ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತದ ಹಿಂದೆ ಬಿಜೆಪಿ ಶಾಸಕನ ಕೈವಾಡ: ಕುಟುಂಬಸ್ಥರ ಆರೋಪ

Update: 2019-07-29 08:27 GMT
Photo: Quint Hindi

ಲಕ್ನೋ, ಜು.29: ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದರೆಂದು ಆರೋಪಿಸಿದ್ದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ಅಪಘಾತದ ಹಿಂದೆ ಬಿಜೆಪಿ ಶಾಸಕನ ಕೈವಾಡವಿದೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

“ಶಾಸಕ ಕುಲದೀಪ್ ಸಿಂಗ್ ಮತ್ತು ಆತನ ಜೊತೆಗಾರರು ನಮ್ಮನ್ನು ಬೆದರಿಸಲು ಈ ಕೃತ್ಯ ಎಸಗಿದ್ದಾರೆ. ನಾವು ರಾಯ್ ಬರೇಲಿ ಜೈಲಿಗೆ ತೆರಳುತ್ತಿದ್ದೆವು ಎನ್ನುವುದು ಗ್ರಾಮದ ಪ್ರತಿಯೊಬ್ಬರಿಗೂ ಗೊತ್ತಿತ್ತು” ಎಂದು ಸಂತ್ರಸ್ತೆಯ ಸಂಬಂಧಿಯೊಬ್ಬರು ಆರೋಪಿಸಿದ್ದರು.

ಕಾರಿಗೆ ಟ್ರಕ್ ಒಂದು ಢಿಕ್ಕಿಯಾಗಿ ನಡೆದ ಅಪಘಾತದಲ್ಲಿ ಸಂತ್ರಸ್ತೆ ಗಂಭೀರವಾಗಿ ಗಾಯಗೊಂಡಿದ್ದರೆ, ಸಂತ್ರಸ್ತೆಯ ಇಬ್ಬರು ಸಂಬಂಧಿ ಮಹಿಳೆಯರು ಮೃತಪಟ್ಟಿದ್ದಾರೆ.

ಸಂತ್ರಸ್ತೆಯ ಬಂಧಿತ ಮಾವ ಇರುವ ರಾಯ್ ಬರೇಲಿ ಜಿಲ್ಲಾ ಕಾರಾಗೃಹಕ್ಕೆ ಅವರು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹತ್ತೊಂಬತ್ತು ವರ್ಷದ ಸಂತ್ರಸ್ತೆ ಮತ್ತಾಕೆಯ ವಕೀಲ ಲಕ್ನೋ ನಗರದ ಕಿಂಗ್ ಜಾಜ್ರ್ಸ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

“ಶಾಸಕ ಸೇಂಗರ್ ಈಗ ಸೀತಾಪುರ್ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಈ ಪ್ರಕರಣವನ್ನು ಮುಂದುವರಿಸಿಕೊಂಡು ಹೋಗಬಾರದೆಂದು ಈ ಅಪಘಾತ ನಡೆಸಲಾಗಿದೆ” ಎಂದು ಸಂತ್ರಸ್ತೆಯ ಸೋದರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News