ಸಾಮಾನ್ಯ ನೆರೆರಾಷ್ಟ್ರವಾಗುವವರೆಗೂ ಪಾಕಿಸ್ತಾನದಿಂದ ಸವಾಲು ತಪ್ಪಿದ್ದಲ್ಲ: ಕೇಂದ್ರ ಸಚಿವ ಜೈಶಂಕರ್
ಹೊಸದಿಲ್ಲಿ,ಸೆ.17: ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಪಾಕಿಸ್ತಾನ ಸಾಮಾನ್ಯ ರೀತಿಯಲ್ಲಿ ವರ್ತಿಸದ ಮತ್ತು ಗಡಿಯಾಚೆಗಿನ ಉಗ್ರವಾದದ ವಿರುದ್ಧ ಕ್ರಮ ತೆಗೆದುಕೊಳ್ಳದ ಹೊರತು ಅದರಿಂದ ಸವಾಲು ತಪ್ಪಿದ್ದಲ್ಲ ಎಂದು ತಿಳಿಸಿದ್ದಾರೆ. ಕಳೆದ ಮೇಯಲ್ಲಿ ಮೋದಿ ಸರಕಾರದಲ್ಲಿ ಸಂಪುಟ ಸಚಿವರಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿ ತನ್ನ ಸಚಿವಾಲಯದ ನೂರು ದಿನಗಳ ಸಾಧನೆಗಳ ಬಗ್ಗೆ ಮಾತನಾಡಿದ ಜೈಶಂಕರ್, ಈ ಅವಧಿಯಲ್ಲಿ ಸರಕಾರದ ಅತ್ಯಂತ ದೊಡ್ಡ ಸಾಧನೆಯೆಂದರೆ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿ ಗುರಿಗಳ ಮಧ್ಯೆ ಪ್ರಬಲ ಸಂಬಂಧ ಮೂಡಿಸಿದ್ದು ಎಂದು ತಿಳಿಸಿದ್ದಾರೆ. ಈಗ ಜಿ20 ಶೃಂಗ ಅಥವಾ ಹವಾಮಾನ ಸಮ್ಮೇಳನ ಅಥವಾ ಇತರ ಯಾವುದೇ ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿಯನ್ನು ಕೇಳಲಾಗುತ್ತದೆ ಎಂದವರು ತಿಳಿಸಿದ್ದಾರೆ. ಗಡಿಯಾಚೆಗಿನ ಉಗ್ರವಾದ ಮತ್ತು 370ನೇ ವಿಧಿಯ ರದ್ಧತಿಯ ಬಗ್ಗೆ ಭಾರತದ ನಿಲುವನ್ನು ಜಾಗತಿಕ ನಾಯಕರಿಗೆ ವಿವರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.