ಶ್ರೀನಗರ: ಶಾಲೆ, ಅಂಗಡಿಗೆ ಬೆಂಕಿ; ಮಾರುಕಟ್ಟೆಗೆ ಪೆಟ್ರೋಲ್ ಬಾಂಬ್ ಎಸೆತ

Update: 2019-10-23 13:34 GMT

ಶ್ರೀನಗರ, ಅ.23: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ ಅಕ್ಟೋಬರ್ 24ರಂದು ನಡೆಯುವ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಂತೆಯೇ ಮಂಗಳವಾರ ರಾತ್ರಿ ಉಗ್ರರು ಕುಲ್ಗಾಂವ್‌ನಲ್ಲಿ ಶಾಲೆಗೆ ಹಾಗೂ ಶ್ರೀನಗರದಲ್ಲಿ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ಪುಲ್ವಾಮಾದಲ್ಲಿ ಲಾರಿಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ಶ್ರೀನಗರದ ತರಕಾರಿ ಮಾರುಕಟ್ಟೆಗೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಹೇಳಿಕೆ ನೀಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಶೈಲೇಂದ್ರ ಕುಮಾರ್, ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸ್ಪರ್ಧಿಸಲು ಹಾಗೂ ಚುನಾವಣೆಯಲ್ಲಿ ಮತದಾನ ಮಾಡಲು ಸ್ಥಳೀಯ ಸಂಸ್ಥೆಯ 26,629 ಅಧ್ಯಕ್ಷರು ಹಾಗೂ ಸದಸ್ಯರು ಅರ್ಹರಾಗಿದ್ದಾರೆ ಎಂದಿದ್ದಾರೆ. ಈ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ತಿಳಿಸಿದೆ. ಚುನಾವಣೆ ನಿಗದಿಗೊಳಿಸುವಾಗ ಸ್ಥಳೀಯರನ್ನು ಹಾಗೂ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ . ಅಲ್ಲದೆ ಪಕ್ಷದ ಹಲವು ಮುಖಂಡರು ಇನ್ನೂ ಗೃಹಬಂಧನಲ್ಲಿರುವುದನ್ನು ವಿರೋಧಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಜಮ್ಮು ಕಾಶ್ಮೀರ ಕಾಂಗ್ರೆಸ್‌ನ ಮುಖಂಡ ಗುಲಾಂ ಅಹ್ಮದ್ ಮೀರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News