ಬ್ರಾಹ್ಮಣರು ಶ್ರೇಷ್ಟರು ಎಂಬ ಸ್ಪೀಕರ್ ಬಿರ್ಲಾ ಮಾತುಗಳಲ್ಲಿ ಜಾತೀಯತೆಯ ದುರ್ನಾತ: ಕಪಿಲ್ ಸಿಬಲ್

Update: 2019-09-11 15:13 GMT

ಹೊಸದಿಲ್ಲಿ,ಸೆ.11: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಬುಧವಾರ ಕಟುವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್,ಬ್ರಾಹ್ಮಣ ಸಮುದಾಯದ ಕುರಿತು ಅವರ ಟ್ವೀಟ್ ಜಾತೀಯತೆಯ ದುರ್ನಾತವನ್ನು ಬೀರುತ್ತಿದೆ ಎಂದು ಹೇಳಿದ್ದಾರೆ.

 ‘ಬ್ರಾಹ್ಮಣರು ತಮ್ಮ ಜನ್ಮದಿಂದಾಗಿ ಸಮಾಜದಲ್ಲಿ ಉಚ್ಚ ಸ್ಥಾನವನ್ನು ಪಡೆದಿದ್ದಾರೆ ಎಂದು ಬಿರ್ಲಾ ಹೇಳಿದ್ದಾರೆ. ಇದೇ ಮನಃಸ್ಥಿತಿಯು ಜಾತಿಗಳು ತಾಂಡವವಾಡುತ್ತಿರುವ ಅಸಮಾನ ಭಾರತಕ್ಕೆ ಕಾರಣವಾಗಿದೆ. ಬಿರ್ಲಾಜಿ,ನಾವು ನಿಮ್ಮನ್ನು ಗೌರವಿಸುತ್ತಿರುವುದು ನೀವು ನಮ್ಮ ಲೋಕಸಭೆಯ ಸ್ಪೀಕರ್ ಎಂಬ ಕಾರಣಕ್ಕಾಗಿಯೇ ಹೊರತು ನೀವು ಬ್ರಾಹ್ಮಣರೆಂದಲ್ಲ ’ ಎಂದು ಸಿಬಲ್ ಟ್ವೀಟಿಸಿದ್ದಾರೆ.

ರವಿವಾರ ರಾಜಸ್ಥಾನದ ಕೋಟಾದಲ್ಲಿ ಅಖಿಲ ಬ್ರಾಹ್ಮಣ ಮಹಾಸಭಾದಲ್ಲಿ ಪಾಲ್ಗೊಂಡಿದ್ದ ಬಿರ್ಲಾ,‘ಬ್ರಾಹ್ಮಣರು ಯಾವಾಗಲೂ ಸಮಾಜದಲ್ಲಿ ಉಚ್ಚ ಸ್ಥಾನದಲ್ಲಿದ್ದಾರೆ. ತ್ಯಾಗ ಮತ್ತು ಕಠಿಣ ಪರಿಶ್ರಮದಿಂದಾಗಿ ಅವರಿಗೆ ಈ ಸ್ಥಾನ ಲಭಿಸಿದೆ. ಇದೇ ಕಾರಣದಿಂದ ಬ್ರಾಹ್ಮಣರು ಯಾವಾಗಲೂ ಸಮಾಜದಲ್ಲಿ ಮಾರ್ಗದರ್ಶಕರಾಗಿದ್ದಾರೆ ’ಎಂದು ಟ್ವೀಟಿಸಿದ್ದರು.

 ಬಿರ್ಲಾರ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವಿವಾದವನ್ನು ಸೃಷ್ಟಿಸಿದ್ದು,ಅವರ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ಜನರು ಅವರ ರಾಜೀನಾಮೆಗೂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News