ಜಾಗತಿಕ ಖ್ಯಾತಿಯ ಯುವ ಕಾನೂನು ತಜ್ಞ ಪ್ರೊ. ಶಮ್ನಾಡ್ ಬಶೀರ್ ದುರಂತ ಅಂತ್ಯ

Update: 2019-08-13 18:42 GMT
Editor : ಎಂ. ಕೆ.

ಶಮ್ನಾಡ್ ಬಶೀರ್ ಅವರು ಆಗಸ್ಟ್ 8ರಂದು ಬಾಬಾಬುಡಾನ್‌ಗಿರಿಯ ನಿರ್ಜನ ಪ್ರದೇಶವೊಂದರಲ್ಲಿ ತಮ್ಮ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಕಾರ್ ಲಾಕ್ ಮಾಡಿಕೊಂಡು ನಿದ್ದೆ ಹೋದ ಅವರು ಉಸಿರುಗಟ್ಟಿ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ದುರಂತದ ಒಟ್ಟಾರೆ ವಿವರಣೆ ತೃಪ್ತಿದಾಯಕವಾಗಿಲ್ಲ.

ದೇಶವಿದೇಶಗಳಲ್ಲಿ ಭಾರೀ ಮನ್ನಣೆ ಗಳಿಸಿರುವ ಯುವ ಕಾನೂನು ತಜ್ಞ, ತೆರೆಮರೆಯಲ್ಲೇ ಇದ್ದು ಕಾನೂನು ಹೋರಾಟಗಳ ಮೂಲಕ ಜನರ ಬದುಕು ಬೆಳಗುವಂತಹ ಕೆಲಸ ಮಾಡುತ್ತಿದ್ದವರು ಪ್ರೊ. ಶಮ್ನಾಡ್ ಬಶೀರ್. ಅವರು ಇತ್ತೀಚೆಗೆ ಚಿಕ್ಕಮಗಳೂರಿನ ಬಾಬಾಬುಡಾನ್ ಗಿರಿಯಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದು ಹೆಚ್ಚಿನ ಸುದ್ದಿಯಾಗಲೇ ಇಲ್ಲ. ಆಗಸ್ಟ್ 5ರಂದು ಏಕಾಂತವಾಗಿ ಸುತ್ತಾಡಲು ಹೋಗುತ್ತೇನೆ ಎಂದು ಹೇಳಿ ಹೋಗಿದ್ದರೆನ್ನಲಾದ ಶಮ್ನಾಡ್ ಬಶೀರ್ ಅವರು ಆಗಸ್ಟ್ 8ರಂದು ಬಾಬಾಬುಡಾನ್‌ಗಿರಿಯ ನಿರ್ಜನ ಪ್ರದೇಶವೊಂದರಲ್ಲಿ ತಮ್ಮ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಕಾರ್ ಲಾಕ್ ಮಾಡಿಕೊಂಡು ನಿದ್ದೆ ಹೋದ ಅವರು ಉಸಿರುಗಟ್ಟಿ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ದುರಂತದ ಒಟ್ಟಾರೆ ವಿವರಣೆ ತೃಪ್ತಿದಾಯಕವಾಗಿಲ್ಲ.
ಇನ್ನೂ 43 ವರ್ಷ ದಾಟದ, ಸದ್ಯ ಬೆಂಗಳೂರಿನಲ್ಲಿದ್ದ ಪ್ರೊ. ಶಮ್ನಾಡ್ ಬಶೀರ್Intellectual Property Law  (ಬೌದ್ಧಿಕ ಆಸ್ತಿ ಕಾನೂನು) ಕ್ಷೇತ್ರದಲ್ಲಿ ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿ ದೊಡ್ಡ ಹೆಸರು ಮಾಡಿದವರು. ಜೊತೆಗೆ ಹಲವಾರು ಮಹತ್ವದ ವಿಷಯಗಳಲ್ಲಿ ಜನರ ಪರವಾಗಿ ಕಾನೂನು ಹೋರಾಟ ನಡೆಸಿ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದ ಸಾಮಾಜಿಕ, ಮಾನವ ಹಕ್ಕುಗಳ ಹೋರಾಟಗಾರರೂ ಆಗಿದ್ದರು.
 ಕೋಲ್ಕತಾದ National University of Juridical Sciences (NUJS)  ನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಬೌದ್ಧಿಕ ಆಸ್ತಿ ಕಾನೂನು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಶಮ್ನಾಡ್ ಬಶೀರ್, ಅಮೆರಿಕದ ಜಾರ್ಜ್ ವಾಶಿಂಗ್ಟನ್ ಯೂನಿವರ್ಸಿಟಿ ಲಾ ಸ್ಕೂಲ್‌ನಲ್ಲಿ ಸಹ ಪ್ರಾಧ್ಯಾಪಕರಾಗಿ, ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯದ ಕಾನೂನು ಕಾಲೇಜಿನಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಪ್ರತಿಭಾವಂತ. ಇವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಹಾಗೂ ಆಕ್ಸ್‌ಫರ್ಡ್ ವಿವಿಯ ಹಳೆ ವಿದ್ಯಾರ್ಥಿ.  Oxford Commonwealth Law Journal (OUCLJ) ನ ಸಂಪಾದಕರಾಗಿಯೂ ಶಮ್ನಾಡ್ ಬಶೀರ್ ಸೇವೆ ಸಲ್ಲಿಸಿದ್ದಾರೆ.
   ವಿದ್ಯಾರ್ಥಿ ದೆಸೆಯಿಂದಲೇ ಬೌದ್ಧಿಕ ಆಸ್ತಿ ಕಾನೂನು (ಪೇಟೆಂಟ್ ಹಾಗೂ ಕಾಪಿ ರೈಟ್ ಇತ್ಯಾದಿ ವಿಷಯಗಳು) ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡ ಶಮ್ನಾಡ್ ಬಶೀರ್ ಆ ಕ್ಷೇತ್ರದಲ್ಲಿ ಅದೆಷ್ಟು ಆಳವಾಗಿ ಅಧ್ಯಯನ ಮಾಡಿದರೆಂದರೆ ಇಂದು ವಿಶ್ವದ ಅಗ್ರಗಣ್ಯ ಬೌದ್ಧಿಕ ಆಸ್ತಿ ಕಾನೂನು ತಜ್ಞರಲ್ಲಿ ಅವರೂ ಒಬ್ಬರು ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಕಾನೂನು ಕ್ಷೇತ್ರದಲ್ಲಿ ಅಗಾಧ ಅಧ್ಯಯನ ಹಾಗೂ ಸಂಶೋಧನೆ ನಡೆಸಿದ್ದ ಬಶೀರ್ ಅದನ್ನು ಸಾಮಾಜಿಕ ಹೋರಾಟಕ್ಕೂ ಅಸ್ತ್ರವಾಗಿ ಪರಿಣಾಮಕಾರಿಯಾಗಿ ಬಳಸಿದ್ದು ಅವರ ಹೆಗ್ಗಳಿಕೆ. ಕಾನೂನು ಕ್ಷೇತ್ರದಲ್ಲಿ ದುರ್ಬಲ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಮತ್ತು ಮಹತ್ವದ ವಿಷಯಗಳಲ್ಲಿ ಅವರಿಗೆ ನ್ಯಾಯ ಸಿಗುವಂತೆ ಮಾಡಲು ನಿಸ್ವಾರ್ಥವಾಗಿ ದುಡಿದವರು ಶಮ್ನಾಡ್ ಬಶೀರ್. ಇಂಟರ್ನೆಟ್ ಸಮಾನತೆ, ಬೌದ್ಧಿಕ ಆಸ್ತಿ ವಿಷಯದಲ್ಲಿ ನ್ಯಾಯ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು, ಅಂಗವಿಕಲರು ಹಾಗೂ ಅಂಧರ ಹಕ್ಕುಗಳು ಇತ್ಯಾದಿ ವಿಷಯಗಳಲ್ಲಿ ಪ್ರಚಾರ ಬಯಸದೆ ಕಾನೂನು ಹೋರಾಟ ಮಾಡಿ ನ್ಯಾಯ ದೊರಕಿಸಲು ಶಮ್ನಾಡ್ ಬಶೀರ್ ನಿರಂತರ ಪ್ರಯತ್ನದಲ್ಲಿದ್ದರು.
ಆಧಾರ್ ವಿರುದ್ಧ ಕಾನೂನು ಹೋರಾಟ
ಆಧಾರ್ ಕಾರ್ಡ್‌ಗಾಗಿ ಜನರು ಸಲ್ಲಿಸುವ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪ ಕುರಿತು ವಿವಿಧ ತಜ್ಞರ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಯಬೇಕು, ಸೋರಿಕೆಯಾಗಿದ್ದರೆ ಅದಕ್ಕೆ ಸರಕಾರ ಜವಾಬ್ದಾರಿ ಹೊರಬೇಕು ಹಾಗೂ ಅದಕ್ಕೆ ಜನರಿಗೆ ಪರಿಹಾರ ನೀಡಬೇಕು ಎಂದು ಬಶೀರ್ ದಿಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅತ್ಯಂತ ವಿವರವಾಗಿ ಆಧಾರ್‌ನಲ್ಲಿ ಏನಾಗುತ್ತಿದೆ ಎಂದು ವಿವರಿಸಿದ್ದ ಅವರ ಅರ್ಜಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಆಧಾರ್‌ನಲ್ಲಿ ಅತ್ಯಂತ ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದು ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಆಧಾರ್ ಪ್ರಾಧಿಕಾರ ವಾದಿಸಿತ್ತು. ಬಶೀರ್ ಅವರ ಅರ್ಜಿ ವಿಚಾರಣೆ ತಾರ್ಕಿಕ ಅಂತ್ಯ ಕಂಡರೆ ಆಧಾರ್ ಬುಡಕ್ಕೇ ಬರುತ್ತಿತ್ತು ಎಂದು ಹಲವು ಕಾನೂನು ತಜ್ಞರು ಹಾಗೂ ಸಾಮಾಜಿಕ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇದೀಗ ಸ್ವತಃ ಬಶೀರ್ ಅವರೇ ದುರಂತ ಅಂತ್ಯ ಕಂಡಿದ್ದಾರೆ.
ನೊವಾರ್ಟಿಸ್ ವಿರುದ್ಧ ಗೆಲುವು
Gleeve ಕ್ಯಾನ್ಸರ್ ಔಷಧಿ ಗೆ ತನಗೆ ಪೇಟೆಂಟ್ ನೀಡಬೇಕು ಎಂದು ಸ್ವಿಸ್ ಔಷಧ ತಯಾರಕ ಕಂಪೆನಿ ನೊವಾರ್ಟಿಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಔಷಧಿಯನ್ನು ದೇಶದ ಜನರಿಕ್ ಔಷಧ ತಯಾರಕರು ಅತ್ಯಂತ ಕಡಿಮೆ ಬೆಲೆಗೆ ಮಾರುತ್ತಿದ್ದರು. ಪೇಟೆಂಟ್ ಪಡೆದ ಮೇಲೆ ಅದನ್ನು ಇಪ್ಪತ್ತು ಪಟ್ಟು ಹೆಚ್ಚು ಬೆಲೆಗೆ ಮಾರುವುದು ನೊವಾರ್ಟಿಸ್ ಉದ್ದೇಶವಾಗಿತ್ತು. ಆದರೆ ಈ ಅರ್ಜಿಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ ಬಶೀರ್ ನೊವಾರ್ಟಿಸ್‌ಗೆ ಪೇಟೆಂಟ್ ಸಿಗದಂತೆ ಮಾಡುವಲ್ಲಿ ಯಶಸ್ವಿಯಾದರು. ಆ ಮೂಲಕ ಕ್ಯಾನ್ಸರ್ ವಿರುದ್ಧದ ಜೀವ ರಕ್ಷಕ ಔಷಧಿಯೊಂದು ಕಡಿಮೆ ಬೆಲೆಗೆ ಎಲ್ಲರಿಗೂ ಸಿಗುವಂತೆ ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ.
ಅರ್ಹ ಪ್ರತಿಭಾವಂತರಿಗೆ ಪೂರ್ಣ ಪ್ರೋತ್ಸಾಹ
 Increasing Access to Legal Education (IDIA) ಎಂಬ ಸಂಸ್ಥೆ ಸ್ಥಾಪಿಸಿದ್ದ ಬಶೀರ್ ಅದರ ಮೂಲಕ ದೇಶದ ಉದ್ದಗಲಗಳಲ್ಲಿರುವ ಅರ್ಹ ಬಡ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಅವರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುತ್ತಿದ್ದರು. ತಮ್ಮ ನಿಬಿಡ ಕಾರ್ಯಚಟುವಟಿಕೆಗಳ ನಡುವೆಯೂ ಯುವ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ, ತರಬೇತಿ ನೀಡುತ್ತಿದ್ದರು.
ಪ್ರಶಸ್ತಿ, ಗೌರವಗಳ ಸರಮಾಲೆ
ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ, ಬಳಿಕ ಅಷ್ಟೇ ತಜ್ಞ ಕಾನೂನು ಪಂಡಿತರಾದ ಬಶೀರ್ ತಮ್ಮ ಶೈಕ್ಷಣಿಕ ಹಾಗೂ ವೃತ್ತಿ ಸಾಧನೆಗಳಿಗಾಗಿ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇನ್ಫೋಸಿಸ್ ಸೈನ್ಸ್ ಪ್ರತಿಷ್ಠಾನ ಪ್ರಶಸ್ತಿ, ಆಕ್ಸ್ ಫರ್ಡ್ ವಿವಿ ಪ್ರಶಸ್ತಿ ಸಹಿತ ದೇಶವಿದೇಶಗಳ ಹಲವಾರು ಸಮ್ಮಾನಗಳು ಅವರನ್ನು ಅರಸಿಕೊಂಡು ಬಂದಿದ್ದವು.

Writer - ಎಂ. ಕೆ.

contributor

Editor - ಎಂ. ಕೆ.

contributor

Similar News

ಜಗದಗಲ
ಜಗ ದಗಲ