‘ಆರೆಸ್ಸೆಸ್ ನಿಷೇಧ’ವೆಂಬ ಮೂರು ಪ್ರಹಸನಗಳು

Update: 2019-07-12 18:30 GMT

ಮೊದಲ ನಿಷೇಧದ ಸಂದರ್ಭದಲ್ಲಿ ಆರೆಸ್ಸೆಸ್‌ಗೆ ಅಲ್ಪಸ್ವಲ್ಪಅಳುಕಿತ್ತು. ಕಾಂಗ್ರೆಸ್‌ನಲ್ಲಿ ಕೆಲವರಲ್ಲಾದರೂ ಬಲವಾದ ಆರೆಸ್ಸೆಸ್ ವಿರೋಧವಿತ್ತು. ಮೂರನೇ ನಿಷೇಧದ ವೇಳೆಗೆ ಆರೆಸ್ಸೆಸ್ ಸಂವಿಧಾನ ಹಾಗೂ ಸಮಾಜದ ಬಗ್ಗೆ ಯಾವುದೇ ಅಳುಕನ್ನು ಇಟ್ಟುಕೊಳ್ಳದೆ ಬಹಿರಂಗ ಆಕ್ರಮಣಕ್ಕಿಳಿದಿತ್ತು. ಆರೆಸ್ಸೆಸ್ ಬಗ್ಗೆ ಅಲ್ಪಸ್ವಲ್ಪವಿರೋಧವಿದ್ದ ಕಾಂಗ್ರೆಸ್ ರೂಪಾಂತರಗೊಂಡು ಆರೆಸ್ಸೆಸ್‌ನ ಮೃದು ರೂಪವಾಗಿ ಬದಲಾಗಿತ್ತು. ಇದು ಎಲ್ಲಾ ವಿರೋಧಪಕ್ಷಗಳ ಪರಿಸ್ಥಿತಿಯೂ ಹೌದು. ಈಗಂತೂ ಸೈದ್ಧಾಂತಿಕ ಸಂಸದೀಯ ವಿರೋಧದಿಂದ ಹೆಚ್ಚೂ ಕಡಿಮೆ ಮುಕ್ತವಾಗಿರುವ ಆರೆಸ್ಸೆಸ್ಸೇ ಅಧಿಕಾರದಲ್ಲಿದೆ.


ಸರಕಾರಗಳು ಯಾವುದಾದರೂ ಸಂಘ ಸಂಸ್ಥೆಯನ್ನು ಏಕೆ ನಿಷೇಧಿಸುತ್ತವೆ? ಇತಿಹಾಸವು ಹೇಳುವಂತೆ ಜನಚಳವಳಿಗಳು ಸರಕಾರದ ಅಸ್ತಿತ್ವಕ್ಕೆ ಅಥವಾ ಅದರ ಮಾನ್ಯತೆಗೆ ಧಕ್ಕೆ ತರುವಷ್ಟು ತೀವ್ರಗತಿಯನ್ನು ಪಡೆದುಕೊಂಡಾಗ. ಮತ್ತು ಸರಕಾರ ಹಾಗೂ ಸರಕಾರದ ಮೇಲೆ ನಿಯಂತ್ರಣ ಹೊಂದಿರುವ ಶಕ್ತಿಗಳು ಬಯಸದ ವಿದ್ಯಮಾನಗಳಿಂದಾಗಿ ಹಾಲಿ ಇರುವ ‘ಕಾನೂನು ಮತ್ತು ಸುವ್ಯವಸ್ಥೆಗೆ’ ಧಕ್ಕೆ ಒದಗುತ್ತಿದ್ದಾಗ ಪ್ರಭುತ್ವಗಳು ಸಂಘ-ಸಂಸ್ಥೆಗಳನ್ನು, ಅವರ ಸಿದ್ಧಾಂತಗಳ ಪ್ರಚಾರಗಳನ್ನು ನಿಷೇಧಿಸುತ್ತವೆ. ಆ ಸಂಸ್ಥೆಗಳ ಕಾರ್ಯಕರ್ತರನ್ನು ಹಲವು ವರ್ಷಗಳ ಕಾಲ ವಿಚಾರಣೆಯನ್ನು ಮಾಡದೆ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತವೆ ಅಥವಾ ನಕಲಿ ಎನ್‌ಕೌಂಟರ್‌ಗಳಲ್ಲಿ ಕೊಂದುಹಾಕುತ್ತವೆ. ಆದರೆ ಅಸ್ತಿತ್ವದಲ್ಲಿರವ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆ ಯನ್ನು ರಕ್ಷಿಸಲೆಂದೇ ಅವತರಿಸಿರುವ ಆರೆಸ್ಸೆಸ್ ಕೂಡಾ ಸ್ವಾತಂತ್ರ್ಯಾನಂತರದಲ್ಲಿ ಕೂಡಾ ಮೂರು ಬಾರಿ ನಿಷೇಧಕ್ಕೊಳಗಾಗಿದೆ. ಈ ನಿಷೇಧವನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಮೂರೂ ಬಾರಿ ಅದನ್ನು ನಿಷೇಧಿಸಿದ್ದು ಅದರ ರಾಜಕೀಯ ವೈರಿ ಎಂದು ಹೇಳಲ್ಪಡುವ ಕಾಂಗ್ರೆಸೇ. ಆದರೂ ಸಹ ಒಟ್ಟಾರೆಯಾಗಿ ನೋಡಿದರೆ ಆರೆಸ್ಸೆಸ್ ‘‘ನಿಷೇಧವಾಯಿತು’’ ಎಂದಾಗಲೀ ‘‘ಕಾಂಗ್ರೆಸ್ ಆರೆಸ್ಸೆಸ್‌ನ್ನು ನಿಷೇಧಿಸಿತು’’ ಎಂದಾಗಲಿ ಹೇಳಲು ಸಾಧ್ಯವೇ? ಮೂರೂ ನಿಷೇಧಗಳ ಇತಿಹಾಸವನ್ನು ಸ್ವಲ್ಪವಿವರವಾಗಿ ನೋಡೋಣ.. ಆರೆಸ್ಸೆಸ್ ನಿಷೇಧ -1(1948-49)

ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಸಕ್ರಿಯ ಕಾರ್ಯಕರ್ತನಾಗಿದ್ದ ನಾಥೂರಾಮ್ ಗೋಡ್ಸೆ ಎಂಬ ಬ್ರಾಹ್ಮಣ ಶಾಹಿ ಭಯೋತ್ಪಾದಕ 1948ರ ಜನವರಿ 30ರಂದು ಸಂಜೆ 5:30ರ ಸುಮಾರಿಗೆ ದಿಲ್ಲಿಯಲ್ಲಿ ಗಾಂಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ. ಕೊಂದ ಕೈಗಳು ಆತನದ್ದಾಗಿದ್ದರೂ ಅದರ ಹಿಂದಿದ್ದ ಮೆದುಳು ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾವೇ ಆಗಿತ್ತು. ಹೀಗಾಗಿ 1949ರ ಫೆಬ್ರವರಿಯಲ್ಲಿ ಹಿಂದೂ ಮಹಾಸಭಾದ ಮುಖ್ಯಸ್ಥ ಸಾವರ್ಕರ್‌ರನ್ನು ಬಂಧಿಸಲಾಯಿತಲ್ಲದೇ ಆರೆಸ್ಸೆಸ್‌ನ್ನು ನಿಷೇಧಿಸಿ ಅದರ ಸರಸಂಘಚಾಲಕ ಗೋಳ್ವಾಲ್ಕರ್ ಅವರನ್ನೂ ಒಳಗೊಂಡಂತೆ ಹಲವಾರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು. ಇದೇ ಗುಂಪು 1948ಕ್ಕೂ ಮುನ್ನ ಆರು ಬಾರಿ ಗಾಂಧಿಯವರ ಮೇಲೆ ಹತ್ಯಾ ಪ್ರಯತ್ನಗಳನ್ನು ನಡೆಸಿತ್ತು. ಸ್ವತಂತ್ರ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳ ಪ್ರಯತ್ನಕ್ಕೆ ಗಾಂಧಿ ಅಡ್ಡಿಯಾಗಿದ್ದದ್ದು ಅದಕ್ಕೆ ಪ್ರಮುಖ ಕಾರಣ. ಆದರೆ ಭಾರತವು ಒಂದು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಬೇಕೆಂಬ ಆಸೆ ಇದ್ದದ್ದು ಕೇವಲ ಆರೆಸ್ಸೆಸ್‌ಗೆ ಮಾತ್ರವಲ್ಲ. ಕಾಂಗ್ರೆಸ್‌ನಲ್ಲಿದ್ದ ಮದನ ಮೋಹನ ಮಾಳವೀಯರಂತಹ ನಾಯಕರಿಗೂ ಅದೇ ಆಸೆಯಿತ್ತು.

ಆಗಿನ ಉಪಪ್ರಧಾನಿ ಮತ್ತು ಗೃಹಮಂತ್ರಿ ವಲ್ಲಭಭಾಯಿ ಪಟೇಲ್‌ರಂತಹವರಿಗೆ ಸ್ವತಂತ್ರ ಭಾರತದಲ್ಲಿ ಮುಸ್ಲಿಮರಿಗೆ ‘ಅವರ ಜಾಗವನ್ನು ತೋರಿಸಲು’ ಸಹಾಯ ಮಾಡುವ ಆರೆಸ್ಸೆಸ್‌ನ ಸಿದ್ಧಾಂತ ಮತ್ತು ಸಂಘಟನೆಯ ಬಗ್ಗೆ ಆಳವಾದ ಮಮತೆಯೇ ಇತ್ತು. ವಾಸ್ತವವಾಗಿ ವಿಭಜನೆಯ ನಂತರದಲ್ಲಿ ಭಾರತ ಸರಕಾರವು ಹಿಂದೂ ರಕ್ಷಣೆಯ ಹೆಸರಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಆರೆಸ್ಸೆಸ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತ್ತು. ಅಲ್ಲದೆ ಭಾರತದೊಡನೆ ವಿಲೀನಕ್ಕೆ ಒಪ್ಪಲು ಕಾಶ್ಮೀರದ ರಾಜನ ಮನ ಒಲಿಸುವಂತೆ ಗೋಳ್ವಾಲ್ಕರ್ ಅವರಿಗೆ ಪಟೇಲರು ಅಧಿಕೃತವಾಗಿಯೇ ಕೇಳಿಕೊಂಡಿದ್ದರು. ಹೀಗಾಗಿ ಆರೆಸ್ಸೆಸ್‌ನ ಹಿಂದುತ್ವವಾದಿ ತೀವ್ರಗಾಮಿ ಚಟುವಟಿಕೆಗಳಿಗೆ ಸರಕಾರದಲ್ಲಿ ಮತ್ತು ಕಾಂಗ್ರೆಸ್‌ನ ಒಂದು ವಿಭಾಗದಲ್ಲಿ ವಿಶೇಷ ಮಾನ್ಯತೆಯೇ ಇತ್ತು. ಆದರೆ ಗಾಂಧಿ ಹತ್ಯೆಯ ನಂತರದಲ್ಲಿ ಕಾಂಗ್ರೆಸ್ ಸರಕಾರ ಆರೆಸ್ಸೆಸ್‌ನ್ನು ನಿಷೇಧಿಸದೆ ಗತ್ಯಂತರವಿಲ್ಲ. ಆದರೆ ಆಗ ಭಾರತದ ಗೃಹಮಂತ್ರಿಯಾಗಿದ್ದದ್ದು ಆರೆಸ್ಸೆಸ್ ಬಗ್ಗೆ ವಿಶೇಷ ಮಮತೆಯಿದ್ದ ಪಟೇಲರೇ. ಹೀಗಾಗಿ ಆರೆಸ್ಸೆಸ್‌ನ್ನು ನಿಷೇಧ ಮಾಡಿದ್ದು ಪಟೇಲರೇ ಆದ್ದರಿಂದ ಅವರು ಆರೆಸ್ಸೆಸ್ ವಿರೋಧಿ ಯಾಗಿದ್ದರು ಎಂಬ ವಾದವನ್ನು ಪ್ರಗತಿಪರರು ಮುಂದಿಡುತ್ತಿದ್ದಾರೆ.

ಇದು ಸುಳ್ಳಲ್ಲ. ಆದರೆ ಪೂರ್ತಿ ನಿಜವೂ ಅಲ್ಲ. ಗಾಂಧಿ ಹತ್ಯೆಯು ಪಟೇಲರನ್ನು ಒಳಗೊಂಡಂತೆ ಎಲ್ಲಾ ಕಾಂಗ್ರೆಸಿಗರನ್ನು ದಿಗ್ಭ್ರಾಂತಗೊಳಿಸಿದ್ದು ನಿಜವಾಗಿರಬಹುದು. ಆದರೆ ಅದರ ನೆಪದಲ್ಲಿ ಆರೆಸ್ಸೆಸ್‌ನ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ನಿಷೇಧವನ್ನು ಹೇರುವುದು ಪಟೇಲರಿಗೂ, ಆಗಿನ ಮುಂಬೈ ಪ್ರಾಂತದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯಂತಹವರಿಗೂ ಬಿಲ್‌ಕುಲ್ ಇಷ್ಟವಿರಲಿಲ್ಲ. ಹೀಗಾಗಿ ಆರೆಸ್ಸೆಸ್ ತನಗೊಂದು ಸಂವಿಧಾನವನ್ನು ಬರೆದುಕೊಂಡು ತನ್ನದು ರಾಜಕೀಯ ಸಂಘಟನೆಯಲ್ಲವೆಂದು ಸಾರಿದರೆ ಸಾಕು ನಿಷೇಧವನ್ನು ತೆಗೆಯಬಹುದೆಂದು ಸ್ವಯಂ ಪಟೇಲರೇ ಬಂಧನದಲ್ಲಿದ್ದ ಗೋಳ್ವಾಲ್ಕರ್ ಅವರೊಂದಿಗೆ ಮಾತುಕತೆ ಪ್ರಾರಂಭಿಸುತ್ತಾರೆ. ಈ ಮಾತುಕತೆಯ ಪ್ರಕ್ರಿಯೆಯಲ್ಲಿ ಗೋಳ್ವಾಲ್ಕರ್ ಅವರು 1948ರ ಸೆಪ್ಟಂಬರ್ 24ರಂದು ಪಟೇಲರಿಗೆ ಪತ್ರವೊಂದನ್ನು ಬರೆದು: ‘‘ತಾವು ತಮ್ಮ ಸರಕಾರದ ಶಕ್ತಿಯೊಂದಿಗೆ ಹಾಗೂ ನಾವು ನಮ್ಮ ಸಂಘಟಿತ ಸಾಂಸ್ಕೃತಿಕ ಶಕ್ತಿಯೊಂದಿಗೆ ಜೊತೆಗೂಡಿ ಕೆಲಸ ಮಾಡಿದರೆ ನಮ್ಮ ಮುಂದಿರುವ ‘ಕಮ್ಯುನಿಸ್ಟ್’ ಪೀಡೆಯನ್ನು ನಿರ್ನಾಮ ಮಾಡಬಹುದು’’ ಎಂದು ಆಶ್ವಾಸನೆ ನೀಡುತ್ತಾರೆ. ಇದು ಕಾಂಗ್ರೆಸ್‌ನಲ್ಲಿದ್ದ ಒಂದು ಪ್ರಭಾವಶಾಲಿ ಗುಂಪಿಗೂ ಹಾಗೂ ಆರೆಸ್ಸೆಸ್‌ಗೂ ಇದ್ದ ಸೈದ್ಧಾಂತಿಕ ಸಾಮೀಪ್ಯ. ಅದರಂತೆ ಆರೆಸ್ಸೆಸ್ ಭಾರತದ ಗೃಹ ಇಲಾಖೆಯು ಸೂಚಿಸಿದ ಯಾವ ಮಹತ್ತರ ಮಾರ್ಪಾಡುಗಳನ್ನು ಮಾಡಿಕೊಳ್ಳದೆ ಸಂವಿಧಾನವನ್ನು ರಚಿಸಿಕೊಳ್ಳುತ್ತದೆ. ಅದನ್ನೇ ನೆಪವಾಗಿಟ್ಟುಕೊಂಡು ಸರಕಾರ ಅದರ ಮೇಲಿನ ನಿಷೇಧವನ್ನು ತೆಗೆಯುತ್ತದೆ.

ನಂತರ 1949ರ ಅಕ್ಟೋಬರ್‌ನಲ್ಲಿ ನೆಹರೂ ವಿದೇಶ ಪ್ರವಾಸಕ್ಕೆ ತೆರಳಿದ್ದಾಗ ನಡೆದ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಕಾಂಗ್ರೆಸ್‌ನ ಸದಸ್ಯರಾಗಬಹುದೆಂಬ ತೀರ್ಮಾನವನ್ನು ತರಾತುರಿಯಲ್ಲಿ ಪಟೇಲರು ಮಾಡಿಸುತ್ತಾರೆ. ಆದರೆ ನೆಹರೂ ಹಿಂದಿರುಗಿದ ನಂತರದ 1949ರ ನವೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಆರೆಸ್ಸೆಸ್ ಸದಸ್ಯತ್ವವನ್ನು ತೊರೆದು ಕಾಂಗ್ರೆಸ್ ಸದಸ್ಯರಾಗಬಹುದೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಆರೆಸ್ಸೆಸ್ ನಿಷೇಧ -2 (1975-77)

ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿದಾಗ ತಮ್ಮನ್ನು ವಿರೋಧಿಸುತ್ತಿದ್ದ ಎಲ್ಲಾ ವಿರೋಧಪಕ್ಷಗಳ ಮೇಲೆ ನಿಷೇಧ ಹೇರಿ ಅತ್ಯಂತ ಕ್ರೂರ ಸರ್ವಾಧಿಕಾರವನ್ನು ಜಾರಿ ಮಾಡಿದ್ದರು. ಆ ಸಮಯದಲ್ಲಿ ಇತರ ವಿರೋಧ ಪಕ್ಷಗಳು ಜೈಲುಪಾಲಾಗಿ ತಮ್ಮ ರಾಜಕೀಯ ಹಕ್ಕುಗಳನ್ನು ಕಳೆದುಕೊಂಡಿದ್ದು ನಿಜವಾದರೂ ತುರ್ತುಸ್ಥಿತಿಯ ಕ್ರೂರ ದಮನಕ್ಕೆ ಬಲಿಯಾದದ್ದು ರೈತಾಪಿ, ಕಾರ್ಮಿಕರು ಮತ್ತು ಎಡಪಂಥೀಯ (ಸಿಪಿಐ ಹೊರತುಪಡಿಸಿ) ವಿದ್ಯಾರ್ಥಿಗಳು ಹಾಗೂ ನಾಯಕರು. ಕನಿಷ್ಠ ಇಂತಹ ನೂರಾರು ಕಾರ್ಯಕರ್ತರು ದೇಶಾದ್ಯಂತ ಪೊಲೀಸರ ಗುಂಡಿಗೆ ಬಲಿಯಾದರು. ಇಂದಿರಾ ಗಾಂಧಿಯನ್ನು ವಿರೋಧಿಸಿದ ಕಾರಣಕ್ಕೆ ಆರೆಸ್ಸೆಸ್ ಕೂಡಾ ಆಗ ಎರಡನೇ ಬಾರಿಗೆ ನಿಷೇಧಕ್ಕೊಳಗಾಯಿತು. 1975ರ ಜುಲೈನಲ್ಲಿ ನಿಷೇಧಕ್ಕೆ ಗುರಿಯಾದ ಆರೆಸ್ಸೆಸ್‌ನ ಆಗಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಅವರು 1975ರ ಆಗಸ್ಟ್‌ನಿಂದಲೇ ಇಂದಿರಾ ಗಾಂಧಿಯವರಿಗೆ ಪತ್ರವನ್ನು ಬರೆಯಲು ಪ್ರಾರಂಭಿಸಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆರೆಸ್ಸೆಸ್ ಬಗ್ಗೆ ಸರಕಾರಕ್ಕೆ ತಪ್ಪು ಅಭಿಪ್ರಾಯ ಇದೆಯೆಂದೂ, ತಾವು ಇಂದಿರಾ ಗಾಂಧಿಯವರ ಜೊತೆಗೆ ಹೆಜ್ಜೆ ಹಾಕಲು ಸಿದ್ಧವೆಂದು ಹೇಳುತ್ತಾ ಆರೆಸ್ಸೆಸ್ ಮೇಲಿನ ನಿಷೇಧವನ್ನು ಎತ್ತಿಹಾಕಲು ಗೋಗರೆಯಲು ಪ್ರಾರಂಭಿಸಿದರು.

ಈ ರೀತಿ ಮೂರು ಪತ್ರಗಳನ್ನು ಬರೆದರೂ ಇಂದಿರಾ ಗಾಂಧಿಯವರಿಂದ ಯಾವ ಉತ್ತರವೂ ಬರದೇ ಹೋದಾಗ ಕಡು ಕಮ್ಯುನಿಸ್ಟ್ ವಿರೋಧಿಯೂ ಹಾಗೂ ಆರೆಸ್ಸೆಸ್‌ನ ಹಿತೈಷಿಯೂ ಮತ್ತು ಇಂದಿರಾ ಗಾಂಧಿಯವರ ಅಭಿಮಾನಿಯೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಪ್ರವೇಶವನ್ನು ಆರೆಸ್ಸೆಸ್ ಕೋರಿತು. ಈ ಎಲ್ಲದರ ಪರಿಣಾಮವಾಗಿ ಆರೆಸ್ಸೆಸ್‌ನ ಮೇಲೆ ಅಧಿಕೃತವಾಗಿ ಬ್ಯಾನ್ ತೆಗೆಯದಿದ್ದರೂ ಆರೆಸ್ಸೆಸ್‌ನ ಬಹುಪಾಲು ಕಾರ್ಯಕರ್ತರು ಮಾತ್ರ ಬಿಡುಗಡೆಯಾದರು. ಆರೆಸ್ಸೆಸ್‌ನ ಸರಸಂಘಚಾಲಕ ದೇವರಸ್ ಮತ್ತು ಇಂದಿರಾ ಗಾಂಧಿಯವರ ಈ ರಾಜಕೀಯ ಮೈತ್ರಿ 1980ರಲ್ಲಿ ಅವರು ಮತ್ತೆ ಪ್ರಧಾನಿಯಾದ ನಂತರವೂ ಮುಂದುವರಿಯಿತು. ಈ ಅವಧಿಯಲ್ಲಿ ಇಂದಿರಾ ಗಾಂಧಿ ಸರಕಾರ ಪಂಜಾಬಿನಲ್ಲಿ ‘ಸಿಖ್ ಉಗ್ರಗಾಮಿತ್ವ’ವನ್ನು ಹತ್ತಿಕ್ಕುವ ಹೆಸರಲ್ಲಿ ತೆಗೆದುಕೊಂಡ ಎಲ್ಲಾ ಬರ್ಬರ ದಮನಕಾರಿ ಕ್ರಮಗಳನ್ನು ಆರೆಸ್ಸೆಸ್ ಬೆಂಬಲಿಸಿತಲ್ಲದೆ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿ ಋಣ ತೀರಿಸಿಕೊಂಡಿತು. ಆರೆಸ್ಸೆಸ್ ನಿಷೇಧ -3 (1992-93)

1992ರ ಡಿಸೆಂಬರ್ 6ರಂದು ಆರೆಸ್ಸೆಸ್‌ನ ಅಂಗಸಂಸ್ಥೆಗಳು ಹಾಡಹಗಲೇ ಕಾನೂನು, ಸಂವಿಧಾನಗಳನ್ನೆಲ್ಲಾ ಗೇಲಿ ಮಾಡುತ್ತಾ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ನಂತರದಲ್ಲಿ ಮೂರನೇ ಬಾರಿಗೆ ಆರೆಸ್ಸೆಸ್ ನಿಷೇಧಕ್ಕೊಳಗಾಯಿತು. ದೇಶಾದ್ಯಂತ ಕೋಮು ಸಾಮರಸ್ಯ ಕದಡಿದ ಹಾಗೂ ಸಂವಿಧಾನ ಬದ್ಧ ಆಡಳಿತವನ್ನು ಯೋಜಿತವಾಗಿ ಧ್ವಂಸ ಮಾಡುವ ಆರೋಪಗಳು ಅವರ ಮೇಲಿತ್ತು. ಅದನ್ನು ಜಾರಿ ಮಾಡಲು ಸಂಚು, ಸಂಘಟನೆ ಮತ್ತು ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಮತ್ತೊಂದು ಆರೋಪ. ಇದನ್ನು ಸಾಬೀತು ಮಾಡಲು ಯಾವ ವಿಶೇಷ ಪುರಾವೆಗಳು ಬೇಕಿರಲಿಲ್ಲ. ಅವರು ಮಾಡಿದ ಭಾಷಣಗಳು ಮತ್ತು ಅವರು ಖುದ್ದಾಗಿ ಭಾಗವಹಿಸಿದ್ದನ್ನು ಸಾಬೀತು ಮಾಡುವ ಚಿತ್ರಗಳು ಹಾಗೂ ಪೊಲೀಸ್ ವರದಿಗಳೇ ಸಾಕಿತ್ತು. ಆರೆಸ್ಸೆಸ್ ಮೇಲಿನ ನಿಷೇಧವನ್ನು ವಿಚಾರಣೆ ಮಾಡಲು ನ್ಯಾಯಮೂರ್ತಿ ಪಿ.ಕೆ. ಬಾಹ್ರಿ ಅವರ ನೇತೃತ್ವದಲ್ಲಿ ಒಂದು ಟ್ರಿಬುನಲ್ ಅನ್ನು ಸ್ಥಾಪಿಸಲಾಯಿತು. ಅದು ಸತತವಾಗಿ ವಿಚಾರಣೆ ನಡೆಸಿ ನಿಷೇಧ ವಿಧಿಸಿದ ಕೇವಲ ಆರೇ ತಿಂಗಳಲ್ಲಿ ಆರೆಸ್ಸೆಸ್‌ನ್ನು ದೋಷ ಮುಕ್ತಗೊಳಿಸಿತು.

ಕಾರಣ: ಆರೆಸ್ಸೆಸ್‌ನ್ನು ದೋಷಿಯೆಂದು ಪರಿಗಣಿಸುವ ಯಾವ ಪುರಾವೆಯನ್ನು ಸರಕಾರ ಒದಗಿಸದೇ ಇದ್ದದ್ದು!! ಇನ್ನು ಬಾಬರಿ ಮಸೀದಿ ನಾಶದಲ್ಲಿ ಅಡ್ವಾಣಿ ಹಾಗೂ ಇನ್ನಿತರ ಪರಿವಾರಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸಿದ ಲಿಬರ್ಹಾನ್ ಮತ್ತು ನಾನಾವತಿ ಆಯೋಗಗಳ ವರದಿ ಕಾಂಗ್ರೆಸ್ ಕಾಲದಲ್ಲೇ ಡಸ್ಟ್‌ಬಿನ್ ಸೇರಿದ್ದವು. ಮೊದಲ ನಿಷೇಧದ ಸಂದರ್ಭದಲ್ಲಿ ಆರೆಸ್ಸೆಸ್‌ಗೆ ಅಲ್ಪಸ್ವಲ್ಪಅಳುಕಿತ್ತು. ಕಾಂಗ್ರೆಸ್‌ನಲ್ಲಿ ಕೆಲವರಲ್ಲಾದರೂ ಬಲವಾದ ಆರೆಸ್ಸೆಸ್ ವಿರೋಧವಿತ್ತು. ಮೂರನೇ ನಿಷೇಧದ ವೇಳೆಗೆ ಆರೆಸ್ಸೆಸ್ ಸಂವಿಧಾನ ಹಾಗೂ ಸಮಾಜದ ಬಗ್ಗೆ ಯಾವುದೇ ಅಳುಕನ್ನು ಇಟ್ಟುಕೊಳ್ಳದೆ ಬಹಿರಂಗ ಆಕ್ರಮಣಕ್ಕಿಳಿದಿತ್ತು. ಆರೆಸ್ಸೆಸ್ ಬಗ್ಗೆ ಅಲ್ಪಸ್ವಲ್ಪವಿರೋಧವಿದ್ದ ಕಾಂಗ್ರೆಸ್ ರೂಪಾಂತರಗೊಂಡು ಆರೆಸ್ಸೆಸ್‌ನ ಮೃದು ರೂಪವಾಗಿ ಬದಲಾಗಿತ್ತು. ಇದು ಎಲ್ಲಾ ವಿರೋಧಪಕ್ಷಗಳ ಪರಿಸ್ಥಿತಿಯೂ ಹೌದು. ಈಗಂತೂ ಸೈದ್ಧಾಂತಿಕ ಸಂಸದೀಯ ವಿರೋಧದಿಂದ ಹೆಚ್ಚೂ ಕಡಿಮೆ ಮುಕ್ತವಾಗಿರುವ ಆರೆಸ್ಸೆಸ್ಸೇ ಅಧಿಕಾರದಲ್ಲಿದೆ. ಇದು ಬದಲಾಗುತ್ತಿರುವ ಭಾರತದ ಆಳುವವರ್ಗದ ರಾಜಕಾರಣ. ಅರ್ಥಮಾಡಿಕೊಳ್ಳೋಣ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News