ಜಾಧವ್ ಪುರ ವಿವಿ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು ಎಂದ ಬಿಜೆಪಿ ನಾಯಕ!

Update: 2019-09-20 16:12 GMT

ಕೋಲ್ಕತಾ,ಸೆ.20: ಪಶ್ಚಿಮ ಬಂಗಾಳದ ಜಾಧವ್‌ಪುರ ವಿಶ್ವವಿದ್ಯಾಲಯ ದೇಶದ್ರೋಹಿಗಳ ಮತ್ತು ಕಮ್ಯುನಿಸ್ಟರ ತಾಣವಾಗಿ ಬದಲಲಾಗಿದೆ. ಹಾಗಾಗಿ ಅದರ ಮೇಲೆ ಸರ್ಜಿಕಲ್ ದಾಳಿ ನಡೆಸುವ ಮೂಲಕ ಅದನ್ನು ನಾಶಪಡಿಸಬೇಕು ಎಂದು ಬಿಜೆಪಿ ಪಶ್ಚಿಮ ಬಂಗಾಳ ವಿಭಾಗದ ಅಧ್ಯಕ್ಷ ದಿಲೀಪ್ ಘೋಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಾಧವ್‌ಪುರ ವಿಶ್ವವಿದ್ಯಾಲಯದಲ್ಲಿ ಗುರುವಾರ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ಬಿಜೆಪಿ ಕೋಲ್ಕತಾದಲ್ಲಿ ಆಯೋಜಿಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುವ ವೇಳೆ ಘೋಶ್ ಈ ಮಾತುಗಳನ್ನು ಹೇಳಿದ್ದಾರೆ.

“ಅವರೆಲ್ಲ, ನಾವು ಪಾಕಿಸ್ತಾನದಲ್ಲಿ ನಾಶಮಾಡಿದ ಶಿಬಿರಗಳಲ್ಲಿದ್ದ ಉಗ್ರರಂತೆ. ನಾವು ವಿಶ್ವವಿದ್ಯಾಲಯದ ಒಳಗಿರುವ ಈ ಗುಂಪುಗಳನ್ನೂ ನಾಶಗೊಳಿಸುತ್ತೇವೆ” ಎಂದು ಘೋಶ್ ತಿಳಿಸಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಲು ಜಾಧವ್‌ಪುರ ವಿಶ್ವವಿದ್ಯಾಲಯಕ್ಕೆ ತೆರಳಿದ್ದ ವೇಳೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಪ್ರಿಯೊ ಆರೋಪಿಸಿದ್ದರು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಮತ್ತೊರ್ವ ಬಿಜೆಪಿ ನಾಯಕ ಸಯಂತನ್ ಸಿಂಗ್, ಜೆಯುನ ಎಡಪಂಥೀಯ ದುಷ್ಕರ್ಮಿಗಳ ಮೇಲೆ ಚರ್ಮ ಕಿತ್ತುಬರುವ ಹಾಗೆ ಹಲ್ಲೆ ನಡೆಸಬೇಕು ಎಂದಿದ್ದಾರೆ. ಈ ಘಟನೆ ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್‌ನ ಜಂಟಿ ಪಿತೂರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News