ಆರು ವಿದ್ಯಾರ್ಥಿಗಳ ಉಚ್ಚಾಟನೆ ಹಿಂಪಡೆದ ವಾರ್ಧಾ ವಿವಿ
Update: 2019-10-13 18:19 GMT
ನಾಗ್ಪುರ,ಅ.13: ಅನುಮತಿ ಪಡೆಯದೆ ಕ್ಯಾಂಪಸ್ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಕ್ಕಾಗಿ ಹಾಗೂ ಗುಂಪುಗಳಿಂದ ಹಲ್ಲೆ ಮತ್ತು ರಾಜಕೀಯ ನಾಯಕರ ವಿರುದ್ಧದ ಅತ್ಯಾಚಾರ ಪ್ರಕರಣಗಳಂತಹ ವಿವಾದಾತ್ಮಕ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದಕ್ಕಾಗಿ ಅ.9ರಂದು ತನ್ನ ಆರು ವಿದ್ಯಾರ್ಥಿಗಳನ್ನು ಉಚ್ಚಾಟಿಸಿದ್ದ ವಾರ್ಧಾದ ಮಹಾತ್ಮಾ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯವು ರವಿವಾರ ತನ್ನ ಆದೇಶವನ್ನು ಹಿಂದೆಗೆದುಕೊಂಡಿದೆ.
ಅ.21ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ರಾಜ್ಯಾದ್ಯಂತ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಈ ವಿದ್ಯಾರ್ಥಿಗಳು ಉಲ್ಲಂಘಿಸಿದ್ದಾರೆ ಎಂದು ವಿವಿಯ ಅಧಿಕಾರಿಗಳು ಆರೋಪಿಸಿದ್ದರು.
‘ತಾಂತ್ರಿಕ ಅಸಮಂಜಸತೆಗಳ ’ ಕಾರಣಕ್ಕಾಗಿ ಮತ್ತು ವಿದ್ಯಾರ್ಥಿಗಳಿಗೆ ಸಹಜ ನ್ಯಾಯದ ಹಿನ್ನೆಲೆಯಲ್ಲಿ ಉಚ್ಚಾಟನೆಯನ್ನು ರದ್ದುಗೊಳಿಸಲಾಗಿದೆ ಎಂದು ವಿವಿಯ ಪ್ರಭಾರ ಕುಲಸಚಿವ ಖಾದರ್ ನವಾಜ್ ಖಾನ್ ಅವರು ರವಿವಾರದ ಆದೇಶದಲ್ಲಿ ತಿಳಿಸಿದ್ದಾರೆ.