ತನ್ನೊಳಗಿನ ಶತ್ರುವನ್ನು ಗೆಲ್ಲಬೇಕಾದ ಯೋಧ!

Update: 2019-07-14 18:31 GMT

ಭಾರತೀಯ ಸಶಸ್ತ್ರಪಡೆಗಳಲ್ಲೂ ಕಳೆದ ಏಳು ವರ್ಷಗಳಲ್ಲಿ 900 ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಈ ಪ್ರಮಾಣ ಕಾರ್ಗಿಲ್ ಯುದ್ಧದಲ್ಲಿ (527) ಹುತಾತ್ಮರಾದ ಸೈನಿಕರ ಸಂಖ್ಯೆಯ ಬಹುತೇಕ ದುಪ್ಪಟ್ಟಾಗಿದೆ. ನಮ್ಮ ಭದ್ರತಾ ಪಡೆಯಲ್ಲೂ ಪಿಟಿಎಸ್‌ಡಿಯಿಂದ ನರಳುತ್ತಿರುವವರಿದ್ದಾರೆ. ಆದರೆ ದೈಹಿಕವಾಗಿ ಅಂಗವೈಕಲ್ಯ ಹೊಂದಿರುವ ಸಾವಿರಾರು ಸೈನಿಕರು ತಮ್ಮ ಹಕ್ಕಿನ ಪಾಲನ್ನುಪಡೆಯಲು ವ್ಯವಸ್ಥೆಯ ಜೊತೆ ಹೋರಾಡುತ್ತಿರುವಾಗ ಮಾನಸಿಕವಾಗಿ ಹಾನಿಯಾಗಿರುವವರನ್ನು ಗುರುತಿಸುವುದು ಮತ್ತು ಪರಿಹಾರ ಒದಗಿಸುವುದು ದೂರದ ಮಾತು.

ಸೇನೆಯಲ್ಲಿ ಪುಕ್ಕಲು ಯೋಧನಿಗೆ ಜಾಗವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಕಳೆದ ವಾರ ಹೇಳಿಕೆ ನೀಡಿತ್ತು. ಈ ಹೇಳಿಕೆಗೆ ಸಂಬಂಧಿಸಿದ ಘಟನೆ 2006ರಲ್ಲಿ ನಡೆದಿತ್ತು. ಅಂದು ಕಾಶ್ಮೀರ ಕಣಿವೆಯಲ್ಲಿ ಸೇನೆ ಉಗ್ರರನ್ನು ಸುತ್ತುವರಿದಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಸೈನಿಕನೊಬ್ಬ ಉಗ್ರರ ವಿರುದ್ಧ ಹೋರಾಡುವುದನ್ನು ಬಿಟ್ಟು ತನ್ನ ಕಾವಲು ಸ್ಥಾನವನ್ನು ತೊರೆದು ಹೊರನಡೆದಿದ್ದ. ಇದರ ಪರಿಣಾಮವಾಗಿ ಉಗ್ರರು ಸೇನೆಯ ಬೇಲಿಯನ್ನು ಭೇದಿಸಿ ಓರ್ವ ಸೈನಿಕನ ಹತ್ಯೆಗೈದು ಒಂದು ಮೆಶಿನ್ ಗನ್ ಜೊತೆ ಪರಾರಿಯಾಗಲು ಸಾಧ್ಯವಾಗಿತ್ತು.
ತನ್ನ ಸ್ಥಾನವನ್ನು ತ್ಯಜಿಸಿದ್ದ ಸೈನಿಕನ ಬಳಿ ಆಧುನಿಕ ಪಿಸ್ತೂಲು ಮತ್ತು ರೈಫಲ್ ಇದ್ದರೂ ಆತ ಅವುಗಳನ್ನು ಬಳಸಿರಲಿಲ್ಲ. ಇದನ್ನು ಬೆಟ್ಟು ಮಾಡಿದ ಘನ ನ್ಯಾಯಾಲಯ, ಯೋಧನೊಬ್ಬ ಹಿಂದಿನ ಕಾರ್ಯಾಚರಣೆಗಳಲ್ಲಿ ಹೃದಯಪೂರ್ವಕವಾಗಿ ಭಾಗವಹಿಸಿದ್ದಾನೆ ಮತ್ತು ಎಂದೂ ಭಯ ಪ್ರದರ್ಶಿಸಿಲ್ಲ ಎಂಬ ನೆಲೆಯಲ್ಲಿ ಆತನ ಹೇಡಿತನದ ಕೃತ್ಯವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ಆ ಸೈನಿಕನನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಎತ್ತಿ ಹಿಡಿದಿತ್ತು.
 ಕಾರ್ಯಾಚರಣೆಯ ಸಂದರ್ಭದಲ್ಲಿ ತಮ್ಮ ಧೈರ್ಯ ಕಳೆದುಕೊಳ್ಳುವ ಸೈನಿಕರು ಇತರ ಸೈನಿಕರ ಪ್ರಾಣಕ್ಕೆ ಕುತ್ತು ತರುವುದು ಮಾತ್ರವಲ್ಲ ಇಡೀ ಕಾರ್ಯಾಚರಣೆಯನ್ನೇ ವಿಫಲಗೊಳಿಸುತ್ತಾರೆ. ಅತ್ಯಂತ ಅಸಾಧಾರಣ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರನ್ನು ಶ್ಲಾಘಿಸುತ್ತ ಎಲ್ಲ ಸೇನೆಗಳೂ ತಮ್ಮದೇ ಆದ ಸ್ವಂತ ಕಾನೂನು ರೂಪುರೇಶೆಯನ್ನು ಹೊಂದಿದೆ. ತೊರೆಯುವಿಕೆ, ಹೇಡಿತನ ಅಥವಾ ಗಾಬರಿಯಿಂದ ಗೊಂದಲ ಸೃಷ್ಟಿಸುವಂತಹ ಅಪರಾಧಗಳಿಗೆ ಶಿಕ್ಷೆ ನೀಡಲು ಕೋರ್ಟ್ ಮಾರ್ಶಲ್ ಅನುಸರಿಸಲಾಗುತ್ತದೆ.
ಇದಕ್ಕೊಂದು ಅತ್ಯುತ್ತಮ ಉದಾಹರಣೆಗೆ ಮತ್ತು ನಮಗೆ ಉತ್ತಮ ಪಾಠವಾಗಬಲ್ಲ ಘಟನೆಯೆಂದರೆ, ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ ಹೇಡಿತನ ಪ್ರದರ್ಶಿಸಿದ ಆರೋಪದಲ್ಲಿ ಬ್ರಿಟಿಷ್ ಸೈನಿಕ 25ರ ಹರೆಯದ ಪ್ರೈವೆಟ್ ಹ್ಯಾರಿ ಫರ್‌ಗೆ ಶಿಕ್ಷೆ ವಿಧಿಸಿರುವುದು.
ಬ್ರಿಟಿಷ್ ಸೇನೆಗೆ ವೃತ್ತಿಪರ ಸೈನಿಕನಾಗಿ ಸೇರಿದ ಪ್ರೈವೆಟ್ ಹ್ಯಾರಿ ಫರ್ ಪ್ರಥಮ ಜಾಗತಿಕ ಯುದ್ಧ ಆರಂಭವಾಗುವುದಕ್ಕೂ ಮೊದಲು ಸೇನೆಯಲ್ಲಿ ಆರು ವರ್ಷಗಳ ಅನುಭವ ಹೊಂದಿದ್ದ. ಜಾಗತಿಕ ಯುದ್ಧದಲ್ಲಿ ಪಾಶ್ಚಾತ್ಯ ಪರವಾಗಿ ಹೋರಾಡಿದ ಆತ ಈ ಸಂದರ್ಭದಲ್ಲಿ ನೂರಾರು ಶೆಲ್ಲಿಂಗ್ ದಾಳಿಗಳನ್ನು ಸಹಿಸಿಕೊಂಡಿದ್ದ. 1915ರ ಮೇನಲ್ಲಿ ಆತ ವಿಪರೀತ ಕಿವಿ ನೋವಿನಿಂದ ಪ್ರಜ್ಞೆತಪ್ಪಿ ಬಿದ್ದ. ಆತನ ಪರೀಕ್ಷೆ ನಡೆಸಿದ ವೈದ್ಯರು ಆತ ಶೆಲ್ಲಿಂಗ್‌ನಿಂದ ಆತನ ಕಿವಿಗೆ ಹಾನಿಯಾಗಿದ್ದು ಇದರಿಂದ ಆತ ಕೇಳುವ ಅತ್ಯಂತ ಮೆಲುದನಿಯೂ ಆತನಿಗೆ ತೀವ್ರ ನೋವುಂಟು ಮಾಡುತ್ತದೆ, ಈ ಸ್ಥಿತಿಯನ್ನು ಹೈಪರಾಕುಸಿಸ್ ಎಂದು ಕರೆಯುತ್ತಾರೆ ಎಂದು ತಿಳಿಸಿದ್ದರು.


ಈ ಸ್ಥಿತಿಯನ್ನು ಶೆಲ್ ಆಘಾತ ಎಂದೂ ಕರೆಯುತ್ತಾರೆ. ಈ ಸ್ಥಿತಿಯ ಹೊರತಾಗಿಯೂ ಆತನನ್ನು ಯುದ್ಧರಂಗಕ್ಕೆ ಕಳುಹಿಸಲಾಯಿತು ಮತ್ತು ಅಲ್ಲಿ ಆತ ಸೊಮ್ ಯುದ್ಧದಲ್ಲಿ ಭಾಗವಹಿಸಿದ್ದ. ಮುಂದಿನ ವರ್ಷದಲ್ಲಿ ಆತ ಹಲವು ಬಾರಿ ಅನಾರೋಗ್ಯಪೀಡಿತನಾಗಿರುವುದಾಗಿ ವರದಿ ನೀಡಿದರೂ ಆತನ ಮನವಿಯನ್ನು ತಿರಸ್ಕರಿಸಲಾಗಿತ್ತು. ಯಾಕೆಂದರೆ ಆತನಿಗೆ ದೈಹಿಕ ಗಾಯಗಳು ಇರಲಿಲ್ಲ ಮತ್ತು ಯುದ್ಧದಲ್ಲಿ ಗಾಯಾಳುಗಳ ಸಂಖ್ಯೆ ಎಷ್ಟು ಹೆಚ್ಚಿತ್ತೆಂದರೆ, ತಲೆಯಲ್ಲಿ ಸಹಿಸಲಾಗದ ಧ್ವನಿಗಳು ಕೇಳಿಸುತ್ತವೆ ಎಂಬ ದೂರಿನ ವ್ಯಕ್ತಿಯನ್ನು ಪರಿಶೀಲಿಸುವಷ್ಟು ಸಮಯವೂ ವೈದ್ಯರ ಬಳಿಯಿರಲಿಲ್ಲ. 1916ರ ಸೆಪ್ಟಂಬರ್ ವೇಳೆಗೆ ಜರ್ಜರಿತನಾಗಿದ್ದ ಹ್ಯಾರಿ ಅಂತಿಮವಾಗಿ ಯುದ್ಧಭೂಮಿಗೆ ತೆರಳಲು ನಿರಾಕರಿಸಿದರು. ಆದೇಶವನ್ನು ತಿರಸ್ಕರಿಸಿದ ಕಾರಣಕ್ಕೆ ಹ್ಯಾರಿ ಫರ್‌ನನ್ನು ಕೋರ್ಟ್‌ಮಾರ್ಶಲ್‌ಗೆ ಒಳಪಡಿಸಲಾಯಿತು. 20 ನಿಮಿಷಗಳ ಕಾಲ ನಡೆದ ವಿಚಾರಣೆಯಲ್ಲಿ ಹ್ಯಾರಿ ಅಂತಹ ಮಾನಸಿಕ ಪರಿಸ್ಥಿತಿಯಲ್ಲೂ ತನ್ನನ್ನು ಸಾಬೀತುಪಡಿಸಬೇಕಿತ್ತು. ಫರ್‌ನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಲಾಯಿತು ಮತ್ತು ಆತನ ತಂಡದ ಮೇಲಧಿಕಾರಿಗಳಿದ್ದ ತಂಡವೇ ಅಕ್ಟೋಬರ್ 18,1916ರಂದು ಆತನಿಗೆ ಗುಂಡಿಕ್ಕಿ ಹತ್ಯೆ ಮಾಡಿತು.
ಈ ಕತೆ ಅಲ್ಲಿಗೇ ಮುಗಿಯುವುದಿಲ್ಲ, ಯಾಕೆಂದರೆ ಹ್ಯಾರಿಯ ಪರಿವಾರ ಆತ ಹೇಡಿ ಅಲ್ಲ ಎನ್ನುವುದನ್ನು ಖಚಿತವಾಗಿ ತಿಳಿದಿತ್ತು. ಹ್ಯಾರಿ ಶೆಲ್ ಆಘಾತದಿಂದ ಬಳಲುತ್ತಿದ್ದ ಮತ್ತು ದೈಹಿಕ ಗಾಯಗಳು ಇಲ್ಲದಿದ್ದರೂ ಆತನಿಗೆ ತನ್ನ ಮಾನಸಿಕ ಸ್ಥಿತಿಯ ಮೇಲೆ ಹೆಚ್ಚಿನ ನಿಯಂತ್ರಣವಿರಲಿಲ್ಲ, ಆತ ತೀವ್ರ ನೋವನುಭವಿಸುತ್ತಿದ್ದ ಎಂದು ಪರಿವಾರ ವಾದಿಸಿತು. ಹೇಡಿಯ ಪತ್ನಿಗೆ ಯುದ್ಧ ವಿಧವೆ ಸ್ಥಾನಮಾನ ನಿರಾಕರಿಸಲ್ಪಟ್ಟ ಕಾರಣ ಹ್ಯಾರಿಯ ಪತ್ನಿಯೂ ಪಿಂಚಣಿಯಿಂದ ವಂಚಿತಗೊಂಡರು.
 ಆದರೆ 1992ರಲ್ಲಿ ಫರ್‌ನಂತಹ ಅನೇಕ ಸೈನಿಕರನ್ನು ಯಾವ ಸಂದರ್ಭದಲ್ಲಿ ಶಿಕ್ಷಗೊಳಪಡಿಸಲಾಗಿದೆ ಎಂದು ತಿಳಿಯಲು ನಡೆದ ಅಭಿಯಾನದ ಫಲವಾಗಿ ಫರ್ ಕುಟುಂಬಕ್ಕೆ ಆತನ ಕೋರ್ಟ್‌ಮಾರ್ಶಲ್ ದಾಖಲೆಗಳು ದೊರೆಯುವಂತಾಯಿತು. ಅದರಿಂದ, ಫರ್‌ಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಅತೀಹೆಚ್ಚಿದ್ದ ಸಮಯದಲ್ಲಿ ಆತನನ್ನು ಯುದ್ಧಭೂಮಿಗೆ ಕಳುಹಿಸಲಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.
ಈ ಸಮರ್ಥ ಅಭಿಯಾನದ ಫಲವಾಗಿ 2006ರಲ್ಲಿ ಸರಕಾರ ಫರ್ ಹಾಗೂ ಇತರ 305 ಸೈನಿಕರನ್ನು ಶಿಕ್ಷೆಗೊಳಪಡಿಸಿರುವುದಕ್ಕೆ ಕ್ಷಮೆ ಕೇಳಿತು. ಆದರೆ ತನ್ನ ಪತಿಯನ್ನು ದೋಷಮುಕ್ತಗೊಳಿಸುವುದನ್ನು ನೋಡಲು ಹ್ಯಾರಿಯ ಪತ್ನಿ ಗರ್‌ಟ್ರೂಡ್ ಬದುಕುಳಿದಿರಲಿಲ್ಲ. ಅವರು 1993ರಲ್ಲಿ ನಿಧನ ಹೊಂದಿದ್ದರು.


ಭಾರತೀಯ ಸೇನೆಯ ಪ್ರತಿ ಫೈರಿಂಗ್ ತರಬೇತಿ ವಲಯದಲ್ಲೂ ಗುರಿಯ ಮೇಲೆ, ದಯೆಯಿಲ್ಲ, ಪಶ್ಚಾತ್ತಾಪವಿಲ್ಲ, ಬೇಸರವಿಲ್ಲ ಮತ್ತು ಒಂದು ಗುಂಡು, ಓರ್ವ ಶತ್ರು ಮುಂತಾದ ಬರಹಗಳನ್ನು ಬರೆಯಲಾಗುತ್ತದೆ. ತರಬೇತಿಯ ಸಮಯದಲ್ಲಿ ಸೈನಿಕರ ಮನಸ್ಸಿನಿಂದ ಯಾವುದೇ ರೀತಿಯ ಕರುಣೆ ಅಥವಾ ಬೇಸರವನ್ನು ತೆಗೆದು ಹಾಕಲು ಈ ತಂತ್ರ ಬಳಸಲಾಗುತ್ತದೆ. ಅಷ್ಟಕ್ಕೂ ಇದು ಸೇನೆಯ ಕಾರ್ಯಾಚರಣಾ ಅಗತ್ಯತೆಯಾಗಿದೆ. ಯಾಕೆಂದರೆ ಅವರು ಸರಿಯಾಗಿ ಹೊಂದಿಕೊಂಡಿರುವ, ಸಮತೋಲಿತ, ಜವಾಬ್ದಾರಿಯುಳ್ಳ, ಸಜ್ಜನ ಪುರುಷ ಮತ್ತು ಮಹಿಳೆಯನ್ನು ಪಡೆದು ಅವರನ್ನು ಕಲ್ಲು ಮನಸ್ಸಿನ ಕೊಲೆಗಾರರನ್ನಾಗಿ ಪರಿವರ್ತಿಸುವ ಅಗತ್ಯವಿರುತ್ತದೆ.
ಆದರೆ ಜನರನ್ನು ದುರಂತಗಳಿಂದ ರಕ್ಷಿಸುವ ಮೃದು ಮನಸ್ಸಿನ ಸೈನಿಕನನ್ನು, ಆತನ ಮಾನಸಿಕ ಸ್ಥಿತಿಗೆ ತೊಂದರೆಯಾಗದಂತೆ, ಓರ್ವ ಕೊಲೆಗಾರನಾಗಿ ಪರಿವರ್ತಿಸಿ ನಂತರ ಮತ್ತೆ ಹಿಂದಿನ ಸೈನಿಕನಾಗಿ ಬದಲಾಯಿಸುವಂತಹ ಬಟನ್ ಆತನ ಮೆದುಳಿನಲ್ಲಿ ಇಲ್ಲ. ಇದೇ ರೀತಿ, ಸುದೀರ್ಘ ಸಮಯದ ಅಪಾಯಕಾರಿ ಕರ್ತವ್ಯ, ಬೆನ್ನುಮೂಳೆ ಮುರಿಯುವ ಭೂಪದರ, ಏಕಾಂಗಿತನ, ಕುಟುಂಬದಿಂದ ಬೇರ್ಪಟ್ಟಿರುವುದು, ಗೃಹ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅಸಮರ್ಥತೆ ಮತ್ತು ಎಲ್ಲ ವಿಷಯದಲ್ಲೂ ಅನಿಶ್ಚಿತತೆ ಇತ್ಯಾದಿಗಳು ಯೋಧನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಸೈನಿಕರನ್ನು ಅಧಿಕಾರಿಗಳ ಜೊತೆ ಹೆಚ್ಚು ಮಾತನಾಡುವ ಮತ್ತು ಪ್ರತಿಬಾರಿ ಘಟನೆ ನಡೆದಾಗಲೂ ಕಮಾಂಡಿಂಗ್ ಅಧಿಕಾರಿಗೆ ವರದಿ ಒಪ್ಪಿಸುವುದಕ್ಕಷ್ಟೇ ಸೀಮಿತಗೊಳಿಸಲು ಸಾಧ್ಯವಿಲ್ಲ. ನಾವು ಸೇನೆಯ ಡಿಎನ್‌ಎಯನ್ನು ಬದಲಾಯಿಸುವ ಅಗತ್ಯವಿದೆ. ಸೇನೆಯಲ್ಲಿ ಹೆಚ್ಚಿನ ಶಬ್ದವುಳ್ಳ ರಾಕೆಟ್ ಲಾಂಚರ್‌ಗಳನ್ನು ಸ್ಫೋಟಿಸುವಾಗ ಕಿವಿಗಳಿಗೆ ಇಯರ್‌ಪ್ಲಗ್‌ಗಳನ್ನು ಧರಿಸದಿರುವುದನ್ನು ಮೂರ್ಖತನವೆಂದು ಪರಿಗಣಿಸಬೇಕೇ ಹೊರತು ಪೌರುಷ ಅಲ್ಲ ಎಂದು ಹೇಳುವ ಅಗತ್ಯವಿದೆ.
ನಮ್ಮ ಸೇನೆಯ ಎಲ್ಲ ಕಾಲ್ನಡಿಗೆಯ ಅಧಿಕಾರಿಗಳು ಕಡ್ಡಾಯವಾಗಿ ಕಮಾಂಡೊ ಕೋರ್ಸ್ ತೇರ್ಗಡೆಯಾಗಿರಬೇಕು. ಬದುಕುಳಿಯುವ ತರಬೇತಿಯ ಭಾಗವಾಗಿ ಕಮಾಂಡೊಗಳಿಗೆ ಕೋಳಿಯನ್ನು ವೌನವಾಗಿ ಹತ್ಯೆಗೈಯುವುದನ್ನು ಕಲಿಸಲಾಗುತ್ತದೆ. ಜೀವವಿರುವ ಹಕ್ಕಿಯೊಂದರ ಕುತ್ತಿಗೆಯನ್ನು ಹಿಸುಕುವಾಗ ದೊಡ್ಡ ದೊಡ್ಡ ಕಮಾಂಡೊಗಳೂ ಒಮ್ಮೆ ನಡುಗುತ್ತಾರೆ. ಬಾಂಬ್ ಸ್ವಿಚ್ಚನ್ನು ತೆಗೆದು ಹತ್ತಾರು ಮಂದಿಯನ್ನು ಹತ್ಯೆ ಮಾಡುವುದು ಅಥವಾ ಸ್ನೈಪರ್ ರೈಫಲ್‌ನ ಟ್ರಿಗರ್ ಒತ್ತುವ ಮೂಲಕ ಕಿಲೋ ಮೀಟರ್ ದೂರದಲ್ಲಿ ಶತ್ರುಗಳ ತಲೆಗಳು ಉದುರುವುದನ್ನು ನೋಡುವುದೇ ಬೇರೆ ಮತ್ತು ತಮ್ಮ ಸಮೀಪದಲ್ಲೇ ನಡೆಯುವ ಗುಂಡಿನ ಚಕಮಕಿಯಲ್ಲಿ ಶತ್ರುವಿನ ರಕ್ತವನ್ನು ಮತ್ತು ಭೀಕರತೆಯನ್ನು ಕಾಣುವ, ವಾಸನೆ ತಿಳಿಯುವ, ಸ್ಪರ್ಶಿಸಲು ಮತ್ತು ಅನುಭವಿಸಲು ಸಾಧ್ಯವಿರುವಷ್ಟು ಹತ್ತಿರವಿರುವಾಗ ಆತನನ್ನು ಗುಂಡಿಕ್ಕಿ ಹತ್ಯೆ ಮಾಡುವುದೇ ಬೇರೆ.

ಆಘಾತನಂತರದ ಒತ್ತಡ ಕಾಯಿಲೆ ಅಥವಾ ಪಿಟಿಎಸ್‌ಡಿವಿದ್ಯಮಾನ, ಸೈನಿಕರ ಮಾನಸಿಕ ಸ್ಥಿತಿಯ ಮೇಲೆ ಅದರ ಪರಿಣಾಮ, ನಂತರ ಆತನ ವರ್ತನೆಗಳು ಮತ್ತು ಸಮಾಜದ ಮೇಲೆ ಅದರ ಪರಿಣಾಮವನ್ನು ಅಮೆರಿಕ ಮತ್ತು ಬ್ರಿಟನ್‌ನಂತಹ ದೇಶಗಳು ಈಗಾಗಲೇ ಎದುರಿಸುತ್ತಿವೆ. ಕರ್ತವ್ಯ ನಂತರದ ರಜೆಯಲ್ಲಿ ಮರಳುವ ಅಮೆರಿಕದ ಶೇ.15 ಸೈನಿಕರಲ್ಲಿ ಪಿಟಿಎಸ್‌ಡಿ ಪತ್ತೆಯಾಗಿದೆ. ವಿಯೇಟ್ನಾಂ ಯುದ್ಧದ ಸಮಯದಲ್ಲಿ ಈ ಪ್ರಮಾಣ ಶೇ.30 ಆಗಿತ್ತು. 2012ರೊಂದರಲ್ಲೇ ಅಮೆರಿಕ ಸೇನೆಯ 7,500ಕ್ಕೂ ಅಧಿಕ ಮಾಜಿ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಚೋದ್ಯವೆಂದರೆ, ಆ ವರ್ಷ ಸೇವೆಯಲ್ಲಿದ್ದ ಸಿಬ್ಬಂದಿ ಪೈಕಿಯೂ ಕಾರ್ಯಾಚರಣೆಗಳಲ್ಲಿ (176) ಸಾವಿಗೀಡಾದ ಸಿಬ್ಬಂದಿಗಿಂತ ಹೆಚ್ಚು (177) ಆತ್ಮಹತ್ಯೆಗೈದಿದ್ದಾರೆ.
ಭಾರತೀಯ ಸಶಸ್ತ್ರಪಡೆಗಳಲ್ಲೂ ಕಳೆದ ಏಳು ವರ್ಷಗಳಲ್ಲಿ 900 ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಈ ಪ್ರಮಾಣ ಕಾರ್ಗಿಲ್ ಯುದ್ಧದಲ್ಲಿ (527) ಹುತಾತ್ಮರಾದ ಸೈನಿಕರ ಸಂಖ್ಯೆಯ ಬಹುತೇಕ ದುಪ್ಪಟ್ಟಾಗಿದೆ. ನಮ್ಮ ಭದ್ರತಾ ಪಡೆಯಲ್ಲೂ ಪಿಟಿಎಸ್‌ಡಿಯಿಂದ ನರಳುತ್ತಿರುವವರಿದ್ದಾರೆ. ಆದರೆ ದೈಹಿಕವಾಗಿ ಅಂಗವೈಕಲ್ಯ ಹೊಂದಿರುವ ಸಾವಿರಾರು ಸೈನಿಕರು ತಮ್ಮ ಹಕ್ಕಿನ ಪಾಲನ್ನುಪಡೆಯಲು ವ್ಯವಸ್ಥೆಯ ಜೊತೆ ಹೋರಾಡುತ್ತಿರುವಾಗ ಮಾನಸಿಕವಾಗಿ ಹಾನಿಯಾಗಿರುವವರನ್ನು ಗುರುತಿಸುವುದು ಮತ್ತು ಪರಿಹಾರ ಒದಗಿಸುವುದು ದೂರದ ಮಾತು.
ಹೆಚ್ಚು ರಜೆ, ಉತ್ತಮ ಆಹಾರ ಮತ್ತು ಮೂಲಭೂತ ಸೌಕರ್ಯ, ಅಧಿಕಾರಿಗಳ ಜೊತೆ ಹೆಚ್ಚು ಸಮಾಲೋಚನೆ ಮತ್ತು ಕೌನ್ಸಿಲಿಂಗ್ ಸೌಲಭ್ಯ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೇನೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಘಟನೆಗಳನ್ನು ಕಡಿಮೆ ಮಾಡಲು ಸಾಧ್ಯ. ಆದರೆ ಕೇವಲ ದೈಹಿಕ ಶ್ರಮದಿಂದ ಮಾತ್ರ ಮಾನಸಿಕ ವೇದನೆ ಉಂಟಾಗುವುದಲ್ಲ.
 ಹಾಗೊಂದು ವೇಳೆ ಆಗಿದ್ದರೆ, ಜಗತ್ತಿನಲ್ಲಿ ಅತ್ಯಂತ ಶ್ರೀಮಂತವಾಗಿರುವ ಅಮೆರಿಕ ಸೇನೆ ಈ ಸಮಸ್ಯೆಯನ್ನು ಯಾವಾಗಲೋ ಬಗೆಹರಿಸುತ್ತಿತ್ತು. ಬದಲಾಗಿ,ಇದು ಸೈನಿಕನ ಮನಸ್ಸಿನೊಳಗೆ ನಡೆಯುವ ಸಂಘರ್ಷ. ಅದರಲ್ಲೂ ಸೈನಿಕರು ತಮ್ಮದೇ ನಾಗರಿಕರ ವಿರುದ್ಧ ಹೋರಾಡುವಾಗ ಇದು ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಸರ್ವೋಚ್ಚ ನ್ಯಾಯಾಲಯ ಈ ನಿರ್ದಿಷ್ಟ ಪ್ರಕರಣದಲ್ಲಿ ನೀಡಿರುವ ತೀರ್ಪಿನಂತೆ ನಿಜವಾದ ಹೇಡಿಗಳಿಗೆ ಯಾವ ರೀತಿಯ ವಿನಾಯಿತಿಯನ್ನೂ ನೀಡಬಾರದು ಎಂದು ಹೇಳಿದ್ದರೂ, ಪಿಟಿಎಸ್‌ಡಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹಾನಿಗೊಳಗಾದ ಸೈನಿಕರು, ಅವರ ಕುಟುಂಬಗಳು ಮತ್ತು ಸಮಾಜ ಹಾಗೂ ದೇಶ ಶಾಶ್ವತವಾಗಿ ಅದಕ್ಕೆ ಬೆಲೆ ತೆರಬೇಕಾಗುತ್ತದೆ.
ನಮಗೆ ಮಾನವೀಯ ಮತ್ತು ನೈತಿಕ ಸೇನೆ ಬೇಕಾಗಿದ್ದರೆ ಅದಕ್ಕೆ ಮಾನವೀಯ ಮತ್ತು ನೈತಿಕ ಯೋಧರ ಅಗತ್ಯವಿದೆ ಹೊರತು ರಕ್ತಪಿಪಾಸುಗಳಲ್ಲ. ಯಾಕೆಂದರೆ ಅಂತಹ ಕೊಲೆಗಾರರಿಗೆ ಮಾತ್ರ ಯಾವುದೇ ಮಾನಸಿಕ ತುಮುಲಗಳಿಗೆ ಒಳಗಾಗದೆ ಇತರರನ್ನು ಕೊಲ್ಲಲು ಸಾಧ್ಯ.
 ಕೃಪೆ: thewire.in

Writer - ರಘುರಾಮನ್

contributor

Editor - ರಘುರಾಮನ್

contributor

Similar News

ಜಗದಗಲ
ಜಗ ದಗಲ