ಅಬ್ದುಲ್ ನಾಸರ್‌ರ ಯಶೋಗಾಥೆ

Update: 2019-07-13 18:40 GMT

 ‘‘ನನ್ನ ತಾಯಿ ಅತ್ಯಂತ ಪ್ರೀತಿಪಾತ್ರ ಮಹಿಳೆಯಾ ಗಿದ್ದರು. ಆಕೆಯ ಹೋರಾಟ ಹಾಗೂ ದೃಢನಿರ್ಧಾರವು ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಇಂದು ನಾನು ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ್ದೇನೆ. ನನ್ನ ಸಾಧನೆಗಳ ಬಗ್ಗೆ ನನ್ನ ಕುಟುಂಬಕ್ಕೆ ಅಪಾರವಾದ ಹೆಮ್ಮೆಯಿದೆ. ಆದರೆ ಅದರ ಶ್ರೇಯಸ್ಸು ಅವರಿಗೇ ಸಲ್ಲಬೇಕಾಗಿದೆ. ಅವರ ಪ್ರೋತ್ಸಾಹ ಹಾಗೂ ಒತ್ತಾಯವಿಲ್ಲದೆ ಇದ್ದಲ್ಲಿ ನಾನು ಎಂದೂ ಐಎಎಸ್ ಅಧಿಕಾರಿಯಾಗುತ್ತಿರಲಿಲ್ಲ.’’
-ಅಬ್ದುಲ್ ನಾಸರ್

17ನೇ ವಯಸ್ಸಿನವರೆಗೂ ಅಬ್ದುಲ್ ನಾಸರ್ ಬಿ. ಅನಾಥಾಶ್ರಮದಲ್ಲ್ಲೇ ಬೆಳೆದರು ಹಾಗೂ ಸುಮಾರು 12 ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದರು. ಅನಾಥಾಶ್ರಮ ದಿಂದ ಅವರು ಎರಡು ಬಾರಿ ಪರಾರಿಯಾಗಿದ್ದರು. ಆದರೆ ತಾನು ತಾಯಿಗೆ ಹೊರೆಯಾಗಬಾರದೆಂಬ ಕಾಳಜಿಯಿಂದ ಅವರು ಮತ್ತೆ ಅನಾಥಾಲಯಕ್ಕೆ ವಾಪಸಾಗಿದ್ದರು.
  ಈಗ 32 ವರ್ಷಗಳ ಆನಂತರ ನಾಸರ್, ಕೊಲ್ಲಂ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಕೇರಳದ ತಲಶ್ಯೇರಿಯ ಅನಾಥಾಶ್ರಮದಿಂದ ಹಿಡಿದು ಐಎಎಸ್ ಅಧಿಕಾರಿಯಾಗುವ ಅವರ ಬದುಕಿನ ಪ್ರಯಾಣವು ತಮ್ಮ ಬದುಕಿನಲ್ಲಿ ಅಸಾಧಾರಣವಾದ ಸವಾಲುಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಸ್ಫೂರ್ತಿದಾಯಕವಾಗಿದೆ.
  ತನ್ನ ತಂದೆ ನಿಧನರಾದಾಗ ನಾಸರ್‌ಗೆ ಕೇವಲ 5 ವರ್ಷ ವಯಸ್ಸು. ಆರು ಮಕ್ಕಳನ್ನು ಸಾಕಿ, ಬೆಳೆಸುವ ಹೊರೆ ನಾಸರ್‌ನ ತಾಯಿ ಮನ್‌ಹುಮಾ ಅವರ ಮೇಲೆ ಬಿತ್ತು. ಅನಕ್ಷರಸ್ಥೆಯಾದರೂ ಮನ್‌ಹುಮಾಗೆ ತನ್ನ ಮಕ್ಕಳು ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗಗಳನ್ನು ಪಡೆಯಬೇಕೆಂದು ಬಯಸಿದ್ದರು. ತನ್ನ ಕನಸನ್ನು ಸಾಧಿಸಲು ತಲಶ್ಯೇರಿಯಲ್ಲಿ ಕೂಲಿ ಮಾಡಿಕೊಂಡು ಕುಟುಂಬಕ್ಕೆ ಆಧಾರವಾದರು. ವಿಧವೆಯಾದ ಮನ್‌ಹುಮಾಗೆ ಆರು ಮಕಳ ಪೋಷಣೆಯ ಜೊತೆಗೆ ಶ್ರಮದ ದುಡಿಮೆ ಇವರೆಡನ್ನೂ ಹೊಂದಿಸಿಕೊಳ್ಳುವುದು ಖಂಡಿತವಾಗಿಯೂ ಸುಲಭದ ಕೆಲಸವಲ್ಲ ಹಾಗೂ ಹಿತೈಷಿ ಬಂಧುಗಳ ಸಲಹೆಯಂತೆ, ಆಕೆ ತನ್ನ ಕಿರಿಯ ಪುತ್ರ ಅಬ್ದುಲ್ ನಾಸರ್‌ನನ್ನು ಸ್ಥಳೀಯ ಅನಾಥಾಶ್ರಮಕ್ಕೆ ಕಳುಹಿಸಿದರು.
‘‘ನನಗೊಂದು ಉತ್ತಮ ಬದುಕನ್ನು ಒದಗಿಸುವುದಕ್ಕಾಗಿ ನನ್ನ ಹೆತ್ತವರು ಅಪಾರ ಶ್ರಮಪಟ್ಟಿದ್ದರು. ನನ್ನ ತಾಯಿ ಪಟ್ಟಷ್ಟು ಕಷ್ಟವನ್ನು ನಾನು ನಿಜಕ್ಕೂ ಅನುಭವಿಸಿಲ್ಲ’’ವೆಂದು ನಾಸರ್ ಹೇಳುತ್ತಾರೆ.
‘‘ತಲಶ್ಯೇರಿಯ ಅನಾಥಾಶ್ರಮಕ್ಕೆ ನನ್ನನ್ನು ಸೇರಿಸಿದಾಗ ನನಗೆ ಕೇವಲ ಐದು ವರ್ಷ ವಯಸ್ಸಾಗಿತ್ತು. ನನಗೆ ಬದುಕಿನ ಬವಣೆಯ ಅನುಭವವಾಗಿರಲಿಲ್ಲ. ನನ್ನ ಹಿರಿಯ ಸಹೋದರ ಹಾಗೂ ನಾಲ್ವರು ಸೋದರಿಯರು ತಾಯಿಯ ಜೊತೆಗೆ ಉಳಿದುಕೊಂಡು, ಕುಟುಂಬದ ನಿರ್ವಹಣೆಗೆ ಆಕೆಗೆ ನೆರವಾದರು. ನನ್ನ ಸೋದರಿಯರು ತಾಯಿಯೊಂದಿಗೆ ಬೀಡಿಕಟ್ಟುತ್ತಿದ್ದರೆ, ನನ್ನ ಸೋದರ ಕೂಲಿಕೆಲಸ ಮಾಡುತ್ತಿದ್ದ. ನಾನು ಕಲಿಕೆಯ ಮೇಲೆ ಗಮನಹರಿಸಬೇಕೆಂದು ನನ್ನ ಕುಟುಂಬ ನಿರ್ಧರಿಸಿತ್ತು’’ ಎಂದು ಅಂತರ್ಜಾಲ ತಾಣ ‘ದಿ ಬೆಟರ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದಾರೆ.


   ಕುಟುಂಬದಿಂದ ತಾನು ದೂರವಾದುದಕ್ಕೆ ಕಾರಣವನ್ನು ತಿಳಿಯದಷ್ಟು ಎಳೆವಯಸ್ಸಿನ ಹುಡುಗನಾಗಿದ್ದ ನಾಸರ್. ಆದಾಗ್ಯೂ ಅನಾಥಾಶ್ರಮದ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಆತ ಯತ್ನಿಸಿದ ಹಾಗೂ ತನ್ನ ದಿನದ ಬಹುತೇಕ ಸಮಯವನ್ನು ಆತ ತರಗತಿಗಳಲ್ಲೇ ಕಳೆಯುತ್ತಿದ್ದ. ಅನಾಥಾಶ್ರಮದಲ್ಲೇ ಪ್ರಾಥಮಿಕ ಹಾಗೂ ಹೈಸ್ಕೂಲ್ ತರಗತಿಗಳಿದ್ದವು. ತನ್ನ ಮಗ ಶಿಕ್ಷಣ ಪಡೆಯಬೇಕೆಂಬುದನ್ನು ನೋಡಬೇಕೆಂಬ ಮನ್‌ಹುಮಾಳ ಕನಸು ಸಾಕಾರಗೊಂಡಿತು. ಇದಾದ ಐದು ವರ್ಷದ ಬಳಿಕ ಐಎಎಸ್ ಅಧಿಕಾರಿಯೊಬ್ಬರು ನಾಸರ್ ಇದ್ದ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದರು. ಅವರು ಈ ಮೊದಲು ಯಾರೂ ಇಲ್ಲದಂತಹ ರೀತಿಯಲ್ಲಿ ನಾಸರ್‌ಗೆ ಸ್ಫೂರ್ತಿಯಾದರು.
‘‘ಆ ಐಎಎಸ್ ಅಧಿಕಾರಿ, ಆಗ ನಾನು ಭೇಟಿಯಾದ ಚತುರ ವ್ಯಕ್ತಿಯಾಗಿದ್ದರು. ಅತ್ಯಂತ ದೃಢ ಆತ್ಮವಿಶ್ವಾಸ ದೊಂದಿಗೆ ಅವರು ನಡೆದುಬಂದರು. ಅವರು ನೀಡುವ ಸಣ್ಣ ಸಂಕೇತ ಕೂಡಾ, ಅವರ ಸುತ್ತಮುತ್ತಲಿದ್ದವರಿಗೆ ಆತ ಏನು ಬಯಸಿದ್ದಾರೆಂಬುದನ್ನು ಅರಿಯಲು ಸಾಕಾಗುತ್ತಿತ್ತು. ಕೇವಲ 10 ವರ್ಷದ ಹುಡುಗನಾದ ನನಗೆ, ಅವರ ಭೇಟಿಯೇ ಒಂದು ವರದಾನವಾಗಿತ್ತು. ಆ ಕ್ಷಣದಲ್ಲೇ ನಾನು ಒಂದಲ್ಲ ಒಂದು ದಿನ ಐಎಎಸ್ ಅಧಿಕಾರಿಯಾಗಬೇಕೆಂಬ ಸಂಕಲ್ಪವನ್ನು ಕೈಗೊಂಡೆ’’ ಎಂದು ನಾಸರ್ ಹೇಳುತ್ತಾರೆ.
ಐಎಎಸ್ ಅಧಿಕಾರಿ ಅಮಿತಾಭ್ ಕಾಂತ್ ತಲಶ್ಯೇರಿಯ ಅನಾಥಾಶ್ರಮಕ್ಕೆ ಭೇಟಿ ನೀಡಿದಾಗ ಅವರು ನಾಗರಿಕ ಸೇವೆಗೆ ಸೇರ್ಪಡೆಗೊಂಡು ಕೇವಲ ಎರಡು ವರ್ಷಗಳಷ್ಟೇ ಆಗಿದ್ದವು ಹಾಗೂ ಅವರು ಹತ್ತು ವರ್ಷದ ನಾಸರ್‌ಗೆ ತನ್ನ ಹೆಜ್ಜೆದಾರಿಯಲ್ಲಿ ಸಾಗುವಂತೆ ಪ್ರೇರಣೆ ನೀಡಿದರು.
 1980ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ಕಾಂತ್ ಪ್ರಸಕ್ತ ನೀತಿ ಆಯೋಗದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ನಾಗರಿಕ ಸೇವಾ ಉದ್ಯೋಗಿಯಾಗಿ ಅವರು ‘ಇನ್‌ಕ್ರೆಡಿಬಲ್ ಇಂಡಿಯಾ’ ಹಾಗೂ ಕೇರಳದ ಕುರಿತಾಗಿ ಈಗಲೂ ಜನಪ್ರಿಯವಾಗಿರುವ ಘೋಷಣೆಯಾದ ‘ಗಾಡ್ಸ್ ಓನ್ ಕಂಟ್ರಿ’(ದೇವರ ಸ್ವಂತ ನಾಡು) ಅಂತಹ ಹಲವಾರು ಪ್ರವಾಸೋದ್ಯಮ ಅಭಿಯಾನಗಳ ನೇತೃತ್ವ ವಹಿಸಿದ್ದರು. ಅವರು ಕೈಗೊಂಡ ಪ್ರತಿಯೊಂದು ಪ್ರವಾಸೋದ್ಯಮ ಅಭಿಯಾನವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರವಾಸೋದ್ಯಮದ ವರ್ಚಸ್ಸನ್ನು ಬೆಳೆಸುವಲ್ಲಿ ಸಹಕಾರಿಯಾಯಿತು. ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಭಾರತವು ಗಮನಾರ್ಹ ಸ್ಥಾನ ಪಡೆಯುವಂತಾಗಲು ಶ್ರಮಿಸಿದ ಕಾಂತ್ ಅವರು, ವಲಸೆ ಅಧಿಕಾರಿಗಳಿಂದ ಹಿಡಿದು ತೆರಿಗೆ ಚಾಲಕರವರೆಗೆ ಪ್ರತಿಯೊಬ್ಬರನ್ನು ಸಮಾನ ಭಾಗೀದಾರರನ್ನಾಗಿ ಮಾಡಿದರು. ‘ಅತಿಥಿ ದೇವೋಭವ ’ ಎಂಬ ಜನಪ್ರಿಯ ಉಪ ಶೀರ್ಷಿಕೆ ಹೊಂದಿರುವ ಈ ಪ್ರವಾಸಿ ಅಭಿಯಾನ ಕೂಡಾ ಈಗ ಎಲ್ಲರಿಗೂ ಸುಪರಿಚಿತವಾಗಿದೆ.
ವರ್ಷಗಳು ಸರಿದಂತೆಲ್ಲಾ, ಬಾಲಕ ನಾಸರ್ ಹಣ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿ ವಹಿಸಿದ. ಐಎಎಸ್ ಅಧಿಕಾರಿಯಾಗುವ ಅವರ ಕನಸು ಹಲವಾರು ಸಲ ಮೂಲೆ ಸೇರಿತ್ತು. ‘‘ನಾನು ಅನಾಥಾಶ್ರಮದಿಂದ ತಪ್ಪಿಸಿಕೊಂಡು 30-40 ಕಿ.ಮೀ. ದೂರ ಪ್ರಯಾಣಿಸಿ ಕಣ್ಣೂರು ತಲುಪುತ್ತಿದ್ದೆ. ನನ್ನಂತಹ ಬಾಲಕನಿಗೆ ಹೊಟೇಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಪಡೆಯುವುದು ಅಂದಿನ ದಿನಗಳಲ್ಲಿ ತುಂಬಾ ಸುಲಭವಾಗಿತ್ತು. ಅಲ್ಲಿ ನಾನು ಒಂದೆರಡು ದಿನ ಕೆಲಸ ಮಾಡಿದ್ದೆ. ಯಾವುದೇ ಕಾರಣವಿಲ್ಲದೆ ರೆಸ್ಟೋರೆಂಟ್‌ನ ಮಾಲಕ ನನ್ನನ್ನು ಬೈದಾಗ ಮತ್ತು ಏನಾದರೂ ತಪ್ಪಾದಾಗ, ನಾನು ನನ್ನ ಸಂಬಳ ಪಡೆದು, ಮತ್ತೆ ಅನಾಥಾಶ್ರಮಕ್ಕೆ ಹಿಂದಿರುಗುತ್ತಿದ್ದೆ. ಆ ಸಮಯದಲ್ಲಿ ನಾನು ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಆದರೆ ನನ್ನ ಕುಟುಂಬ ಮಾತ್ರ ನಾನು ಕಲಿಯಲೇಬೇಕೆಂಬ ದೃಢನಿರ್ಧಾರಕ್ಕೆ ಜೋತುಬಿದ್ದಿತ್ತು. ನನ್ನ ಮೇಲೆ ಅವರಿಗೆ ಅಪಾರ ಪ್ರೀತಿಯಿರುವುದೇ ಇದಕ್ಕೆ ಕಾರಣವೆಂದು ನನಗೆ ತಿಳಿದಿತ್ತು ಹಾಗೂ ನಾನದಕ್ಕೆ ಒಪ್ಪಿಕೊಂಡೆ’’ ಎಂದು ನಾಸರ್ ಹೇಳುತ್ತಾರೆ.
 ಆನಂತರ ನಾಸರ್ ಎಸ್‌ಟಿಡಿ ಬೂತ್ ನಿರ್ವಾಹಕ ನಾಗಿ, ಪತ್ರಿಕಾ ವಿತರಕನಾಗಿ ದುಡಿದು ಸಂಪಾದನೆ ಮಾಡಿದರು. ಇಂಗ್ಲಿಷ್ ಸಾಹಿತ್ಯದಲ್ಲಿ ಬಿಎ ಹಾಗೂ ಎಂಎ ಪದವಿ ಶಿಕ್ಷಣಕ್ಕೆ ಬೇಕಾದ ಪಠ್ಯಪುಸ್ತಕಗಳ ಖರೀದಿಗಾಗಿ ಅವರು ಈ ಹಣವನ್ನು ಉಳಿತಾಯ ಮಾಡಿದರು.


1995ರಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ನಾಸರ್‌ಗೆ ಕೇರಳ ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಪರೀಕ್ಷಕನ ಉದ್ಯೋಗ ದೊರೆಯಿತು. ಆ ವರ್ಷವೇ ಅವರು ರುಕ್ಸಾನಾ ಎಂಬವರನ್ನು ವಿವಾಹವಾದರು. ಪತ್ನಿ ರುಕ್ಸಾನಾ, ನಾಸರ್‌ರನ್ನು ನಾಗರಿಕ ಸೇವೆ ಪರೀಕ್ಷೆಗಳಿಗೆ ಹಾಜರಾಗುವಂತೆ ಪ್ರೇರಣೆ ನೀಡಿದರು.
 ಐಎಎಸ್ ಅಧಿಕಾರಿಯಾಗುವ ನನ್ನ ನಿರ್ಧಾರವು ಮುಗ್ಗರಿಸಿದಾಗಲೆಲ್ಲಾ ನನ್ನ ಅಮ್ಮ, ನನಗೆ ಉತ್ತೇಜನ ನೀಡಿದ ಪ್ರಥಮ ಮಹಿಳೆಯಾಗಿದ್ದಾರೆ. ರುಕ್ಸಾನಾ ಎರಡನೆಯಳಾಗಿದ್ದಳು. ನಾನು ಜಿಲ್ಲಾಧಿಕಾರಿಯಾಗಬೇಕು ಹಾಗೂ ನಾನು ಈಗ ಇರುವುದಕ್ಕಿಂತ ಉತ್ತಮ ಸ್ಥಾನಮಾನ ಪಡೆಯಬೇಕೆಂದು ಆಕೆ ನನ್ನನ್ನು ಪ್ರೇರೇಪಿಸುತ್ತಲೇ ಇದ್ದಳು. ಆ ವರ್ಷ ಜಿಲ್ಲಾಧಿಕಾರಿ ಹುದ್ದೆಗೆ ಕೇರಳ ರಾಜ್ಯ ನಾಗರಿಕ ಸೇವಾ ಕಾರ್ಯನಿರ್ವಾಹಕರು ಅರ್ಜಿಗಳನ್ನು ಆಹ್ವಾನಿಸಿದ್ದರು. ಆಗ ಸಾವಿರಾರು ಅರ್ಜಿಗಳ ಮಹಾಪೂರವೇ ಹರಿದುಬಂದಿತ್ತು. ನಾನು ಚೆನ್ನಾಗಿಯೇ ಅಧ್ಯಯನ ಮಾಡಿದ್ದರೂ, ನಾನು ಆಯ್ಕೆಯಾಗಲಾರೆನೆಂದೇ ಭಾವಿಸಿದ್ದೆ. ಆದರೆ ದೇವರು ಬಯಸಿದ್ದೇ ಬೇರೆಯಾಗಿತ್ತು ಹಾಗೂ ನಾನು ತೇರ್ಗಡೆಗೊಂಡಿದ್ದೆ’’ ಎಂದು 48 ವರ್ಷ ವಯಸ್ಸಿನ ನಾಸರ್ ನೆನಪಿಸಿಕೊಳ್ಳುತ್ತಾರೆ.
ತರಬೇತಿ, ಪ್ರೊಬೇಶನ್ ಜೂನಿಯರ್ ಟೈಮ್ ಸ್ಕೇಲ್ ದರ್ಜೆಯ ಅಧಿಕಾರಿಯಾಗಿ ಅವರ ನೇಮಕಾತಿ ಪೂರ್ಣಗೊಳ್ಳಲು ಹತ್ತು ವರ್ಷಗಳೇ ಹಿಡಿದವು. 2006ರಲ್ಲಿ ಅವರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡರು.
ಇದಾದ ಹನ್ನೊಂದು ವರ್ಷಳ ಬಳಿಕ ಅಂದರೆ 2017ರ ಅಕ್ಟೋಬರ್‌ನಲ್ಲಿ ಅವರು ಐಎಎಸ್ ಅಧಿಕಾರಿಯ ಸ್ಥಾನಕ್ಕೆ ಭಡ್ತಿ ಪಡೆದರು. ಈ ನೇಮಕಾತಿಯೊಂದಿಗೆ ಮನ್‌ಹುಮಾ ಅವರ ವರ್ಷಗಳ ಕಠಿಣ ಪರಿಶ್ರಮಕ್ಕೆ ಫಲ ಲಭಿಸಿತು. ತನ್ನ ಮಕ್ಕಳು ಸುಭದ್ರವಾದ ಹಾಗೂ ಗೌರವಯುತವಾದ ಉದ್ಯೋಗಳಲ್ಲಿರುವುದನ್ನು ನೋಡಲು ಸದಾ ಆಕೆ ಬಯಸುತ್ತಿದ್ದಳು. ಆದರೆ ದುರದೃಷ್ಟವಶಾತ್ ಈ ಶುಭದಿನವನ್ನು ನೋಡಲು ಆಕೆ ಜೀವಂತವಾಗಿಲ್ಲ. ಮನ್‌ಹುಮಾ ಅವರು 2014ರಲ್ಲಿ ನಿಧನರಾದರು.
‘‘ನನ್ನ ತಾಯಿ ಅತ್ಯಂತ ಪ್ರೀತಿಪಾತ್ರ ಮಹಿಳೆಯಾಗಿದ್ದರು. ಆಕೆಯ ಹೋರಾಟ ಹಾಗೂ ದೃಢನಿರ್ಧಾರವು ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಇಂದು ನಾನು ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ್ದೇನೆ. ನನ್ನ ಸಾಧನೆಗಳ ಬಗ್ಗೆ ನನ್ನ ಕುಟುಂಬಕ್ಕೆ ಅಪಾರವಾದ ಹೆಮ್ಮೆಯಿದೆ. ಆದರೆ ಅದರ ಶ್ರೇಯಸ್ಸು ಅವರಿಗೇ ಸಲ್ಲಬೇಕಾಗಿದೆ. ಅವರ ಪ್ರೋತ್ಸಾಹ ಹಾಗೂ ಒತ್ತಾಯವಿಲ್ಲದೆ ಇದ್ದಲ್ಲಿ ನಾನು ಎಂದೂ ಐಎಎಸ್ ಅಧಿಕಾರಿಯಾಗುತ್ತಿರಲಿಲ್ಲ.’’ ಎನ್ನುತ್ತಾರೆ ನಾಸರ್.
ಕಳೆದ ತಿಂಗಳಷ್ಟೇ ನಾಸರ್ ಅವರು ಕೇರಳದ ಕರಾವಳಿ ಜಿಲ್ಲೆಯಾದ ಕೊಲ್ಲಂನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡರು. ಈ ಹುದ್ದೆಯನ್ನು ಅವರು ಹೆಮ್ಮೆಯಿಂದ ಅಲಂಕರಿಸಿದರಾದರೂ, ಈ ಹೊತ್ತಲ್ಲಿ ತನ್ನ ತಾಯಿ ಇದ್ದಿರಬೇಕಿತ್ತು, ಆಶ್ರಮದಲ್ಲಿ ವಾಸವಾಗಿದ್ದ ಆಕೆಯ ಅತ್ಯಂತ ಕಿರಿಯ, ಪುಟ್ಟ ಮಗ ಎಷ್ಟು ದೂರ ಸಾಗಿದ್ದಾನೆಂಬುದನ್ನು ಆಕೆ ಕಣ್ಣಾರೆ ಕಾಣಬೇಕಿತ್ತು ಎಂದು ನಾಸರ್ ಭಾವುಕರಾಗಿ ಹೇಳುತ್ತಾರೆ.
ಕೃಪೆ: thebetterindia.com

Writer - ತನ್ವಿ ಪಟೇಲ್

contributor

Editor - ತನ್ವಿ ಪಟೇಲ್

contributor

Similar News

ಜಗದಗಲ
ಜಗ ದಗಲ