ್‌ಗಳ ಸೇವನೆಯಿಂದ ದೂರವಿರುವುದು ಒಳ್ಳೆಯದು. ಜಠರದುರಿತಕ್ಕೆ ಸ್ವಯಂ ಚಿಕಿತ್ಸೆ ಬೇಡವೇ ಬೇಡ ಮತ್ತು ವೈದ್ಯರ ಸಲಹೆಯಂತೆ ನಡೆದುಕೊಳ್ಳುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News