ಮುರಳಿ ವಿಜಯ್ ಶತಕ, ತಮಿಳುನಾಡಿಗೆ ಸತತ 5ನೇ ಜಯ

Update: 2019-10-05 02:27 GMT

ಜೈಪುರ, ಅ.4: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಆಕರ್ಷಕ ಶತಕ(117) ಸಿಡಿಸುವ ಮೂಲಕ ತಮಿಳುನಾಡು ತಂಡ ವಿಜಯ ಹಝಾರೆ ಟ್ರೋಫಿಯಲ್ಲಿ ಸತತ ಐದನೇ ಗೆಲುವು ದಾಖಲಿಸಲು ನೆರವಾದರು.

ಶುಕ್ರವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ತಮಿಳುನಾಡು ತಂಡ ಜಮ್ಮು-ಕಾಶ್ಮೀರದ ವಿರುದ್ಧ 8 ವಿಕೆಟ್‌ಗಳ ಜಯ ದಾಖಲಿಸಿತು.

ಗೆಲ್ಲಲು 239 ರನ್ ಗುರಿ ಪಡೆದ ತಮಿಳುನಾಡು ತಂಡಕ್ಕೆ ವಿಜಯ್ ಆಸರೆಯಾದರು. ವಿಜಯ್ 2ನೇ ವಿಕೆಟ್ ಜೊತೆಯಾಟದಲ್ಲಿ ಅಪರಾಜಿತ್(ಔಟಾಗದೆ 86)ಅವರೊಂದಿಗೆ 166 ರನ್ ಸೇರಿಸಿದರು. ಸಮರ್‌ಸೆಟ್ ಕೌಂಟಿ ತಂಡದಿಂದ ವಾಪಸಾಗಿರುವ ವಿಜಯ್ ಮೈದಾನದ ಮೂಲೆಮೂಲೆಗೆ ಚೆಂಡನ್ನು ಅಟ್ಟಿ 14 ಬೌಂಡರಿ ಗಳಿಸಿ ಗಮನ ಸೆಳೆದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಜಮ್ಮು-ಕಾಶ್ಮೀರ ಮಂದಗತಿಯ ಆರಂಭ ಪಡೆಯಿತು. ಆರಂಭಿಕ ದಾಂಡಿಗ ಖಮ್ರಾನ್ ಇಕ್ಬಾಲ್ 67 ರನ್(87 ಎಸೆತ, 7 ಬೌಂಡರಿ, 1 ಸಿಕ್ಸರ್),ಶುಭಂ ಸಿಂಗ್(66)ಹಾಗೂ ಅಬ್ದುಲ್ ಸಮದ್(50) ಜಮ್ಮು-ಕಾಶ್ಮೀರ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 238 ರನ್ ಗಳಿಸಲು ನೆರವಾದರು. ತಮಿಳುನಾಡು ಪರ ಸಾಯಿ ಕಿಶೋರ್(2-17) ಹಾಗೂ ಎಡಗೈ ಮಧ್ಯಮ ವೇಗಿ ಟಿ.ನಟರಾಜನ್(2-45)ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News