ಕಕ್ಕಿಲ್ಲಾಯ ಎಂಬ ಆ ಮಹಾ ಚೇತನ

Update: 2019-08-05 09:13 GMT

ಕಕ್ಕಿಲ್ಲಾಯರು ಬರೀ ಕಾರ್ಮಿಕ ನಾಯಕರಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯಾನಂತರ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ನಾಯಕತ್ವ ವಹಿಸಿದ್ದರು. ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಹಲವಾರು ಸೈದ್ಧಾಂತಿಕ ಪುಸ್ತಕಗಳನ್ನು ಬರೆದರು. ಅವರ ಕನ್ನಡ ಓದಲು ಈಗಲೂ ಖುಷಿಯಾಗುತ್ತದೆ.


ಕೆಲವರಿರುತ್ತಾರೆ. ಅವರು ಬದುಕಿದ್ದು ಮತ್ತು ಸತ್ತಿದ್ದು ಅವರ ಹತ್ತಿರದ ಸಂಬಂಧಿಕರಿಗೆ ಬಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ. ಇನ್ನು ಕೆಲ ಅಪರೂಪದ ವ್ಯಕ್ತಿಗಳಿರುತ್ತಾರೆ. ಅವರು ಅಗಲಿದ ಎಷ್ಟೋ ವರ್ಷಗಳ ನಂತರವೂ ಜನ ಮಾನಸದಲ್ಲಿ ಉಳಿದಿರುತ್ತಾರೆ. ಅವರಿಗೆ ಪ್ರಾತಃಸ್ಮರಣೀಯರು ಎನ್ನುತ್ತೇವೆ. ಕಮ್ಯುನಿಸ್ಟ್ ನಾಯಕ, ಚಿಂತಕ, ಸಂಸದೀಯ ಪಟು ಬಿ.ವಿ .ಕಕ್ಕಿಲ್ಲಾಯರು ಅಂಥವರಲ್ಲಿ ಒಬ್ಬರು. ಬದುಕಿದ್ದರೆ, ಅವರಿಗೆ ಈಗ ನೂರು ವರ್ಷ ತುಂಬುತ್ತಿತ್ತು.

 ಕಕ್ಕಿಲ್ಲಾಯರನ್ನು ನಾನು ಮೊದಲು ನೋಡಿದ್ದು 50 ವರ್ಷಗಳ ಹಿಂದೆ. ಅಂದರೆ 1969 ರಲ್ಲಿ. ಅವರನ್ನು ನೋಡುವುದಕ್ಕಿಂತ ಮುಂಚೆಯೇ ಅವರ ಹೆಸರು ಕೇಳಿದ್ದೆ, ಅವರಿಗೆ ಪತ್ರವನ್ನು ಬರೆದಿದ್ದೆ. ಅವರು ಉತ್ತರ ಕೊಟ್ಟಿದ್ದರು. ಆಗ ಭಾರತ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿತ್ತು. ಸಿಪಿಐಗೆ ಕಕ್ಕಿಲ್ಲಾಯರು ರಾಜ್ಯ ಪ್ರಧಾನ ಕಾರ್ಯದರ್ಶಿ. ಸಿಪಿಎಂಗೆ ಎನ್.ಎಲ್.ಉಪಾಧ್ಯಾಯರು ಪ್ರಧಾನ ಕಾರ್ಯದರ್ಶಿ.
ನನ್ನ ಸುಯೋಗ ಎನ್ನಬೇಕು. ಬಾಲ್ಯದಲ್ಲೇ ಇಂಥವರ ಒಡನಾಟದ ಭಾಗ್ಯ ದೊರಕಿದ್ದರಿಂದ ಕೋಮುವಾದಿ ಸಂಘಟನೆಗಳ ಬ್ಯಾಕ್ಟೀರಿಯಾಗಳು ನನಗೆ ತಗುಲಲಿಲ್ಲ. ಅದಕ್ಕೆ ಕಾರಣ, ಇಂಚಗೇರಿ ಮಠದ ಮಹಾದೇವಪ್ಪನವರ ಸಂಪರ್ಕ. ಅಲ್ಲಿ ಕಮ್ಯುನಿಸ್ಟ್ ನಾಯಕರೆಲ್ಲ ಬರುತ್ತಿದ್ದುದರಿಂದ ಒಡನಾಟದ ಅವಕಾಶ ದೊರಕಿತು.

1969ರಲ್ಲಿ ಹುಬ್ಬಳ್ಳಿಯಲ್ಲಿ ವಿಧಾನಸಭೆ ಮತಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಆಗ ಸಿಪಿಐ ಅಭ್ಯರ್ಥಿಯಾಗಿ ಎ.ಜೆ ಮುಧೋಳ ಅಲ್ಲಿ ಸ್ಪರ್ಧಿಸಿದ್ದರು. ಅವರ ಪ್ರಚಾರಕ್ಕೆ ರಾಷ್ಟ್ರಮಟ್ಟದ ಹಿರಿಯ ಕಮ್ಯುನಿಸ್ಟ್ ನಾಯಕರಾದ ಭೂಪೇಶ್‌ಗುಪ್ತ ಮತ್ತು ಸೋಶಿಯಲಿಸ್ಟ್ ನಾಯಕರಾದ ಶಾಂತವೇರಿ ಗೋಪಾಲಗೌಡರು ಬಂದಿದ್ದರು. ಅವರನ್ನೆಲ್ಲ ನೋಡಲು ಬಿಜಾಪುರದಿಂದ ಹುಬ್ಬಳ್ಳಿಗೆ ಬಂದ ನಾನು ಅಲ್ಲಿ ಕಕ್ಕಿಲ್ಲಾಯರನ್ನು ಭೇಟಿ ಮಾಡಿದೆ. ಹೀಗೆ ಅವರ ಸಂಪರ್ಕ ಪಡೆದ ನಂತರ ಆಗಾಗ ಅವರನ್ನು ಭೇಟಿಯಾಗುತ್ತಲಿದ್ದೆ. ನಾನು ಕಮ್ಯುನಿಸ್ಟ್ ಚಳವಳಿಯತ್ತ ಆಕರ್ಷಿತನಾಗಲು ಕಕ್ಕಿಲ್ಲಾಯರು ಬರೆದ ‘ಕಮ್ಯುನಿಸಂ’ ಎಂಬ ಪುಟ್ಟ ಪುಸ್ತಕ ಕಾರಣ. ಸರಳವಾಗಿ ಓದಿಸಿಕೊಂಡು ಹೋಗುತ್ತಿದ್ದ ಅದು ಅಂದಿನ ಪೀಳಿಗೆಯ ಅನೇಕರ ಇಷ್ಟದ ಪುಸ್ತಕವಾಗಿತ್ತು.
ಕಾಸರಗೋಡು ಸಮೀಪದ ಬೇವಿಂಜೆಯ ಭೂಮಾಲಕರ ಕುಟುಂಬದಲ್ಲಿ ಜನಿಸಿದ ಕಕ್ಕಿಲ್ಲಾಯರು ಕಮ್ಯುನಿಸ್ಟ್ ಚಳವಳಿಗೆ ಬಂದುದೇ ಒಂದು ರೋಚಕ ಕತೆ. ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಲ್ಲೊಬ್ಬರಾದ ಮಂಗಳೂರಿನವರೇ ಆದ ಸಚ್ಚಿದಾನಂದ ವಿಷ್ಣು ಘಾಟೆ ಅವರ ಪ್ರಭಾವದಿಂದಾಗಿ ಕಮ್ಯುನಿಸ್ಟ್ ಆಂದೋಲನಕ್ಕೆ ಬಂದ ಕಕ್ಕಿಲ್ಲಾಯರು ತುಂಬ ಚಿಕ್ಕ ವಯಸ್ಸಿನಲ್ಲೇ ರಾಜ್ಯಸಭೆಯ ಸದಸ್ಯರಾದರು. ಬಹುಶಃ ಆಗ ಅವರಿಗೆ 30ರ ಪ್ರಾಯವಿರಬಹುದು. ಆಗ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತದಲ್ಲಿತ್ತು. ಆಗ ಮದ್ರಾಸ್‌ನ ಕಮ್ಯುನಿಸ್ಟ್ ಶಾಸಕರು ಕಕ್ಕಿಲ್ಲಾಯರನ್ನು ರಾಜ್ಯಸಭೆಗೆ ಚುನಾಯಿಸಿದರು.
ಮೊದಲ ಬಾರಿ ಸಂಸತ್ತನ್ನು ಪ್ರವೇಶಿಸಿದ ಕಕ್ಕಿಲ್ಲಾಯರು ಚಿಕ್ಕವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಿದರು. ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಕಕ್ಕಿಲ್ಲಾಯರ ಭಾಷಣ ತುಂಬಾ ಇಷ್ಟಪಡುತ್ತಿದ್ದರು. ಅವರು ಮಾತಾಡುವ ದಿನ ಸದನಕ್ಕೆ ಬಂದು ನೋಟ್ ಮಾಡಿಕೊಳ್ಳುತ್ತಿದ್ದರು.
ಇಂಥ ಕಕ್ಕಿಲ್ಲಾಯರು 1972ರಲ್ಲಿ ರಾಜ್ಯ ವಿಧಾನಸಭೆಗೂ ಚುನಾಯಿತರಾಗಿ ಬಂದರು. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ನಾನು ಕಕ್ಕಿಲ್ಲಾಯರ ಭಾಷಣ ಕೇಳಿ ಪ್ರಭಾವಿತನಾದೆ. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕೂಡ ಕಕ್ಕಿಲ್ಲಾಯರ ಭಾಷಣಗಳನ್ನು ತುಂಬ ಮೆಚ್ಚಿಕೊಳ್ಳುತ್ತಿದ್ದರು.
ದೇವರಾಜ ಅರಸು ಅವರು ಕರ್ನಾಟಕ ಕಂಡ ಅಪರೂಪದ ಮುಖ್ಯಮಂತ್ರಿ. ಬೀದಿಗೆ ಬಿದ್ದವರ ಮತ್ತು ನೊಂದವರ ಪ್ರತಿನಿಧಿಗಳನ್ನು ವಿಧಾನಸಭೆಗೆ ತಂದವರು. ಮುಂದೆ ದೊಡ್ಡ ನಾಯಕರಾಗಿ ಬೆಳೆದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ವೀರಪ್ಪ ಮೊಯ್ಲಿ, ಬಂಗಾರಪ್ಪ ಇಂಥ ಅನೇಕರನ್ನು ಮುಂಚೂಣಿಗೆ ತಂದವರು ಅರಸು. ಇಂಥ ಅರಸರು ಕಕ್ಕಿಲ್ಲಾಯರ ಬಗ್ಗೆ ಅಪಾರ ಗೌರವ ಹೊಂದಿದ್ದರು. ರಾಜ್ಯದಲ್ಲಿ ಉಳುವವನಿಗೆ ಭೂಮಿ ನೀಡಲು ಭೂಸುಧಾರಣಾ ಕಾನೂನು ಜಾರಿಗೆ ತರಲು ಅರಸರು ತೀರ್ಮಾನಿಸಿದಾಗ ಅದರ ಪರಾಮರ್ಶೆಗೆ ರಚಿಸಿದ ಜಂಟಿ ಸದನ ಸಮಿತಿಗೆ ಕಕ್ಕಿಲ್ಲಾಯ ಅವರನ್ನೇ ಅಧ್ಯಕ್ಷರನ್ನಾಗಿ ಅರಸರು ಮಾಡಿದ್ದರು. ಭೂ ಕಾಯ್ದೆ ಬಗ್ಗೆ ಕಕ್ಕಿಲ್ಲಾಯರಿಗಿದ್ದ ಅಪಾರ ಪಾಂಡಿತ್ಯ ಗಮನಿಸಿದ ಅರಸರು ‘ಕಕ್ಕಿಲ್ಲಾಯರು ಕಾನೂನು ಪದವೀಧರರೇ?’ ಎಂದು ಅಚ್ಚರಿಯಿಂದ ಕೃಷ್ಣನ್ ಅವರನ್ನು ಪ್ರಶ್ನಿಸಿದ್ದರಂತೆ. ವಾಸ್ತವವಾಗಿ ಕಕ್ಕಿಲ್ಲಾಯರು ಕಾನೂನು ಪದವೀಧರರು ಆಗಿರದಿದ್ದರೂ ಕಾನೂನಿನ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಇದು ಅಂದಿನ ಕಮ್ಯುನಿಸ್ಟರ ವಿಶೇಷ ಗುಣ.
ಇಂಥ ಕಕ್ಕಿಲ್ಲಾಯರ ಜೊತೆ ನನಗೆ ನಿಕಟ ಒಡನಾಟವಿತ್ತು. ಶಾಸಕತ್ವದ ಅವಧಿ ಮುಗಿದ ನಂತರ ಬರವಣಿಗೆಯಲ್ಲಿ ಮುಳುಗಿದ ಕಕ್ಕಿಲ್ಲಾಯರು ಶ್ರೀನಿವಾಸ ಭಟ್ಟರ ನಿಧನದ ನಂತರ ಕಮ್ಯುನಿಸ್ಟ್ ಪಕ್ಷದ ಮುಖಪತ್ರ ‘ಕೆಂಬಾವುಟ’ದ ಸಂಪಾದಕತ್ವ ವಹಿಸಿಕೊಂಡರು. ಆಗ ‘ಸಂಯುಕ್ತ ಕರ್ನಾಟಕ’ದ ಬೆಂಗಳೂರು ಕಚೇರಿಯಲ್ಲಿ ಪತ್ರಕರ್ತನಾಗಿದ್ದ ನಾನು ಅಲ್ಲಿ ರಾತ್ರಿ ಪಾಳಿ ಮಾಡಿ ಹಗಲು ಹೊತ್ತು ಕೆಂಬಾವುಟದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಕಕ್ಕಿಲ್ಲಾಯರ ಮಾರ್ಗದರ್ಶನದಲ್ಲಿ ನಾನು ಮತ್ತು ಕೊಪ್ಪದ ಶೇಷಾದ್ರಿ ಕೆಲಸ ಮಾಡುತ್ತಿದ್ದೆವು. ಅಲ್ಲಿ ಕಕ್ಕಿಲ್ಲಾಯರ ಒಡನಾಟದಿಂದ ಅನೇಕ ವಿಷಯಗಳನ್ನು ಕಲಿತೆ. ಅನೇಕ ಬಾರಿ ರಾಜಕೀಯ, ತಾತ್ವಿಕ ವಿಷಯಗಳ ಕುರಿತಂತೆ ಕಕ್ಕಿಲ್ಲಾಯರ ಜೊತೆ ನನಗೆ ಭಿನ್ನಾಭಿಪ್ರಾಯ ಉಂಟಾಗುತ್ತಿತ್ತು. ಅವರೊಂದಿಗೆ ವಾದಿಸುತ್ತಿದ್ದೆ. ಆದರೆ ಈ ಭಿನ್ನಾಭಿಪ್ರಾಯವನ್ನು ಅವರೆಂದೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ವಾದ, ವಿವಾದ ಮುಗಿದ ನಂತರ ಜೊತೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ಕಕ್ಕಿಲ್ಲಾಯರ ಜ್ಞಾನ ಭಂಡಾರ ದೊಡ್ಡದು. ಅವರಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲದಿರುತ್ತಿರಲಿಲ್ಲ. ಭಾರತಕ್ಕೆ ಫ್ಯಾಶಿಸ್ಟ್ ಕೋಮುವಾದ ಅಪಾಯಕಾರಿ ಎಂಬ ಸ್ಪಷ್ಟವಾದ ನಿಲುವು ಅವರಿಗಿತ್ತು. ಅವರೊಂದಿಗಿನ ಚರ್ಚೆಯಿಂದ ನನ್ನಲ್ಲೂ ಅದು ದೃಢವಾಗಿ ಬೇರೂರಿತು.
ಕಕ್ಕಿಲ್ಲಾಯರೊಬ್ಬರೇ ಅಲ್ಲ, ಅವರ ಸಮಕಾಲೀನ ನಾಯಕರೆಲ್ಲ ಅದ್ಭುತವಾದ ಸಾಮರ್ಥ್ಯ ಹೊಂದಿದವರಾಗಿದ್ದರು. ಕರ್ನಾಟಕದಲ್ಲಿ ಕಕ್ಕಿಲ್ಲಾಯರ ಜೊತೆ ಸೇರಿ ಕಮ್ಯುನಿಸ್ಟ್ ಪಾರ್ಟಿ ಕಟ್ಟಿದ ಕುಳಕುಂದ ಶಿವರಾಯ (ನಿರಂಜನ) ಎನ್.ಎಲ್.ಉಪಾಧ್ಯಾಯ, ಎನ್.ಕೆ. ಉಪಾಧ್ಯಾಯ, ಎ.ಜೆ. ಮುಧೋಳ, ಎಂ.ಎಸ್. ಕೃಷ್ಣನ್, ಎಂ. ಎಚ್. ಕೃಷ್ಣಪ್ಪ, ಸಿಂಪ್ಸನ್ ಸೋನ್ಸ್, ಪಿ.ಎಂ. ನಾರಾಯಣಮೂರ್ತಿ, ಅಡ್ಡೂರು ಶಿವಶಂಕರರಾವ, ಶಾಂತಾರಾಮ ಪೈ, ಶ್ರೀನಿವಾಸ ಗುಡಿ, ನರಸಿಂಹನ್, ವಿ.ಎನ್. ಪಾಟೀಲ, ನಮೋಶಿ ಹೀಗೆ ಘಟಾನುಘಟಿಗಳ ತಂಡವೇ ಇತ್ತು
ಕಕ್ಕಿಲ್ಲಾಯರು ಮಹಾ ಸ್ವಾಭಿಮಾನಿ ವ್ಯಕ್ತಿ. ಅವರು ಮಾತಿನಲ್ಲಿ ಏಟಿಗೆ ಎದಿರೇಟು ಕೊಡುವುದರಲ್ಲಿ ನಿಸ್ಸೀಮ. ಅರವತ್ತರ ದಶಕದಲ್ಲಿ ನಿಜಲಿಂಗಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ರಾಮಕೃಷ್ಣ ಹೆಗಡೆ ಹಣಕಾಸು ಸಚಿವರಾಗಿದ್ದರು. ಆಗ ಪ್ರಾಂತ ರೈತ ಸಂಘದ ನಿಯೋಗವೊಂದನ್ನು ಅಂದಿನ ಪಾರ್ಟಿ ಕಾರ್ಯದರ್ಶಿ ಎನ್. ಎಲ್.ಉಪಾಧ್ಯಾಯರು ಹೆಗಡೆ ಅವರ ಬಳಿ ಕರೆದುಕೊಂಡು ಹೋಗಿದ್ದರು. ಕಕ್ಕಿಲ್ಲಾಯರು ಕೂಡ ಆ ನಿಯೋಗದಲ್ಲಿದ್ದರು. ಆಗ ಹೆಗಡೆ ಅವರು ಕಕ್ಕಿಲ್ಲಾಯರಿಗೆ ವ್ಯಂಗ್ಯವಾಗಿ, ‘ಕೃಷಿ ಬಗ್ಗೆ ನಿಮಗೆ ಗೊತ್ತುಂಟೊ’ ಎಂದು ಕೇಳಿದರು. ಆಗ ಕಕ್ಕಿಲ್ಲಾಯರು ಅದೇ ವ್ಯಂಗ್ಯ ದಾಟಿಯಲ್ಲಿ,‘ಕೃಷಿ ಬಗ್ಗೆ ನಿಮಗೆ ಎಷ್ಟು ಗೊತ್ತುಂಟೊ ಅಷ್ಟು ನನಗೂ ಗೊತ್ತು’ ಎಂದು ಉತ್ತರ ನೀಡಿದಾಗ ಹೆಗಡೆ ಮುಖ ಕೆಳಗೆ ಮಾಡಿದರು
ಕಕ್ಕಿಲ್ಲಾಯರು ಬರೀ ಕಾರ್ಮಿಕ ನಾಯಕರಾಗಿರಲಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರಾನಂತರ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ನಾಯಕತ್ವ ವಹಿಸಿದ್ದರು. ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಹಲವಾರು ಸೈದ್ಧಾಂತಿಕ ಪುಸ್ತಕಗಳನ್ನು ಬರೆದರು. ಅವರ ಕನ್ನಡ ಓದಲು ಈಗಲೂ ಖುಷಿಯಾಗುತ್ತದೆ. ‘ಕೆಂಬಾವುಟ’ದ ಸಾರಥ್ಯ ವಹಿಸಿ ಪತ್ರಕರ್ತರಾಗಿಯೂ ಹೆಸರಾದರು. ಅವರ ಪುಸ್ತಕಗಳಿಗೆ ಅನೇಕ ಪ್ರಶಸ್ತಿಗಳು ಬಂದವು. ಅಷ್ಟೇ ಅಲ್ಲ, ಪ್ರಭಾವಿ ಸಂಸದೀಯ ಪಟುವಾಗಿದ್ದರು. ಉತ್ತಮ ಭಾಷಣಕಾರರಾಗಿದ್ದರು. ಹೀಗೆ ಬಹಮುಖ ವ್ಯಕ್ತಿತ್ವ ಕಕ್ಕಿಲ್ಲಾಯರದು.
ಇಂಥ ಮಹಾನ್ ಚೇತನ ಕಕ್ಕಿಲ್ಲಾಯರು ಮತ್ತೆ ಮತ್ತೆ ನೆನಪಾಗುತ್ತಾರೆ. ಇಂದಿನ ಬಿಕ್ಕಟ್ಟಿನ ದಿನಗಳಲ್ಲಿ ಅವರ ನೆನಪು, ಬರಹ ನಮಗೆ ಮಾರ್ಗದರ್ಶನವಾಗಿದೆ. ಮಂಗಳೂರಿನಲ್ಲಿ ನಡೆವ ಅವರ ಶತಮಾನೋತ್ಸವ ಹೊಸ ಸ್ಫೂರ್ತಿ ನೀಡಲಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News