ಶೂನ್ಯರೇಖೆಯಲ್ಲಿ ಸೇತುವೆ ನಿರ್ಮಿಸಲು ಪಾಕ್ ತಾತ್ವಿಕ ಒಪ್ಪಿಗೆ: ಭಾರತ

Update: 2019-07-14 18:16 GMT

ಹೊಸದಿಲ್ಲಿ, ಜು.14: ಕರ್ತಾರ್‌ಪುರ ಕಾರಿಡಾರ್‌ಗೆ ಸರ್ವಋತು ಸಂಪರ್ಕ ಸಾಧ್ಯವಾಗಿಸಲು ಭಾರತ-ಪಾಕ್ ರಾಷ್ಟ್ರಗಳ ಗಡಿಯ ಶೂನ್ಯರೇಖೆಯಲ್ಲಿ ಸೇತುವೆ ನಿರ್ಮಿಸುವ ಪ್ರಸ್ತಾಪಕ್ಕೆ ಪಾಕಿಸ್ತಾನ ತಾತ್ವಿಕ ಒಪ್ಪಿಗೆ ನೀಡಿದೆ.

 ಕಾರಿಡಾರ್‌ಗೆ ಯಾವುದೇ ಧರ್ಮದ ಯಾತ್ರಾರ್ಥಿಗಳೂ ಭೇಟಿ ನೀಡಬಹುದು ಎಂದು ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ. ಕರ್ತಾರ್‌ಪುರ ಕಾರಿಡಾರ್ ಅನ್ನು ತ್ವರಿತವಾಗಿ ಕಾರ್ಯಗತಗೊಳಿಸುವ ಬಗ್ಗೆ ಉಭಯ ದೇಶಗಳ ನಡುವೆ ಮಾತುಕತೆ ಪುನರಾರಂಭವಾಗಿದೆ. ಭಾರತದ ನಿಯೋಗದ ನೇತೃತ್ವವನ್ನು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್‌ಸಿಎಲ್ ದಾಸ್ ಹಾಗೂ ವಿದೇಶ ವ್ಯವಹಾರ ಇಲಾಖೆಯ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ (ಪಾಕಿಸ್ತಾನ, ಅಪಘಾನಿಸ್ತಾನ, ಇರಾನ್ ವಿಭಾಗ)ವಹಿಸಿದ್ದರು.

20 ಸದಸ್ಯರ ಪಾಕಿಸ್ತಾನದ ನಿಯೋಗದ ನೇತೃತ್ವವನ್ನು ಪಾಕ್ ವಿದೇಶ ಇಲಾಖೆಯ ವಕ್ತಾರ ಮುಹಮ್ಮದ್ ಫೈಝಲ್ ವಹಿಸಿದ್ದರು. ಕರ್ತಾರ್‌ಪುರ ಕಾರಿಡಾರ್ ಕಾರ್ಯನಿರ್ವಹಿಸುವಂತಾಗಲು ಪಾಕಿಸ್ತಾನ ಪೂರ್ಣ ಬದ್ಧವಾಗಿದೆ ಎಂದು ಫೈಝಲ್ ಹೇಳಿದ್ದಾರೆ. ಪಾಕಿಸ್ತಾನದ ನಿಯೋಗದಲ್ಲಿ ಖಾಲಿಸ್ತಾನ್‌ವಾದಿ ಮುಖಂಡ ಗೋಪಾಲ್‌ಸಿಂಗ್ ಚಾವ್ಲಾರನ್ನು ಸೇರಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ಸೂಚಿಸಿದ ಬಳಿಕ ಅವರನ್ನು ನಿಯೋಗದಿಂದ ಕೈಬಿಡಲಾಗಿದೆ.

ಸಿಖ್ ಯಾತ್ರಾರ್ಥಿಗಳಿಗೆ ಕಾರಿಡಾರ್ ತಲುಪಲು ಸೇತುವೆಯ ಬದಲು ಒಡ್ಡಿನ ಮೇಲಿನ ದಾರಿ ಸೂಕ್ತ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದರು. ಆದರೆ ಇದರಿಂದ ಭಾರತದತ್ತ ಇನ್ನಷ್ಟು ನೆರೆನೀರು ನುಗ್ಗುತ್ತದೆ ಎಂದು ಭಾರತ ಆತಂಕ ವ್ಯಕ್ತಪಡಿಸಿ ಆಕ್ಷೇಪಿಸಿತು. ಪಾಕಿಸ್ತಾನದ ಪ್ರದೇಶದಲ್ಲಿ ಹಳೆಯ ರಾವಿ ನದಿಯ ಮೇಲೆ ಸೇತುವೆ ನಿರ್ಮಿಸುವುದೆಂದು ನಿರ್ಧರಿಸಲಾಗಿದೆ. ನವೆಂಬರ್‌ನಲ್ಲಿ ಗುರುನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆಯ ಐತಿಹಾಸಿಕ ಸಮಾರಂಭದ ಸಂದರ್ಭ ಕಾರಿಡಾರ್ ಕಾರ್ಯಾರಂಭ ಮಾಡಲು ಅಗತ್ಯವಿರುವ ಮಧ್ಯಂತರ ವ್ಯವಸ್ಥೆಯನ್ನು ಮಾಡುವುದಾಗಿ ಭಾರತ ಭರವಸೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯರು ಹಾಗೂ ಸಾಗರೋತ್ತರ ಭಾರತೀಯ ಪೌರರಿಗೆ ವೀಸಾರಹಿತ ಪ್ರಯಾಣಕ್ಕೆ ಅವಕಾಶ ನೀಡಲು ಉಭಯ ದೇಶಗಳು ಒಪ್ಪಿಕೊಂಡಿವೆ. ವರ್ಷವಿಡೀ, ದಿನವೊಂದಕ್ಕೆ 5000 ಯಾತ್ರಾರ್ಥಿಗಳನ್ನು ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶ ಒದಗಿಸಲಾಗುವುದು ಎಂದು ಭಾರತ ತಿಳಿಸಿದೆ. ಆದರೆ ತಮ್ಮಲ್ಲಿರುವ ಮೂಲಸೌಕರ್ಯ ನಿರ್ಬಂಧದ ಹಿನ್ನೆಲೆಯಲ್ಲಿ ಭಾರತೀಯರು ಪ್ರಸ್ತಾವಿಸಿದಷ್ಟು ಯಾತ್ರಾರ್ಥಿಗಳಿಗೆ ಹಂತ ಹಂತವಾಗಿ ವ್ಯವಸ್ಥೆ ಮಾಡುವುದಾಗಿ ಬಗ್ಗೆ ಪಾಕ್ ಅಧಿಕಾರಿಗಳು ಹೇಳಿದರು.

ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ದರ್ಬಾರ್ ಸಾಹಿಬ್ ಅನ್ನು ಪಂಜಾಬ್‌ನ ಗುರುದಾಸ್‌ಪುರದಲ್ಲಿರುವ ಬಾಬಾ ನಾನಕ್ ಮಂದಿರಕ್ಕೆ ಸಂಪರ್ಕಿಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಸಿಖ್ ಯಾತ್ರಾರ್ಥಿಗಳಿಗೆ ವೀಸಾದ ಅಗತ್ಯವಿಲ್ಲ , ಕೇವಲ ಅನುಮತಿ ಪತ್ರ ಸಾಕಾಗುತ್ತದೆ ಎಂದು ವಿದೇಶ ವ್ಯವಹಾರ ಇಲಾಖೆಯ ಹೇಳಿಕೆ ತಿಳಿಸಿದೆ.

ಕರ್ತಾರ್‌ಪುರ ಕಾರಿಡಾರ್ ಕುರಿತ ಪ್ರಥಮ ಹಂತದ ಮಾತುಕತೆ ಮಾರ್ಚ್ 14ರಂದು ನಡೆದಿದ್ದರೆ ಎಪ್ರಿಲ್ 2ರಂದು ನಿಗದಿಯಾಗಿದ್ದ ದ್ವಿತೀಯ ಹಂತದ ಮಾತುಕತೆಯನ್ನು ಭದ್ರತೆಯ ಕಾರಣದಿಂದ ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News