ವಲಸಿಗರು ಕೇವಲ ಅಗ್ಗದ ಕಾರ್ಮಿಕರಲ್ಲ

Update: 2019-08-04 18:31 GMT

ಒಂದೊಮ್ಮೆ, ವಲಸಿಗರು ಅಗ್ಗದ ಬೆಲೆಗೆ ಸಿಗುವ ಕಾರ್ಮಿಕರಾಗಿದ್ದರು. ಪಾಶ್ಚಾತ್ಯ ರಾಷ್ಟ್ರಗಳ ನಿರ್ಮಾಣಕ್ಕಾಗಿ ಇವರಿಗೆ ಬಹಳ ಬೇಡಿಕೆ ಇತ್ತು. ಈಗ ಸರ್ವವ್ಯಾಪಿ ಯಾಗಿರುವ ಯುದ್ಧೋತ್ತರ ನವ ಉದಾರವಾದಕ್ಕೆ ಅಡಿಪಾಯ ಹಾಕಲು ಅಕ್ಷರಶಃ ನೆರವು ನೀಡಿದವರು ಇದೇ ವಲಸೆ ಕಾರ್ಮಿಕರು. ಆದಾಗ್ಯೂ, ಈಗ ವಿಶ್ವದಾದ್ಯಂತ ದುಡಿಯಲು ಹೋಗಿ ತಾವು ದುಡಿದಲ್ಲೇ ನೆಲೆ ನಿಂತಿರುವ ಇದೇ ಕಾರ್ಮಿಕರ ಬಗ್ಗೆ ತಿರಸ್ಕಾರ, ಭಯ ಮತ್ತು ಜಿಗುಪ್ಸೆ ಮೂಡಿರುವುದನ್ನು ಅಲ್ಲಗಳೆಯುವಂತಿಲ್ಲ.

ಇಂದಿನ ರಾಜಕಾರಣಿಗಳು ಜನಾಂಗೀಯತೆಯನ್ನು ಪ್ರಚೋದಿಸುವುದು ಖಂಡಿತವಾಗಿಯೂ ಜಾಗತೀಯತೆಯ ಮತ್ತು ಕಲ್ಯಾಣ ಅರ್ಥಶಾಸ್ತ್ರದ ಭವಿಷ್ಯಕ್ಕೆ ಒಂದು ದೊಡ್ಡ ಬೆದರಿಕೆ. ಹಲವರು ಹೇಳುವಂತೆ ನಾವೆಲ್ಲಾ ನಮ್ಮ ಮೂಲ ವಾಸಸ್ಥಾನಕ್ಕೆ ಮರಳಬೇಕು ಎಂದಾದಲ್ಲಿ, ಅದು ಆಫ್ರಿಕಕ್ಕೆ ತೆರಳುವ ಒಂದು ದೀರ್ಘವಾದ ಪ್ರಯಾಣವಾಗುತ್ತದೆ.

ರಾಷ್ಟ್ರಗಳು ಅಭಿವೃದ್ಧಿ, ನೌಕರಿಗಳು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಮಾನವ ಹಕ್ಕುಗಳ ವಿಷಯದಲ್ಲಿ ವಿಫಲವಾದಾಗ ಆಳುವವರು ನಿರುದ್ಯೋಗಿಗಳ, ರೈತರ ಸ್ಥಿತಿ ಹಾಗೂ ವಿದ್ಯಾರ್ಥಿಗಳ ಆತಂಕದಿಂದ ಜನರ ಗಮನವನ್ನು, (ವಲಸಿಗರನ್ನು ಗುರಿಯಾಗಿಸಿಕೊಂಡು) ಬೇರೆ ಕಡೆಗೆ ಸೆಳೆಯುತ್ತಾರೆ. ಇದು ಭಾಷಾಶಾಸ್ತ್ರಜ್ಞ ಹಾಗೂ ಚಿಂತಕ ಜಿ.ಎನ್. ಡೆವಿಯವರ ಅಭಿಪ್ರಾಯ.

ಅಧ್ಯಕ್ಷ ಟ್ರಂಪ್ ಕಾಂಗ್ರೆಸ್‌ನ ಮಹಿಳಾ ಸದ್ಯಸರಿಗೆ ಅವರ ದೇಶಗಳಿಗೆ ಮರಳಿ ಹೋಗಿ ಎನ್ನುವುದು ಮತ್ತು ಹೊಸತಾಗಿ ಚುನಾಯಿತರಾದ ನಮ್ಮ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲೂ ಒಂದು ಪೌರತ್ವ ನೋಂದಣಿ ಸಿದ್ಧವಾಗಬೇಕೆಂದು ಹೇಳುವುದು-ಇದೆಲ್ಲ ಪೌರತ್ವ ಇಲ್ಲದ ನಾಗರಿಕರ ಬಗ್ಗೆ ಜಾಗತಿಕ ತಾತ್ಸಾರ, ಜಿಗುಪ್ಸೆ ಅಲ್ಲದೆ ಬೇರೇನೂ ಅಲ್ಲ.

 ಕಾದಂಬರಿಕಾರ್ತಿ ಶಶಿ ದೇಶಪಾಂಡೆ ಅವರ ಪ್ರಕಾರ ‘‘ಭಾರತ ಮತ್ತು ಅಮೆರಿಕ-ಎರಡು ದೇಶಗಳು ಕೂಡ ತೀವ್ರಗಮಿ ಬಲಪಂಥೀಯರ ಕೈಯಲ್ಲಿರುವುದರಿಂದ ಎರಡೂ ದೇಶಗಳ ಮುಖ್ಯಸ್ಥರು ಸಮಾನಾಂತರ ಹಾದಿಯಲ್ಲಿ ಸಾಗುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.’’

ಕೇಂದ್ರ ಸರಕಾರದ ಆದ್ಯತೆಗಳು ನಾಗರಿಕರ ಸಂಖ್ಯೆಯನ್ನು ಲೆಕ್ಕ ಹಾಕುವ ಕೆಲಸಕ್ಕೆ ಮತ್ತು ಇದಕ್ಕಾಗಿ ತೆರಿಗೆದಾರರ ಹಣವನ್ನು ವ್ಯರ್ಥ ಮಾಡುವುದಕ್ಕೆ ಮೀಸಲಾಗಬಾರದು. ನಗರಗಳಲ್ಲಿರುವ ವಲಸೆಗಾರರನ್ನು ಕೆಲವು ರಾಜಕಾರಣಿಗಳು ತಮ್ಮ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆಂದಾಗ ಜನರು ತಾವಿರುವ ಸ್ಥಳಗಳನ್ನು ತೊರೆದು ಹೋಗಲು, ಅಸ್ಸಾಮಿನಲ್ಲಾದಂತೆ ಭಾರೀ ನೆರೆ ಬಂದಾಗಲೂ ನಿರಾಕರಿಸುತ್ತಾರೆ. ತಮಗೆ ಈಗ ಇರುವ ಪೌರತ್ವ ಕಳೆದುಕೊಳ್ಳುತ್ತೇವೆಂಬ ಭಯ ಅವರನ್ನು ಕಾಡುತ್ತದೆ.

‘‘ನಮ್ಮ ದಕ್ಷಿಣ ಬೆಂಗಳೂರಿನ ಸಂಸದ ರಾಷ್ಟ್ರೀಯ ಪೌರತ್ವ ನೋಂದಣಿಯ ಬಗ್ಗೆ ಯಾಕೆ ಮಾತಾಡುತ್ತಾರೆಂದರೆ ಅವರು ಇನ್ನೂ ಯುವಕ, ನಿರನುಭವಿ ಮತ್ತು ಪಕ್ಷದ ಉನ್ನತ ನಾಯಕರ ಗಮನ ಸೆಳೆಯಲು ಅವರು ಆತುರದಲ್ಲಿದ್ದಾರೆ. ದಿಗ್ಬಂಧನ, ಶಿಬಿರ ಸ್ಥಾಪನೆಯ ವಿಚಾರವೇ ತುಂಬ ಆಘಾತಕಾರಿ’’ ಎನ್ನುತ್ತಾರೆ ಶಶಿ ದೇಶ್‌ಪಾಂಡೆ.

ವಲಸಿಗ-ವಿರೋಧಿ ನಿಲುವು ಜಾಗತಿಕ ಮಟ್ಟದಲ್ಲಿಯೂ ಕಾಣಿಸುತ್ತಿದೆ. 2016ರ ಒಂದು ವರದಿಯಲ್ಲಿ ವಿಶ್ವಸಂಸ್ಥೆ ಜಗತ್ತಿನ ಒಟ್ಟು ಶ್ರಮಿಕ ಶಕ್ತಿಯು 35ಶೇ. ಪಾಲು ವಲಸಿಗರಿಂದ ಕೂಡಿದೆ ಎಂದಿತು ಮತ್ತು ಇದನ್ನು ನಿಯಂತ್ರಿಸುವುದು ‘ಅಗತ್ಯ’ವಾಗುತ್ತದೆ ಎಂದಿದ್ದಾರೆ ಜಿ.ಎನ್.ಡೆವಿ.

ವಲಸಿಗರನ್ನು ಅಮಾನವೀಕರಿಸುವುದು ಅಗ್ಗದ ಹಾಗೂ ಕೊಳಕಾದ ಒಂದು ತಂತ್ರ. ಇದರಿಂದಾಗಿ ವಿವಿಧ ಸಮುದಾಯಗಳ ಸಾಮರಸ್ಯದಿಂದ ಸಾಧ್ಯವಾಗುವ ನಾಗರಿಕತೆಯ ಅಭಿವೃದ್ಧಿಗೆ ಎಂದೂ ಯಾವ ರೀತಿಯ ಲಾಭವೂ ಆಗುವುದಿಲ್ಲ. ಜನರನ್ನು ವಿಭಜಿಸಿ ಲಾಭ ಮಾಡಿಕೊಳ್ಳುವವರ ಕಾರ್ಯತಂತ್ರಕ್ಕಷ್ಟೆ ಇದು ಅನುಕೂಲಕಾರಿಯಾಗುತ್ತದೆ.

‘‘ಒಂದು ದಶಕದ ಹಿಂದೆ ‘ಉದಾರವಾದಿ’ ಪ್ರಜಾಪ್ರಭುತ್ವಗಳೆಂದು ಕರೆಯಲ್ಪಡುತ್ತಿದ್ದ ರಾಷ್ಟ್ರಗಳಿಗೆ ತೀರ ಬಲಪಂಥೀಯವಾಗಲು ಇಂದಿನ ಜಾಗತಿಕ ಸನ್ನಿವೇಶ ಪ್ರೋತ್ಸಾಹ ನೀಡುತ್ತದೆ.’’

‘‘ಬಲಪಂಥೀಯ ಸರಕಾರವು ರೊಹಿಂಗ್ಯಾ ಮುಸ್ಲಿಮರನ್ನು ಒಂದು ಆಳ್ವಿಕೆಯೊಳಗೆ, ಭಯಾನಕವಾಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ದಾಖಲೆಯೊಂದಿಗೆ ಇರುವಂತೆ ಬಲವಂತ ಮಾಡಿತು. ನಮ್ಮ ದೇಶದಲ್ಲಿ ಈಶಾನ್ಯ ರಾಜ್ಯ ಮತ್ತು ಬಂಗಾಳದ ಜನರ ನಡುವೆ ಒಂದು ವಿಭಾಜಕ ಗೆರೆ ಎಳೆದು ‘ವಲಸಿಗರನ್ನು ಬಲವಂತವಾಗಿ ಹೊರಗೆ ತಳ್ಳುವ ಅವಶ್ಯಕತೆ ಇದೆ’ ಎಂದು ಹೇಳಲಾಗುತ್ತಿದೆ. ಇದು ಮಾನವತಾ ವಿರೋಧಿಯಾಗಿದ್ದು, ಸಂಕುಚಿತ ದೃಷ್ಟಿಕೋನದಿಂದ ಕೂಡಿರುವುದಾಗಿದ್ದು ಸಾಮಾಜಿಕವಾಗಿ ಜನಸಮುದಾಯಗಳನ್ನು ಒಡೆಯುವ, ವಿಭಜಿಸುವ ಕೃತ್ಯವಾಗಿದೆ. ದ್ವೇಶವೇ ಸರಕಾರದ ನೀತಿಯನ್ನು ರೂಪಿಸುವ ಭಾವನೆಯಾಗಿರುವುದಾದಲ್ಲಿ ಸದ್ಯದಲ್ಲೇ ಭಾರತ ಒಂದು ಏಕಾಂಗಿ ದೊಡ್ಡಣ್ಣ (ಬಿಗ್ ಬ್ರದರ್) ಆಗಲಿದೆ ಎನ್ನುತ್ತಾರೆ ಡೆವಿ.

ಒಂದೊಮ್ಮೆ, ವಲಸಿಗರು ಅಗ್ಗದ ಬೆಲೆಗೆ ಸಿಗುವ ಕಾರ್ಮಿಕರಾಗಿದ್ದರು. ಪಾಶ್ಚಾತ್ಯ ರಾಷ್ಟ್ರಗಳ ನಿರ್ಮಾಣಕ್ಕಾಗಿ ಇವರಿಗೆ ಬಹಳ ಬೇಡಿಕೆ ಇತ್ತು. ಈಗ ಸರ್ವವ್ಯಾಪಿ ಯಾಗಿರುವ ಯುದ್ಧೋತ್ತರ ನವ ಉದಾರವಾದಕ್ಕೆ ಅಡಿಪಾಯ ಹಾಕಲು ಅಕ್ಷರಶಃ ನೆರವು ನೀಡಿದವರು ಇದೇ ವಲಸೆ ಕಾರ್ಮಿಕರು. ಆದಾಗ್ಯೂ, ಈಗ ವಿಶ್ವದಾದ್ಯಂತ ದುಡಿಯಲು ಹೋಗಿ ತಾವು ದುಡಿದಲ್ಲೇ ನೆಲೆ ನಿಂತಿರುವ ಇದೇ ಕಾರ್ಮಿಕರ ಬಗ್ಗೆ ತಿರಸ್ಕಾರ, ಭಯ ಮತ್ತು ಜಿಗುಪ್ಸೆ ಮೂಡಿರುವುದನ್ನು ಅಲ್ಲಗಳೆಯುವಂತಿಲ್ಲ.

‘‘ಯುದ್ಧ್ದಾನಂತರದ ಯುರೋಪಿಗೆ ಕಾರ್ಮಿಕರ ಅವಶ್ಯಕತೆಯಿತ್ತು. ಆದ್ದರಿಂದ ಹಲವು ದೇಶಗಳು ವಲಸೆ ನೀತಿಯನ್ನು ಉದಾರಗೊಳಿಸಿದವು... ಆದರೆ ಈಗ ಯುರೋಪ್‌ನಲ್ಲಿ ವಲಸೆ ವಿರುದ್ಧ, ವಿಶೇಷವಾಗಿ ಸಿರಿಯದ ನಿರಾಶ್ರಿತರ ವಿರುದ್ಧ ನಾಚಿಕೆಗೇಡಿನ ಹೇಳಿಕೆಗಳು ಕೇಳಿಬರುತ್ತಿವೆ.

ಮೆಕ್ಸಿಕೊ ಮತ್ತು ಅಮೆರಿಕದ ನಡುವೆ ಗೋಡೆ ನಿರ್ಮಾಣವನ್ನು ಡೊನಾಲ್ಡ್ ಟ್ರಂಪ್ ತನ್ನ ದೇಶದ ನೀತಿಯನ್ನಾಗಿ ಮಾಡಿದ್ದಾರೆ. 2014ರಿಂದ ಆಸ್ಟ್ರೇಲಿಯನ್ ಸರಕಾರವು ತಪ್ಪಿತಸ್ಥ ವಲಸಿಗರನ್ನು ಒಂದು ದ್ವೀಪ ಶಿಬಿರಕ್ಕೆ ಕಳುಹಿಸುತ್ತ್ತಿದೆ ಎನ್ನುತ್ತಾರೆ ಡೆವಿ.

ಯಾವುದೇ ಒಂದು ಅರ್ಥ ವ್ಯವಸ್ಥೆಯಲ್ಲಿ ಅಗ್ಗದ ಮಾನವ ಸಂಪನ್ಮೂಲಗಳು ಬೇಡವಾದಾಗ ವಲಸಿಗರು ಸರಕಾರಗಳ ಕೈಯಲ್ಲಿ ಚದುರಂಗದಾಟದ ದಾಳಗಳಾಗುತ್ತಾರೆ.

ಶಶಿ ದೇಶ್‌ಪಾಂಡೆಯವರು ಹೇಳುವ ಮಾತುಗಳು ಇಲ್ಲಿ ಮನನೀಯ: ‘‘ಅಮೆರಿಕ ಹೇಗೆ ವಲಸಿಗರು ದೇಶವನ್ನು ನಿರ್ಮಿದರೆಂಬುವುದನ್ನು ಮರೆಯಲು ಸಾಧ್ಯವಿಲ್ಲವೋ, ಹಾಗೆಯೇ ಭಾರತ ಕೂಡ ಮುಸ್ಲಿಮರನ್ನು ‘ಹೊರಗಿನವರು’ ಎಂದು ಹೇಳುವುದಾಗಲಿ ಅಥವಾ ನಮ್ಮ ಶಕ್ತಿಯಾಗಿರುವ ಸಂಸ್ಕೃತಿ ಮತ್ತು ಬಹುತ್ವಕ್ಕೆ ಅವರು ನೀಡಿದ ಕಾಣಿಕೆಯನ್ನು ಅಲ್ಲಗೆಳೆಯುವುದಾಗಲೀ ಸಾಧ್ಯವಿಲ್ಲ. ಅಲ್ಲದೆ, ಒಂದು ದಿಗ್ಬಂಧನ ಕೇಂದ್ರವನ್ನು ಕಟ್ಟಲು ಬೇಕಾದಷ್ಟು ಹಣವಾದರೂ ನಮ್ಮಲ್ಲಿದೆಯೇ? ಎಷ್ಟೆಂದರೂ (ರಾಜಕೀಯ) ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ‘ರೆಬೆಲ್’ಗಳನ್ನು ಪಂಚತಾರಾ ರೆಸಾರ್ಟ್‌ಗಳಲ್ಲಿ ಇರಿಸಿಕೊಳ್ಳಲು ನಾವು ನಮ್ಮ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಬೇಕಾಗಿದೆ’’

ಕೃಪೆ: deccanherald.com

Writer - ರಾಜ್‌ಮೋಹನ್ ಸುಧಾಕರ್

contributor

Editor - ರಾಜ್‌ಮೋಹನ್ ಸುಧಾಕರ್

contributor

Similar News

ಜಗದಗಲ
ಜಗ ದಗಲ