ಹನಿಟ್ರ್ಯಾಪ್ ಪ್ರಕರಣದಿಂದ ರಾಜ್ಯದ ಖಜಾನೆಯ ಮೇಲೆ ಪರಿಣಾಮ: ಮಧ್ಯಪ್ರದೇಶ ಸಚಿವ
Update: 2019-09-27 13:43 GMT
ಭೋಪಾಲ, ಸೆ.27: ರಾಜ್ಯದಲ್ಲಿ ವರದಿಯಾಗಿರುವ ಹನಿಟ್ರ್ಯಾಪ್ ಪ್ರಕರಣ ರಾಜ್ಯದ ಖಜಾನೆಯ ಮೇಲೆ ಪರಿಣಾಮ ಬೀರಿದೆ ಎಂದು ಮಧ್ಯಪ್ರದೇಶದ ಸಚಿವ ಜಿತು ಪಟ್ವಾರಿ ಹೇಳಿದ್ದಾರೆ.
ಇದೊಂದು ಗಂಭೀರ ವಿಷಯವಾಗಿದ್ದು ಈ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಕಮಲನಾಥ್ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಪಟ್ವಾರಿ ಹೇಳಿದ್ದಾರೆ. ತನ್ನನ್ನು ಇಬ್ಬರು ಮಹಿಳೆಯರು ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದು ಕೆಲವು ಆಕ್ಷೇಪಾರ್ಹ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಇಂದೋರ್ ಮಹಾನಗರಪಾಲಿಕೆಯ ಇಂಜಿನಿಯರ್ ದೂರು ದಾಖಲಿಸಿದ ಬಳಿಕ ಈ ಹನಿಟ್ರ್ಯಾಪ್ ಜಾಲ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರು ಮಹಿಳೆಯರ ಸಹಿತ ಆರು ಮಂದಿಯನ್ನು ಬಂಧಿಸಲಾಗಿದೆ.